Homeಮುಖಪುಟಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.

- Advertisement -
- Advertisement -

ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಬಹುತೇಕರು ದಲಿತರು, ಆದಿವಾಸಿಗಳು, ಮುಸ್ಲಿಮರು ಸೇರಿದಂತೆ ಸಮಾಜದ ಬಡ ಮತ್ತು ಅಂಚಿಗೆ ತಳ್ಳಲ್ಪಟ್ಟ ವರ್ಗದವರು. ವಿಶ್ವದಾದ್ಯಂತ ಚಿತ್ರಹಿಂಸೆಯನ್ನು ತೊಲಗಿಸಲು ಕಟಿಬದ್ಧವಾಗಿರುವ ಸರಕಾರೇತರ ಸಂಸ್ಥೆಗಳ ಮಾನವ ಹಕ್ಕು ವೇದಿಕೆಯಾಗಿರುವ ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ಸಂಘಟನೆಯ ವಾರ್ಷಿಕ ವರದಿಯಲ್ಲಿ ಇದು ಬಹಿರಂಗವಾಗಿದೆ.

ಇತ್ತೀಚೆಗೆ “ಚಿತ್ರಹಿಂಸೆಯ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ಬೆಂಬಲ ದಿನ”ದಂದು ಬಿಡುಗಡೆಗೊಳಿಸಲಾದ “ಇಂಡಿಯಾ: ಆನ್ಯುವಲ್ ರಿಪೋರ್ಟ್ ಆನ್ ಟಾರ್ಚರ್ 2019″ನಲ್ಲಿ ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು UNCAT ಹೇಳಿದೆ. ಇವರಲ್ಲಿ 1,606 ಮಂದಿ ನ್ಯಾಯಾಂಗ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದರೆ, 125 ಸಾವುಗಳು ಪೊಲೀಸ್ ಕಸ್ಟಡಿ ಯಲ್ಲಿ ಸಂಭವಿಸಿವೆ. 2019ರಲ್ಲಿ 1,966 ಮಂದಿ  ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಇವರಲ್ಲಿ 1,819 ಮಂದಿ ನ್ಯಾಯಾಂಗ ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದರೆ, 147 ಸಾವುಗಳು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿವೆ. “ಈ ಅಂಕಿಅಂಶಗಳು ದೇಶದಲ್ಲಿ ವಾಸ್ತವವಾಗಿ ನಡೆಯುವ ಕಸ್ಟಡಿ ಮತ್ತು ಚಿತ್ರಹಿಂಸೆಯಿಂದ ಉಂಟಾದ ಸಾವುಗಳನ್ನು ಪ್ರತಿಫಲಿಸುವುದಿಲ್ಲ” ಎಂದು ವರದಿ ಎಚ್ಚರಿಸಿದೆ. ಅಂದರೆ, ಇದು ಅಧಿಕೃತ ಅಂಕಿಅಂಶವಾಗಿದ್ದು, ನೈಜ ಸಾವುಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರುವ ಸಂಭವವಿದೆ.

ಸಂಸ್ಥೆಯ ಭಾರತೀಯ ವಿಭಾಗವಾದ NCAT ನಿರ್ದೇಶಕ ಪಾರಿತೋಷ್ ಚಕ್ಮಾ ಹೇಳುವಂತೆ, “ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ 125 ಸಾವುಗಳ ಪೈಕಿ 70 ಮಂದಿ ಅಥವಾ 60 ಶೇಕಡಾ ಮಂದಿ ಬಡ ಮತ್ತು ಅವಗಣಿತ ಸಮುದಾಯಗಳಿಗೆ ಸೇರಿದವರು. ಇವರಲ್ಲಿ 13 ಮಂದಿ ದಲಿತರು ಮತ್ತು ಆದಿವಾಸಿಗಳು, 15 ಮಂದಿ ಮುಸ್ಲಿಮರು. 37 ಮಂದಿಯನ್ನು ಕಳವು, ವಂಚನೆ, ಅಕ್ರಮವಾಗಿ ಮದ್ಯ ಮಾರಾಟ, ಜೂಜಾಟ ಇತ್ಯಾದಿ ಸಣ್ಣಪುಟ್ಟ ಅಪರಾಧಗಳಿಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಮತ್ತು ಇದು ಅವರ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುತ್ತದೆ.”

