Homeಅಂಕಣಗಳು'ಮತ್ತೆ ಮತ್ತೆ ಮಳೆ' ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ.....

‘ಮತ್ತೆ ಮತ್ತೆ ಮಳೆ’ ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ…..

- Advertisement -
- Advertisement -

ಕವಿತೆ/ಕಲೆ ಎನ್ನುವುದು ಕೊಂಡ ಹಾಯುವ ಆಚರಣೆಯಂತೆ. ತನ್ನ ಬದುಕಿನ ಮತ್ತು ಸಮಾಜದ ನೆನಪುಗಳನ್ನು ಆ ಕೊಂಡದಲ್ಲಿ ಹಾಯಿಸಿಕೊಳ್ಳುವುದೇ ಕವಿಯ/ಕಲಾವಿದನ ಕೆಲಸ. ಏಕೆಂದರೆ ಕಾವ್ಯ/ಸಾಹಿತ್ಯ/ಕಲೆ ಅನ್ನೋದು ಶೋಷಿತರ ಮೇಲಿನ ಭಾರ ಇಳಿಸುವುದು, ಲೋಕದ ಪಾಪಗಳ ಭಾರ ಹೊರುವುದೇ ಆಗಿದೆ.

ಕವಿತೆಯನ್ನು ಕಟ್ಟುವ, ಸೃಷ್ಟಿಸುವ ಕವಿಯ ವ್ಯಕ್ತಿಗತವಾದ ಪ್ರೇಮ, ವಿರಹ, ಸಂತೋಷದ, ನೆನಪುಗಳು, ಅವಮಾನಗಳು, ಸಾಮಾಜಿಕ, ರಾಜಕೀಯ ಸಂಗತಿಗಳು ಅವನ/ಆಕೆಯ ಮನದಾಳಕ್ಕೆ ಇಳಿದು, ಅವನ/ಆಕೆಯ ಭಾವದಲ್ಲಿ ಕಡೆದು ಅರಿವಿನ ಚಿತ್ರವಾಗಿ ಮೂಡುವಂತೆ ಮಾಡುವುದೇ ಕವಿಯ ಕೆಲಸ.

ಈ ಕೆಲಸಕ್ಕೆ ಭಾಷೆ ಅತಿ ಮುಖ್ಯವಾದದ್ದು. ಆದರೆ ಅದೇ ಎಲ್ಲವೂ ಅಲ್ಲ.

ಈ ಚರ್ಚೆಗಳ ಹಿನ್ನೆಲೆಯಲ್ಲಿ ಗಮನಿಸಬಹುದಾದ ಮುಖ್ಯಸಂಗತಿ ಎಂದರೆ ಕಾವ್ಯಕ್ಕೆ ಶಬ್ದ-ಅರ್ಥಗಳೇ ಮುಖ್ಯ ಎಂಬ ವಿಚಾರ ಕನ್ನಡ ಕಾವ್ಯದ ಮೇಲೂ ಹೆಚ್ಚಿನ ಪ್ರಭಾವ ಬೀರಿ, ಕೇವಲ ಭಾಷೆಯ ಬಳಕೆಯೊಂದರಿಂದಲೇ ಹುಸಿ ಕಾವ್ಯ (pseudo poetry) ಮುನ್ನಲೆಗೆ ಬಂದು ನಿಜವಾದ ಕಾವ್ಯ ಹಿನ್ನೆಲೆಗೆ, ಮರೆಗೆ ಸರಿಯುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವದಲ್ಲಿ ಕಾವ್ಯ ಅನ್ನೋದು ಬದುಕಿಗೆ ಉಪಯೋಗವಾಗಬೇಕು, ಹಿತಕಾರಿಯಾಗಬೇಕು ಎಂಬ ಬಹುಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ.

ಹೀಗೆ ರೂಪುಗೊಳ್ಳುವ ಕವಿತೆಯ ಸ್ವರೂಪ, ಅದರ ಅಂತಿಮ ಗುರಿ ಏನು ಎಂಬುದನ್ನು ನಮ್ಮ ಜನಪದ ಕಾವ್ಯದಲ್ಲಿ ಪ್ರಚಲಿತವಿರುವ ’ಬಾಲಗೋಪಾಲನ ಲಾವಣಿಗಳು’ ಬರುವ ಸಾಲುಗಳು ವಿವರಿಸುತ್ತವೆ.

