Homeಮುಖಪುಟಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.

- Advertisement -
- Advertisement -

ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಬಹುತೇಕರು ದಲಿತರು, ಆದಿವಾಸಿಗಳು, ಮುಸ್ಲಿಮರು ಸೇರಿದಂತೆ ಸಮಾಜದ ಬಡ ಮತ್ತು ಅಂಚಿಗೆ ತಳ್ಳಲ್ಪಟ್ಟ ವರ್ಗದವರು. ವಿಶ್ವದಾದ್ಯಂತ ಚಿತ್ರಹಿಂಸೆಯನ್ನು ತೊಲಗಿಸಲು ಕಟಿಬದ್ಧವಾಗಿರುವ ಸರಕಾರೇತರ ಸಂಸ್ಥೆಗಳ ಮಾನವ ಹಕ್ಕು ವೇದಿಕೆಯಾಗಿರುವ ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ಸಂಘಟನೆಯ ವಾರ್ಷಿಕ ವರದಿಯಲ್ಲಿ ಇದು ಬಹಿರಂಗವಾಗಿದೆ.

ಇತ್ತೀಚೆಗೆ “ಚಿತ್ರಹಿಂಸೆಯ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ಬೆಂಬಲ ದಿನ”ದಂದು ಬಿಡುಗಡೆಗೊಳಿಸಲಾದ “ಇಂಡಿಯಾ: ಆನ್ಯುವಲ್ ರಿಪೋರ್ಟ್ ಆನ್ ಟಾರ್ಚರ್ 2019″ನಲ್ಲಿ ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು UNCAT ಹೇಳಿದೆ. ಇವರಲ್ಲಿ 1,606 ಮಂದಿ ನ್ಯಾಯಾಂಗ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದರೆ, 125 ಸಾವುಗಳು ಪೊಲೀಸ್ ಕಸ್ಟಡಿ ಯಲ್ಲಿ ಸಂಭವಿಸಿವೆ. 2019ರಲ್ಲಿ 1,966 ಮಂದಿ  ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಇವರಲ್ಲಿ 1,819 ಮಂದಿ ನ್ಯಾಯಾಂಗ ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದರೆ, 147 ಸಾವುಗಳು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿವೆ. “ಈ ಅಂಕಿಅಂಶಗಳು ದೇಶದಲ್ಲಿ ವಾಸ್ತವವಾಗಿ ನಡೆಯುವ ಕಸ್ಟಡಿ ಮತ್ತು ಚಿತ್ರಹಿಂಸೆಯಿಂದ ಉಂಟಾದ ಸಾವುಗಳನ್ನು ಪ್ರತಿಫಲಿಸುವುದಿಲ್ಲ” ಎಂದು ವರದಿ ಎಚ್ಚರಿಸಿದೆ. ಅಂದರೆ, ಇದು ಅಧಿಕೃತ ಅಂಕಿಅಂಶವಾಗಿದ್ದು, ನೈಜ ಸಾವುಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರುವ ಸಂಭವವಿದೆ.

ಸಂಸ್ಥೆಯ ಭಾರತೀಯ ವಿಭಾಗವಾದ NCAT ನಿರ್ದೇಶಕ ಪಾರಿತೋಷ್ ಚಕ್ಮಾ ಹೇಳುವಂತೆ, “ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ 125 ಸಾವುಗಳ ಪೈಕಿ 70 ಮಂದಿ ಅಥವಾ 60 ಶೇಕಡಾ ಮಂದಿ ಬಡ ಮತ್ತು ಅವಗಣಿತ ಸಮುದಾಯಗಳಿಗೆ ಸೇರಿದವರು. ಇವರಲ್ಲಿ 13 ಮಂದಿ ದಲಿತರು ಮತ್ತು ಆದಿವಾಸಿಗಳು, 15 ಮಂದಿ ಮುಸ್ಲಿಮರು. 37 ಮಂದಿಯನ್ನು ಕಳವು, ವಂಚನೆ, ಅಕ್ರಮವಾಗಿ ಮದ್ಯ ಮಾರಾಟ, ಜೂಜಾಟ ಇತ್ಯಾದಿ ಸಣ್ಣಪುಟ್ಟ ಅಪರಾಧಗಳಿಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಮತ್ತು ಇದು ಅವರ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುತ್ತದೆ.”

