Homeಮುಖಪುಟರೈತರ ಹೋರಾಟ ಮತ್ತು ಗಾಂಧೀಜಿ ಅಭಿವೃದ್ಧಿ ಮೀಮಾಂಸೆ: ಡಾ. ಟಿ ಆರ್ ಸಿ

ರೈತರ ಹೋರಾಟ ಮತ್ತು ಗಾಂಧೀಜಿ ಅಭಿವೃದ್ಧಿ ಮೀಮಾಂಸೆ: ಡಾ. ಟಿ ಆರ್ ಸಿ

- Advertisement -
- Advertisement -

ಕಳೆದ ಒಂದು ವರ್ಷಕ್ಕೂ ಮೀರಿ ದೇಶದಾದ್ಯಂತ ನಡೆಯುತ್ತಿರುವ ಭಾರತೀಯ ರೈತರ ಹೋರಾಟವು ಚಾರಿತ್ರಿಕವಾದುದು ಮತ್ತು ಜಾಗತಿಕ ಆಯಾಮವುಳ್ಳದ್ದಾಗಿದೆ (ರಿಹಾನ, ಗ್ರೇಟ ಥನ್‌ಬರ್ಗ್, ಅಂತಾರಾಷ್ಟ್ರೀಯ ಖ್ಯಾತಿಯ ಹೋರಾಟಗಾರರು, ಇಂಗ್ಲೆಂಡ್, ಅಮೆರಿಕ ಮುಂತಾದ ದೇಶಗಳ ಸಂಸತ್ ಸದಸ್ಯರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ). ಸ್ವಾತಂತ್ರೋತ್ತರ ಭಾರತವು ಕಂಡ ಅಭೂತಪೂರ್ವ ಚಳುವಳಿ ಇದಾಗಿದೆ. ಈ ಹೋರಾಟದಲ್ಲಿ ಗಾಂಧೀಜಿಯವರ ಹೆಸರು ಕೇಳಿಬರದಿದ್ದರೂ, ಸರ್ಕಾರ ರಚಿಸಿರುವ ಮೂರು ಕೃಷಿ ಕಾಯಿದೆಗಳ ಆಶಯಗಳು ಗಾಂಧೀಜಿ ಅಭಿವೃದ್ಧಿ ಸಿದ್ಧಾಂತವು ಪ್ರತಿನಿಧಿಸುವ ಪರಿಸರ ಸ್ನೇಹಿ ಮತ್ತು ಜನಮೂಲ-ನೆಲಮೂಲ ಅಭಿವೃದ್ಧಿ ಮೀಮಾಂಸೆಗೆ ವಿರುದ್ಧವಾಗಿದೆ. ಈ ಮೂರು ಕರಾಳ ಕಾಯಿದೆಗಳ ಮೂಲದಲ್ಲಿ ಪಾಶ್ಚಿಮಾತ್ಯ ಬೃಹತ್ ಪ್ರಮಾಣದ ಕೃಷಿ ವ್ಯವಸ್ಥೆಯ ಮಾದರಿಯಿದೆಯೇ ವಿನಾ ಭಾರತೀಯ ಪಾರಂಪರಿಕ ಜನ ಮೂಲ-ನೆಲಮೂಲದ ಕೃಷಿಯಿಲ್ಲ.

ಭಾರತೀಯ ಸಂಸ್ಕೃತಿಯ ಅಂತರ್ಗತ ಭಾಗವಾಗಿರುವ ಕೃಷಿಯನ್ನು ಅದರಿಂದ ಉಚ್ಚಾಟಿಸುವ ಒಂದು ಹುನ್ನಾರವನ್ನು ಸರ್ಕಾರ ರೂಪಿಸಿರುವ ಮೂರು ಕರಾಳ ಕೃಷಿ ಕಾಯಿದೆಗಳಲ್ಲಿ ಕಾಣಬಹುದು (ದಿ ಫಾರ್ಮಸಸ್ ಪ್ರೊಡ್ಯೂಸ್ ಟ್ರೇಡ್ ಆಂಡ್ ಕಾಮರ್ಸ್ (ಪ್ರೊಮೋಷನ್ ಆಂಡ್ ಫೆಸಿಲಿಟೇಶನ್) ಆಕ್ಟ್ 2020, ದಿ ಫಾರ್ಮಸ್ (ಎಂಪವರ್‌ಮೆಂಟ್ ಆಂಡ್ ಪ್ರೊಟೆಕ್ಷನ್) ಅಗ್ರಿಮೆಂಟ್ ಆಫ್ ಪ್ರೈಸ್ ಆಶುರೆನ್ಸ್ ಆಂಡ್ ಫಾರ್‍ಮ್ ಸರ್ವೀಸಸ್ ಆಕ್ಟ್ 2020 ಮತ್ತು ದಿ ಎಸ್ಸೆನ್ಸಿಯಲ್ ಕಮಾಡಿಟೀಸ್ (ಅಮೆಂಡ್‌ಮೆಂಟ್) ಆಕ್ಟ್ 2020). ಈ ಕಾಯಿದೆಗಳು ಹೇಗೆ ನಮ್ಮ ಪಾರಂಪರಿಕ ಕೃಷಿಯನ್ನು, ಕೃಷಿಕರ ಬದುಕನ್ನು, ಗಾಂಧೀಜಿ ಸ್ವರಾಜ್ ಕನಸನ್ನು ಹಾಗೂ ಪರಿಸರ-ಸ್ನೇಹಿ ಜನಮೂಲ ಸಾವಯವ ಸಂಸ್ಕೃತಿಯನ್ನು ನಾಶ ಮಾಡುತ್ತವೆ ಎಂಬುದನ್ನು ಕುರಿತಂತೆ ಕೆಲವು ಸಂಗತಿಗಳನ್ನು ಸ್ಥೂಲವಾಗಿ ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