“ಬಾಲಗೋಪಾಲನ ಹಾಡ ಕೇಳರಿ
ಹಸುಗೂಸಿಗಿ ಹಾಕಿದಾಂಗ ಕ್ಷೀರವನಾ” ಎಂದು.

ಈ ಸಾಲುಗಳಲ್ಲಿ ಹಸುಗೂಸು ಹಾಲು ಕುಡಿಯುವ ಸಹಜ ಕ್ರಿಯೆಯನ್ನು ಕವಿತೆ ಓದುವ, ಕೇಳುವ ಸಹೃದಯನಿಗೆ ಹೋಲಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಹಸುಗೂಸು ಹಾಲು ಕುಡಿಯುವ ಒಟ್ಟು ಕ್ರಿಯೆ, ಕಾವ್ಯದ ಸ್ವರೂಪ ಮತ್ತು ಅದರ ಪ್ರಯೋಜನವನ್ನು ಅರ್ಥವತ್ತಾಗಿ ಹೇಳುತ್ತಿದೆ. ತಾಯಿ ಕವಿಯನ್ನು ಸಂಕೇತಿಸಿದರೆ, ತಾಯ ಎದೆಹಾಲು ಕವಿತೆಯನ್ನು, ಹಸುಗೂಸು ಓದುಗನನ್ನು ಸಂಕೇತಿಸುತ್ತದೆ. ಎದೆಹಾಲು ದೋಷದಿಂದ ಮುಕ್ತವಾದ ಉತ್ತಮಕಾವ್ಯವನ್ನು ಸಂಕೇತಿಸುತ್ತದೆ.

ಹಾಲು ಕುಡಿಯುವ ಕ್ರಿಯೆ ಕೂಸಿಗೆ ಕೊಂಚವೂ ತೊಡಕಾಗಿರದೆ, ಇಷ್ಟವಾದ, ಸಹಜವಾದ, ಸಲೀಸಾದ ಕೆಲಸವಾಗಿ, ಹಾಲು ಕೂಸಿಗೆ ಹಿತವನ್ನುಂಟುಮಾಡುತ್ತದೆ. ಜೀವಶಕ್ತಿಯನ್ನು ಹೆಚ್ಚಿಸುತ್ತದೆ, ಆನಂದವನ್ನು ಉಂಟುಮಾಡುತ್ತದೆ. ಹಾಗೆಯೇ ಕಾವ್ಯವು ಸಹಜವಾಗಿರಬೇಕು, ಸರಳವಾಗಿರಬೇಕು. ಓದುಗನಿಗೆ/ಸಹೃದಯನಿಗೆ ಇಷ್ಟವಾದುದೂ, ಅವನ ಬೆಳವಣಿಗೆಗೆ ಶಕ್ತಿಯನ್ನೊದಗಿಸುವಂತಹದು, ಆನಂದವನ್ನುಂಟುಮಾಡುವಂತಹದು ಆಗಿರಬೇಕು. ಒಟ್ಟಿನಲ್ಲಿ ಅವನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಬೇಕು.

ಇಷ್ಟೆಲ್ಲಾ ಮಾತುಗಳು ಆಡಲು ಕಾರಣ ಹೇಮಂತ ಲಿಂಗಪ್ಪ ಅವರ ಮೊದಲ ಸಂಕಲನದ ಓದು.

ಹೇಮಂತರ ’ಮತ್ತೆ ಮತ್ತೆ ಮಳೆ’ ಸಂಕಲನದಲ್ಲಿ ಒಟ್ಟು ನಲ್ವತ್ತನಾಲ್ಕು ಕವನಗಳಿವೆ. ಇಷ್ಟೂ ಕವನಗಳಲ್ಲಿ ನಾನು ಗಮನಿಸಿದ ಹಾಗೆ ಹೇಮಂತರ ಕವಿತೆಗಳ ಬಹುಮುಖ್ಯ ಅಂಶ ಅಂದರೆ ತನ್ನ ಅನುಭವವನ್ನು ಹಾಗೆ ಒಂದು ಚಿತ್ರವನ್ನಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟುವುದು. ಇದರ ಮೂಲಕ ಕವಿ ಏನು ಹೇಳಲು ಪ್ರಯತ್ನಿಸುತ್ತಾನೆ ಅನ್ನೋದು ಮುಖ್ಯವಲ್ಲ, ಕಾವ್ಯ ಓದುಗನಿಗೆ ಏನನ್ನು ಹೇಳುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಆ ವಿಚಾರವನ್ನು ಹೇಮಂತರ ಕವಿತೆಗಳು ಒಳಗೊಂಡಿವೆ ಅನ್ನೋದೇ ಅವರ ಕವಿತೆಗಳ ಯಶಸ್ಸು.

