Homeಕರ್ನಾಟಕಗೌರಿ ಹತ್ಯೆ ಪ್ರಕರಣ : ಮೂವರು ಆರೋಪಿಗಳ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಗೌರಿ ಹತ್ಯೆ ಪ್ರಕರಣ : ಮೂವರು ಆರೋಪಿಗಳ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

- Advertisement -
- Advertisement -

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಐದನೇ ಆರೋಪಿ ಅಮಿತ್‌ ದಿಗ್ವೇಕರ್‌, ಏಳನೇ ಆರೋಪಿ ಸುರೇಶ್‌ ಹೆಚ್‌.ಎಲ್‌ ಮತ್ತು 17ನೇ ಆರೋಪಿ ಕೆ.ಟಿ ನವೀನ್‌ ಕುಮಾರ್‌ ಸಲ್ಲಿಸಿರುವ ಪ್ರತ್ಯೇಕ ಜಾಮೀನು ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್‌ ಶೆಟ್ಟಿ ಅವರ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.

ಪ್ರಕರಣದ 11ನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುವುದು ಎಲ್ಲಾ ಅರ್ಜಿದಾರರ ವಾದವಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಾಸಿಕ್ಯೂಷನ್‌ “ಮೋಹನ್‌ ನಾಯಕ್‌ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠ ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು” ಎಂದಿದೆ.

“ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್‌ ನಾಯಕ್‌ ಆಗಿದ್ದು, ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಅದು ವಿಚಾರಣೆಗೆ ಬಾಕಿಯಿದೆ” ಎಂದು ತಿಳಿಸಿದೆ.

ಆರೋಪಿ ಅಮಿತ್‌ ದಿಗ್ವೇಕರ್‌ ಪ್ರತಿನಿಧಿಸಿದ್ದ ವಕೀಲ ಬಸವರಾಜ ಸಪ್ಪಣ್ಣವರ್‌ ಅವರು “ಒಂದನೇ ಆರೋಪಿ ಅಮೋಲ್‌ ಕಾಳೆಯ ಸ್ವಯಂ ಹೇಳಿಕೆ ಆಧರಿಸಿ ಅಮಿತ್‌ನನ್ನು ಬಂಧಿಸಲಾಗಿದೆ. ಇಡೀ ಪ್ರಕರಣದಲ್ಲಿ ಅಮಿತ್‌ ಮೇಲಿರುವ ಏಕೈಕ ಆರೋಪ ಹಣಕಾಸಿನ ನೆರವು ನೀಡಿರುವುದು. ಅವರು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಅಮಿತ್‌ರಿಂದ ಆಧಾರ್‌ ಕಾರ್ಡ್‌, ಗುರುತಿನ ಚೀಟಿ, ಬಸ್‌ ಟಿಕೆಟ್‌ ಜಪ್ತಿ ಮಾಡಲಾಗಿದೆ. ಬೇರೆ ಏನೂ ಮಾಡಿಲ್ಲ. 2018ರ ಮೇ 21ರಿಂದ ಜೈಲಿನಲ್ಲಿದ್ದಾರೆ. 11ನೇ ಆರೋಪಿ ಮೋಹನ್‌ ನಾಯಕ್‌ಗೆ ನೀಡಿರುವಂತೆ ಅಮಿತ್‌ಗೂ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಆರೋಪಿ ಕೆ.ಟಿ ನವೀನ್‌ ಕುಮಾರ್‌ನನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ಅವರು “13ನೇ ಆರೋಪಿ ಸುಜಿತ್‌ ಜೊತೆ ನವೀನ್‌ ಕುಮಾರ್‌ ಪಾರ್ಕ್‌ನಲ್ಲಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ನವೀನ್‌ನಿಂದ ಸಿಮ್‌ ಕಾರ್ಡ್‌ ವಶಪಡಿಸಲಾಗಿದೆ ಎಂದು ಹೇಳಲಾಗಿದೆ. ಸಿಮ್‌ ಕಾರ್ಡ್‌ ನೀಡಿದ ವ್ಯಕ್ತಿಯ ಹೆಸರು ನವೀನ್‌ ಕುಮಾರ್‌ ಆಗಿದ್ದು, ಅವರು ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ” ಎಂದರು.

ಮುಂದುವರಿದು, “ಮೊದಲಿಗೆ ಕೆ.ಟಿ ನವೀನ್‌ ಕುಮಾರ್‌ ಮೊದಲ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಮಾಡಲಾಗಿತ್ತು. ಎರಡನೇ ಆರೋಪ ಪಟ್ಟಿಯಲ್ಲಿ 17ನೇ ಆರೋಪಿ ಮಾಡಲಾಗಿದೆ. ಸಕಾರಣವಿಲ್ಲದೇ ನವೀನ್‌ನನ್ನು ಬದಿಗೆ ಸರಿಸಲಾಗಿದೆ. ಮೆಜೆಸ್ಟಿಕ್‌ನಲ್ಲಿ ಸಜೀವ ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೊದಲಿಗೆ ನವೀನ್‌ನನ್ನು ಬಂಧಿಸಲಾಗುತ್ತದೆ. ಈ ಸಂಬಂಧ ಉಪ್ಪಾರ ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿತ್ತು. ನವೀನ್‌ ವಿರುದ್ಧದ ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಾಗಿದೆ” ಎಂದು ವಿವರಿಸಿದರು.