ಈ 125 ಸಾವುಗಳಲ್ಲಿ ಉತ್ತರ ಪ್ರದೇಶ 14 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು ಮತ್ತು ಪಂಜಾಬ್ ಇದ್ದು, ಅಲ್ಲಿ ತಲಾ11 ಸಾವುಗಳು ಸಂಭವಿಸಿವೆ. ಉಳಿದಂತೆ ಬಿಹಾರದಲ್ಲಿ 10, ಮಧ್ಯಪ್ರದೇಶದಲ್ಲಿ 9, ಗುಜರಾತಿನಲ್ಲಿ 8, ದಿಲ್ಲಿ ಮತ್ತು ಒಡಿಶಾದಲ್ಲಿ ತಲಾ 7, ಜಾರ್ಖಂಡ್‌ನಲ್ಲಿ 6, ಛತ್ತೀಸ್‌ಗಢ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ತಲಾ 5, ಆಂಧ್ರಪ್ರದೇಶ ಮತ್ತು ಹರ್ಯಾಣದಲ್ಲಿ ತಲಾ 4, ಕೇರಳ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ ಮತ್ತು ಮಣಿಪುರದಲ್ಲಿ ತಲಾ 2 ಹಾಗೂ ಅಸ್ಸಾಂ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ತ್ರಿಪುರದಲ್ಲಿ ತಲಾ 1 ಸಾವು ಸಂಭವಿಸಿದೆ.

ಕಸ್ಟಡಿ

ಈ 125 ಸಾವುಗಳಲ್ಲಿ 93 ಮಂದಿ ಅಂದರೆ, 74.4 ಶೇಕಡಾ ಮಂದಿ ಆರೋಪಿತ ಚಿತ್ರಹಿಂಸೆ/ ಸಂಚಿನ ಕಾರಣದಿಂದ ಸತ್ತಿದ್ದಾರೆ. 24 ಮಂದಿ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಸತ್ತಿದ್ದು, ಇವುಗಳಲ್ಲಿ 16 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ, ಏಳು ಮಂದಿ ಕಾಯಿಲೆಯಿಂದ ಮತ್ತು ಒಬ್ಬ ಗಾಯದಿಂದ ಸತ್ತಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಉಳಿದ ಐವರ ಕಸ್ಟಡಿ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಚಕ್ಮಾ ಅವರ ಪ್ರಕಾರ ಹಿಂಸೆಯ ವಿಧಾನಗಳಲ್ಲಿ ದೇಹಕ್ಕೆ ಕಬ್ಬಿಣದ ಮೊಳೆಗಳನ್ನು ಹೊಡೆಯುವುದು, ಮರ್ಮಾಂಗಗಳಿಗೆ ಹೊಡೆಯುವುದು, ಮತ್ತು ಖಾರದ ಪುಡಿ ಹಚ್ಚುವುದು, ಬಾಯಿಗೆ ಮೂತ್ರ ಮಾಡುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು ಸೇರಿದೆ.

