Homeಅಂತರಾಷ್ಟ್ರೀಯಇಸ್ರೇಲ್ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ನಾಲ್ವರು ಪತ್ರಕರ್ತರು ಹತ್ಯೆ; ಮನಕಲಕಿದ ಅನಾಸ್ ಅಲ್-ಶರೀಫ್ ಅಂತಿಮ...

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ನಾಲ್ವರು ಪತ್ರಕರ್ತರು ಹತ್ಯೆ; ಮನಕಲಕಿದ ಅನಾಸ್ ಅಲ್-ಶರೀಫ್ ಅಂತಿಮ ಸಂದೇಶ 

- Advertisement -
- Advertisement -

ಪ್ಯಾಲೆಸ್ತೀನ್/ಗಾಜಾ: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಜಾ ಮೂಲದ ಧೈರ್ಯಶಾಲಿ ಪತ್ರಕರ್ತ ಅನಾಸ್ ಅಲ್-ಶರೀಫ್ ಸೇರಿದಂತೆ ಅಲ್ ಜಝೀರಾದ ನಾಲ್ವರು ಪತ್ರಕರ್ತರು ಹತ್ಯೆಯಾಗಿದ್ದಾರೆ. ಗಾಜಾ ನರಮೇಧ ಆರಂಭವಾದಾಗಿನಿಂದಲೂ ನಿರಂತರವಾಗಿ ವರದಿ ಮಾಡುತ್ತಿದ್ದ ಅನಾಸ್ ಅಲ್-ಶರೀಫ್, ಅಲ್ ಜಝೀರಾ ಅರೇಬಿಕ್‌ನ ಪ್ರಮುಖ ಧ್ವನಿಯಾಗಿದ್ದರು. ಈ ದಾಳಿಯಲ್ಲಿ ಅಲ್-ಶರೀಫ್ ಅವರೊಂದಿಗೆ, ಕ್ಯಾಮರಾಮ್ಯಾನ್‌ಗಳಾದ ಇಬ್ರಾಹಿಂ ಝಾಹರ್ ಮತ್ತು ಮೊಹಮ್ಮದ್ ನೌಫಲ್ ಹಾಗೂ ಮತ್ತೊಬ್ಬ ಪತ್ರಕರ್ತ ಮೊಹಮ್ಮದ್ ಖ್ರೀಖೆ ಕೂಡ ಸಾವನ್ನಪ್ಪಿದ್ದಾರೆ.

ಅಲ್ ಜಝೀರಾ ವರದಿ ಪ್ರಕಾರ, ಈ ಘಟನೆ ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಹೊರಗೆ ಪತ್ರಕರ್ತರು ತಂಗಿದ್ದ ಡೇರೆಯ ಮೇಲೆ ನಡೆದ ಇಸ್ರೇಲಿ ದಾಳಿಯ ಪರಿಣಾಮವಾಗಿದೆ. ಇದು ಉದ್ದೇಶಪೂರ್ವಕ ದಾಳಿ ಎಂದು ಅಲ್ ಜಝೀರಾ ಖಂಡಿಸಿದೆ. ಹತ್ಯೆಗೀಡಾದ ಅನಾಸ್ ಅಲ್-ಶರೀಫ್ (28) ಅವರು ಉತ್ತರ ಗಾಜಾದಲ್ಲಿ ವ್ಯಾಪಕವಾಗಿ ವರದಿ ಮಾಡಿದ್ದರಿಂದ ಅಲ್ಲಿ ಮನೆ ಮಾತಾಗಿದ್ದರು. ಇಸ್ರೇಲ್ ಪಡೆಗಳು ಈ ಪತ್ರಕರ್ತರ ವಿರುದ್ಧ, ವಿಶೇಷವಾಗಿ ಅಲ್-ಶರೀಫ್ ವಿರುದ್ಧ, “ಪ್ರಚೋದನೆಯ ಅಭಿಯಾನ” ನಡೆಸುತ್ತಿದ್ದವು ಎಂದು ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್ ಹೇಳಿದೆ.

ಆದರೆ, ಇಸ್ರೇಲ್ ಸೇನೆಯು ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಾ, ಅಲ್-ಶರೀಫ್ ಹಮಾಸ್ ಕೋಶದ ಮುಖ್ಯಸ್ಥನಾಗಿದ್ದ ಮತ್ತು “ಇಸ್ರೇಲಿ ನಾಗರಿಕರು ಮತ್ತು ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ಉತ್ತೇಜಿಸುತ್ತಿದ್ದ” ಎಂದು ಆರೋಪಿಸಿದೆ. ಈ ಆರೋಪಗಳನ್ನು ಅಲ್ ಜಝೀರಾ ಸಂಪೂರ್ಣವಾಗಿ ನಿರಾಕರಿಸಿದೆ.