“2020ರ ಜನವರಿ 10ರಂದು ಮೊದಲ ಜಾಮೀನು ಅರ್ಜಿ ವಜಾಗೊಂಡಿದೆ. ನಾಲ್ಕು ವರ್ಷಗಳ ಬಳಿಕ ಜಾಮೀನು ಕೋರುತ್ತಿದ್ದೇನೆ. ಆರೋಪ ನಿಗದಿಗೂ ಮುನ್ನ ಮತ್ತು ಮೂರನೇ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಜಾಮೀನು ಕೋರಿದ್ದೆ. ಮೋಹನ್‌ ನಾಯಕ್‌ಗೆ ಜಾಮೀನು ನೀಡಿರುವುದನ್ನು ಪರಿಗಣಿಸಿ, ಪರಿಸ್ಥಿತಿ ಬದಲಾಗಿರುವುದರಿಂದ ಜಾಮೀನು ನೀಡಬೇಕು. ಒಟ್ಟಾರೆ, 527 ಸಾಕ್ಷ್ಯಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 2022ರ ಜುಲೈ 11ರಂದು ವಿಚಾರಣೆ ಆರಂಭವಾಗಿದ್ದು, ಎರಡು ವರ್ಷದಲ್ಲಿ 130 ಸಾಕ್ಷಿ ಮಾತ್ರ ವಿಚಾರಣೆ ನಡೆಸಲಾಗಿದೆ. ಆರೋಪಿಯು ಆರು ವರ್ಷದಿಂದ ಜೈಲಿನಲ್ಲಿದ್ದಾರೆ. ಆರೋಗ್ಯದ ಕಾರಣ ನೀಡಿ ಹಿಂದೆ ಜಾಮೀನು ಕೋರಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನ್ಯಾಯಾಲಯ ಅನುಮತಿಸಿತ್ತು” ಎಂದರು.

“ಇನ್ನೊಬ್ಬ ಆರೋಪಿ ಸುರೇಶ್‌ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ “15ನೇ ಆರೋಪಿ ವಿಕಾಸ್‌ ಪಾಟೀಲ್‌ಗೆ ಗೌರಿ ಲಂಕೇಶ್‌ ಅವರ ವಿಳಾಸ ಪತ್ತೆ ಮಾಡಿಕೊಡಿಕೊಟ್ಟಿರುವ, ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ನೆರವಾಗಿರುವ ಆರೋಪ ಸುರೇಶ್‌ ಮೇಲಿದೆ. 2017ರ ಜುಲೈನಲ್ಲಿ ಸೀಗೆಹಳ್ಳಿ ಗೇಟ್‌ ಸಮೀಪ ಮನೆ ಬಾಡಿಗೆ ಪಡೆದು ಶಸ್ತ್ರಾಸ್ತ್ರ ಸಂಗ್ರಹ ಮಾಡಿರುವುದು ಮತ್ತು ಗೌರಿಯವರನ್ನು ಕೊಲ್ಲಲು ಶೂಟಿಂಗ್‌ ರಿಹರ್ಸಲ್‌ ನಡೆಸಲು ಬೈಕ್‌ ನೀಡಿದ್ದ ಆರೋಪ ಮಾಡಲಾಗಿದೆ. ಅಮೋಲ್‌ ಕಾಳೆ ಮತ್ತು ವಿಕಾಸ್‌ ಪಾಟೀಲ್‌ ಬೈಕ್‌ ರಿಹರ್ಸಲ್‌ ಮಾಡಿದ್ದಾರೆ. ಇಲ್ಲಿ ಸುರೇಶ್‌ ಪಾತ್ರವಿಲ್ಲ. ಸಾಕ್ಷ್ಯ ನಾಶ ಮಾಡಿದ ಗಂಭೀರ ಆರೋಪ ಮಾಡಲಾಗಿದೆ. ಇತರೆ ಆರೋಪಿಗಳಿಗೆ ವಾಸಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಅಪರಾಧ ನಡೆಯುವಾಗ ಸುರೇಶ್‌ ಹೆರೂರಿನಲ್ಲಿದ್ದರು. ಅಪರಾಧದಲ್ಲಿ ಭಾಗಿಯಾಗಿರುವುದಕ್ಕೆ ಪೂರಕವಾಗಿ ಇದುವರೆಗೆ ವಿಚಾರಣೆ ನಡೆಸಿರುವ ಯಾರೂ ಸಾಕ್ಷ್ಯ ನುಡಿದಿಲ್ಲ” ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯಕ್‌ “ಮೋಹನ್‌ ನಾಯಕ್‌ ವಿರುದ್ಧದ ಕೊಲೆ ಮತ್ತು ಪಿತೂರಿಗೆ ಸಾಕ್ಷಿ ಇದೆ ಎಂದು ಹೈಕೋರ್ಟ್‌ನ ಬೇರೊಂದು ಪೀಠವು (ನ್ಯಾ. ಬಿ ಎ ಪಾಟೀಲ್) ಜಾಮೀನು ತಿರಸ್ಕರಿಸಿದೆ. ತಾವು ಮೋಹನ್‌ ನಾಯಕ್‌ಗೆ ಜಾಮೀನು ಮಂಜೂರು ಮಾಡಿರುವ ‌ ಆದೇಶವನ್ನು ಹಾಲಿ ಜಾಮೀನು ಅರ್ಜಿಗಳಿಗೆ ಅನ್ವಯಿಸಬಾರದು. ಮೋಹನ್‌ ನಾಯಕ್‌ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆಗೆ ಬಾಕಿ ಇದೆ” ಎಂದರು.

