Homeಮುಖಪುಟಹಳತು-ವಿವೇಕ; ಪೆರಿಯಾರ್ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರು ನೀಡಿದ್ದ ಸಂದೇಶ

ಹಳತು-ವಿವೇಕ; ಪೆರಿಯಾರ್ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರು ನೀಡಿದ್ದ ಸಂದೇಶ

- Advertisement -
- Advertisement -

ಭರತ ಖಂಡದ ಕೋಟ್ಯಂತರ ಜನರು ಸಹಸ್ರಾರು ವರ್ಷಗಳ ಕಾಲ ಮತ ಮೌಢ್ಯದಲ್ಲಿ ಮುಳುಗಿ ತಮ್ಮ ವಿನಾಶಕ್ಕೆ ತಾವೇ ಕಾರಣರಾದ ದುರಂತವು ಇತಿಹಾಸದ ಭಾಗವಾಗಿದೆಯಷ್ಟೆ. ರಾಜರಾಮ ಮೋಹನರಾಯ, ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮೊದಲಾದ ಮನೀಷಿಗಳು ಶುದ್ಧ ಆಧ್ಯಾತ್ಮದ ವಿದ್ಯುತ್ ಕ್ರಾಂತಿಯಿಂದ ಭಾರತದ ಜನಸಹಸ್ರದ ಮನೋ ಲೋಕಗಳನ್ನು ಬೆಳಗಿ ಅಲ್ಲಿನ ಮೂಲೆಮೂಲೆಗಳಲ್ಲಿ ದಟ್ಟವಾಗಿ ಕವಿದು ಹೆಪ್ಪುಗಟ್ಟಿದ ಮೌಢ್ಯ ತಮಸ್ಸನ್ನು ಕರಗಿಸಿ, ಹೊಹರಿಯಿಸುವ ಮಹಾ ಸಾಹಸವನ್ನು ಕೈಗೊಂಡು ತಮ್ಮ ತಮ್ಮ ರೀತಿಯಲ್ಲಿ ಯಶಸ್ವಿಯಾದರು.

ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ದಕ್ಷಿಣ ಭಾರತದ ಮತ್ತೊಬ್ಬ ಮಹಾವ್ಯಕ್ತಿ ಮತ ಮೌಢ್ಯ, ಆಜ್ಞಾನ, ಉತ್ತಮರು ಎಂದು ತಮ್ಮನ್ನು ತಾವು ಕರೆದುಕೊಂಡು ವರ್ಣಗಳು ನಡೆಸುತ್ತಿದ್ದ ದೌಷ್ಟ್ಯ ದಬ್ಬಾಳಿಕೆಗಳ ವಿರುದ್ಧ ಭಯಂಕರವಾದ ಯುದ್ಧವನ್ನು ಘೋಷಿಸಿದರು. ಅವರೇ ತಮಿಳುನಾಡಿನ ಜನ ಕೋಟಯು ಗೌರವದಿಂದ ಪೆರಿಯಾರರು ಎಂದು ಕರೆದ ಶ್ರೀ ಇ. ವಿ. ರಾಮಸ್ವಾಮಿನಾಯಕರು.

ಪೆರಿಯಾರರು ಸಾಮಾಜಿಕ ಕ್ಷೇತ್ರದಲ್ಲಿ ಘೋಷಿಸಿದ ಸಮರವು ಯೂರೋಪಿನಲ್ಲಿ ಈ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳಷ್ಟೇ ಅನಾಹುತಕಾರಿಯೂ ಅಭ್ಯುದಯಕಾರಿಯೂ ಆಯಿತು. ಈ ಎರಡು ಮಹಾಯುದ್ಧಗಳು ಅನೇಕ ನಗರಗಳನ್ನೂ, ಸಂಸ್ಕೃತಿ ಕೇಂದ್ರಗಳನ್ನೂ, ಕಲಾಕ್ಷೇತ್ರಗಳನ್ನೂ ನಿರ್ನಾಮಗೊಳಿಸಿದುವು. ಮಾನವನ ದೌರ್ಜನ್ಯದ ಭೀಕರ ಮುಖವನ್ನು ತೆಗೆದು ತೋರಿಸಿದುವು. ಜೊತೆಜೊತೆಗೇ ಮಾನವತೆಗೆ ಯುದ್ಧದ ವಿಷಯದಲ್ಲಿ, ವಿಜಯದ ವಿಷಯದಲ್ಲೂ ಇದ್ದ ಭ್ರಮೆಯನ್ನೂ ಅವು ನಿರ್ನಾಮಗೊಳಿಸಿದವು. ಅಲ್ಲದೆ ಮಾನವನ ಅತೀವ ಸಹನ ಶಕ್ತಿ, ಜೀವಕಾಮ ಪೂರ್ಣವಿನಾಶದಿಂದ ನವೋನವನ್ನು ಸೃಷ್ಟಿಸುವ ಪವಾಡ ಸದೃಶ ಶಕ್ತಿಗಳನ್ನೂ ಉಜ್ವಲವಾದ ರೀತಿಯಲ್ಲಿ ಎತ್ತಿ ತೋರಿಸಿದುವು. ಅಲ್ಲದೆ ಎಲ್ಲಕ್ಕೂ ಮಿಗಿಲಾಗಿ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆಯಲೂ ಸಹಾಯಕವಾದುವು.