ತಮ್ಮ ಹತ್ಯೆಯ ಕೆಲವು ಕ್ಷಣಗಳ ಮೊದಲು, ಅಲ್-ಶರೀಫ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಗಾಜಾ ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳ ಮೇಲೆ ಇಸ್ರೇಲ್ ತೀವ್ರವಾದ ಮತ್ತು ಕೇಂದ್ರೀಕೃತ ಬಾಂಬ್ ದಾಳಿ ನಡೆಸುತ್ತಿದೆ ಎಂದು ಬರೆದಿದ್ದರು. ಈ ಬಾಂಬ್ ದಾಳಿಯನ್ನು “ಫೈರ್ ಬೆಲ್ಟ್‌ಗಳು” ಎಂದೂ ಕರೆಯಲಾಗುತ್ತದೆ. ಅವರ ಕೊನೆಯ ವೀಡಿಯೊದಲ್ಲಿ, ಹಿನ್ನೆಲೆಯಲ್ಲಿ ನಿರಂತರ ಬಾಂಬ್ ದಾಳಿಯ ಶಬ್ದಗಳು ಕೇಳಿಬರುತ್ತಿದ್ದು, ಕತ್ತಲೆ ಆಕಾಶ ಕಿತ್ತಳೆ ಬೆಳಕಿನಿಂದ ಮಿನುಗುತ್ತಿರುವುದು ಕಾಣುತ್ತದೆ. “ಕಳೆದ ಎರಡು ಗಂಟೆಗಳಿಂದ ಗಾಜಾ ನಗರದ ಮೇಲೆ ಇಸ್ರೇಲಿ ಆಕ್ರಮಣ ತೀವ್ರಗೊಂಡಿದೆ” ಎಂದು ಅವರು ಬರೆದಿದ್ದರು.

“ನಾನು ನಿಮಗೆ ಪ್ಯಾಲೆಸ್ಟೈನ್ ಅನ್ನು ಒಪ್ಪಿಸುತ್ತೇನೆ”: ಅನಾಸ್ ಅಲ್-ಶರೀಫ್ ಅವರ ಅಂತಿಮ ಸಂದೇಶ

ಅನಾಸ್ ಅಲ್-ಶರೀಫ್ ಅವರ ಹತ್ಯೆಯ ನಂತರ, ಅವರು ಈ ವರ್ಷದ ಆರಂಭದಲ್ಲಿ ಬರೆದಿದ್ದ ತಮ್ಮ ಅಂತಿಮ ಸಂದೇಶವನ್ನು ಅವರ ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾಯಿತು. ಈ ಸಂದೇಶವು ಅವರ ನೋವು, ಕಷ್ಟಗಳು ಮತ್ತು ತಮ್ಮ ಜನರು ಹಾಗೂ ಮಾತೃಭೂಮಿಯ ಮೇಲಿದ್ದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ.

ಅವರ ಅಂತಿಮ ಸಂದೇಶದ ಪೂರ್ಣ ಪಠ್ಯ ಇಲ್ಲಿದೆ:

“ನನ್ನ ಮಾತುಗಳು ನಿಮ್ಮನ್ನು ತಲುಪಿದರೆ, ಇಸ್ರೇಲ್ ನನ್ನನ್ನು ಕೊಲ್ಲುವಲ್ಲಿ ಮತ್ತು ನನ್ನ ಧ್ವನಿಯನ್ನು ಮೌನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಯಿರಿ. ಮೊದಲಿಗೆ, ನಿಮ್ಮೆಲ್ಲರ ಮೇಲೆ ಶಾಂತಿ, ಕರುಣೆ ಮತ್ತು ಆಶೀರ್ವಾದವಿರಲಿ.