1. ಈ ಮೂರು ಕರಾಳ ಕಾಯಿದೆಗಳು ಭಾರತೀಯ ಕೃಷಿಯನ್ನು ಉದ್ಯಮಪತಿಗಳ ವಶಕ್ಕೆ ನೀಡುವ ಪ್ರಚ್ಛನ್ನ ಗುರಿಯನ್ನು ಒಳಗೊಂಡಿವೆ. ಇದರ ಒಳಾರ್ಥವೇನೆಂದರೆ ಕೃಷಿಯನ್ನು ಸಂಪೂರ್ಣವಾಗಿ ಜನರಿಂದ ಬೇರ್ಪಡಿಸಿ ಅದನ್ನು ವ್ಯಾಪಾರಿ-ವಾಣಿಜ್ಯಮಯವನ್ನಾಗಿಸುವ ಉದ್ದೇಶ ಕಾಯಿದೆಗಳಿಗಿದೆ. ಉದಾ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪೋಷಿಸುವ ಮತ್ತು ಸುಗಮಗೊಳಿಸುವ) ಎನ್ನುವ ಕಾಯಿದೆಯ ಪರಿಭಾಷೆಯನ್ನು ನೋಡಬಹುದು. ರೈತರ ಬೆಳೆ ಬೆಳೆಯುವ ಸಾಮರ್ಥ್ಯವನ್ನು ಪೋಷಿಸಿ, ಅದನ್ನು ಸುಗಮಗೊಳಿಸಲಾಗುತ್ತದೋ ಅಥವಾ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಪೋಷಿಸಿ ಅದರ ಪ್ರಕ್ರಿಯೆಯನ್ನು ಸುಗಮಗೊಳಿಸಲಾತ್ತದೊ? ಈ ಕಾಯಿದೆಗಳು ಅತಿಸಣ್ಣ ಮತ್ತು ಸಣ್ಣ ಕೃಷಿಕರನ್ನು ಬೀದಿಪಾಲು ಮಾಡುತ್ತವೆ.

ಏಕೆಂದರೆ ಈ ರೈತಾಪಿಗಳಲ್ಲಿ ವ್ಯಾಪಾರ-ವಾಣಿಜ್ಯ ಸಾಮರ್ಥ್ಯ ಕಡಿಮೆ. ಅವರಿಗೆ ಬೇಕಾಗಿರುವುದು ಬೆಳೆ ಬೆಳೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಮತ್ತು ಅವರ ಪ್ರಯತ್ನವನ್ನು ಬೆಂಬಲಿಸುವುದು. ಈ ಕಾಯಿದೆಗಳು ’ಜಾನುವಾರು-ಮಹಿಳಾ-ಪರಿಸರ ಮೂಲ ಕೃಷಿ’ಯನ್ನು ’ಯಂತ್ರ ಮೂಲ-ರಾಸಾಯನಿಕ ಮೂಲ-ಮಾರುಕಟ್ಟೆ ಮೂಲ ಕೃಷಿ’ಯನ್ನಾಗಿಸುತ್ತವೆ. ಹಾಗಾದರೆ ಈಗ ರೈತರು ಯಂತ್ರಗಳನ್ನು, ರಾಸಾಯನಿಕಗಳನ್ನು ಬಳಸುತ್ತಿಲ್ಲವೇ, ಮಾರುಕಟ್ಟೆಯನ್ನು ಅವರು ಅವಲಂಬಿಸಿಲ್ಲವೇ ಎಂದು ಯಾರೂ ಕೇಳಬಹುದು. ರೈತಾಪಿ ವರ್ಗ ಕೃಷಿಯಲ್ಲಿ ಬಳಸುವ ಯಂತ್ರಗಳಿಗೂ, ರಾಸಾಯನಿಕಗಳಿಗೂ ಮತ್ತು ಮಾರುಕಟ್ಟೆಯ ಅವಲಂಬನೆಗೂ ಹಾಗೂ ಉದ್ಯಮಪತಿಗಳು-ಕಾರ್ಪೋರೇಟುಗಳು ಕೃಷಿ ಪ್ರವೇಶಿಸಿದ ಮೇಲೆ ಅವು ಬಳಸುವ ಯಂತ್ರಗಳಿಗೂ, ರಾಸಾಯನಿಕಗಳಿಗೂ ಮತ್ತು ಮಾರುಕಟ್ಟೆ ಅವಲಂಬನೆಗೂ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕಾರ್ಪೋರೆಟ್ ಪದ್ಧತಿಯದ್ದು ಬೃಹತ್ ಕೃಷಿ ವ್ಯವಸ್ಥೆಯಾಗಿದ್ದರೆ ರೈತಾಪಿಯದ್ದು ಸಣ್ಣ, ರೈತ ಕೇಂದ್ರಿತ ಮತ್ತು ಜಾನುವಾರು ಕೇಂದ್ರಿತ ಕೃಷಿಯಾಗಿದೆ. ಒಟ್ಟಾರೆ ಸದರಿ ಕಾಯಿದೆಗಳು ನಮ್ಮ ಕೃಷಿಯನ್ನು ಕಾರ್ಪೋರೆಟೀಕರಣಕ್ಕೆ ಒಳಪಡಿಸಿಬಿಡುತ್ತದೆ. ಇದು ನಮ್ಮ ಪಾರಂಪರಿಕ ಜನ-ನೆಲ ಮೂಲ ಗಾಂಧೀಜಿ ವ್ಯವಸ್ಥೆಗೆ ವಿರುದ್ಧವಾದುದಾಗಿದೆ.