ಈ 125 ಸಾವುಗಳಲ್ಲಿ ಉತ್ತರ ಪ್ರದೇಶ 14 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು ಮತ್ತು ಪಂಜಾಬ್ ಇದ್ದು, ಅಲ್ಲಿ ತಲಾ11 ಸಾವುಗಳು ಸಂಭವಿಸಿವೆ. ಉಳಿದಂತೆ ಬಿಹಾರದಲ್ಲಿ 10, ಮಧ್ಯಪ್ರದೇಶದಲ್ಲಿ 9, ಗುಜರಾತಿನಲ್ಲಿ 8, ದಿಲ್ಲಿ ಮತ್ತು ಒಡಿಶಾದಲ್ಲಿ ತಲಾ 7, ಜಾರ್ಖಂಡ್‌ನಲ್ಲಿ 6, ಛತ್ತೀಸ್‌ಗಢ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ತಲಾ 5, ಆಂಧ್ರಪ್ರದೇಶ ಮತ್ತು ಹರ್ಯಾಣದಲ್ಲಿ ತಲಾ 4, ಕೇರಳ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ ಮತ್ತು ಮಣಿಪುರದಲ್ಲಿ ತಲಾ 2 ಹಾಗೂ ಅಸ್ಸಾಂ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ತ್ರಿಪುರದಲ್ಲಿ ತಲಾ 1 ಸಾವು ಸಂಭವಿಸಿದೆ.

ಕಸ್ಟಡಿ

ಈ 125 ಸಾವುಗಳಲ್ಲಿ 93 ಮಂದಿ ಅಂದರೆ, 74.4 ಶೇಕಡಾ ಮಂದಿ ಆರೋಪಿತ ಚಿತ್ರಹಿಂಸೆ/ ಸಂಚಿನ ಕಾರಣದಿಂದ ಸತ್ತಿದ್ದಾರೆ. 24 ಮಂದಿ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಸತ್ತಿದ್ದು, ಇವುಗಳಲ್ಲಿ 16 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ, ಏಳು ಮಂದಿ ಕಾಯಿಲೆಯಿಂದ ಮತ್ತು ಒಬ್ಬ ಗಾಯದಿಂದ ಸತ್ತಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಉಳಿದ ಐವರ ಕಸ್ಟಡಿ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಚಕ್ಮಾ ಅವರ ಪ್ರಕಾರ ಹಿಂಸೆಯ ವಿಧಾನಗಳಲ್ಲಿ ದೇಹಕ್ಕೆ ಕಬ್ಬಿಣದ ಮೊಳೆಗಳನ್ನು ಹೊಡೆಯುವುದು, ಮರ್ಮಾಂಗಗಳಿಗೆ ಹೊಡೆಯುವುದು, ಮತ್ತು ಖಾರದ ಪುಡಿ ಹಚ್ಚುವುದು, ಬಾಯಿಗೆ ಮೂತ್ರ ಮಾಡುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು ಸೇರಿದೆ.

