ಟಿಕ್ರಿ ಗಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ 52 ವರ್ಷದ ಜಿಂದ್ನ ಸಿಂಗ್ವಾಲ್ ಗ್ರಾಮದ ರೈತರೊಬ್ಬರು ಶನಿವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಮೃತ ರೈತನನ್ನು ಕರಮ್ವೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಪೊಲೀಸ್ ಅಧಿಕಾರಿಗಳು, ಮೃತ ಕರಮ್ವೀರ್ ಸಿಂಗ್ ಅವರ ಮೃತದೇಹವು ಟಿಕ್ರಿ ಗಡಿಯ ಸಮೀಪ ಉದ್ಯಾನವನವೊಂದರಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
“ಮೃತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರೆಂದು ತೋರುತ್ತದೆ. ಅವರು ಪತ್ತೆಯಾದಾಗ ಮೃತಪಟ್ಟಿದ್ದರು. ಮೃತಪಟ್ಟ ರೈತನ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಶವವನ್ನು ಶವಾಗಾರದಲ್ಲಿ ಇಡಲಾಗಿದೆ. ಅವರ ಕುಟುಂಬವು ಬಂದು ಒಪ್ಪಿಗೆ ನೀಡಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು… ಇದುವರೆಗೆ ತನಿಖೆಯಲ್ಲಿ ಯಾವುದೆ ಸಂಶಯಾತ್ಮಕ ವಿಷಯಗಳು ಕಂಡುಬಂದಿಲ್ಲ” ಎಂದು ಬಹದ್ದೂರ್ಗಡ ಸಿಟಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಎಚ್ಚರಿಕೆಯ ಪೋಸ್ಟ್ರ್: ’ಬಿಜೆಪಿಗರೆ ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೆ ಜವಾಬ್ದಾರಿ’
ಆತ್ಮಹತ್ಯ ಪತ್ರವನ್ನು ಕೈಬರಹದಲ್ಲಿ ಬರೆಯಲಾಗಿದ್ದು “ಭಾರತೀಯ ಕಿಸಾನ್ ಯೂನಿಯನ್ ಜಿಂದಾಬಾದ್” ನಿಂದ ಪ್ರಾರಂಭವಾಗುತ್ತದೆ. “ಆತ್ಮೀಯ ರೈತ ಸಹೋದರರೇ, ಈ ಮೋದಿ ಸರ್ಕಾರವು ದಿನಾಂಕದ ನಂತರ ದಿನಾಂಕವನ್ನು ನೀಡುತ್ತಲೇ ಇದೆ. ಈ ಕರಾಳ ಕಾನೂನುಗಳು ಯಾವಾಗ ರದ್ದಾಗುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ಈ ಕರಾಳ ಕಾನೂನುಗಳು ರದ್ದಾಗುವವರೆಗೂ ನಾವು ಇಲ್ಲಿಂದ ತೆರಳುವುದಿಲ್ಲ” ಎಂದು ಬರೆಯಲಾಗಿದೆ.
ಟಿಕ್ರಿ ಗಡಿಯಲ್ಲಿ ಪ್ರತಿಭಟನಾಕಾರರು ಆತ್ಮಹತ್ಯೆ ಮಾಡಿದ ಹಲವಾರು ಘಟನೆ ಸಂಭವಿಸಿದೆ. ಕಳೆದ ತಿಂಗಳು, ರೋಹ್ಟಕ್ ಮೂಲದ 42 ವರ್ಷದ ರೈತ ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಅದಕ್ಕೂ ಮೊದಲು, ಡಿಸೆಂಬರ್ನಲ್ಲಿ ಪಂಜಾಬ್ನ ಜಲಾಲಾಬಾದ್ನ ವಕೀಲರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: ಸಾರ್ವಜನಿಕ ಸುರಕ್ಷತೆ ಕಾರಣ- ದೆಹಲಿಯ ಗಡಿಗಳಲ್ಲಿ ಇಂಟರ್ನೆಟ್ ಬಂದ್ ಮುಂದುವರಿಕೆ