ಜಬಾಲಿಯಾ ನಿರಾಶ್ರಿತರ ಶಿಬಿರದ ಗಲ್ಲಿಗಳಲ್ಲಿ ಮತ್ತು ಬೀದಿಗಳಲ್ಲಿ ನನ್ನ ಬದುಕು ಆರಂಭವಾದಾಗಿನಿಂದ, ನನ್ನ ಜನರಿಗೆ ಧ್ವನಿ ಮತ್ತು ಶಕ್ತಿಯಾಗಿ ನಿಲ್ಲಲು ನಾನು ನನ್ನ ಸರ್ವ ಪ್ರಯತ್ನವನ್ನೂ ಅರ್ಪಿಸಿದ್ದೇನೆ ಎಂದು ಅಲ್ಲಾಹನಿಗೆ ತಿಳಿದಿದೆ. ಅತಿಕ್ರಮಿತ ಭೂಮಿ, ನನ್ನ ಮೂಲ ಪಟ್ಟಣ ಅಸ್ಖಲಾನ್ (ಅಲ್-ಮಜ್ದಲ್)ಗೆ ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ಹಿಂತಿರುಗುವ ಆಸೆಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೆ. ಆದರೆ ಅಲ್ಲಾಹನ ಇಚ್ಛೆಯು ಅನಿರೀಕ್ಷಿತವಾಗಿತ್ತು, ಮತ್ತು ಆತನ ತೀರ್ಮಾನವೇ ಅಂತಿಮ. ನೋವಿನ ಎಲ್ಲಾ ರೂಪಗಳನ್ನು ನಾನು ಅನುಭವಿಸಿದ್ದೇನೆ, ದುಃಖ ಮತ್ತು ನಷ್ಟವನ್ನು ಪದೇ ಪದೇ ಕಂಡಿದ್ದೇನೆ. ಆದರೂ, ಸತ್ಯವನ್ನು ಅದು ಇರುವಂತೆಯೇ, ಯಾವುದೇ ಬದಲಾವಣೆ ಅಥವಾ ಸುಳ್ಳಿಲ್ಲದೆ ಹೇಳಲು ನಾನು ಎಂದಿಗೂ ಹಿಂಜರಿಯಲಿಲ್ಲ. ನಮ್ಮ ಹತ್ಯೆಯನ್ನು ಒಪ್ಪಿಕೊಂಡ, ನಮ್ಮ ಉಸಿರುಗಳನ್ನು ಬಂಧಿಸಿದ, ನಮ್ಮ ಮಕ್ಕಳ ಮತ್ತು ಮಹಿಳೆಯರ ಛಿದ್ರಗೊಂಡ ದೇಹಗಳನ್ನು ನೋಡಿಯೂ ಹೃದಯ ಕರಗದ ಮತ್ತು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನಮ್ಮ ಜನರ ಮೇಲೆ ನಡೆಯುತ್ತಿರುವ ಈ ಮಾರಣಹೋಮವನ್ನು ನಿಲ್ಲಿಸದವರ ವಿರುದ್ಧ ಅಲ್ಲಾಹನು ಸಾಕ್ಷಿಯಾಗಿರುತ್ತಾನೆ ಎಂದು ನಾನು ನಂಬಿದ್ದೇನೆ.

ನಾನು ಪ್ಯಾಲೆಸ್ಟೈನ್ ಅನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ. ಇದು ಮುಸ್ಲಿಂ ಪ್ರಪಂಚದ ಒಂದು ರತ್ನ ಮತ್ತು ಪ್ರತಿಯೊಬ್ಬ ಸ್ವತಂತ್ರ ಹೃದಯದ ಆಸೆಯಾಗಿದೆ. ಸಾವಿರಾರು ಟನ್‌ಗಳ ಇಸ್ರೇಲಿ ಬಾಂಬ್‌ಗಳಿಂದ ಹರಿದುಹೋದ ಅಮಾಯಕ ಮಕ್ಕಳ ದೇಹಗಳು ಮತ್ತು ಅಲ್ಲಿನ ಜನರ ಜವಾಬ್ದಾರಿಯನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಯಾವುದೇ ಬಂಧನಗಳು ನಿಮ್ಮನ್ನು ಮೌನವಾಗಿಸಬಾರದು. ನಮ್ಮ ನೆಲ ಮತ್ತು ಜನರಿಗೆ ಘನತೆ ಮತ್ತು ಸ್ವಾತಂತ್ರ್ಯ ದೊರೆಯುವವರೆಗೂ ಅವರನ್ನು ಬಿಡುಗಡೆಗೊಳಿಸುವ ಸೇತುವೆಯಾಗಿ ನೀವು ಇರಿ.