“ತಪ್ಪು ಒಪ್ಪಿಕೊಳ್ಳುವಂತೆ ಮಾಡಲು ಅಥವಾ ಲಂಚ ಸುಲಿಯಲು ಚಿತ್ರಹಿಂಸೆ ನೀಡಲಾಗುತ್ತದೆ. 2019ರಲ್ಲಿ ಬಳಸಲಾದ ಚಿತ್ರಹಿಂಸಾ ವಿಧಾನಗಳಲ್ಲಿ ದೇಹಕ್ಕೆ ಮೊಳೆ ಹೊಡೆಯುವುದು (ಬಿಹಾರದಲ್ಲಿ ಗುಫ್ರಾನ್ ಆಲಂ ಮತ್ತು ತಸ್ಲೀಂ ಅನ್ಸಾರಿ), ಕಾಲಿನ ಮೇಲೆ ರೋಲರ್ ಹರಿಸಿ ಬೆಂಕಿ ಹಚ್ಚುವುದು (ಕಾಶ್ಮೀರದಲ್ಲಿ ರಿಜ್ವಾನ್ ಅಸಾದ್ ಪಂಡಿತ್), “ಫಲಂಗ” ಅಂದರೆ ಕಾಲಿನ ಅಡಿಭಾಗಕ್ಕೆ ಹೊಡೆಯುವುದು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯುವುದು ( ಕೇರಳದಲ್ಲಿ ರಾಜ್‌ಕುಮಾರ್), ಮರ್ಮಾಂಗಗಳಿಗೆ ಹೊಡೆಯುವುದು (ಹರ್ಯಾಣದಲ್ಲಿ ಬ್ರಿಜ್‌ಪಾಲ್ ಮೌರ್ಯ ಮತ್ತು ಲಿನಾ ನರ್ಜಿನಾರಿ), ದೇಹಕ್ಕೆ ಸೂಜಿ ಚುಚ್ಚುವುದು (ತಮಿಳುನಾಡಿನಲ್ಲಿ ಮೂರು ವರ್ಷಗಳ ಮಗುವಿನ ಮೇಲೆ), ಬತ್ತಲೆಗೊಳಿಸಿ ಹೊಡೆಯುವುದು (ಹರ್ಯಾಣದಲ್ಲಿ ಮೊಹಮ್ಮದ್ ತನ್ವೀರ್ ಮತ್ತು ಲಿನಾ ನರ್ಜಿನಾರಿ, ಅಸ್ಸಾಂನಲ್ಲಿ ಮಿನುವಾರ ಬೇಗಂ, ಸನುವಾರ ಮತ್ತು ರುಮೇಲಾ), ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದೆಯುವುದು (ಅಸ್ಸಾಂನಲ್ಲಿ ಮಿನುವಾರ ಬೇಗಂ) ಇತ್ಯಾದಿ ಸೇರಿವೆ” ಎಂದು ಚಕ್ಮಾ ಹೇಳಿದ್ದಾರೆ.

ಉಳಿದ ಚಿತ್ರಹಿಂಸಾ ವಿಧಾನಗಳಲ್ಲಿ ವಿದ್ಯುತ್ ಶಾಕ್ ನೀಡುವುದು, ಮರ್ಮಾಂಗಗಳಿಗೆ ಪೆಟ್ರೋಲ್ ಸುರಿಯುವುದು, ಬೇಡಿ ತೊಡಿಸಿ ಹೊಡೆಯುವುದು, ದೇಹಕ್ಕೆ ಸೂಜಿ ಚುಚ್ಚುವುದು, ಕಾದ ಸರಳಿನಿಂದ ಬರೆ ಹಾಕುವುದು, ಗುದದ್ವಾರಕ್ಕೆ ಗಟ್ಟಿಯಾದ ವಸ್ತುಗಳನ್ನು ತುರುಕುವುದು, ಕೈಕಾಲು ಕಟ್ಟಿ ತಲೆಕೆಳಗಾಗಿ ನೇತಾಡಿಸಿ ಹೊಡೆಯುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು, ಕಟ್ಟಿಂಗ್ ಪ್ಲಯರ್‌ನಲ್ಲಿ ಉಗುರುಗಳನ್ನು ಅದುಮುವುದು, ಕೈಕಾಲು ಕಟ್ಟಿ ಎರಡು ಮೇಜುಗಳ ನಡುವೆ ನೇತಾಡಿಸಿ ಕಬ್ಬಿಣದ ಸರಳಿನಿಂದ ಹೊಡೆಯುವುದು ಇತ್ಯಾದಿ ಸೇರಿವೆ.