2. ಕೃಷಿಯು ನಮ್ಮ ಭಾರತೀಯ ಸಂದರ್ಭದಲ್ಲಿ ಕೇವಲ ಉಳುಮೆ ಮಾಡುವ, ಬೀಜ ಬಿತ್ತಿ ಬೆಳೆ ಬೆಳೆಯುವ, ಉತ್ಪನ್ನವನ್ನು ಮಾರಾಟ ಮಾಡುವ ಚಟುವಟಿಕೆಗಳಿಗೆ ಸೀಮಿತವಾದುದಲ್ಲ. ಕೃಷಿಯು ನಮ್ಮ ಜನರ ಜೀವನ ಪದ್ಧತಿಯಾಗಿದೆ. ಇದರಲ್ಲಿ ಜಾನುವಾರು ಆರ್ಥಿಕತೆಯಿದೆ, ಕೃಷಿ ಅರಣ್ಯಗಾರಿಕೆಯಿದೆ, ಹೈನುಗಾರಿಕೆಯಿದೆ,
ಕುರಿ-ಕೋಳಿ ಸಾಕಣಿಕೆಯಿದೆ ಮತ್ತು ಇದು ಹತ್ತಾರು ಕಸಬುದಾರರನ್ನು (ಕುಂಬಾರಿಕೆ, ಮೇದಾರಿಕೆ, ಕಮ್ಮಾರಿಕೆ, ಬಡಗಿತನ, ಮಡಿವಾಳತನ, ಅಂಬಿಗತನ ಮುಂತಾದ ಕಸುಬುದಾರರು) ಒಳಗೊಂಡಿದೆ. ಇವೆಲ್ಲವುಗಳ ನಡುವೆ ಪರಸ್ಪರಾವಲಂಬನೆ ಕೊಡು-ಕೊಳೆ ಸಂಬಂಧವಿದೆ. ಈಗ ಒಕ್ಕೂಟ ಸರ್ಕಾರವು ತಂದಿರುವ ಮೂರು ಕರಾಳ ಕೃಷಿ ಶಾಸನಗಳು ಈ ಎಲ್ಲ ವೈವಿಧ್ಯಮಯ ಬಹುವಚನ ಜನ-ನೆಲ-ಜಾನುವಾರು ಮೂಲ ಕೃಷಿಗೆ ಕೊಡಲಿ ಪೆಟ್ಟು ನೀಡುತ್ತದೆ.

ಯಾವುದನ್ನು ನಾವು ’ಗಾಂಧಿ ಕೃಷಿ’ ಎಂದು ಬಗೆದಿದ್ದೇವೆಯೋ ಅದಕ್ಕೆ ಈ ಶಾಸನಗಳು ಮಾರಕವಾಗಿವೆ. ಸಾಂಪ್ರದಾಯಿಕವಾಗಿ ನಮ್ಮಲ್ಲಿ ಕೃಷಿಯು ಯಾವತ್ತೂ ಉಳುಮೆ-ಬೀಜ ಬಿತ್ತನೆ, ಉತ್ಪನ್ನಗಳನ್ನು ಮಾರಾಟ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಕುರಿ, ಕೋಳಿ, ಹಸು, ಎಮ್ಮೆ, ಆಡು ಮುಂತಾದವುಗಳನ್ನು ಒಳಗೊಂಡಂತೆ ಕೃಷಿ ಮಾಡುತ್ತಿದ್ದರು. ಕೃಷಿಕರು ತಮ್ಮ ಒಕ್ಕಲುತನಕ್ಕೆ ವಿವಿಧ ಬಗೆಯ ಕರಕುಶಲ ಕಸುಬುದಾರರನ್ನು ಮತ್ತು ಕರಕುಶಲ ಕಸುಬುದಾರರು ರೈತಾಪಿಗಳನ್ನು ಪರಸ್ಪರ ಅವಲಂಬಿಸಿಕೊಂಡಿದ್ದರು. ಕೃಷಿಯು ಸಾಮುದಾಯಿಕ ಬದುಕಾಗಿತ್ತು. ಬದುಕು-ಕೃಷಿ ಅಭಿನ್ನವಾಗಿದ್ದವು. ಮೂರು ಕರಾಳ ಕೃಷಿ ಕಾನೂನುಗಳು ಇಂತಹ ಸಾವಯವ ಸಾಮುದಾಯಿಕ ಬದುಕಿಗೆ ಬರೆಯೆಳೆಯುತ್ತದೆ. ಜಾನುವಾರು ಸಂಬಂಧಿ ಸಾವಯವ ಗೊಬ್ಬರ ವ್ಯವಸ್ಥೆಯನ್ನು ಇವು ಕೊನೆಗೊಳಿಸುತ್ತವೆ.