“ತಪ್ಪು ಒಪ್ಪಿಕೊಳ್ಳುವಂತೆ ಮಾಡಲು ಅಥವಾ ಲಂಚ ಸುಲಿಯಲು ಚಿತ್ರಹಿಂಸೆ ನೀಡಲಾಗುತ್ತದೆ. 2019ರಲ್ಲಿ ಬಳಸಲಾದ ಚಿತ್ರಹಿಂಸಾ ವಿಧಾನಗಳಲ್ಲಿ ದೇಹಕ್ಕೆ ಮೊಳೆ ಹೊಡೆಯುವುದು (ಬಿಹಾರದಲ್ಲಿ ಗುಫ್ರಾನ್ ಆಲಂ ಮತ್ತು ತಸ್ಲೀಂ ಅನ್ಸಾರಿ), ಕಾಲಿನ ಮೇಲೆ ರೋಲರ್ ಹರಿಸಿ ಬೆಂಕಿ ಹಚ್ಚುವುದು (ಕಾಶ್ಮೀರದಲ್ಲಿ ರಿಜ್ವಾನ್ ಅಸಾದ್ ಪಂಡಿತ್), “ಫಲಂಗ” ಅಂದರೆ ಕಾಲಿನ ಅಡಿಭಾಗಕ್ಕೆ ಹೊಡೆಯುವುದು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯುವುದು ( ಕೇರಳದಲ್ಲಿ ರಾಜ್‌ಕುಮಾರ್), ಮರ್ಮಾಂಗಗಳಿಗೆ ಹೊಡೆಯುವುದು (ಹರ್ಯಾಣದಲ್ಲಿ ಬ್ರಿಜ್‌ಪಾಲ್ ಮೌರ್ಯ ಮತ್ತು ಲಿನಾ ನರ್ಜಿನಾರಿ), ದೇಹಕ್ಕೆ ಸೂಜಿ ಚುಚ್ಚುವುದು (ತಮಿಳುನಾಡಿನಲ್ಲಿ ಮೂರು ವರ್ಷಗಳ ಮಗುವಿನ ಮೇಲೆ), ಬತ್ತಲೆಗೊಳಿಸಿ ಹೊಡೆಯುವುದು (ಹರ್ಯಾಣದಲ್ಲಿ ಮೊಹಮ್ಮದ್ ತನ್ವೀರ್ ಮತ್ತು ಲಿನಾ ನರ್ಜಿನಾರಿ, ಅಸ್ಸಾಂನಲ್ಲಿ ಮಿನುವಾರ ಬೇಗಂ, ಸನುವಾರ ಮತ್ತು ರುಮೇಲಾ), ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದೆಯುವುದು (ಅಸ್ಸಾಂನಲ್ಲಿ ಮಿನುವಾರ ಬೇಗಂ) ಇತ್ಯಾದಿ ಸೇರಿವೆ” ಎಂದು ಚಕ್ಮಾ ಹೇಳಿದ್ದಾರೆ.

ಉಳಿದ ಚಿತ್ರಹಿಂಸಾ ವಿಧಾನಗಳಲ್ಲಿ ವಿದ್ಯುತ್ ಶಾಕ್ ನೀಡುವುದು, ಮರ್ಮಾಂಗಗಳಿಗೆ ಪೆಟ್ರೋಲ್ ಸುರಿಯುವುದು, ಬೇಡಿ ತೊಡಿಸಿ ಹೊಡೆಯುವುದು, ದೇಹಕ್ಕೆ ಸೂಜಿ ಚುಚ್ಚುವುದು, ಕಾದ ಸರಳಿನಿಂದ ಬರೆ ಹಾಕುವುದು, ಗುದದ್ವಾರಕ್ಕೆ ಗಟ್ಟಿಯಾದ ವಸ್ತುಗಳನ್ನು ತುರುಕುವುದು, ಕೈಕಾಲು ಕಟ್ಟಿ ತಲೆಕೆಳಗಾಗಿ ನೇತಾಡಿಸಿ ಹೊಡೆಯುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು, ಕಟ್ಟಿಂಗ್ ಪ್ಲಯರ್‌ನಲ್ಲಿ ಉಗುರುಗಳನ್ನು ಅದುಮುವುದು, ಕೈಕಾಲು ಕಟ್ಟಿ ಎರಡು ಮೇಜುಗಳ ನಡುವೆ ನೇತಾಡಿಸಿ ಕಬ್ಬಿಣದ ಸರಳಿನಿಂದ ಹೊಡೆಯುವುದು ಇತ್ಯಾದಿ ಸೇರಿವೆ.

