Homeಅಂಕಣಗಳುಗೌರಿ ಲಂಕೇಶ್‍ರ ಮರುಹುಟ್ಟಿನ ತಯಾರಿಯ ಮೊದಲ ಹಂತ ಮುಗಿಸಿ... ನಿಮ್ಮೊಡನೆ ಎರಡು ಮಾತು

ಗೌರಿ ಲಂಕೇಶ್‍ರ ಮರುಹುಟ್ಟಿನ ತಯಾರಿಯ ಮೊದಲ ಹಂತ ಮುಗಿಸಿ… ನಿಮ್ಮೊಡನೆ ಎರಡು ಮಾತು

- Advertisement -
- Advertisement -

ನಿಯತಕಾಲಿಕ ಪತ್ರಿಕೆಗಳ ಯುಗ ಮುಗಿದು ಹೋಗಿದೆಯಾ? ಅದರಲ್ಲೂ ಟ್ಯಾಬ್ಲಾಯ್ಡ್‍ಗಳು ನಡೆಯುವುದಿಲ್ಲವಾ? ಈ ಚರ್ಚೆ ಗೌರಿ ಲಂಕೇಶ್ ಪತ್ರಿಕಾ ಕಚೇರಿಯಲ್ಲಿ ವರ್ಷಕ್ಕೊಂದು ಬಾರಿಯಾದರೂ ನಡೆದಿತ್ತು. ಒಂದು ಲಕ್ಷದಷ್ಟು ಪ್ರಸಾರ ಹೊಂದಿದ್ದ ಪತ್ರಿಕೆಗಳೂ ಈಗ ಏದುಸಿರು ಬಿಡುತ್ತಿವೆ ಎಂಬ ವರ್ತಮಾನ ಮೊದಮೊದಲು ಆಶ್ಚರ್ಯ ತರುತ್ತಿದ್ದವು. ‘ಬೇರೇನೋ’ ಉದ್ದೇಶ ಅಥವಾ ‘ಬೇರೆ ರೀತಿಯ’ ಆದಾಯ ಇದ್ದವರು ಮಾತ್ರ ಟ್ಯಾಬ್ಲಾಯ್ಡ್ ತರಲು ಸಾಧ್ಯ ಎಂಬ ಕನ್‍ಕ್ಲೂಷನ್ ಗಾಬರಿ ತರುವ ಹೊತ್ತಿಗೆ, ಗೌರಿಯವರ ಪತ್ರಿಕೆ ಉಳಿಸಿಕೊಳ್ಳಲು ಗೈಡ್ ಪತ್ರಿಕೆಯನ್ನು ಆರಂಭಿಸಬೇಕಾಗಿ ಬಂದಿತು. ಗೈಡ್ ಪ್ರಕಾಶನವೂ ಆರಂಭವಾಗಿ ಇನ್ನೊಂದಷ್ಟು ಚೈತನ್ಯ ತಂದಿತು. ಲಂಕೇಶ್ ಪ್ರಕಾಶನ ಯಾವತ್ತೂ ಕೈಬಿಡಲಿಲ್ಲ.