3. ಕೃಷಿಯು ಏಕಬೆಳೆ ಬೆಳೆಯುವ ಯಾಂತ್ರೀಕೃತ ಉದ್ಯಮವಾಗಿರಲಿಲ್ಲ. ರೋಣ ತಾಲ್ಲೂಕಿನಲ್ಲಿ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ನಾನೇ ಸ್ವತಃ ನೋಡಿದಂತೆ ಹೊಲದಲ್ಲಿ ಜೋಳ, ಗುರೆಳ್ಳು (ಹುಚ್ಚೆಳ್ಳು), ತೊಗರಿ, ಹರಳು, ಸಾಸಿವೆ, ಉಳ್ಳ್ಳಾಗಡ್ಡಿ, ಹಲಸಂದೆ, ಹುರುಳಿ, ಅವರೆ ಮುಂತಾದ ಹತ್ತಾರು ಬೆಳೆಗಳು ಏಕಕಾಲದಲ್ಲಿರುವ ಹೊಲದಲ್ಲಿನ ಬಹುಬೆಳೆ ಪದ್ಧತಿಯನ್ನು ನೋಡಿದ್ದೇನೆ. ಅಕ್ಕಡಿ ಸಾಲು ಎಂಬುದು ನಮ್ಮ ಖುಷ್ಕಿ ಕೃಷಿಯ ವಿಶಿಷ್ಟ ಆಯಾಮವಾಗಿದೆ. ಪ್ರಧಾನ ಬೆಳೆಯ ಜೊತೆಗೆ ಅಕ್ಕಡಿ ಸಾಲುಗಳಲ್ಲಿ ಅನೇಕ ಬಗೆಯ ಕಾಳು-ಧಾನ್ಯಗಳನ್ನು ಬೆಳೆಯಲಾಗುತ್ತದೆ. ಇಂತಹ ವಿಶಿಷ್ಟ-ವೈವಿಧ್ಯಮಯ-ಸಾವಯವ ಕೃಷಿಯನ್ನು ಈ ಕರಾಳ ಮೂರು ಕಾಯಿದೆಗಳು ಕೊನೆಗೊಳಿಸುತ್ತವೆ. ಕಾರ್ಪೋರೆಟ್ ಕೃಷಿಯು ಯಾಂತ್ರಿಕ ಕೃಷಿಯಾಗಿರುವುದರಿಂದ ಅಲ್ಲಿ, ರೋಣ ಪ್ರದೇಶದಲ್ಲಿ ಕಂಡುಬರುವ ವೈವಿಧ್ಯಮಯ ಕೃಷಿ ಸಾಧ್ಯವಿಲ್ಲ.

 

4. ಕೃಷಿಯಲ್ಲಿ ಮಹಿಳೆಯರ ತೊಡಗುವಿಕೆಯು ವಿಶಿಷ್ಟವಾದುದಾಗಿದೆ. ಮಹಿಳೆಯರ ತೊಡಗುವಿಕೆಯಿಲ್ಲದೆ ಕೃಷಿ ನಡೆಯುವುದಿಲ್ಲ. ರೈತರಿಗೆ ಬುತ್ತಿ ಒಯ್ಯುವುದು, ದನಕರುಗಳಿಗೆ ಮೇವು-ನೀರುಣಿಸುವುದು, ಕಾಳುಕಡ್ಡಿ, ಧಾನ್ಯ ಶೇಖರಣೆ ಮಾಡುವುದು, ಮನೆವಾರ್ತೆ ನಿರ್ವಹಿಸುವುದು, ಹೊಲದಲ್ಲಿ ಕಾಯಿಪಲ್ಯ ಬೆಳೆಸುವುದು, ಗೆಡ್ಡೆ-ಗೆಣಸು, ಸೊಪ್ಪು ಸೆದೆ ಸಂಗ್ರಹಿಸುವುದು, ಹೈನು ನಿರ್ವಹಣೆ, ಬೆಣ್ಣೆ – ತುಪ್ಪ ಉತ್ಪಾದಿಸುವುದು, ಕೋಳಿ ಸಾಕುವುದು, ಮೊಟ್ಟೆ, ಬೆಣ್ಣೆ, ಕಾಳು ಸಂತೆಗಳಲ್ಲಿ ಮಾರಾಟ ಮಾಡುವುದು ಮುಂತಾದ ಹತ್ತಾರು ಬಗೆಯಲ್ಲಿ ಅವರು ಕೃಷಿಯಲ್ಲಿ ಭಾಗವಹಿಸುತ್ತಾರೆ. ಸರ್ಕಾರವು ತಂದಿರುವ ಮೂರು ಕರಾಳ ಶಾಸನಗಳು ಹೀಗೆ ಮಹಿಳೆಯರನ್ನು ಒಳಗೊಂಡ ಕೃಷಿಯನ್ನು ಕಾರ್ಪೋರೆಟೀಕರಣಗೊಳಿಸುವುದರೊಂದಿಗೆ ಸಂಪೂರ್ಣವಾಗಿ ಉಚ್ಚಾಟಿಸಿಬಿಡುತ್ತವೆ. ಗ್ರಾಮೀಣ ಕೃಷಿ ಬದುಕಿನಲ್ಲಿ ಮಹಿಳೆಯರ ಪಾತ್ರವನ್ನು ಅಮರ್ತ್ಯ ಸೇನ್ ’ಸಾಮಾಜಿಕ ತಂತ್ರಜ್ಞಾನ’ ಎಂದು ಕರೆಯುತ್ತಾನೆ. ಅವರ ಚಟುವಟಿಕೆಗಳು ನೂರಕ್ಕೆ ನೂರು ಪಾಲು ಉತ್ಪಾದನಾ ಸ್ವರೂಪದವು ಎನ್ನುತ್ತಾರೆ.