ಉದಾಹರಣೆಗೆ: 1.

ಉಬ್ಬಿದೆದೆಯ ಏದುಸಿರು
ಕಿವಿಯಿಟ್ಟು ಆಲಿಸೆ
ಕೇಳುತಿದೆ ಸಂಗೀತದಂತೆ

ನಾನು ಗಾಳಿಯೂದಲೇ ಇಲ್ಲ,
ಕೇವಲ ತುಟಿ ಸೋಕಿಸಿದಷ್ಟೆ…
ನೋಡನೋಡ ನೋಡುತ್ತಲೇ ಅವುಗಳು ಉಬ್ಬಿದ್ದೇಕೆ?
ಶಿಖರಗಳ ತುತ್ತತುದಿಯ, ತುಟಿ ಮುತ್ತಿದ್ದೇಕೆ?

ಈಗ ಮೌನದ್ದೇ ಮಾತು,
ಉಸಿರುಗಳದ್ದೇ ಗದ್ದಲ
ಸ್ಪರ್ಶದ್ದೇ ಕಾರುಬಾರು
ಮುತ್ತುಗಳದ್ದೇ ಚರ್ಚೆ….

2.

ತುಂಬಿ ಹರಿದ ಕೆರೆಯ
ತೂಬಿನಲ್ಲಿ ತಡಕಾಡಿ
ಹಿಡಿದ ಮೀನು- ಏಡಿಗಳ
ನನ್ನೂರ ಕೆರೆ
ಅದರ ಏರಿಯೂ..

ಇಂತವು ಹಲವಾರು.

ಎರಡನೆಯದಾಗಿ, ಕವಿಯಾದವನಿಗೆ ತುಂಬು ಜೀವನ ಪ್ರೀತಿ ಇರಬೇಕು ಮತ್ತದು ಪ್ರಾಮಾಣಿಕವಾಗಿರಬೇಕು. ಆಗ ಅದು ಅವನ ಕವಿತೆಗಳಲ್ಲಿ ಸಾಮಾಜಿಕವಾದ ರೂಪ ಪಡೆಯುತ್ತದೆ ಮತ್ತು ಎಲ್ಲರ ಜೀವನಪ್ರೀತಿಯಾಗುತ್ತೆ. ಅಂತಹ ಅಪಾರ ಜೀವನ ಪ್ರೀತಿ ಹೇಮಂತರ ಕವನಗಳಲ್ಲಿ ಎದ್ದು ಕಾಣುತ್ತದೆ. ಅದು ವ್ಯಕ್ತಿಗತವಾದ ಪ್ರೇಮ; ಆ ಪ್ರೇಮ ಅಚಾನಕ್ಕಾಗಿ ಕೊಡುವ ವಿರಹ, ಆ ವಿರಹದ ಅಭಿವ್ಯಕ್ತಿ ಎಲ್ಲರ ವಿರಹವಾಗಿ ಕಡೆಗೆ ವಿಷಾದವಾಗುವ ಬಗೆಯನ್ನು ಕುರಿತು, ಪ್ರೇಮದ ನೆನಪುಗಳ ಕುರಿತು, ಹಾಗೆ ಪರಿಸರ ಮತ್ತು ಅದರ ಜೊತೆಗಿನ ಜೀವಸಂಕುಲಗಳ ಬಗೆಗಿನ ಕಾಳಜಿ ಕುರಿತಾಗಿರಬಹುದು- ಇಲ್ಲೆಲ್ಲಾ ಉತ್ಕಟ ಪ್ರೇಮದ ಅಭಿವ್ಯಕ್ತಿ ಸಹಜವಾಗಿ ವ್ಯಕ್ತವಾಗಿದೆ. ಜೊತೆಗೆ ಪ್ರೇಮದ ಬಗೆಗಳನ್ನು ಹೇಮಂತ್ ತಮ್ಮ ಕವಿತೆಗಳಲ್ಲಿ ಎದುರಾಗುತ್ತಾರೆ.