ಇಷ್ಟೆಲ್ಲಾ ಇದ್ದರೂ, ಅಂತಿಮವಾಗಿ ಎಷ್ಟು ಜನರಿಗೆ ಪತ್ರಿಕೆ ತಲುಪುತ್ತಿದೆ ಎಂಬುದು ಯಾರಿಗೂ ಸಮಾಧಾನ ತಂದಿರಲಿಲ್ಲ; ಆರ್ಥಿಕ ನಿಭಾವಣೆಯೂ ಸುಲಭದ್ದಾಗಿರಲಿಲ್ಲ. ಹೀಗಾಗಿ ಪತ್ರಿಕೆಯ ಗುಣಮಟ್ಟದಲ್ಲೂ ದೊಡ್ಡ ಚೇತರಿಕೆ ಬರಲಿಲ್ಲ. ಅದೊಂಥರಾ ಕೋಳಿ ಮೊದಲೋ ಮೊಟ್ಟೆ ಮೊದಲೋ ಕಥೆಯಾಗಿತ್ತು. ಇನ್ನೂ ಬಹಳ ಚೆನ್ನಾಗಿ ತರಬೇಕೆಂದರೆ, ಹೆಚ್ಚಿನ ಹಣ ಹೂಡಿಕೆ ಮಾಡಬೇಕು. ಹೆಚ್ಚಿನ ಹಣ ಹೂಡಿಕೆ ಮಾಡಬೇಕೆಂದರೆ, ಪತ್ರಿಕೆ ಇನ್ನೂ ಚೆನ್ನಾಗಿ ಬರಬೇಕು. ಅದಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ ‘ಚೆನ್ನಾಗಿ’ ಬಂದರೂ ಕೊಂಡು ಓದುವವರಿದ್ದಾರಾ ಎಂಬುದು.
ಅಂತರ್ಜಾಲದಲ್ಲೇ ಬೇಕಾದಷ್ಟು ಸಿಗುತ್ತದೆ; ಅಂತರ್ಜಾಲವೂ ಸುಲಭಕ್ಕೆ ಸಿಗುತ್ತದೆ. ಆದರೆ, ಅಲ್ಲಿಯೂ ಅಂತರ್ಜಾಲದಲ್ಲಿ ನೋಡುಗರ ಸಂಖ್ಯೆಗೆ ಅನುಗುಣವಾಗಿ ದಕ್ಕುವ ಜಾಹೀರಾತಿನಿಂದ ಮಾಧ್ಯಮ ಸಂಸ್ಥೆ ಸ್ವಾವಲಂಬಿಯಾಗಿ ನಡೆಯುವುದು ಕಷ್ಟ. ಅದೇನೇ ಆದರೂ, ವೆಬ್ ಮ್ಯಾಗಝೀನೇ ಭವಿಷ್ಯದ ಮಾಧ್ಯಮ ಎಂಬುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಹೀಗಿದ್ದರೂ 2019ರ ಮಧ್ಯಭಾಗದವರೆಗೆ ಪತ್ರಿಕೆಯನ್ನು ನಿಲ್ಲಿಸುವುದು ಬೇಡ ಎಂದು ಗೌರಿ ಮೇಡಂ ಇದ್ದಾಗಲೇ ನಡೆದ ಚರ್ಚೆಯ ಅಂತಿಮ ತೀರ್ಮಾನವಾಗಿತ್ತು. ಅಲ್ಲಿಯವರೆಗೂ ಮುದ್ರಿತ ಪತ್ರಿಕೆಯನ್ನು ನಡೆಸುವುದು, ನಂತರ ಸೂಕ್ತವಾದ ಮಾಧ್ಯಮಕ್ಕೆ ರೂಪಾಂತರ ಹೊಂದುವುದರ ಬಗ್ಗೆ ಬಳಗದ ಎಲ್ಲರಿಗೂ ಸಹಮತವಿತ್ತು. ಈ ಚರ್ಚೆಗಳೆಲ್ಲಾ ನಡೆದದ್ದು ಬಹುಶಃ 2017ರ ಜೂನ್, ಜುಲೈನಲ್ಲಿ.