ಮುಂದುವರಿದು, “ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಆರೋಪ ಮುಕ್ತಿ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಅವುಗಳನ್ನು ಪ್ರಶ್ನಿಸಲಾಗಿಲ್ಲ. ಗೌರಿ ಹತ್ಯೆ ಪ್ರಕರಣದಲ್ಲಿ ಅಪಾರ ಸಾಕ್ಷ್ಯವಿದೆ. ಇದೊಂದು ಹೀನ ಕೃತ್ಯವಾಗಿದ್ದು, ಅಪರಾಧದ ಗಂಭೀರತೆಯನ್ನು ಪರಿಗಣಿಸಬೇಕು. ಇದೊಂದು ಅಂತಾರಾಜ್ಯ ಸಿಂಡಿಕೇಟ್‌ ಆಗಿದ್ದು, ಆರೋಪಿಗಳು ಸುದೀರ್ಘವಾಗಿ ಜೈಲಿನಲ್ಲಿದ್ದಾರೆ ಎಂಬುವುದು ಜಾಮೀನಿಗೆ ಮಾನದಂಡವಾಗಬಾರದು” ಎಂದು ಹೇಳಿದರು.

“ಗೌರಿ ಹತ್ಯೆ ಕೊಲೆ ಮಾಡಿರುವ ಇಡೀ ಸಿಂಡಿಕೇಟ್‌ ಒಂದಲ್ಲಾ ಒಂದು ರೀತಿಯಲ್ಲಿ ಎಂ.ಎಂ ಕಲಬುರ್ಗಿ, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್‌ ಕೊಲೆಯಲ್ಲೂ ಭಾಗಿಯಾಗಿದೆ. ಇದೇ ಸಿಂಡಿಕೇಟ್‌ ಅದರಲ್ಲೂ ಅರ್ಜಿದಾರರಾಗಿರುವ ಅಮಿತ್‌ ಮತ್ತು ನವೀನ್‌ ಕುಮಾರ್‌ ಪ್ರೊ. ಭಗವಾನ್‌ ಅವರನ್ನು ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್‌ ಅವರು ಪಾರಾಗಿದ್ದಾರೆ” ಎಂದರು.

“ಮಡಿಕೇರಿ, ಬೆಳಗಾವಿ, ಮಂಗಳೂರಿನಲ್ಲಿ ಈ ಸಿಂಡಿಕೇಟ್‌ ಸಭೆ ನಡೆಸಿದೆ. ನಿಡುಮಾಮಿಡಿ ಸ್ವಾಮೀಜಿ, ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌ ಮತ್ತು ಪ್ರೊ. ಭಗವಾನ್‌ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ. ಅರ್ಜಿದಾರ ಸುರೇಶ್‌ ಮನೆಯಲ್ಲಿ ಆರೋಪಿಗಳು ಉಳಿದುಕೊಳ್ಳಲು ಅವರ ಪತ್ನಿಯನ್ನು ತವರಿಗೆ ಕಳುಹಿಸುತ್ತಾರೆ. ಕೊಲೆ ಉದ್ದೇಶ ಮನೆಯವರಿಗೆ ಗೊತ್ತಾಗುತ್ತದೆ ಎಂದು ಅವರನ್ನು ಕಳುಹಿಸಲಾಗಿತ್ತೇ ವಿನಃ, ಅವರು ಹಬ್ಬಕ್ಕೆ ಹೋಗಿರಲಿಲ್ಲ. ಸೆಪ್ಟೆಂಬರ್‌ 5ರಂದು ಗೌರಿ ಕೊಲೆಯಾದ ಬಳಿಕ ಆರೋಪಿಗಳು ಸುರೇಶ್‌ ಮನೆ ಖಾಲಿ ಮಾಡುತ್ತಾರೆ” ಎಂದರು ವಿವರಿಸಿದರು.

ವಾದ ಪ್ರತಿ ವಾದಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿತು.

ಕೃಪೆ : ಬಾರ್ & ಬೆಂಚ್

ಇದನ್ನೂ ಓದಿ : ಸಿಎಂ ಭೇಟಿಯಾದ ರೇಣುಕಸ್ವಾಮಿ ಪೋಷಕರು; ಮೃತನ ಪತ್ನಿಗೆ ಕೆಲಸ ಕೊಡಿಸುವಂತೆ ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...