ಪೆರಿಯಾರರ ಸಾಮಾಜಿಕ ಸಮರವು ಭರತ ಖಂಡದ ಮತ ಮೌಢ್ಯಗಳ ಜೊತೆಗೆ ಇಲ್ಲಿನ ನಿರಂತರ ಜೀವ ಶಕ್ತಿಯಾದ ಧರ್ಮ-ಅಧ್ಯಾತ್ಮಗಳನ್ನೂ ಮೂಲೋತ್ಪಾಟನೆ ಮಾಡಲು ಹೊರಟಿತು. ಕಳೆಯನ್ನು ಕೀಳಲು ಹೊರಟು ಬೆಳೆಯನ್ನೂ ನಾಶ ಮಾಡಬಲ್ಲ ಬುಲ್‌ಡೋಜರಿನಂತೆ ಪೆರಿಯಾರರು ತಮ್ಮ ಯುದ್ಧ ಯಾತ್ರೆಯಲ್ಲಿ ಅಜ್ಞಾನ ಮೂಢನಂಬಿಕೆಗಳ ಜೊತೆಯಲ್ಲಿ ಭಾರತೀಯರ ಸಾರ ಭೂತ ಮೌಲ್ಯಗಳನ್ನೂ ಮುಲೋತ್ಪಾಟನೆ ಮಾಡಲೂ ಹಿಂಜರಿಯಲಿಲ್ಲ. ಬಹುಶಃ ಅವರಿಗೆ ಅಂತರ್ವಿಶ್ವಾಸವಿತ್ತೆಂದು ತೋರುತ್ತದೆ; ನಿತ್ಯವೂ, ಅವಿನಾಶಿಯೂ ಆದ ಆ ಜೀವ ಸತ್ವವು ಎಲ್ಲ ಆಘಾತಗಳನ್ನೂ ತಡೆದು, ತಾನು ಬಾಳಿಯೇ ತೀರುತ್ತದೆ ಎಂಬ ಗಟ್ಟಿ ಸತ್ಯದ ವಿಚಾರದಲ್ಲಿ.

ಇಷ್ಟು ಹೇಳಿದ ಮಾತ್ರಕ್ಕೇ ಪೆರಿಯಾರರು ಭಾರತೀಯರಿಗೆ ಮಾಡಿದ ಉಪಕಾರದ ಪ್ರಮಾಣವನ್ನು ಕಡಿಮೆ ಮಾಡಿ ತೋರಿಸಿದಂತೆ ಆಗಲಿಲ್ಲ. ಧರ್ಮ, ಮತ, ಆಧ್ಯಾತ್ಮಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ತುಳಿಯುತ್ತಿದ್ದ ಪುರೋಹಿತಶಾಹಿಯ ಪಾದಗಳು ಬಳಿದುಕೊಂಡಿದ್ದ ವಿಭೂತಿ ನಾಮ, ಮುದ್ರೆಗಳನ್ನು ಅವರು ನಿರ್ದಾಕ್ಷಿಣ್ಯವಾಗಿ ಒರಸಿ ಹಾಕಿದರು. ಜನಸಾಮಾನ್ಯರ ವಿಚಾರಪ್ರಗತಿಗೆ ಅಡ್ಡಿಯಾಗಿ ಬೆದರು ಬೊಂಬೆಗಳಂತೆ ನಿಂತಿದ್ದ ಜನಿವಾರ-ಶಿವದಾರಗಳನ್ನು ತಮ್ಮ ವಿಚಾರವಾದದ ಬಿರುಗಾಳಿಯಿಂದ ತೂರಿಸಿ, ಹಾರಿಸಿದರು. ಕಂದಾಚಾರದ ಅರ್ಭಟದಿಂದ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದ ಜನಸಾಮಾನ್ಯರಿಗೆ ವ್ಯಕ್ತಿತ್ವವನ್ನೂ ಆತ್ಮ ಗೌರವವನ್ನೂ ದಾನ ಮಾಡಿದರು. ಪತಿತರು ಮತ್ತೆ ತಲೆ ಎತ್ತಿ ಬಾಳುವುದನ್ನು ಕಲಿಸಿದರು. ಒಟ್ಟಿನಲ್ಲಿ ದಕ್ಷಿಣ ಭಾರತದ, ಅದರಲ್ಲೂ ತಮಿಳುನಾಡಿನ ಇತಿಹಾಸದ ದಿಕ್ಕು ದೆಸೆಗಳನ್ನು ಗಮನೀಯವಾದ ರೀತಿಯಲ್ಲಿ ಬದಲಿಸಿದರು. ಈ ಎಲ್ಲ ಕಾರಣಗಳಿಗಾಗಿ ಪೆರಿಯಾರರ ಹೆಸರು ನಮ್ಮ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದೇ ತೀರುತ್ತದೆ.

