Homeಮುಖಪುಟಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.

- Advertisement -
- Advertisement -

ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಬಹುತೇಕರು ದಲಿತರು, ಆದಿವಾಸಿಗಳು, ಮುಸ್ಲಿಮರು ಸೇರಿದಂತೆ ಸಮಾಜದ ಬಡ ಮತ್ತು ಅಂಚಿಗೆ ತಳ್ಳಲ್ಪಟ್ಟ ವರ್ಗದವರು. ವಿಶ್ವದಾದ್ಯಂತ ಚಿತ್ರಹಿಂಸೆಯನ್ನು ತೊಲಗಿಸಲು ಕಟಿಬದ್ಧವಾಗಿರುವ ಸರಕಾರೇತರ ಸಂಸ್ಥೆಗಳ ಮಾನವ ಹಕ್ಕು ವೇದಿಕೆಯಾಗಿರುವ ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ಸಂಘಟನೆಯ ವಾರ್ಷಿಕ ವರದಿಯಲ್ಲಿ ಇದು ಬಹಿರಂಗವಾಗಿದೆ.

ಇತ್ತೀಚೆಗೆ “ಚಿತ್ರಹಿಂಸೆಯ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ಬೆಂಬಲ ದಿನ”ದಂದು ಬಿಡುಗಡೆಗೊಳಿಸಲಾದ “ಇಂಡಿಯಾ: ಆನ್ಯುವಲ್ ರಿಪೋರ್ಟ್ ಆನ್ ಟಾರ್ಚರ್ 2019″ನಲ್ಲಿ ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು UNCAT ಹೇಳಿದೆ. ಇವರಲ್ಲಿ 1,606 ಮಂದಿ ನ್ಯಾಯಾಂಗ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದರೆ, 125 ಸಾವುಗಳು ಪೊಲೀಸ್ ಕಸ್ಟಡಿ ಯಲ್ಲಿ ಸಂಭವಿಸಿವೆ. 2019ರಲ್ಲಿ 1,966 ಮಂದಿ  ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಇವರಲ್ಲಿ 1,819 ಮಂದಿ ನ್ಯಾಯಾಂಗ ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದರೆ, 147 ಸಾವುಗಳು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿವೆ. “ಈ ಅಂಕಿಅಂಶಗಳು ದೇಶದಲ್ಲಿ ವಾಸ್ತವವಾಗಿ ನಡೆಯುವ ಕಸ್ಟಡಿ ಮತ್ತು ಚಿತ್ರಹಿಂಸೆಯಿಂದ ಉಂಟಾದ ಸಾವುಗಳನ್ನು ಪ್ರತಿಫಲಿಸುವುದಿಲ್ಲ” ಎಂದು ವರದಿ ಎಚ್ಚರಿಸಿದೆ. ಅಂದರೆ, ಇದು ಅಧಿಕೃತ ಅಂಕಿಅಂಶವಾಗಿದ್ದು, ನೈಜ ಸಾವುಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರುವ ಸಂಭವವಿದೆ.

ಸಂಸ್ಥೆಯ ಭಾರತೀಯ ವಿಭಾಗವಾದ NCAT ನಿರ್ದೇಶಕ ಪಾರಿತೋಷ್ ಚಕ್ಮಾ ಹೇಳುವಂತೆ, “ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ 125 ಸಾವುಗಳ ಪೈಕಿ 70 ಮಂದಿ ಅಥವಾ 60 ಶೇಕಡಾ ಮಂದಿ ಬಡ ಮತ್ತು ಅವಗಣಿತ ಸಮುದಾಯಗಳಿಗೆ ಸೇರಿದವರು. ಇವರಲ್ಲಿ 13 ಮಂದಿ ದಲಿತರು ಮತ್ತು ಆದಿವಾಸಿಗಳು, 15 ಮಂದಿ ಮುಸ್ಲಿಮರು. 37 ಮಂದಿಯನ್ನು ಕಳವು, ವಂಚನೆ, ಅಕ್ರಮವಾಗಿ ಮದ್ಯ ಮಾರಾಟ, ಜೂಜಾಟ ಇತ್ಯಾದಿ ಸಣ್ಣಪುಟ್ಟ ಅಪರಾಧಗಳಿಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಮತ್ತು ಇದು ಅವರ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುತ್ತದೆ.”

