ಸ್ನೇಹಕ್ಕಾಗಿ ಪಕ್ಷನಿಷ್ಠೆ, ತತ್ವನಿಷ್ಠೆ ಬಿಡುವುದಿಲ್ಲ. ಶಿರಾದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ಕಾಂಗ್ರೆಸ್ನಿಂದ ಟಿಕೆಟ್ ಕೇಳಿದರು. ಟಿಕೆಟ್ ದೊರೆಯುವುದಿಲ್ಲ ಎಂದು ಗೊತ್ತಾದ ಮೇಲೆ ಬಿಜೆಪಿ ಸೇರಿ ಆತುರ ತೋರಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಶಿರಾ ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡ ಅವರು, ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದು. ಕ್ಷೇತ್ರದ ಮತದಾರರ ಒಲವು ಜಯಚಂದ್ರರತ್ತ ಇದೆ ಎಂದು ತಿಳಿಸಿದರು.
ಹಲವು ಜನ ಯತೀಂದ್ರ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಸ್ನೇಹಿತರು. ಹಾಗಾಗಿ ಯತೀಂದ್ರರವರು ಚುನಾವಣೆಯಲ್ಲಿ ಅವರಿಗೆ ಸಹಾಯ ಮಾಡುತ್ತಾರೆ ಎಂದು ಮಾತನಾಡುತ್ತಿದ್ದಾರೆ. ಆದರೆ ಅದೆಲ್ಲಾ ಸುಳ್ಳು. ಸ್ನೇಹ ಬೇರೆ, ರಾಜಕೀಯ ಬೇರೆ. ರಾಜೇಶ್ ಗೌಡ ನನಗೆ ಸ್ನೇಹಿತರು. ಸಂಸದ ಮೂಡ್ಲಗಿರಿಯಪ್ಪ ಕಾಂಗ್ರೆಸ್ ಪಕ್ಷದಲ್ಲಿದ್ದರು. ಹಾಗಾಗಿಯೇ ಸ್ನೇಹವೂ ಬೆಳೆಯಿತು. ಹಾಗೆಂದ ಮಾತ್ರಕ್ಕೆ ಪಕ್ಷನಿಷ್ಠೆ ಮತ್ತು ತತ್ವನಿಷ್ಠೆ ಬಿಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ಪ್ರತಿಷ್ಠೆಯ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಮುಂದು?
ರಾಜೇಶ್ ಗೌಡ ಶಿರಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದರು. ಮೊದಲು ಪಕ್ಷಕ್ಕೆ ಸೇರ್ಪಡೆಯಾಗಿ. ಕೆಲಸ ಮಾಡಿ ಆನಂತರ ಟಿಕೆಟ್ ವಿಚಾರ ಮಾತನಾಡೋಣ ಎಂದು ಹೇಳಿದೆವು. ನಂತರ ಜೆಡಿಎಸ್ ನಿಂದ ಟಿಕೆಟ್ ಕೇಳಿದರು. ಅಲ್ಲಿಯೂ ಅವರಿಗೆ ಟಿಕೆಟ್ ಸಿಗುವ ಭರವಸೆ ದೊರೆಯಲಿಲ್ಲ. ಹಾಗಾಗಿ ಬಿಜೆಪಿ ಸೇರಿದ್ದಾರೆ ಎಂದರು.
ಶಿರಾ ಕ್ಷೇತ್ರದಲ್ಲಿ ಹಿರಿಯರಾದ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಪಕ್ಷದ ನಿರ್ಧಾರ. ನಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದು ಜಯಚಂದ್ರ ಅವರ ಪರ ಪ್ರಚಾರ ನಡೆಸಿ ಹೋಗಿದ್ದಾರೆ. ಪಕ್ಷದ ತಳಮಟ್ಟದ ಕಾರ್ಯಕರ್ತರು ಆರಂಭದಿಂದಲೂ ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಟಿ.ಬಿ.ಜಯಚಂದ್ರ ಅವರ ಗೆಲುವು ಶತಃಸಿದ್ಧ ಎಂದರು.
ಕ್ಷೇತ್ರದಲ್ಲಿ ಸುತ್ತಾಡಿದ ಮೇಲೆ ಮತದಾರರಿಂದ ಮಾಹಿತಿ ಸಂಗ್ರಹಿಸಿದ್ದೇನೆ. ಟಿ.ಬಿ.ಜಯಚಂದ್ರ ಪರ ಹೆಚ್ಚಿನ ಒಲವು ವ್ಯಕ್ತವಾಗಿದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಸಂಗತಿ. ಟಿ.ಬಿ.ಜಯಚಂದ್ರ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