Homeಮುಖಪುಟಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ ಎನ್ನುತ್ತಾರೆ ಹಿರಿಯ ಬರಹಗಾರ ಡಾ.ಬಿ.ಎಲ್ ವೇಣು

- Advertisement -
- Advertisement -

ರಾಜ್ಯದಲ್ಲಿನ ಕೆಲವು ಸ್ವಾಮೀಜಿಗಳು ರಾಜಕಾರಣದ ಉಸಾಬರಿಗೆ ಬಿದ್ದಿರುವ ಕುರಿತು ಓದಿದೆ. ನನಗೂ ಬರೆಯಬೇಕೆನಿಸಿತು. ಮಠಾಧೀಶರುಗಳ ಕುರಿತು ನಾನೇನು ಹೊಸದಾಗಿ ಬರೆಯುತ್ತಿರುವವನಲ್ಲ. “ಮಠಗಳು ದೇಶಕ್ಕೆ ಶಾಪ” ಎಂಬ ಕೃತಿ ಬರೆದು ವಿವಾದಕ್ಕೀಡಾದವನು ನಾನು. ಇತ್ತೀಚೆಗಂತೂ ಮಠಾಧೀಶರುಗಳು ಅದರಲ್ಲಿಯೂ ಸುಪ್ರೀಂ ಪವರ್ ಮುಖ್ಯಮಂತ್ರಿಗಳ ಎದುರೇ ಗೂಳಿಗಳಂತೆ ಗುಟುರು ಹಾಕಿ ತಮ್ಮ ಮಠಕ್ಕೆ ಬೇಕಾದ ಸವಲತ್ತು, ಕೋಟಿಗಟ್ಟಲೆ ಅನುದಾನವನ್ನು ಬೇಡದೆ ಪಡೆಯುವಷ್ಟು ಪ್ರಭಾವಿತರಾಗಿಬಿಟ್ಟಿದ್ದಾರೆ. ಧರ್ಮಾಂಧ ಸರ್ಕಾರವು ಮತಗಳಿಕೆಗಾಗಿ ಮಠಗಳನ್ನು ಓಲೈಸುವ ಗೀಳಿಗೆ ಬಿದ್ದಂತಿದೆ.

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ. ಇದೆಲ್ಲಾ ಹಾಳಾಗಿಹೋಗಲಿ ಎಂದರೆ ಮುಖ್ಯಮಂತ್ರಿಗಳ ಎದುರೇ ತಮ್ಮ ಜಾತಿಯವರನ್ನೆ ಮಂತ್ರಿಗಳನ್ನಾಗಿ ಮಾಡಿರೆಂದು ಶಿಪಾರಸ್ ಮಾಡುವುದು, ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಒಬ್ಬ ಸ್ವಾಮೀಜಿ ಗರಂ ಆದ್ರೆ, ಮತ್ತೊಬ್ಬ, ವೀರಶೈವ ಲಿಂಗಾಯಿತರನ್ನು ’ಪ್ರವರ್ಗ-2ಎ’ಕ್ಕೆ ಸೇರಿಸಿ ಎಂದು ಹುಕುಂ ಮಾಡುತ್ತಾರೆ. ಮಠಾಧೀಶರಿಗೆ ರಾಜಕಾರಣವೇಕೆಂದಿರೋ? ಹಿಂದೆಯೂ ರಾಜರುಗಳಿಗೆ ರಾಜಗುರುಗಳಿದ್ದು ಮಾರ್ಗದರ್ಶನ ಮಾಡುತ್ತಿರಲಿಲ್ಲವೆ ಎಂಬ ಸಬೂಬು ಬೇರೆ.
ನಿಜ ಹಕ್ಕಬುಕ್ಕರಿಗೆ ವಿದ್ಯಾರಣ್ಯ, ಚಂದ್ರಗುಪ್ತನಿಗೆ ಚಾಣಕ್ಯ, ಮದಕರಿನಾಯಕರಿಗೆ ಮರುಘೇಸ್ವಾಮಿಗಳಂಥವರು ಇದ್ದರು. ಅವರೆಂದೂ ತಾವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದವರಲ್ಲ.