ಈ 125 ಸಾವುಗಳಲ್ಲಿ ಉತ್ತರ ಪ್ರದೇಶ 14 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು ಮತ್ತು ಪಂಜಾಬ್ ಇದ್ದು, ಅಲ್ಲಿ ತಲಾ11 ಸಾವುಗಳು ಸಂಭವಿಸಿವೆ. ಉಳಿದಂತೆ ಬಿಹಾರದಲ್ಲಿ 10, ಮಧ್ಯಪ್ರದೇಶದಲ್ಲಿ 9, ಗುಜರಾತಿನಲ್ಲಿ 8, ದಿಲ್ಲಿ ಮತ್ತು ಒಡಿಶಾದಲ್ಲಿ ತಲಾ 7, ಜಾರ್ಖಂಡ್‌ನಲ್ಲಿ 6, ಛತ್ತೀಸ್‌ಗಢ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ತಲಾ 5, ಆಂಧ್ರಪ್ರದೇಶ ಮತ್ತು ಹರ್ಯಾಣದಲ್ಲಿ ತಲಾ 4, ಕೇರಳ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ ಮತ್ತು ಮಣಿಪುರದಲ್ಲಿ ತಲಾ 2 ಹಾಗೂ ಅಸ್ಸಾಂ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ತ್ರಿಪುರದಲ್ಲಿ ತಲಾ 1 ಸಾವು ಸಂಭವಿಸಿದೆ.

ಕಸ್ಟಡಿ

ಈ 125 ಸಾವುಗಳಲ್ಲಿ 93 ಮಂದಿ ಅಂದರೆ, 74.4 ಶೇಕಡಾ ಮಂದಿ ಆರೋಪಿತ ಚಿತ್ರಹಿಂಸೆ/ ಸಂಚಿನ ಕಾರಣದಿಂದ ಸತ್ತಿದ್ದಾರೆ. 24 ಮಂದಿ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಸತ್ತಿದ್ದು, ಇವುಗಳಲ್ಲಿ 16 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ, ಏಳು ಮಂದಿ ಕಾಯಿಲೆಯಿಂದ ಮತ್ತು ಒಬ್ಬ ಗಾಯದಿಂದ ಸತ್ತಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಉಳಿದ ಐವರ ಕಸ್ಟಡಿ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಚಕ್ಮಾ ಅವರ ಪ್ರಕಾರ ಹಿಂಸೆಯ ವಿಧಾನಗಳಲ್ಲಿ ದೇಹಕ್ಕೆ ಕಬ್ಬಿಣದ ಮೊಳೆಗಳನ್ನು ಹೊಡೆಯುವುದು, ಮರ್ಮಾಂಗಗಳಿಗೆ ಹೊಡೆಯುವುದು, ಮತ್ತು ಖಾರದ ಪುಡಿ ಹಚ್ಚುವುದು, ಬಾಯಿಗೆ ಮೂತ್ರ ಮಾಡುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು ಸೇರಿದೆ.

