| ನಾನುಗೌರಿ ಡೆಸ್ಕ್ |
ಗುರುಗ್ರಾಮದ ಹಲ್ಲೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದ ಗೌತಮ್ ಗಂಭೀರ್ ವಿರುದ್ಧ ಬಿಜೆಪಿ ಹಿಂಬಾಲಕರು ಟ್ವಿಟ್ಟರ್ನಲ್ಲಿ ಆಕ್ರೋಶದಿಂದ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ನೀನೊಂದು ದೊಡ್ಡ ವಿಪತ್ತು ಆಗುವ ನಿಟ್ಟಿನಲ್ಲಿದ್ದೀಯ, ಬಾಯಿ ಮುಚ್ಚಿಕೊಂಡಿರು. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾದಾಗ ಏಕೆ ಟ್ವೀಟ್ ಮಾಡಿಲ್ಲ ಎಂದು ಜಸುಮತಿ ಪಟೇಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿಯವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೇಳಿಕೆ ನೀಡಿದ್ದು ಮುಸ್ಲಿಮರ ತುಷ್ಟೀಕರಣ ಮಾಡಲು ಅಲ್ಲ. ನಾನ್ಸೆನ್ಸ್ ಹೇಳಿಕೆಗಳನ್ನು ಕೊಡುವ ಮುನ್ನ ಸಂದರ್ಭವನ್ನು ಸರಿಯಾಗಿ ಅರಿತುಕೋ ಎಂದು ಲಿಲ್ಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಅಮೇಥಿಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾದಾಗ ನೀನು ಟ್ವೀಟ್ ಮಾಡಲಿಲ್ಲ, ಈ ಪ್ರಕರಣದಲ್ಲಿ ಮಾತ್ರ ಶೀಘ್ರವೇ ಟ್ವೀಟ್ ಮಾಡುತ್ತೀರಿ. ನಿಮ್ಮ ಹತ್ತಿರದ ಜಿಹಾದಿ ಜಾವೇದ್ ಅಕ್ತರ್ ಅನ್ನು ಕೇಳಿದ್ದೀರಾ? ಇದರಿಂದ ಸಾಮಾಜಿಕ ಜಾಲಾತಾಣದಲ್ಲಿ ನರೇಂದ್ರ ಮೋದಿಯವರಿಗಿರುವ ಬೆಂಬಲವನ್ನು ಏಕೆ ಹಾಳು ಮಾಡುತ್ತೀರಿ? ಎಂದು ರಿತುರವರು ಹೇಳಿದ್ದಾರೆ.
ಡಾ. ವೀರೇಂದ್ರ ಎಂಬುವವರು, ನೀನೊಂದು ದೊಡ್ಡ ನಿರಾಶೆ. ಪಕ್ಷದ ಸಿದ್ಧಾಂತದ ಬಗ್ಗೆ ಯಾವುದೇ ಜ್ಞಾನವಿಲ್ಲದ ಸೆಲೆಬ್ರೆಟಿಗಳಿಗೆ ಮಣೆಹಾಕುವ ಮೊದಲು ಬಿಜೆಪಿ 10 ಸಾರಿ ಯೋಚಿಸಬೇಕು ಎಂದು ಮನೋಜ್ ತಿವಾರಿಯವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಘಟನೆಯ ಹಿನ್ನೆಲೆ:
ಹರ್ಯಾಣದ ಗುರುಗ್ರಾಮದಲ್ಲಿ ಮೂರು ದಿನಗಳ ಕೆಳಗೆ ಮುಸ್ಲಿಮ್ ಯುವಕನಿಗೆ ಆತ ಮುಸ್ಲಿಂ ಎಂಬ ಕಾರಣಕ್ಕೆ, ಟೋಪಿ ತೆಗಿ ಎಂದೂ, ಜೈ ಶ್ರೀರಾಮ್ ಎಂದು ಕೂಗು ಎಂದು ಪೀಡಿಸಿದ್ದಲ್ಲದೇ ಪುಂಡ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ದೇಶದಲ್ಲಿ ಬಿಜೆಪಿ ಮತ್ತೆ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಈ ರೀತಿಯ ಗುಂಪು ಹಲ್ಲೆ ಘಟನೆ ನಡೆದಿದ್ದು, ಬಹಳಷ್ಟು ಜನ ಕಳವಳ ವ್ಯಕ್ತಪಡಿಸಿ ಘಟನೆಯನ್ನು ಖಂಡಿಸಿದ್ದರು.
ಗಂಭೀರ್ ಹೇಳಿದ್ದೇನು?