ಆ ದಿಕ್ಕಿನಲ್ಲಿ ಕೆಲಸ ಶುರು ಮಾಡುವ ಹೊತ್ತಿಗೆ ದುರಂತ ನಡೆದು ಹೋಯಿತು. ಕ್ಯಾಪ್ಟನ್ ಇಲ್ಲವಾದರು. ತಾವು ನಂಬಿದ ಧ್ಯೇಯಕ್ಕೆ ಬದ್ಧರಾಗಿ ದುಡಿಯುವ ಹಾದಿಯಲ್ಲಿ ಅವರು ಹುತಾತ್ಮರಾದರು. ಆಘಾತ, ಆಕ್ರೋಶ, ತೀರದ ದುಃಖಗಳ ನಡುವೆಯೇ ಪತ್ರಿಕೆ ನಿಲ್ಲಿಸಬಾರದು ಎಂಬ ಚರ್ಚೆ ರಾಜರಾಜೇಶ್ವರಿನಗರದ ಮನೆಯ ಮುಂದೆಯೇ ನಡೆಯಿತು. ಮರುದಿನವೇ ಬರಬೇಕಿದ್ದ ಪತ್ರಿಕೆಯನ್ನು ರೂಪಿಸಲು ಕಚೇರಿಯನ್ನು ಬಳಸುವುದು ಸಾಧ್ಯವಿರಲಿಲ್ಲ. ಅದಾಗಲೇ ಪೊಲೀಸರ ವಶದಲ್ಲಿತ್ತು. ಸೆಪ್ಟೆಂಬರ್ 12ರ ‘ನಾನು ಗೌರಿ’ ಸಮಾವೇಶದಲ್ಲಿ ಸಂಪಾದಕರ ಫೋಟೋವನ್ನೇ ಮುಖಪುಟವಾಗಿಸಿಕೊಂಡು ‘ನನ್ನ ದನಿ ಅಡಗುವುದಿಲ್ಲ’ವೆಂಬ ಸಂದೇಶ ಹೊತ್ತ ಗೌರಿ ನೆನಪಿನ ಸಂಚಿಕೆ ಹೊರಬಂದಿತು.
ಅಲ್ಲಿಂದ ಮುಂದೆ ಹಲವು ಎಡರುತೊಡರುಗಳು. ಗೌರಿ ಸ್ಮಾರಕ ಟ್ರಸ್ಟ್ ರಚನೆ, ಪತ್ರಿಕೆ ತರಲಿಕ್ಕಾಗಿ ಮೀಡಿಯಾ ಟ್ರಸ್ಟ್ ರಚನೆ, ಆರ್‍ಎನ್‍ಐ ನೋಂದಣಿ ಪಡೆಯಲು ದೀರ್ಘವಾದ ಪ್ರಕ್ರಿಯೆ, ಒಂದು ರೀತಿಯಲ್ಲಿ ನಿರೀಕ್ಷಿತ ರೀತಿಯಲ್ಲಿ ಟೈಟಲ್ ನಿರಾಕರಣೆ …….. ಹೀಗೆ. ಆರ್‍ಎನ್‍ಐ ಸಮಸ್ಯೆ ಬಗೆಹರಿಸಿಕೊಳ್ಳಲು ಗಮನ ಕೊಡುತ್ತಲೇ ವೆಬ್ ಎಡಿಷನ್ ಆರಂಭಿಸುವುದೆಂದು ತೀರ್ಮಾನವಾಯಿತು. ಅಷ್ಟು ಹೊತ್ತಿಗೆ ವಾರ್ಷಿಕ ಚಂದಾ ಕೊಡಲು ಹಲವರು ಮುಂದೆ ಬಂದಿದ್ದರಿಂದಲೂ ಟ್ರಸ್ಟ್‍ನ ಅಧ್ಯಕ್ಷರು ಖಾಸಗಿ ಪ್ರಸಾರದ ಪತ್ರಿಕೆ ತರಬೇಕೆಂದು ಸೂಚಿಸಿದ್ದರಿಂದಲೂ, ಮುದ್ರಿತ ಪತ್ರಿಕೆಯನ್ನೂ ತರುವುದೆಂದು ನಿರ್ಧರಿಸಲಾಯಿತು.