5. ಜಾನುವಾರು ಮತ್ತು ಕೃಷಿ ನಡುವೆ ಅವಿನಾಭಾವ ಸಂಬಂಧವಿದೆ. ಯಾವುದನ್ನು ಸಾವಯವ ಕೃಷಿ ಎನ್ನುತ್ತೇವೆಯೋ ಅದರ ಮೂಲ ಜಾನುವಾರು ಪ್ರಣೀತ ಕೃಷಿಯಲ್ಲಿದೆ. ಜಾನುವಾರುಗಳು ನೀಡುವ ಸಗಣಿಯು ಸಾವಯವ ಗೊಬ್ಬರ ಅದಕ್ಕೆ ಮೂಲವಾಗಿದೆ. ಕಾರ್ಪೋರೆಟ್ ಕೃಷಿಯು ಜಾನುವಾರು ಮತ್ತು ಕೃಷಿಗಳ ನಡುವಿನ ಸಂಬಂಧವನ್ನು ಕಡಿದುಹಾಕಿಬಿಡುತ್ತದೆ. ಒಂದು ಕಡೆ ಇಂದು ಆಳುವ ಪಕ್ಷವು ಗೋಮಾತೆ ರಕ್ಷಣೆಗೆ ಆಕ್ರಮಣಕಾರಿ ನಿಲುವು ತಳೆದಿದೆ. ಅದಕ್ಕೆ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಆದರೆ ಅಂತಹ ಗೋಮಾತೆ-ಪ್ರಣೀತ ಕೃಷಿಯನ್ನು ಬುಡಮೇಲು ಮಾಡುವ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ವೈರುಧ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಕಾನೂನುಗಳಡಿಯಲ್ಲಿ ಕಾರ್ಪೋರೆಟ್ ಕೃಷಿಯಲ್ಲಿ ಸಣ್ಣ ಪ್ರಮಾಣದ ಜಾನುವಾರು ಆರ್ಥಿಕತೆಯು ನಾಶವಾಗಿ ಬಿಡುತ್ತದೆ. ದೊಡ್ಡ ಪ್ರಮಾಣದಲ್ಲಿ ಉದ್ದಿಮೆ ರೀತಿಯಲ್ಲಿ ಹೈನು ಉತ್ಪಾದನಾ ಹಸು ಸಾಕಣಿಕಾ ಚಟುವಟಿಕೆಯು ಅಸ್ತಿತ್ವಕ್ಕೆ ಬರಬಹುದು. ಆದರೆ ಇದು ಕೃಷಿ ಪ್ರಣೀತ ಜಾನುವಾರು ಆರ್ಥಿಕತೆಯಾಗುವುದಿಲ್ಲ.

6. ನಮ್ಮ ಆರ್ಥಿಕತೆಯಲ್ಲಿ ಕೃಷಿಯು ಬಂಡವಾಳಶಾಹಿ ಸ್ವರೂಪವನ್ನು ಪೂರ್ಣ ರೂಪದಲ್ಲಿ ಪಡೆದಿಲ್ಲ. ನಮ್ಮಲ್ಲಿ ಶೇ.85ಕ್ಕಿಂತ ಅಧಿಕ ರೈತರು ಅತಿಸಣ್ಣ (1 ಹೆಕ್ಟೇರು)-ಸಣ್ಣ (2 ಹೆಕ್ಟೇರು) ರೈತರಾಗಿದ್ದಾರೆ. ವಾಸ್ತವವಾಗಿ ಅತಿ ಸಣ್ಣ ಮತ್ತು ಸಣ್ಣ ರೈತರ ಸರಾಸರಿ ಭೂಮಿಯ ವಿಸ್ತೀರ್ಣ ಅನುಕ್ರಮವಾಗಿ 0.4 ಮತ್ತು 1.21 ಹೆಕ್ಟೇರುಗಳು. ಈಗ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕಾನೂನುಗಳು ಇಂತಹ ಅತಿಸಣ್ಣ-ಸಣ್ಣ ರೈತಾಪಿ ವರ್ಗವನ್ನು ನಾಶಮಾಡಿಬಿಡುತ್ತವೆ. ಹಣದ ಆಮಿಷಕ್ಕೆ ಒಳಗಾಗಿ ಇವರೆಲ್ಲರೂ ತಮ್ಮ ಭೂಮಿಯನ್ನು ಒಂದೋ ಮಾರಾಟ ಮಾಡುತ್ತಾರೆ ಇಲ್ಲವೇ ಗುತ್ತಿಗೆಗೆ ನೀಡಿಬಿಡುತ್ತಾರೆ. ಈ ಹೊಸ ಕಾನೂನುಗಳು ನಿಜ ಬಂಡವಾಳಶಾಹಿ ಕೃಷಿಗೆ ಅವಕಾಶ ಮಾಡಿಕೊಡುತ್ತದೆ.