ನನ್ನ ಅಭಿಪ್ರಾಯದಲ್ಲಿ ಭಾರತವು ಉಳಿಯಬೇಕಾದರೆ ನಮ್ಮ ಜನರ ಮೂಢನಂಬಿಕೆಗಳು ತೊಲಗಲೇಬೇಕು. ಆದರೆ, ಹಾಗೆ ಮಾಡುವ ಭರದಲ್ಲಿ ಅಧ್ಯಾತ್ಮವನ್ನೂ ತೊಲಗಿಸುತ್ತೇವೆ ಎಂದು ಹೊರಟರೆ ವಿನಾಶವು ಕಟ್ಟಿಟ ಬುತ್ತಿ.

ಆದ್ದರಿಂದ ನಾನು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಉಚ್ಚರಿಸುತ್ತಿರುವ ನವ ನಿರ್ಮಾಣ ಮಂತ್ರವನ್ನು ಈ ಸಂದರ್ಭದಲ್ಲಿಯೂ ಘೋಷಿಸಬಯಸುತ್ತೇನೆ. ಪಂಚ ಮಂತ್ರಗಳಾವುವೆಂದರೆ, 1. ಮನುಜಮತ, 2. ವಿಶ್ವಪಥ 3. ಸರ್ವೋದಯ 4. ಸಮನ್ವಯ ಮತ್ತು 5. ಪೂರ್ಣದೃಷ್ಟಿ.

ಮುಂದಿನ ಪೀಳಿಗೆಗೆ ಅಮೃತ ಸಂದೇಶ

’ವಿಶ್ವ’ ಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವ ಪ್ರಣಾಳಿಕೆ

ಸಪ್ತ ಸೂತ್ರ:

  1. ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರುಪಾಧಿತವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತಿದ್ದುವುದಿಲ್ಲ; ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. ’ಮತ’ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ ಮನುಜಮತವಾಗಬೇಕು. ಪಥ ವಿಶ್ವಪಥವಾಗಬೇಕು. ಮನುಷ್ಯ ವಿಶ್ವಮಾನವನಾಗಬೇಕು.
  6. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ತನ್ನ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.
  7. ಯಾವ ಒಂದು ಗ್ರಂಥವೂ ಏಕೈಕ ಪರಮ ಪೂಜ್ಯ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.

ವಿಶ್ವಮಾನವ ಗೀತೆ

ಓ ನನ್ನ ಚೇತನ
ಆಗು ನೀ ಅನಿಕೇತನ

1

ರೂಪ ರೂಪಗಳನು ದಾಟಿ
ನಾಮ ಕೋಟಿಗಳನ್ನು ಮೀಟಿ
ಎದೆಯ ಬಿರಿಯೆ ಭಾವ ದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ

2

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ

3

ಎಲ್ಲಿಯೂ ನಿಲ್ಲದಿರು
ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನ
ಆಗು ನೀ ಅನಿಕೇತನ

4

ಅನಂತ ತಾನೆ ಅನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು,
ಆಗು ಆಗು ಆಗು ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ

ಪೆರಿಯಾರರ ನೂರನೆಯ ಜನ್ಮ ದಿನೋತ್ಸವವನ್ನು ಆಚರಿಸುತ್ತಿರುವ ಮಿತ್ರರ ಉತ್ಸಾಹ ಅಭಿನಂದನೀಯವಾದದ್ದು. ಇದು ಬರಿಯ ಉತ್ಸವದಲ್ಲಿ ಪರ್ಯಾವಸಾನವಾಗಕೂಡದು ಎಂದು ನಮ್ಮ ಮಿತ್ರರು ಪೆರಿಯಾರರ ಬರಹವನ್ನು ಸೊಗಸಾಗಿ ಅನುವಾದಿಸಿ ಸುಂದರವಾದ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಸುಲಭ ದರದಲ್ಲಿ ಮಾರುವ ವ್ಯವಸ್ಥೆಗೊಳಿಸಿದ್ದಾರೆ. ಇದು ಸ್ತುತ್ಯವಾದ ಕಾರ್ಯ ಇಂದಿನ ಸಮಾರಂಭಕ್ಕೂ ಮುಂದಿನ ಸಾಹಸಗಳಿಗೂ ನಾನು ಹೃತೂರ್ವಕವಾಗಿ ಶುಭವನ್ನು ಕೋರುತ್ತೇನೆ.

(ಇದು ವೇಮಣ್ಣ ಅವರು ಪೆರಿಯಾರ್ ಬರಹಗಳನ್ನು ಸಂಗ್ರಹಿಸಿ ಅನುವಾದಿಸಿರುವ ’ಸಮಾಜವಾದ ಪೆರಿಯಾರರ ದೃಷ್ಟಿಯಲ್ಲಿ’ ಎಂಬ ಪುಟ್ಟ ಪುಸ್ತಿಕೆಯ ಪ್ರಾರಂಭದಲ್ಲಿ ಪ್ರಕಟವಾಗಿದೆ. ಇದನ್ನು ಚಿಂತಕರ ಚಾವಡಿ-ಕರ್ನಾಟಕ 1980ರಲ್ಲಿ ಪ್ರಕಟಿಸಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...