ಸ್ವರಾಜ್ ಇಂಡಿಯಾ ರಾಜ್ಯಕಾರ್ಯದರ್ಶಿ ಮತ್ತು ಗೌರಿ ಟ್ರಸ್ಟ್ ಕಾರ್ಯದರ್ಶಿಯಾದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಸ್ವರಾಜ್ ಇಂಡಿಯಾ ಶಿವಮೊಗ್ಗ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್ ಆಗ್ರಹಿಸಿದ್ದಾರೆ.
ಸ್ವರಾಜ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಘಟಕದಿಂದ ನಡೆದ ಪತ್ರಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಹೋರಾಟಗಾರರು, ಪತ್ರಕರ್ತರು ಆದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಂಧನ ಖಂಡನೀಯ.. ಸುಳ್ಳು ಕೇಸಿನಲ್ಲಿ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
25 ವರ್ಷದ, ಈಗಾಗಲೇ ಖುಲಾಸೆಯಾಗಿರುವ ಕೇಸಿನಲ್ಲಿ ಬಂಧಿಸಿರುವುದು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಅವರು ನಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ತಲೆಮರೆಸಿಕೊಂಡಿಲ್ಲ ಎಂಬ ಕನಿಷ್ಠ ಜ್ಞಾನ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.
ಯಾರದೋ ಕೇಸನ್ನು ಇನ್ಯಾರದೋ ಮೇಲೆ ಹಾಕುವುದು ಸರಿಯಲ್ಲ, ಕೂಡಲೇ ಅವರ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ರಾಜ್ಯ ಸಮಿತಿಯ ಶಿವಾನಂದ ಕುಗ್ವೆ, ರೈತ ಸಂಘದ ವಿರೇಶ್, ಸ್ವರಾಜ್ ಇಂಡಿಯಾ ಸಾಗರ ಶಾಖೆಯ ರಮೇಶ್ ಐಗಿನ ಬೈಲು, ಶಿವಮೊಗ್ಗ ಘಟಕದ ಮಾಲತೇಶ್ ಬೊಮ್ಮನಕಟ್ಟೆ ಮತ್ತು ಮಂಜುನಾಥ ನವುಲೆ ಇದ್ದರು.