ಹಲವಾರು ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕಡ್ಡಾಯವಾದ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ, ಶವಗಳನ್ನು ತರಾತುರಿಯಲ್ಲಿ ಸುಟ್ಟು ಚಿತ್ರಹಿಂಸೆಯ ಎಲ್ಲಾ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂಬುದನ್ನು ವರದಿ ಎತ್ತಿಹೇಳಿದೆ. ತಮಿಳುನಾಡಿನಲ್ಲಿ ಕಸ್ಟಡಿಯಲ್ಲಿ ಸತ್ತ 17 ವರ್ಷಗಳ ಹುಡುಗನ (ಹೆಸರು ತಡೆಹಿಡಿಯಲಾಗಿದೆ) ಮರಣೋತ್ತರ ಪರೀಕ್ಷೆ ನಡೆಸದಿರುವುದು. ಗುಜರಾತಿನಲ್ಲಿ ಹೀರಾ ಬಜನಿಯಾ ಎಂಬಾತನ ಶವವನ್ನು ಸಂಬಂಧಿಕರಿಗೆ ಅಂತಿಮ ಕ್ರಿಯೆಗಳನ್ನು ನಡೆಸಲೂ ಅವಕಾಶ ಕೊಡದೆ, ದಹನ ಮಾಡಿ ಚಿತ್ರಹಿಂಸೆಯ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಿದುದು, ತ್ರಿಪುರದಲ್ಲಿ ಮಂಗಲ್ ದಾಸ್ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ ಬಲವಂತವಾಗಿ ದಹನ ಮಾಡಿದುದು, ಅದೇ ರೀತಿ ರಾಜಸ್ಥಾನದ ಹನುಮಾನ್ ಕೋಳಿ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ, ಆತನ ಮಕ್ಕಳಿಗೆ ಕೊನೆಯ ಬಾರಿ ಮುಖನೋಡಲೂ ಅವಕಾಶ ಕೊಡದೆ ದಹನ ಮಾಡಿದುದು- ಹೀಗೆ ಕನಿಷ್ಟ ನಾಲ್ಕು ಇಂತಹಾ ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರಿಗೆ ಚಿತ್ರಹಿಂಸೆ ನೀಡುವುದು ಮತ್ತು ಹೆಚ್ಚಾಗಿ ಲೈಂಗಿಕ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದ್ದು, ಹೆಚ್ಚಿನ ಬಾರಿ ಇವರು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ. 2019ರಲ್ಲಿ ಕನಿಷ್ಟ ನಾಲ್ವರು ಮಹಿಳೆಯರು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಮಕ್ಕಳನ್ನು ಕೂಡಾ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) “ಕೈಂ ಇನ್ ಇಂಡಿಯಾ- 2018” ವರದಿಯಲ್ಲಿ ಪೊಲೀಸರು ಅಪ್ರಾಪ್ತ ಸಂತ್ರಸ್ತರಿಗೆ 3,164 ಪ್ರಕರಣಗಳಲ್ಲಿ ಸಾಧಾರಣ ಮತ್ತು 3,467 ಪ್ರಕರಣಗಳಲ್ಲಿ ಗಂಭೀರ ಸ್ವರೂಪದ ಹಾನಿಯುಂಟುಮಾಡಿರುವುದನ್ನು ದಾಖಲಿಸಿದೆ.

ಕಸ್ಟಡಿ

ಕೈದಿಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಸೆಪ್ಟೆಂಬರ್ 2017ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳ ಸರಮಾಲೆಯನ್ನೇ ನೀಡಿದರೂ, ಜೈಲುಗಳು ನರಕಗಳಾಗಿಯೇ ಉಳಿದಿವೆ. 2019ರಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ 1,606 ಸಾವುಗಳು ಸಂಭವಿಸಿವೆ. ಈ ಸಾವುಗಳಲ್ಲಿ ಹಲವಾರು ಸಾವುಗಳು ಚಿತ್ರಹಿಂಸೆಯ ಕಾರಣದಿಂದ ಸಂಭವಿಸಿವೆ.

“ಚಿತ್ರಹಿಂಸೆ ನಡೆಸುವವರಿಗೆ ಸಂಪೂರ್ಣ ರಕ್ಷಣೆ ಇದೆ. ಭಾರತ ಸರಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ)ದ 2005ರಿಂದ 2018ರ ತನಕದ ವರದಿಗಳ ಪ್ರಕಾರ “ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಪ್ರಕರಣಗಳಲ್ಲಿ” 500 ಸಾವುಗಳು ಸಂಭವಿಸಿದ್ದು, 281 ಪ್ರಕರಣಗಳು ದಾಖಲಾಗಿವೆ ಮತ್ತು ಒಬ್ಬನೇ ಒಬ್ಬ ಪೊಲೀಸನಿಗೆ ಶಿಕ್ಷೆಯಾಗಿಲ್ಲ” ಎಂದು ಚಕ್ಮಾ ಹೇಳಿದ್ದಾರೆ.

ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.

ಅಬ್ದುಲ್ ಬಾರಿ ಮಸೌದ್

ಮೂಲ: ಮುಸ್ಲಿಂ ಮಿರರ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...