ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಪುರೋಹಿತರೊಬ್ಬರ ಮನೆಗೆ ಆದಾಯ ತೆರಿಗೆ(ಐಟಿ) ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ ವಜ್ರದ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊದಲ್ಲಿ, ಚಿನ್ನಾಭರಣಗಳನ್ನು ಸಾಲಾಗಿ ಜೋಡಿಸಿಟ್ಟಿರುವುದು ಮತ್ತು ಒಂದಷ್ಟು ಜನರು ಪೊಲೀಸ್ ಯೂನಿಫಾರ್ಮ್ನಲ್ಲಿ ಇರುವುದು ಕಾಣಬಹುದಾಗಿದೆ.
“ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ ವಜ್ರ ಎಷ್ಟು ಗೊತ್ತಾ? 128 ಕೆಜಿ ಚಿನ್ನ , 150 ಕೋಟಿ ಕ್ಯಾಶ್, 70 ಕೋಟಿ ಬೆಲೆಯ ವಜ್ರ” ಎಂದು ವಾಟ್ಸಪ್ನಲ್ಲಿ ಸತತವಾಗಿ ವಿಡಿಯೊ ಹರಿದಾಡುತ್ತಿದೆ. ಈ ಬಗ್ಗೆ ಫ್ಯಾಕ್ಟ್ಚೆಕ್ ಮಾಡುವಂತೆ ನಾನುಗೌರಿ.ಕಾಂಗೆ ಸಂದೇಶಗಳು ಬಂದಿವೆ.
ವಿಡಿಯೊ ಫೇಸ್ಬುಕ್ನಲ್ಲಿ ಕೂಡಾ ಹರಿದಾಡುತ್ತಿದ್ದು, ನೂರಾರು ಜನರು ಹಂಚಿಕೊಂಡಿದ್ದಾರೆ. ಫೇಸ್ಬುಕ್ ಅಲ್ಲಿ ಕೂಡಾ ವಿಡಿಯೊ ಜೊತೆಗಿನ ಸಂದೇಶವು ವಾಟ್ಸಪ್ನಲ್ಲಿ ಹರಿದಾಡುತ್ತಿದ್ದಂತೆ ತಿರುಪತಿ ದೇವಸ್ಥಾನದ ಪುರೋಹಿತರ ಮನೆಯಲ್ಲಿ ಸಿಕ್ಕ ಆಭರಣಗಳು ಎಂದು ಪ್ರತಿಪಾದಿಸುತ್ತಿದೆ.
ಫೇಸ್ಬುಕ್ನಲ್ಲಿ ಈ ವಿಡಿಯೊವನ್ನು ಹಲವಾರು ಜನರು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸುಮಾರು 37 ಸೆಕೆಂಡಿನ ಈ ವಿಡಿಯೊವನ್ನು ಅದೇ ಪ್ರತಿಪಾದನೆಯೊಂದಿಗೆ ಯೂಟ್ಯೂಬ್ನಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ. ಅದನ್ನು ಇಲ್ಲಿ ನೋಡಬಹುದಾಗಿದೆ.
ಇಷ್ಟೇ ಅಲ್ಲದೆ, ಈ ವಿಡಿಯೊ ತಿರುಪತಿ ದೇವಸ್ಥಾನದ ಮಾಜಿ ಟ್ರಸ್ಟಿ ಜೆ. ಸೇಕರ್ ರೆಡ್ಡಿ ಅವರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳು ಎಂದು ಪ್ರತಿಪಾದಿಸಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಅವರುಗಳ ಆರ್ಕೈವ್ ಲಿಂಕ್ ಅನ್ನು ಇಲ್ಲಿ ವೀಕ್ಷಿಸಿ.
ಇದನ್ನೂ ಓದಿ:ಫ್ಯಾಕ್ಟ್ಚೆಕ್: ಯೋಗಿ ಆದಿತ್ಯನಾಥರ ಬೆಂಗಾವಲಿನ ಮೇಲೆ ದಾಳಿ ಮಾಡಿದ ಯುವಕರ ವಿಡಿಯೊ ಈಗಿನದ್ದಲ್ಲ
ಫ್ಯಾಕ್ಟ್ಚೆಕ್
ವಾಸ್ತವದಲ್ಲಿ ಈ ವಿಡಿಯೊಗೂ, ತಿರುಪತಿ ದೇವಸ್ಥಾನಕ್ಕೂ ಯಾವುದೇ ಸಂಬಂಧವೇ ಇಲ್ಲ. ಈ ಬಗ್ಗೆ ನಾವು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಇದು ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯಿಂದ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ಮರುವಶಪಡಿಸಿಕೊಂಡಿರುವ ವಿಡಿಯೊವಾಗಿದೆ. ಇದನ್ನು ತಮಿಳು ಮಾಧ್ಯಮ ಜಯಾ ಪ್ಲಸ್ ಡಿಸೆಂಬರ್ 22, 2021 ರಂದು ವರದಿ ಮಾಡಿತ್ತು.