7. ಪ್ರಧಾನಮಂತ್ರಿ, ಕೃಷಿ ಸಚಿವರು, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಮತ್ತು ಅನೇಕ ಸರ್ಕಾರ ಪೋಷಿತ ಅರ್ಥಶಾಸ್ತ್ರಜ್ಞರು ಈ ಕೃಷಿ ಸುಧಾರಣಾ ಕಾನೂನುಗಳು ರೈತರ ಪರವಾಗಿವೆ, ಅತಿಸಣ್ಣ-ಸಣ್ಣ ರೈತರ ಹಿತ ಕಾಯುತ್ತವೆ, ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಕೃಷಿ ಸುಧಾರಣೆ ಸಾಧ್ಯವಾಗುತ್ತದೆ ಮುಂತಾದ ರೀತಿಯಲ್ಲಿ ಸಮರ್ಥನೆ ಮಾಡುತ್ತಿದ್ದಾರೆ. ಕೃಷಿಗೆ ಬಂಡವಾಳ ಸಮೃದ್ಧವಾಗಿ ಹರಿದುಬರುತ್ತದೆ. ಆದರೆ ಇವರ್‍ಯಾರೂ ಯಾವ ರೀತಿಯಲ್ಲಿ ಇವು ರೈತರ ಪರವಾಗಿವೆ ಮತ್ತು ಹೇಗೆ ರೈತರಿಗೆ ಲಾಭದಾಯಕ ಎಂಬುದನ್ನು ಹೇಳುವುದಿಲ್ಲ. ಏಕೆಂದರೆ ಅವುಗಳ ಮೂಲಕ್ಕೆ ಹೋದರೆ ಅವು ಯಾರಿಗೆ ಲಾಭದಾಯಕ ಎಂಬುದು ಬಹಿರಂಗವಾಗಿಬಿಡುತ್ತದೆ. ಈ ಆಶ್ವಾಸನೆಗಳು 2013-14ರಲ್ಲಿ ಆಳುವ ಪಕ್ಷವು ತಾನು ಸರ್ಕಾರ ರಚಿಸಿದರೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕು ಖಾತೆಗೆ ರೂ. 15 ಲಕ್ಷ ಜಮೆ ಮಾಡಲಾಗುತ್ತದೆ ಎಂಬ ಹುಸಿ ಒಣ ಭರವಸೆಗೆ ಸಮನಾಗಿದೆ.

8. ಸರ್ಕಾರವು ಮತ್ತೆ ಮತ್ತೆ ಸದರಿ ಕಾಯಿದೆಗಳಿಂದ ಎಪಿಎಂಸಿ ನಾಶವಾಗುವುದಿಲ್ಲ ಮತ್ತು ಎಂಎಸ್‌ಪಿ ನಿಲ್ಲುವುದಿಲ್ಲ ಎಂದು ಹೇಳುತ್ತಿದೆ. ಇಲ್ಲಿಯೂ ಹೇಗೆ ಎಂಬುದನ್ನು ಹೇಳುವುದಿಲ್ಲ. ತಲೆಚಿಟ್ಟು ಹಿಡಿಯುವಷ್ಟು ಸಲ ಸರ್ಕಾರವು ಸದರಿ ಕಾಯಿದೆಗಳು ರೈತರಿಗೆ ಮಾರಾಟ ಮಾಡುವ ’ಸ್ವಾತಂತ್ರ್ಯ’ವನ್ನು ನೀಡುತ್ತವೆ ಎಂದು ಹೇಳುತ್ತಿದೆ. ವ್ಯಾಪಾರ-ವಾಣಿಜ್ಯ ವಹಿವಾಟಿನಲ್ಲಿ ಯಾರಿಗೆ ಬಾರ್‌ಗೈನಿಂಗ್ ಪವರ್ ಬಲಯುತವಾಗಿರುತ್ತದೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ಈ ರೀತಿಯಲ್ಲಿ ರೈತರಿಗೆ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಉತ್ಪನ್ನಗಳನ್ನು ಮಾರಾಟ ಮಾಡುವ ’ಸ್ವಾತಂತ್ರ್ಯ’ವನ್ನು ನೀಡುತ್ತವೆ ಎಂದು ಹೇಳುತ್ತಾ ವ್ಯಾಪಾರಗಾರರಿಗೆ-ವಾಣಿಜ್ಯೋದ್ಯಮಿಗಳಿಗೆ ರೈತರನ್ನು ಶೋಷಿಸುವ ಸ್ವಾತಂತ್ರ್ಯವನ್ನು ಈ ಮೂರು ಕರಾಳ ಕಾಯಿದೆಗಳ ಮೂಲಕ ನೀಡಲಾಗುತ್ತಿದೆ. ರೈತರು ಮತ್ತು ಬಲಶಾಲಿ ಕಾರ್ಪೋರೆಟ್‌ಗಳ ನಡುವೆ ಪೈಪೋಟಿ ನಡೆದರೆ ಯಾರು ಉಳಿಯುತ್ತಾರೆ, ಯಾರು ಬಲಿಯಾಗುತ್ತಾರೆ ಎಂಬುದನ್ನು ಹೇಳುವುದಕ್ಕೆ ದೊಡ್ಡ ಆರ್ಥಿಕ ಚಿಂತಕರೇನು ಬೇಡ.