ತಮ್ಮ ಮೊದಲ ಸಂಕಲನಗಳಲ್ಲಿ ಪ್ರೇಮ, ವಿರಹ, ವಿಷಾದ, ನೆನಪುಗಳನ್ನು ಕವಿತೆ ಮಾಡಲು ಹೋಗಿ ಭಾಷಣ ಮಾಡುವ ಇಲ್ಲವೇ ವಿಚಾರದ ಒಣಮಾತುಗಳ ಕಟ್ಟುಗಳನ್ನಾಗಿಸುವವರೇ ಹೆಚ್ಚು. ಆಗ ಮಾತು ಅನುಭವದ ಹೆಣವಾಗುತ್ತದೆ. ಹೇಮಂತರ ಈ ಸಂಕಲನದಲ್ಲಿ ಒಂದೆರಡು ಕವಿತೆಗಳನ್ನು ಬಿಟ್ಟರೆ ಉಳಿದಂತೆ ಗೆದ್ದಿದ್ದಾರೆ.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಆಹ್ವಾನ, ಮಳೆ, ಪ್ರೀತಿ, ಹುಡುಕಿಕೊಡು ಹುಡುಗಿ, ಮರೆವು, ಬನ್ನಿ ಬನ್ನಿ ಪದಗಳೆ, ಹೇಗೆ, ನೆನಪು, ಬ್ರೀವರಿಯ ಹುಡುಗಿ, ಮಿಳಿತ, ನನ್ನ ತಪ್ಪಲ್ಲ, ಮಳೆಗಾಳಿ, ಪಠ್ಯಪುಸ್ತಕ, ಮತ್ತೆ ಮತ್ತೆ ಮಳೆ, ನೈಟ್ ಜರ್ನಿ ಕವಿತೆಗಳು ಮೇಲಿನ ಮಾತುಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ.

ಮೂರನೆಯದಾಗಿ, ಕವಿ ಏಟ್ಸ್‌ನ ‘Poetry is an escape from Emotion’- ಈ ಮಾತಿಗೆ ಸಾಕ್ಷಿ ಒದಗಿಸುವ ಹಾಗೆ ಕೇವಲ ಪ್ರೇಮ, ವಿರಹಗಳೇ ಕಾವ್ಯದ ವಸ್ತುವಲ್ಲ ಎನ್ನುವುದನ್ನು ಹೇಳುವಂತೆ ಹೇಮಂತರ ಕಾವ್ಯದ ಮತ್ತೊಂದು ಬಹುಮುಖ್ಯ ಮಗ್ಗಲು ಎಂದರೆ ಬದುಕನ್ನು, ಬದುಕಿನ ಘಟ್ಟಗಳನ್ನು, ಸನ್ನಿವೇಶಗಳನ್ನು ಭಿನ್ನವಾಗಿ ನೋಡಲೆತ್ನಿಸುವ ಕ್ರಮ ವಿಶೇಷವೆನ್ನಿಸುತ್ತದೆ..

ನಮಿಸಲಿ ನಾ ಯಾರಿಗೆ, ನನಗೂ ಮೊಲೆಗಳ ಕೊಡು ದೇವರೇ, ಮಳೆಗಾಲದ ಮುಂಜಾನೆ, ಮಗಳು, ಬೆಂಗಳೂರು ನೋಡಿದಾಗಲೆಲ್ಲಾ, ನಾವು ಕೆ.ಇ.ಬಿಯವರು, ಮಗಳಿಗೊಂದಷ್ಟು ಮಾತು- ಈ ಕವಿತೆಗಳು ಹೇಮಂತ್ ಅವರನ್ನು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ಸೂಚನೆಯನ್ನು ಕೊಟ್ಟು ನಂಬಿಕೆಯನ್ನು ಹುಟ್ಟಿಸುತ್ತದೆ.