“ತಪ್ಪು ಒಪ್ಪಿಕೊಳ್ಳುವಂತೆ ಮಾಡಲು ಅಥವಾ ಲಂಚ ಸುಲಿಯಲು ಚಿತ್ರಹಿಂಸೆ ನೀಡಲಾಗುತ್ತದೆ. 2019ರಲ್ಲಿ ಬಳಸಲಾದ ಚಿತ್ರಹಿಂಸಾ ವಿಧಾನಗಳಲ್ಲಿ ದೇಹಕ್ಕೆ ಮೊಳೆ ಹೊಡೆಯುವುದು (ಬಿಹಾರದಲ್ಲಿ ಗುಫ್ರಾನ್ ಆಲಂ ಮತ್ತು ತಸ್ಲೀಂ ಅನ್ಸಾರಿ), ಕಾಲಿನ ಮೇಲೆ ರೋಲರ್ ಹರಿಸಿ ಬೆಂಕಿ ಹಚ್ಚುವುದು (ಕಾಶ್ಮೀರದಲ್ಲಿ ರಿಜ್ವಾನ್ ಅಸಾದ್ ಪಂಡಿತ್), “ಫಲಂಗ” ಅಂದರೆ ಕಾಲಿನ ಅಡಿಭಾಗಕ್ಕೆ ಹೊಡೆಯುವುದು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯುವುದು ( ಕೇರಳದಲ್ಲಿ ರಾಜ್‌ಕುಮಾರ್), ಮರ್ಮಾಂಗಗಳಿಗೆ ಹೊಡೆಯುವುದು (ಹರ್ಯಾಣದಲ್ಲಿ ಬ್ರಿಜ್‌ಪಾಲ್ ಮೌರ್ಯ ಮತ್ತು ಲಿನಾ ನರ್ಜಿನಾರಿ), ದೇಹಕ್ಕೆ ಸೂಜಿ ಚುಚ್ಚುವುದು (ತಮಿಳುನಾಡಿನಲ್ಲಿ ಮೂರು ವರ್ಷಗಳ ಮಗುವಿನ ಮೇಲೆ), ಬತ್ತಲೆಗೊಳಿಸಿ ಹೊಡೆಯುವುದು (ಹರ್ಯಾಣದಲ್ಲಿ ಮೊಹಮ್ಮದ್ ತನ್ವೀರ್ ಮತ್ತು ಲಿನಾ ನರ್ಜಿನಾರಿ, ಅಸ್ಸಾಂನಲ್ಲಿ ಮಿನುವಾರ ಬೇಗಂ, ಸನುವಾರ ಮತ್ತು ರುಮೇಲಾ), ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದೆಯುವುದು (ಅಸ್ಸಾಂನಲ್ಲಿ ಮಿನುವಾರ ಬೇಗಂ) ಇತ್ಯಾದಿ ಸೇರಿವೆ” ಎಂದು ಚಕ್ಮಾ ಹೇಳಿದ್ದಾರೆ.

ಉಳಿದ ಚಿತ್ರಹಿಂಸಾ ವಿಧಾನಗಳಲ್ಲಿ ವಿದ್ಯುತ್ ಶಾಕ್ ನೀಡುವುದು, ಮರ್ಮಾಂಗಗಳಿಗೆ ಪೆಟ್ರೋಲ್ ಸುರಿಯುವುದು, ಬೇಡಿ ತೊಡಿಸಿ ಹೊಡೆಯುವುದು, ದೇಹಕ್ಕೆ ಸೂಜಿ ಚುಚ್ಚುವುದು, ಕಾದ ಸರಳಿನಿಂದ ಬರೆ ಹಾಕುವುದು, ಗುದದ್ವಾರಕ್ಕೆ ಗಟ್ಟಿಯಾದ ವಸ್ತುಗಳನ್ನು ತುರುಕುವುದು, ಕೈಕಾಲು ಕಟ್ಟಿ ತಲೆಕೆಳಗಾಗಿ ನೇತಾಡಿಸಿ ಹೊಡೆಯುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು, ಕಟ್ಟಿಂಗ್ ಪ್ಲಯರ್‌ನಲ್ಲಿ ಉಗುರುಗಳನ್ನು ಅದುಮುವುದು, ಕೈಕಾಲು ಕಟ್ಟಿ ಎರಡು ಮೇಜುಗಳ ನಡುವೆ ನೇತಾಡಿಸಿ ಕಬ್ಬಿಣದ ಸರಳಿನಿಂದ ಹೊಡೆಯುವುದು ಇತ್ಯಾದಿ ಸೇರಿವೆ.