ಈ ಕಾಯಿದೆಗಳಲ್ಲಿ ಎಪಿಎಂಸಿಗಳನ್ನು ಮುಚ್ಚುವ ಅಂಶಗಳೇನಿಲ್ಲ. ಆದರೆ ಅವುಗಳನ್ನು ಅಪೌಷ್ಟಿಕತೆಯಿಂದ ಸಾಯುವಂತೆ ಮಾಡಲಾಗುತ್ತದೆ. ಅವು ಸತ್ತಮೇಲೆ ಕೃಷಿ ಮಾರುಕಟ್ಟೆಯ ಮೇಲೆ ಖಾಸಗಿ ವ್ಯಾಪಾರಿ-ವಾಣಿಜ್ಯೋದ್ಯಮಿಗಳ ಏಕಸ್ವಾಮ್ಯ ಉಂಟಾಗಿಬಿಡುತ್ತದೆ. ಅಂದಮೇಲೆ ಯಾರಿಗೆ ಈ ಕಾಯಿದೆಗಳು ಸ್ವಾತಂತ್ರ್ಯ ನೀಡುತ್ತವೆ? ದೊಡ್ಡ ಬಂಡವಾಳಿಗರ ಜೊತೆಗಿನ ಪೈಪೋಟಿಯಲ್ಲಿ-ವ್ಯವಹಾರದಲ್ಲಿ ಸೋಲುವವರು (ಸಾಯುವವರು) ಸಣ್ಣ ರೈತರಾಗಿದ್ದಾರೆ. ಇನ್ನು ಎಂಎಸ್‌ಪಿ ಬಗ್ಗೆ ನಾಣ್ಣುಡಿಯಾಗಿ ಬಿಟ್ಟಿರುವ ಜನಪ್ರಿಯ ಘೋಷಣೆಯನ್ನೇ ನೀಡಲಾಗಿದೆ. ’ಎಂಎಸ್‌ಪಿ ಇತ್ತು, ಎಂಎಸ್‌ಪಿ ಇದೆ, ಎಂಎಸ್‌ಪಿ ಇರುತ್ತದೆ’ ಎಂಬುದೇ ಅಂತಹ ಘೋಷಣೆ. ಆದರೆ ಯಾವ ರೀತಿಯ ಎಂಎಸ್‌ಪಿ ಇರುತ್ತದೆ? ಇದು ಎ2+ಎಫ್‌ಎಲ್ ರೂಪದ್ದೋ ಅಥವಾ ಸಿ2+ಶೇ.50 ರೂಪದ್ದೋ ಎಂಬುದು ಮುಖ್ಯ. ಆದರೆ ಸರ್ಕಾರವು 2018ರಲ್ಲಿ ಎಂಎಸ್‌ಪಿ ಎನ್ನುವುದು ಎ2+ಎಫ್‌ಎಲ್ ಎಂದು ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ಸೆಪ್ಟೆಂಬರ್ 18, 2017ರಲ್ಲಿ ಎಮ್. ಎಸ್. ಸ್ವಾಮಿನಾಥನ್ ಹೇಳಿದ ಮಾತುಗಳಿವು:

‘MSP should be C2+50% with procurement, storage and distribution. Agricultural policies must base on conservation, cultivation, consumption, commerce’(ಸೆಪ್ಟೆಂಬರ್ 18, 2017).

ಸರ್ಕಾರವು ಜಾರಿಗೊಳಿಸಿರುವ ಮೂರು ಕರಾಳ ಶಾಸನಗಳು ಎಮ್.ಎಸ್.ಸ್ವಾಮಿನಾಥನ್ ಹೇಳುವ ಮೂರು ಸೂತ್ರಗಳಿಗೆ ವಿರುದ್ಧವಾಗಿವೆ. ಮೊದಲನೆಯದಾಗಿ ಅವರು ಹೇಳುವ ಸಿ2+50% ಆಧಾರ ಮಾಡಿಕೊಂಡ ಎಂಎಸ್‌ಪಿ ಸರ್ಕಾರ ನೀಡುತ್ತಿಲ್ಲ. ಎರಡನೆಯದಾಗಿ ಸರ್ಕಾರ ಜಾರಿಗೊಳಿಸಿರುವ ಮೂರು ಕಾಯಿದೆಗಳಲ್ಲಿ ಆಹಾರ ಸಂಗ್ರಹಣೆ, ದಾಸ್ತಾನು ಮತ್ತು ವಿತರಣೆ ಆಯಾಮಗಳಿಲ್ಲ. ಮೂರನೆಯದಾಗಿ ಈ ಕಾಯಿದೆಗಳಲ್ಲಿ ಪರಿಸರ ಸಂರಕ್ಷಣೆ, ಕೃಷಿ ಉಳುಮೆ, ರೈತರ ಅನುಭೋಗ ಮತ್ತು ವಾಣಿಜ್ಯ ಅಂಶಗಳನ್ನು ಸಂಯೋಜಿಸಿಲ್ಲ. ಇಂದು ರೈತ ಹೋರಾಟಗಳು ಎಂಎಸ್‌ಪಿ ಬಗ್ಗೆ ಹೆಚ್ಚು ಮಾತನಾಡುತ್ತಿವೆ. ಇದರ ಜೊತೆಯಲ್ಲಿ ಪಿಡಿಎಸ್(ಸಾರ್ವಜನಿಕ ವಿತರಣಾ ವ್ಯವಸ್ಥೆ) ಬಗ್ಗೆಯೂ ಮಾತನಾಡಬೇಕು. ಈ ಕರಾಳ ಮೂರು ಕೃಷಿ ಕಾನೂನುಗಳು ಪಡಿತರ ವ್ಯವಸ್ಥೆಯನ್ನು ರದ್ದು ಮಾಡುವ ಪ್ರಚ್ಛನ್ನ ಉದ್ದೇಶವನ್ನು ಒಳಗೊಂಡಿವೆ. ’ದಿ ಎಸ್ಸೆನ್ಸಿಯಲ್ ಕಮಾಡಿಟಿಸ್ ಅಮೆಂಡ್‌ಮೆಂಟ್ ಕಾಯಿದೆ 2020’ರಲ್ಲಿ ಪಡಿತರ ವ್ಯವಸ್ಥೆಯನ್ನು ಮುಚ್ಚುವ ಪ್ರಚ್ಛನ್ನ ಉದ್ದೇಶವನ್ನು ಗುರುತಿಸುವುದು ನಮಗೆ ಕಷ್ಟವಾಗಬಾರದು. ಈ ಕಾಯಿದೆಯಿಂದಾಗಿ ಹೋರ್ಡಿಂಗ್-ಕಳ್ಳ ದಾಸ್ತಾನು ಇಂದು ಅಪರಾಧವಾಗಿ ಉಳಿದಿಲ್ಲ. ಇವೆಲ್ಲವೂ ವ್ಯಾಪಾರಗಾರರಿಗೆ-ವಾಣಿಜ್ಯೋದ್ಯಮಿಗಳಿಗೆ ಅನುಕೂಲ ಒದಗಿಸುವ ಕಾಯಿದೆಗಳಾಗಿವೆ.