ಇದುವರೆಗೆ 11 ಸಂಚಿಕೆಗಳು ಮುಗಿದು, 12ನೇ ಸಂಚಿಕೆ ನಿಮ್ಮ ಕೈಯ್ಯಲ್ಲಿದೆ. ಒಂದು ರೀತಿಯಲ್ಲಿ ಇವೆಲ್ಲವೂ ಮುಂದೆ ದೊಡ್ಡ ಪ್ರಮಾಣದಲ್ಲಿ ರೀ ಲಾಂಚ್ ಮಾಡಲು ನಡೆಸುತ್ತಿರುವ ತಯಾರಿ. ಪತ್ರಿಕೆಯ ಸ್ವರೂಪ, ಹೂರಣ, ಧೋರಣೆ, ಭಾಷೆಯನ್ನು ರೂಪಿಸಿಕೊಳ್ಳುವುದು ಮತ್ತು ವಾರದ ಡೆಡ್‍ಲೈನ್‍ಗೆ ಸರಿಯಾಗಿ ಪತ್ರಿಕೆಯ ಎಲ್ಲಾ ಪುಟಗಳ ಬರವಣಿಗೆ, ಟೈಪಿಂಗ್, ಡಿಸೈನ್ ಮುಗಿಸಿ ಮುದ್ರಣಕ್ಕೆ ಕಳಿಸುವುದು… ಇದರ ತಾಲೀಮು ನಡೆಯುತ್ತಿದೆ.
‘ಬಹಳ ಚೆನ್ನಾಗಿ ಬರುತ್ತಿದೆ’ ಎಂಬ ಅಭಿಪ್ರಾಯದಿಂದ ಹಿಡಿದು ‘ತುಂಬಾ ಅಕ್ಯಾಡೆಮಿಕ್ ಎನಿಸುತ್ತದೆ’ ಎನ್ನುವವರೆಗೆ, ‘ಪೊಲಿಟಿಕ್ಸ್ ಜಾಸ್ತಿ ಆಯಿತು’ ಎಂಬಲ್ಲಿಂದ, ‘ಇಷ್ಟೊಂದು ಪೊಲಿಟಿಕ್ಸ್ ಬೇಕಾ?’ ಎಂಬವರೆಗೆ ಭಿನ್ನವಾದ ಅಭಿಪ್ರಾಯಗಳು ಬಂದಿವೆ. ಖಾಸಗಿ ಪ್ರಸಾರದ ಪತ್ರಿಕೆಯಾದ್ದರಿಂದ ಸದ್ಯಕ್ಕೆ ಸ್ಟಾಂಡ್ ಮಾರಾಟ ಸಾಧ್ಯವಿಲ್ಲ; ಆದರೆ ಪೋಸ್ಟ್‍ನಲ್ಲಿ (ಪೋಸ್ಟಲ್ ರಿಯಾಯಿತಿಯೂ ಇಲ್ಲದೇ) ಕಳಿಸಿದ್ದು ತಲುಪುತ್ತಿಲ್ಲ ಎಂಬ ದೂರು ಇದೆ. ಇವೆಲ್ಲವೂ ಹಿಂದಿನಿಂದಲೂ ಇದ್ದಂಥದ್ದೇ.