ನನ್ನ ಪ್ರೀತಿಯ ಕುಟುಂಬವನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ನನ್ನ ಕಣ್ಣಿನ ದೃಷ್ಟಿಯಂತಿದ್ದ ಮಗಳು ಶಮ್ಳನ್ನು ನಿಮಗೆ ವಹಿಸುತ್ತಿದ್ದೇನೆ, ಅವಳು ಬೆಳೆಯುವುದನ್ನು ನೋಡುವ ಆಸೆ ನನಗೆ ಈಡೇರಲಿಲ್ಲ. ನನ್ನ ಮಗ ಸಲಾಹ್‌ನನ್ನು ನಿಮಗೆ ಒಪ್ಪಿಸುತ್ತೇನೆ, ಅವನು ನನ್ನ ಜವಾಬ್ದಾರಿಯನ್ನು ಹೊರುವಷ್ಟು ಶಕ್ತಿಯುತನಾಗುವವರೆಗೆ ನಾನು ಅವನ ಬೆಂಬಲಕ್ಕೆ ನಿಲ್ಲಬೇಕಿತ್ತು.

ನನ್ನ ಶಕ್ತಿಯಾಗಿದ್ದ ಪ್ರೀತಿಯ ತಾಯಿಯನ್ನು, ಅವರ ಪ್ರಾರ್ಥನೆಗಳು ನನ್ನನ್ನು ಕಾಪಾಡಿದವು, ನಿಮಗೆ ಒಪ್ಪಿಸುತ್ತೇನೆ. ಜೀವನದುದ್ದಕ್ಕೂ ನನ್ನ ಜೊತೆಗಿದ್ದ ನನ್ನ ಪತ್ನಿ ಬಯಾನ್ಳನ್ನು ನಿಮಗೆ ವಹಿಸುತ್ತೇನೆ. ಯುದ್ಧವು ನಮ್ಮನ್ನು ದೂರಮಾಡಿದರೂ, ಅವಳು ದೃಢವಾಗಿ ಮತ್ತು ನಿಷ್ಠೆಯಿಂದ ಕುಟುಂಬವನ್ನು ನೋಡಿಕೊಂಡಳು. ದಯವಿಟ್ಟು ನೀವು ಎಲ್ಲರೂ ಸೇರಿ, ಅವರಿಗೆ ಅಲ್ಲಾಹನ ನಂತರ ದೊಡ್ಡ ಬೆಂಬಲವಾಗಿರಿ.

ನನ್ನ ಅಂತ್ಯ ಸಂಭವಿಸಿದರೆ, ನನ್ನ ತತ್ವಗಳಿಗೆ ಬದ್ಧನಾಗಿ ಈ ಜಗತ್ತನ್ನು ಬಿಡುತ್ತೇನೆ. ಅಲ್ಲಾಹನ ಇಚ್ಛೆಯಿಂದ ನಾನು ತೃಪ್ತನಾಗಿದ್ದೇನೆ ಮತ್ತು ಆತನನ್ನು ಸೇರುವುದು ಶಾಶ್ವತ ಶಾಂತಿಯ ದಾರಿ ಎಂದು ನಾನು ನಂಬಿದ್ದೇನೆ.

ಓ ಅಲ್ಲಾಹ್, ನನ್ನನ್ನು ಹುತಾತ್ಮನಾಗಿ ಸ್ವೀಕರಿಸು. ನನ್ನ ಭೂತ ಮತ್ತು ಭವಿಷ್ಯದ ಪಾಪಗಳನ್ನು ಕ್ಷಮಿಸು. ನನ್ನ ರಕ್ತದ ಹನಿಯು ನನ್ನ ಜನ ಮತ್ತು ಕುಟುಂಬದ ಸ್ವಾತಂತ್ರ್ಯಕ್ಕಾಗಿ ಪ್ರಕಾಶಿಸುವ ಬೆಳಕಾಗಲಿ. ಒಂದು ವೇಳೆ ನಾನು ಎಲ್ಲಿಯಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸು. ನನ್ನ ಒಡಂಬಡಿಕೆಗೆ ನಾನು ಸದಾ ನಿಷ್ಠನಾಗಿದ್ದೇನೆ. ಗಾಜಾವನ್ನು ಮರೆಯಬೇಡಿ… ಮತ್ತು ನಿಮ್ಮ ಒಳ್ಳೆಯ ಪ್ರಾರ್ಥನೆಗಳಲ್ಲಿ ನನ್ನನ್ನು ದಯೆಯಿಂದ ನೆನಪಿಸಿಕೊಳ್ಳಿ.

ಅನಾಸ್ ಅಲ್-ಶರೀಫ್

06.04.2025″

ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ ಆರೋಪ: ರಾಹುಲ್ ಗಾಂಧಿಯಿಂದ ದಾಖಲೆ ಕೇಳಿದ ರಾಜ್ಯ ಚುನಾವಣಾಧಿಕಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...