9. ರೈತ ಹೋರಾಟಗಳಲ್ಲಿನ ಮುಖಂಡರು ಮತ್ತೆ ಮತ್ತೆ ಹೇಳುತ್ತಿರುವಂತೆ ಮೂರು ಕರಾಳ ಕೃಷಿ ಕಾಯಿದೆಗಳು ರೈತರಿಗೆ-ಕೃಷಿಗೆ ಮಾತ್ರ ಮೃತ್ಯುಪ್ರಾಯವಾಗಿಲ್ಲ, ಇಡೀ ಸಮಾಜಕ್ಕೆ, ಎಲ್ಲ ಜನವರ್ಗಗಳಿಗೆ, ಮುಖ್ಯವಾಗಿ ದುಡಿಯುವ ವರ್ಗಕ್ಕೆ, ಮಹಿಳೆಯರಿಗೆ, ಪರಿಸರಕ್ಕೆ ಮಾರಕವಾಗಿವೆ. ಕೃಷಿಯ ಕಾರ್ಪೋರೆಟೀಕರಣದಿಂದ ಅತಿಸಣ್ಣ-ಸಣ್ಣರೈತರ, ಭೂರಹಿತ ಕೃಷಿ ಕೂಲಿಕಾರರ ಬದುಕು ಮೂರಾಬಟ್ಟೆಯಾಗುತ್ತದೆ. ಒಟ್ಟಾರೆ ಈ ಮೂರು ಕರಾಳ ಕೃಷಿ ಕಾಯಿದೆಗಳು ನಾಗರಿಕತೆ ಆಯಾಮವುಳ್ಳ ನಮ್ಮ ಕೃಷಿ ಸಂಸ್ಕೃತಿಗೆ ಕೊಡಲಿಪಟ್ಟು ನೀಡುತ್ತವೆ. ಕಾರ್ಪೋರೆಟ್ ಸಂಸ್ಕೃತಿಯು ಯಾವತ್ತೂ, ಎಲ್ಲಿಯೂ ಪರಿಸರ-ಸ್ನೇಹಿಯಾಗಿರುವುದಿಲ್ಲ. ಜಾನುವಾರು ಹತ್ಯಾ ನಿಷೇಧ ಕಾಯಿದೆಯ ಜೊತೆಯಲ್ಲಿ ಈ ಮೂರು ಕೃಷಿ ಕಾಯಿದೆಗಳು ಜಾನುವಾರು ಆರ್ಥಿಕತೆಗೆ ವಿಷವುಣಿಸುತ್ತವೆ.

10. ಒಟ್ಟಾರೆ ನಮ್ಮ ಕೃಷಿ ವ್ಯವಸ್ಥೆಯ ಸ್ವರೂಪವು ಬದಲಾಗುತ್ತದೆ. ಇದು ಸರಿ. ಆದರೆ ಈ ಬದಲಾವಣೆಯು ಕೃಷಿ ಸಂಸ್ಕೃತಿಗೆ, ರೈತಾಪಿ ವರ್ಗಕ್ಕೆ, ದುಡಿಯುವ ವರ್ಗಕ್ಕೆ, ಮಹಿಳೆಯರಿಗೆ ಮತ್ತು ಪರಿಸರಕ್ಕೆ ಮಹಾಮಾರಕವಾಗಿವೆ. ಕೃಷಿಯ ಕಾರ್ಪೋರೆಟೀಕರಣ, ಕೃಷಿ ಮಾರುಕಟ್ಟೆಯ ಖಾಸಗೀಕರಣ, ಕಳ್ಳ ದಾಸ್ತಾನು-ಹೋರ್ಡಿಂಗ್‌ಗಳ ನಿರಪರಾಧೀಕರಣ, ಕೃಷಿಯ ಸಂಪೂರ್ಣ ಪಾಶ್ಚಿಮಾತ್ಯೀಕರಣ, ಜಾನುವಾರು ಆರ್ಥಿಕತೆಯ ಅಂತ್ಯ ಮುಂತಾದ ಬೆಳವಣಿಗೆಗಳು ನಮ್ಮ ನಾಗರಿಕೋಪಾದಿಯ ಕೃಷಿ ಸಂಸ್ಕೃತಿಯನ್ನು ನಾಶಮಾಡಿಬಿಡುತ್ತದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಹೋರಾಟ ತೀವ್ರಗೊಳಿಸಲು ಗಟ್ಟಿ ನಿರ್ಧಾರ: ಮೇ ತಿಂಗಳಿನಲ್ಲಿ ಪಾರ್ಲಿಮೆಂಟ್ ಚಲೋಗೆ ರೈತರ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...