ತಮ್ಮ ಜಾತಿಮತ ಸಮುದಾಯಗಳ ಹಿತಾಕಾಂಕ್ಷಿಗಳಾದವರೂ ಅಲ್ಲ. ಜಾತಿ ಮೀಸಲಾತಿಗಾಗಿ ಒಬ್ಬ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಲ್ಲದೆ, ಕೇಳಿದಷ್ಟು ಮೀಸಲಾತಿಗೆ ಸಮ್ಮತಿಸದಿದ್ದರೆ ಸಚಿವರಿಂದ ರಾಜಿನಾಮೆ ಕೊಡಿಸುತ್ತೇನೆಂದು ಬೆದರಿಸುತ್ತಾರೆ. ನಿರ್ದಿಷ್ಟ ಸಮುದಾಯಗಳನ್ನು ’ಒಬಿಸಿ’ ಪಟ್ಟಿಗೆ ಸೇರಿಸಿಬಿಡಿ, ’ನಿಮಗೇನೂ ಆಗದು, ಧೈರ್ಯದಿಂದಿರಿ. ನೀವೇ ಮುಂದುವರೆಯುತ್ತೀರಿ’ ಎಂದೆಲ್ಲಾ ಮುಖ್ಯಮಂತ್ರಿಗಳಿಗೆ ಬಹಿರಂಗ ಸಭೆಯಲ್ಲೇ ಸ್ವಾಮೀಜಿಯೊಬ್ಬರು ಅಭಯಹಸ್ತ ತೋರಿದರೆ ಅಲ್ಲಿದ್ದ ಇಬ್ಬರು ಕಾವಿಗಳದ್ದೂ ಕುಮ್ಮಕ್ಕು ಕಂಡು ಬಂತು! ಕೆಲವರಂತೂ ಇಂತಹ ಪಕ್ಷಕ್ಕೆ ಓಟು ಹಾಕಿರೆಂದು ಫರಮಾನು ಹೊರಡಿಸಿ ಗೆಲ್ಲಿಸುವಷ್ಟು ಪ್ರಭಾವಿಗಳು. ಸರ್ಕಾರವನ್ನು ಉರುಳಿಸಬಲ್ಲವೆಂಬಷ್ಟು ಪ್ರಭಾವಿ ಮಠಾಧೀಶರೂ ಹುಟ್ಟಿಕೊಳ್ಳುತ್ತಿರುವಲ್ಲಿ ಇದೇನು ಸರ್ಕಾರದಲ್ಲಿನ ದೌರ್ಬಲ್ಯವೋ? ಮಠಾಧೀಶರುಗಳೇ ಧರ್ಮಾಧರ್ಮಗಳನ್ನು ಮರೆತು ರಾಜಕೀಯ ಲಾಭ ಹಾಗೂ ಬರುವ ಅನುದಾನಕ್ಕಾಗಿ ನಿರ್ಲಜ್ಜರಾಗುತ್ತಿದ್ದಾರೋ ತೋಚದಂತಾಗಿದೆ.