ಹಲವಾರು ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕಡ್ಡಾಯವಾದ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ, ಶವಗಳನ್ನು ತರಾತುರಿಯಲ್ಲಿ ಸುಟ್ಟು ಚಿತ್ರಹಿಂಸೆಯ ಎಲ್ಲಾ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂಬುದನ್ನು ವರದಿ ಎತ್ತಿಹೇಳಿದೆ. ತಮಿಳುನಾಡಿನಲ್ಲಿ ಕಸ್ಟಡಿಯಲ್ಲಿ ಸತ್ತ 17 ವರ್ಷಗಳ ಹುಡುಗನ (ಹೆಸರು ತಡೆಹಿಡಿಯಲಾಗಿದೆ) ಮರಣೋತ್ತರ ಪರೀಕ್ಷೆ ನಡೆಸದಿರುವುದು. ಗುಜರಾತಿನಲ್ಲಿ ಹೀರಾ ಬಜನಿಯಾ ಎಂಬಾತನ ಶವವನ್ನು ಸಂಬಂಧಿಕರಿಗೆ ಅಂತಿಮ ಕ್ರಿಯೆಗಳನ್ನು ನಡೆಸಲೂ ಅವಕಾಶ ಕೊಡದೆ, ದಹನ ಮಾಡಿ ಚಿತ್ರಹಿಂಸೆಯ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಿದುದು, ತ್ರಿಪುರದಲ್ಲಿ ಮಂಗಲ್ ದಾಸ್ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ ಬಲವಂತವಾಗಿ ದಹನ ಮಾಡಿದುದು, ಅದೇ ರೀತಿ ರಾಜಸ್ಥಾನದ ಹನುಮಾನ್ ಕೋಳಿ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ, ಆತನ ಮಕ್ಕಳಿಗೆ ಕೊನೆಯ ಬಾರಿ ಮುಖನೋಡಲೂ ಅವಕಾಶ ಕೊಡದೆ ದಹನ ಮಾಡಿದುದು- ಹೀಗೆ ಕನಿಷ್ಟ ನಾಲ್ಕು ಇಂತಹಾ ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರಿಗೆ ಚಿತ್ರಹಿಂಸೆ ನೀಡುವುದು ಮತ್ತು ಹೆಚ್ಚಾಗಿ ಲೈಂಗಿಕ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದ್ದು, ಹೆಚ್ಚಿನ ಬಾರಿ ಇವರು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ. 2019ರಲ್ಲಿ ಕನಿಷ್ಟ ನಾಲ್ವರು ಮಹಿಳೆಯರು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಮಕ್ಕಳನ್ನು ಕೂಡಾ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) “ಕೈಂ ಇನ್ ಇಂಡಿಯಾ- 2018” ವರದಿಯಲ್ಲಿ ಪೊಲೀಸರು ಅಪ್ರಾಪ್ತ ಸಂತ್ರಸ್ತರಿಗೆ 3,164 ಪ್ರಕರಣಗಳಲ್ಲಿ ಸಾಧಾರಣ ಮತ್ತು 3,467 ಪ್ರಕರಣಗಳಲ್ಲಿ ಗಂಭೀರ ಸ್ವರೂಪದ ಹಾನಿಯುಂಟುಮಾಡಿರುವುದನ್ನು ದಾಖಲಿಸಿದೆ.

ಕಸ್ಟಡಿ

ಕೈದಿಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಸೆಪ್ಟೆಂಬರ್ 2017ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳ ಸರಮಾಲೆಯನ್ನೇ ನೀಡಿದರೂ, ಜೈಲುಗಳು ನರಕಗಳಾಗಿಯೇ ಉಳಿದಿವೆ. 2019ರಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ 1,606 ಸಾವುಗಳು ಸಂಭವಿಸಿವೆ. ಈ ಸಾವುಗಳಲ್ಲಿ ಹಲವಾರು ಸಾವುಗಳು ಚಿತ್ರಹಿಂಸೆಯ ಕಾರಣದಿಂದ ಸಂಭವಿಸಿವೆ.

“ಚಿತ್ರಹಿಂಸೆ ನಡೆಸುವವರಿಗೆ ಸಂಪೂರ್ಣ ರಕ್ಷಣೆ ಇದೆ. ಭಾರತ ಸರಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ)ದ 2005ರಿಂದ 2018ರ ತನಕದ ವರದಿಗಳ ಪ್ರಕಾರ “ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಪ್ರಕರಣಗಳಲ್ಲಿ” 500 ಸಾವುಗಳು ಸಂಭವಿಸಿದ್ದು, 281 ಪ್ರಕರಣಗಳು ದಾಖಲಾಗಿವೆ ಮತ್ತು ಒಬ್ಬನೇ ಒಬ್ಬ ಪೊಲೀಸನಿಗೆ ಶಿಕ್ಷೆಯಾಗಿಲ್ಲ” ಎಂದು ಚಕ್ಮಾ ಹೇಳಿದ್ದಾರೆ.

ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.

ಅಬ್ದುಲ್ ಬಾರಿ ಮಸೌದ್

ಮೂಲ: ಮುಸ್ಲಿಂ ಮಿರರ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...