ವರದಿಯ ಪ್ರಕಾರ, ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್ ಅಲುಕ್ಕಾಸ್ ಶೋರೂಂನಿಂದ ಈ ದರೋಡೆ ನಡೆದಿತ್ತು. ಅದನ್ನು ದರೋಡೆಕೋರದಿಂದ ಪೊಲೀಸರು ಮರು ವಶಪಡಿಸಿಕೊಂಡಿರುವ ವಿಡಿಯೊ ಇದಾಗಿದೆ. ಇದನ್ನು ಹಲವಾರು ತಮಿಳು ಸುದ್ದಿ ವೆಬ್ಸೈಟ್ಗಳು ತಮ್ಮ ಯೂಟ್ಯೂಬ್ ಚಾನೆಲ್ಗಳು ಪ್ರಸಾರ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ದರೋಡೆಯ ಘಟನೆಯು ಡಿಸೆಂಬರ್ 14, 2021 ರ ಮಧ್ಯರಾತ್ರಿ ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಮ್ನಿಂದ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ದರೋಡೆ ಮಾಡಲಾಗಿತ್ತು. ತನಿಖೆಯ ನಂತರ ವೆಲ್ಲೂರು ಪೊಲೀಸರು ವೆಲ್ಲೂರಿನ ಸ್ಮಶಾನದಲ್ಲಿ ಹೂತಿಟ್ಟಿದ್ದ ಎಲ್ಲಾ ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೋಸ್ ಅಲುಕ್ಕಾಸ್ ಶೋರೂಂನಿಂದ ಚಿನ್ನ ಮತ್ತು ವಜ್ರಗಳನ್ನು ದರೋಡೆ ಮಾಡಿದ್ದ ಆರೋಪಿ ಡೀಕಾರಾಮನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಫ್ಯಾಕ್ಟ್ಚೆಕ್: ಆಹಾರದ ಮೇಲೆ ಉಗುಳುವುದು ಹಲಾಲ್ನ ಭಾಗವೆಂದು ಮುಸ್ಲಿಮರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ
ಹೀಗಾಗಿ ಈ ವಿಡಿಯೊಗೂ ತಿರುಪತಿ ದೇವಾಲಯಕ್ಕೂ ಯಾವುದೆ ಸಂಬಂಧವಿಲ್ಲ. ಆದರೆ 2016ರಲ್ಲಿ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದ ಜೆ. ಶೇಕರ್ ರೆಡ್ಡಿ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹100 ಕೋಟಿ ನಗದು ಹಾಗೂ 120 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಈ ಐಟಿ ದಾಳಿಗಳ ನಂತರ ಆಂಧ್ರಪ್ರದೇಶ ಸರ್ಕಾರ ಸೇಕರ್ ರೆಡ್ಡಿ ಅವರನ್ನು ಟಿಟಿಡಿ ಸದಸ್ಯತ್ವದಿಂದ ತೆಗೆದುಹಾಕಿತ್ತು.
ಆದರೆ, ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ 2020 ರ ಸೆಪ್ಟೆಂಬರ್ನಲ್ಲಿ ಶೇಕರ್ ರೆಡ್ಡಿ ವಿರುದ್ಧ ಸಿಬಿಐ ದಾಖಲಿಸಿದ ಪ್ರಕರಣವನ್ನು ವಿಶೇಷ ನ್ಯಾಯಾಲಯವು ವಜಾಗೊಳಿಸಿತ್ತು. ಪ್ರಕರಣವನ್ನು ವಜಾ ಮಾಡಿದ ನಂತರ ಶೇಕರ್ ರೆಡ್ಡಿ ಮತ್ತೇ ತಿರುಪತಿ ಆಡಳಿತ ಮಂಡಳಿಗೆ ಸೇರಿದ್ದರು. ಆದಾಗ್ಯೂ, ಆಗಸ್ಟ್ 2021 ರಲ್ಲಿ ರಚಿತವಾದ ಹೊಸ ಮಂಡಳಿಯಲ್ಲಿ ಅವರನ್ನು ಸೇರಿಸಲಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೊಗೂ, ತಿರುಪತಿ ದೇವಸ್ಥಾನಕ್ಕೂ ಯಾವುದೆ ಸಂಬಂಧವಿಲ್ಲ. ವೈರಲ್ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವೀಡಿಯೊ, ತಮಿಳುನಾಡಿನ ವೆಲ್ಲೂರಿನಲ್ಲಿ ಇತ್ತೀಚೆಗೆ ನಡೆದ ದರೋಡೆಗೆ ಸಂಬಂಧಪಟ್ಟದ್ದಾಗಿದೆ.
Post.L.K.DODDI.DI/RAICHUR
Anjanayya.post.L.K.DODDi
[email protected]
Ninu first news navaru sari illa nija na sullu madthira sulluna nija madthira thu ninu first correct agi nija samaja olledu agathe nija