ನಾಲ್ಕನೆಯದಾಗಿ, ಈ ಸಂಕಲನದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ನಾವುಗಳು ನೋಡುತ್ತಿರುವ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದ, ಇಲ್ಲಿನ ಬಡವರು-ಜನಸಾಮಾನ್ಯರು-ತಳ ಸಮುದಾಯಗಳ ಮೇಲಿನ ಹಿಂಸೆ, ದೌರ್ಜನ್ಯ, ಅನ್ಯಾಯಗಳ ಕೃತ್ಯಗಳನ್ನು ಖಂಡಿಸುತ್ತಲೇ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದದ ಅಮಾನವೀಯತೆಯ ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡುತ್ತಾರೆ. ಇವು ಮೇಲ್ನೋಟಕ್ಕೆ ಬಂಡಾಯ ಕವಿತೆಗಳಂತೆ ಕಂಡರೂ ಬಂಡಾಯದ ರೋಷ, ಆವೇಶಗಳು ಈ ಕವಿತೆಗಳಲ್ಲಿ ಇಲ್ಲ. ಇಲ್ಲಿ ಕಾರುಣ್ಯ, ವಿಷಾದ, ಅರ್ತತೆಯೆ ಸ್ಥಾಯಿಗುಣಗಳಾಗಿವೆ.

ಕಡೆಯದಾಗಿ, ಹೇಮಂತ್ ಈ ಸಂಕಲನದಲ್ಲಿ ಎರಡು ಕವಿತೆಗಳನ್ನು ಅನುವಾದಿಸಿದ್ದಾರೆ. ಆಫ್ರಿಕಾ ಮೂಲದ ಬರಹಗಾರ ಚಿನುವಾ ಅಚಿಬೆಯ ಒಂದು ಕವಿತೆ. ಅಕಾವ್ಯವನ್ನು ಕಾವ್ಯ ಜಗತ್ತಿಗೆ ಪರಿಚಯಿಸಿದ ನೆರೂಡನ ಒಂದು ಕವಿತೆ. ಎರಡೂ ಭಿನ್ನ ವಿಚಾರಗಳ ಕವಿತೆಗಳು. ಇವು ಕನ್ನಡದವೇ ಎಂಬಂತೆ ಅನುವಾದಗೊಂಡಿವೆ. ಹೇಮಂತ್ ಉತ್ತಮ ಅನುವಾದಕರೂ ಆಗಬಹುದು ಎಂಬ ಸೂಚನೆಗಳು ಈ ಅನುವಾದದಲ್ಲಿ ಕಾಣಬಹುದು.

ಕಾವ್ಯ ಮುಲಾಜಿನಿಂದ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಕಾವ್ಯದ ಬಗ್ಗೆ ಮಾತನಾಡುವಾಗ, ಬರೆಯುವಾಗಲೂ ಕೂಡ ಮುಲಾಜಿಗೆ ಒಳಗಾಗಿ ಮಾತನಾಡಬಾರದು ಎನ್ನುವ ಎಚ್ಚರ ನನ್ನನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಕವಿ ಹೇಮಂತ್ ಅವರ ಈ ಸಂಕಲನದಲ್ಲಿ ಟೆಕ್ನಿಕಲ್ ದೃಷ್ಟಿಯಿಂದ ಕವಿತೆ ಪರವಾಗಿಲ್ಲ ಅನ್ನಿಸಿದರೂ ಆಶಯದ ದೃಷ್ಟಿಯಿಂದ ಕೆಲವು ಕೆಟ್ಟ ಪದ್ಯಗಳೂ ಇವೆ. ಉದಾಹರಣೆಗೆ ಗಂಡಿನ ಮನೋಧರ್ಮವನ್ನು ಢಾಳಾಗಿ ಕಾಣಿಸುವ ’ನಿವೇದನೆ’ ಕವಿತೆ. ಇಂತಹ ಕವಿತೆಗಳನ್ನು ಹೇಮಂತ್ ಬರೆಯದಿದ್ದರೆ ಒಳ್ಳೆಯದು. ಹಾಗೆಯೇ ’ದೇಶಪ್ರೇಮ’ ಎಂಬ ಚುಟುಕು ಪದ್ಯ.

ಈ ಮಿತಿಯ ನಡುವೆಯೂ ಹಲವು ಉತ್ತಮ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟಿರುವ ಹೇಮಂತ್‌ಗೆ ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ಸಂಕಲನದಲ್ಲಿ ಇನ್ನಷ್ಟು ಉತ್ತಮ ಕವಿತೆಗಳನ್ನು ಕೊಡುವಂತಾಗಲಿ ಎಂದು ಆಶಿಸುತ್ತೇನೆ.

ಎಚ್ ಎಸ್ ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...