ಸಾಮಾಜಿಕ ನ್ಯಾಯ, ಜನಪರ ಹೋರಾಟಗಳಲ್ಲಿ ತೊಡಗದ ಸ್ವಾಮೀಜಿಯೊಬ್ಬರು ತಮ್ಮ ಜಾತಿ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು – ಮೀಸಲಾತಿ ನೀಡಬೇಕೆಂದು ಕೂಡಲ ಸಂಗಮದಿಂದ ಪಾದಯಾತ್ರೆ ಮಾಡುತ್ತೇನೆಂದು ಜಬರ್ ಮಾಡಿದರೆ, ಮತ್ತೊಬ್ಬ ಸ್ವಾಮೀಜಿ ಕಾಗಿನೆಲೆಯಿಂದ ಪಾದಯಾತ್ರೆ ನಡೆಸುತ್ತೇನೆಂದು ಸರ್ಕಾರದ ಪ್ರಾಣ ಹಿಂಡುತ್ತಿದ್ದಾರೆ! ಜಗದಹಿತವನ್ನು ಬಯಸುವವ ಜಗದ್ಗುರು ಎನ್ನುವುದಾದರೆ ಇವರುಗಳಲ್ಲಿ ಯಾರೂ ಜಗದ್ಗುರುಗಳಲ್ಲ. ಎಲ್ಲರೂ ಜಾತಿ ಗುರುಗಳೆ. ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ. ಜಾತಿಗೊಂದು ಮಠಕಟ್ಟಿ ಸರ್ವರಿಗೂ ಸಮಾನತೆ ದೊರಕಿಸಿಕೊಟ್ಟನೆಂದು ಬೀಗುವವರು ಬಸವಣ್ಣ ಜಾತಿವಿನಾಶಕ್ಕೆ ಪಣತೊಟ್ಟು ಸರ್ವ ಜಾತಿಯ ಜನರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಂತರ್ಜಾತೀಯ ವಿವಾಹಕ್ಕೆ ನಾಂದಿ ಹಾಡಿದ್ದನ್ನೇ ಮರೆತುಬಿಡುತ್ತಾರೆ.

ಮರೆಯಲಿ ಬಿಡಿ. ತಮ್ಮ ಸಮುದಾಯಗಳ ಶ್ರೇಯಸ್ಸಿಗೆ ಬಹಿರಂಗವಾಗಿಯೇ ಬ್ಲಾಕ್‌ಮೇಲ್‌ಗಿಳಿದ ಈ ಕಾವಿಧಾರಿಗಳ ಕಾವಿ ಕಿತ್ತೆಸೆದು ಖಾದಿ ಧರಿಸಿ ಕಣಕ್ಕಿಳಿದು ತಮ್ಮ ತಮ್ಮ ಸಮುದಾಯವನ್ನು ಸಂರಕ್ಷಿಸಲಿ. ಕಾವಿಗೆ ಮಾತ್ರ ಕಳಂಕ ತರುವುದು ಬೇಡ, ಬೇಕಾದರೆ ಉತ್ತರಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಇದ್ದಾರೆ, ಉಮಾಭಾರತಿ, ಸಾಕ್ಷಿ ಮಹಾರಾಜರಂತೆ ಚುನಾವಣೆಗೇ ಇಳಿದುಬಿಡಲಿ. ಎಡಬಿಡಂಗಿತನ ತೋರದೆ ನೇರವಾಗಿ ರಾಜಕೀಯಕ್ಕೆ ಜಂಪ್ ಮಾಡಿ ಸರ್ಕಾರ ರಚಿಸುವ ಹಂತಕ್ಕೇ ಹೋಗಲಿ.

ರಾಜ್ಯದಲ್ಲಿನ ಕಾವಿ ಮತ್ತು ಖಾದಿಗಳು ಕನಿಷ್ಟ ಅಂತರವನ್ನಾದರೂ ಕಾಯ್ದುಕೊಂಡರೆ ಉಭಯತ್ರರಿಗೂ, ನಾಡಿಗೂ ಶುಭ. ಇಷ್ಟಾದರೂ ಇವರುಗಳಲ್ಲಾದರೂ ಒಗ್ಗಟ್ಟು ಉಂಟೋ! ಕಾವಿಗಳ ಕೈಗೇ ಸದ್ಭಕ್ತರು ಅಧಿಕಾರ ಕೊಟ್ಟರೆ ಸರ್ಕಾರ ನಡೆಸಿಯಾರೆ? ಸ್ವಾಮಿಗಳ ನಡೆ ಪ್ರಜಾಪ್ರಭುತ್ವದಲ್ಲಿ ನೋಡುವರ ಎದುರು ನಗೆಪಾಟಲಾಗದೆ ಮಾದರಿಯಾಗಿರಬೇಕಲ್ಲವೆ.

  • ಡಾ. ಬಿ. ಎಲ್. ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.


ಇದನ್ನೂ ಓದಿ: ತಮಿಳುನಾಡು: ರೈತ ಹೊರಾಟವನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಡಿಎಂಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...