ಮಾರುಕಟ್ಟೆಯ ಅಧ್ಯಯನ ಹೇಳುವುದೇ ಬೇರೆ. ಈಗ ಡಜನ್‍ಗಟ್ಟಲೆ ಸುದ್ದಿ ಚಾನೆಲ್‍ಗಳಿವೆ. ಅಲ್ಲದೆ ದಿನಪತ್ರಿಕೆಗಳೇ ಟ್ಯಾಬ್ಲಾಯ್ಡ್ ರೀತಿಯ ಶೈಲಿಯಲ್ಲಿ ಬರತೊಡಗಿದ ಮೇಲೆ ಎಲ್ಲಾ ಟ್ಯಾಬ್ಲಾಯ್ಡ್‍ಗಳ ಪ್ರಸಾರವೂ ಕಡಿಮೆಯಾಗುತ್ತಾ ಸಾಗಿದೆ. ಇದೀಗ (ನಮ್ಮ ಮ್ಯಾನೇಜರ್ ಪ್ರಕಾರ – ಟಿವಿ ಸೀರಿಯಲ್‍ಗಳು ಹೆಚ್ಚಾದ ಮೇಲೆ) ಕೌಟುಂಬಿಕ ನಿಯತಕಾಲಿಕಗಳ ಪ್ರಸಾರವೂ ಗಣನೀಯವಾಗಿ ಇಳಿದುಹೋಗಿದೆ. ಏನು ಬೇಕೋ ಎಲ್ಲವೂ ಅವರವರ ಸ್ಮಾರ್ಟ್ ಫೋನ್‍ನಲ್ಲೇ ಲಭ್ಯ. ಹೀಗೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪತ್ರಿಕೆಯನ್ನು ಜನಪ್ರಿಯಗೊಳಿಸಬೇಕೆಂದರೆ ಪತ್ರಿಕೆಯ ಸ್ವರೂಪ, ಹೂರಣ, ಧೋರಣೆ, ಭಾಷೆ ಏನಿರಬೇಕು ಎಂಬ ಕುರಿತು ಓದುಗರಾದ ಮತ್ತು ಗೌರಿಯವರ ಬಳಗದ ಭಾಗವೂ ಆದ ನಿಮ್ಮನ್ನೇ ಕೇಳಬೇಕೆಂದುಕೊಂಡಿದ್ದೇವೆ.
ಸದ್ಯದಲ್ಲೇ ಈ ಪತ್ರಿಕೆಯು ಪೂರ್ಣ ಪ್ರಮಾಣದಲ್ಲಿ ರೀಲಾಂಚ್ ಆಗಲಿದೆ. ಇಷ್ಟು ದಿನಗಳ ಅನುಭವದಿಂದ ನಮಗೂ (ಪತ್ರಿಕೆಯ ತಂಡಕ್ಕೂ) ಕೆಲವು ಅಭಿಪ್ರಾಯಗಳಿವೆ. ಆದರೆ, ಹೊಸ ಪತ್ರಿಕೆ/ವೆಬ್ ಮ್ಯಾಗಜೀನ್ ನಮ್ಮೆಲ್ಲರದ್ದೂ ಆಗಿದೆ. ಗೌರಿಯವರ ಆಶಯವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಬಯಸುವ ಎಲ್ಲರದ್ದೂ.. ಹಾಗಾಗಿ ಇದನ್ನು ರೂಪಿಸುವುದರಲ್ಲಿ ಹಾಗೂ ಮುಂದಕ್ಕೊಯ್ಯುವುದರಲ್ಲಿ ನಾವೆಲ್ಲರೂ ಜೊತೆಯಾಗಬೇಕು. ನಿಮಗೆ ಪತ್ರಿಕೆ ಹೇಗೆ ಬಂದರೆ ಚೆನ್ನ ಅನಿಸುತ್ತದೆ ಎಂಬುದನ್ನೂ ತಿಳಿಸಿ, ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಬೇಕೆಂದರೆ ಏನು ಮಾಡಬೇಕೆಂಬುದನ್ನೂ ತಿಳಿಸಿ.
ನಮ್ಮ ಕಚೇರಿಯ ವಿಳಾಸಕ್ಕೆ (ಕಡೆಯ ಪುಟದ ಕೆಳಭಾಗದಲ್ಲಿ ಲಭ್ಯ) ಪತ್ರ ಬರೆಯಬಹುದು, 9880302817 ಈ ನಂಬರ್‍ಗೆ ವಾಟ್ಸಾಪ್ ಮಾಡಬಹುದು, ಇಲ್ಲವೇ ನಮ್ಮ ಫೇಸ್‍ಬುಕ್ ಪುಟ ‘Naanu Gauri magazine ನಾನು ಗೌರಿ ಪತ್ರಿಕೆ’ಯಲ್ಲಿ ತಿಳಿಸಬಹುದು ಅಥವಾ [email protected] ಗೆ ಇ-ಮೇಲ್ ಸಹಾ ಮಾಡಬಹುದು. ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿರುತ್ತೇವೆ.

– ಸಂಪಾದಕ ಮಂಡಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...