ಹಲವಾರು ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕಡ್ಡಾಯವಾದ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ, ಶವಗಳನ್ನು ತರಾತುರಿಯಲ್ಲಿ ಸುಟ್ಟು ಚಿತ್ರಹಿಂಸೆಯ ಎಲ್ಲಾ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂಬುದನ್ನು ವರದಿ ಎತ್ತಿಹೇಳಿದೆ. ತಮಿಳುನಾಡಿನಲ್ಲಿ ಕಸ್ಟಡಿಯಲ್ಲಿ ಸತ್ತ 17 ವರ್ಷಗಳ ಹುಡುಗನ (ಹೆಸರು ತಡೆಹಿಡಿಯಲಾಗಿದೆ) ಮರಣೋತ್ತರ ಪರೀಕ್ಷೆ ನಡೆಸದಿರುವುದು. ಗುಜರಾತಿನಲ್ಲಿ ಹೀರಾ ಬಜನಿಯಾ ಎಂಬಾತನ ಶವವನ್ನು ಸಂಬಂಧಿಕರಿಗೆ ಅಂತಿಮ ಕ್ರಿಯೆಗಳನ್ನು ನಡೆಸಲೂ ಅವಕಾಶ ಕೊಡದೆ, ದಹನ ಮಾಡಿ ಚಿತ್ರಹಿಂಸೆಯ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಿದುದು, ತ್ರಿಪುರದಲ್ಲಿ ಮಂಗಲ್ ದಾಸ್ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ ಬಲವಂತವಾಗಿ ದಹನ ಮಾಡಿದುದು, ಅದೇ ರೀತಿ ರಾಜಸ್ಥಾನದ ಹನುಮಾನ್ ಕೋಳಿ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ, ಆತನ ಮಕ್ಕಳಿಗೆ ಕೊನೆಯ ಬಾರಿ ಮುಖನೋಡಲೂ ಅವಕಾಶ ಕೊಡದೆ ದಹನ ಮಾಡಿದುದು- ಹೀಗೆ ಕನಿಷ್ಟ ನಾಲ್ಕು ಇಂತಹಾ ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರಿಗೆ ಚಿತ್ರಹಿಂಸೆ ನೀಡುವುದು ಮತ್ತು ಹೆಚ್ಚಾಗಿ ಲೈಂಗಿಕ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದ್ದು, ಹೆಚ್ಚಿನ ಬಾರಿ ಇವರು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ. 2019ರಲ್ಲಿ ಕನಿಷ್ಟ ನಾಲ್ವರು ಮಹಿಳೆಯರು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಮಕ್ಕಳನ್ನು ಕೂಡಾ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) “ಕೈಂ ಇನ್ ಇಂಡಿಯಾ- 2018” ವರದಿಯಲ್ಲಿ ಪೊಲೀಸರು ಅಪ್ರಾಪ್ತ ಸಂತ್ರಸ್ತರಿಗೆ 3,164 ಪ್ರಕರಣಗಳಲ್ಲಿ ಸಾಧಾರಣ ಮತ್ತು 3,467 ಪ್ರಕರಣಗಳಲ್ಲಿ ಗಂಭೀರ ಸ್ವರೂಪದ ಹಾನಿಯುಂಟುಮಾಡಿರುವುದನ್ನು ದಾಖಲಿಸಿದೆ.

ಕಸ್ಟಡಿ

ಕೈದಿಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಸೆಪ್ಟೆಂಬರ್ 2017ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳ ಸರಮಾಲೆಯನ್ನೇ ನೀಡಿದರೂ, ಜೈಲುಗಳು ನರಕಗಳಾಗಿಯೇ ಉಳಿದಿವೆ. 2019ರಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ 1,606 ಸಾವುಗಳು ಸಂಭವಿಸಿವೆ. ಈ ಸಾವುಗಳಲ್ಲಿ ಹಲವಾರು ಸಾವುಗಳು ಚಿತ್ರಹಿಂಸೆಯ ಕಾರಣದಿಂದ ಸಂಭವಿಸಿವೆ.

“ಚಿತ್ರಹಿಂಸೆ ನಡೆಸುವವರಿಗೆ ಸಂಪೂರ್ಣ ರಕ್ಷಣೆ ಇದೆ. ಭಾರತ ಸರಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ)ದ 2005ರಿಂದ 2018ರ ತನಕದ ವರದಿಗಳ ಪ್ರಕಾರ “ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಪ್ರಕರಣಗಳಲ್ಲಿ” 500 ಸಾವುಗಳು ಸಂಭವಿಸಿದ್ದು, 281 ಪ್ರಕರಣಗಳು ದಾಖಲಾಗಿವೆ ಮತ್ತು ಒಬ್ಬನೇ ಒಬ್ಬ ಪೊಲೀಸನಿಗೆ ಶಿಕ್ಷೆಯಾಗಿಲ್ಲ” ಎಂದು ಚಕ್ಮಾ ಹೇಳಿದ್ದಾರೆ.

ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.

ಅಬ್ದುಲ್ ಬಾರಿ ಮಸೌದ್

ಮೂಲ: ಮುಸ್ಲಿಂ ಮಿರರ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...