ಬಿಜೆಪಿಯಿಂದ ಪೂರ್ವದೆಹಲಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಗೌತಮ್ ಗಂಭೀರ್ ಈ ಘಟನೆಯನ್ನು ಕಟುವಾಗಿ ಟೀಕಿಸಿದ್ದರು. ಇವರು ಟ್ವಿಟ್ಟರ್ನಲ್ಲಿ “ಗುರುಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯ ಟೋಪಿ ತೆಗಿಸಿ, ಜೈ ಶ್ರೀರಾಂ ಎಂದು ಬಲವಂತವಾಗಿ ಹೇಳಿಸಿರುವುದು ಹೇಯ ಕೃತ್ಯ. ಗುರುಗ್ರಾಮದ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮದು ಜಾತ್ಯಾತೀತ ದೇಶ. ಇಲ್ಲಿ ಜಾವೇದ್ ಅಕ್ತರ್ ‘ಓ ಪಾಲನ್ ಆರೆ, ನಿರ್ಗುಣ್ ಔರ್ ನ್ಯಾರೇ’ ಎಂಬ ಪ್ರಾರ್ಥನೆ ಬರೆದರೆ, ರಾಕೇಸ್ ಓಂ ಪ್ರಕಾಶ್ ಮೆಹ್ತಾ ಡೆಲ್ಲಿ 6 ಎಂಬ ಚಿತ್ರದಲ್ಲಿ ‘ಅಜಿರ್ಃಯಾ’ ಹಾಡು ಕೊಟ್ಟಂತಹ ದೇಶವಿದು” ಎಂದು ಬರೆದಿದ್ದರು.
“In Gurugram Muslim man told to remove skullcap,chant Jai Shri Ram”.
It is deplorable. Exemplary action needed by Gurugram authorities. We are a secular nation where @Javedakhtarjadu writes “ओ पालन हारे, निर्गुण और न्यारे” & @RakeyshOmMehra gave us d song “अर्ज़ियाँ” in Delhi 6.— Gautam Gambhir (@GautamGambhir) May 27, 2019
ಅಷ್ಟು ಮಾತ್ರವಲ್ಲದೇ ಮತ್ತೊಂದು ಟ್ವೀಟ್ನಲ್ಲಿ ಗಂಭೀರ್ “ಗುರುಗ್ರಾಮದ ಘಟನೆಗೆ ಸೀಮಿತವಾಗಿ ನಾನಿದನ್ನು ಹೇಳುತ್ತಿಲ್ಲ, ನನ್ನ ಜಾತ್ಯಾತೀತತೆಯು ಮಾನ್ಯ ಪ್ರಧಾನಿ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದರ ತಿರುಳಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ ನಡೆಸುವುದು ಖಂಡನೀಯ. ಸಹಿಷ್ಣುತೆ ಮತ್ತು ಎಲ್ಲರನ್ನು ಒಳಗೊಂಡ ಅಭಿವೃದ್ದಿಯ ಆಧಾರದಲ್ಲಿ ಭಾರತದ ಮೌಲ್ಯ ನಿಂತಿದೆ” ಎಂದು ಸಹ ತಿಳಿಸಿದ್ದರು.
My thoughts on secularism emanate from honourable PM Mr Modi’s mantra “सबका साथ, सबका विकास, सब का विश्वास”. I am not limiting myself to Gurugram incident alone, any oppression based on caste/religion is deplorable. Tolerance & inclusive growth is what idea of India is based on.
— Gautam Gambhir (@GautamGambhir) May 27, 2019
ಇವರೆಡೂ ಟ್ವೀಟ್ಗಳಿಗಾಗಿ ನಿಜಕ್ಕೂ ಗೌತಮ್ ಗಂಭೀರ್ರವರನ್ನು ಅಭಿನಂದಿಸಬೇಕು. ಇಂದಿನ ಭಾರತಕ್ಕೆ ಈ ಆಶಯ ತುಂಬಾ ಒಳ್ಳೆಯದು. ಆದರೆ ಗೌತಮ್ ಮಾತ್ರವಲ್ಲ ನಮ್ಮ ದೇಶದ ಪ್ರಧಾನಿಯೇ ಸಂದರ್ಭಕ್ಕೆ ತಕ್ಕಂತ ಹೇಳಿಕೆ ಕೊಡುವುದರಲ್ಲಿ ನಿಸ್ಸೀಮರು. ಈ ಹಿಂದೆ ಗಂಭೀರ್ ಪಾಕಿಸ್ತಾನದ ವಿರುದ್ಧವಾಗಿ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದರು ಮಾತ್ರವಲ್ಲ, ದೇಶಭಕ್ತಿ, ಸೇನೆ ಮುಂತಾದವರು ಸುತ್ತಲೇ ಸುತ್ತುತ್ತಿದ್ದರು. ಪಾಕಿಸ್ತಾನದೊಂದಿಗೆ ಭಾರತ ಕಿಕೆಟ್ ಆಡಬಾರದೆಂದು ಸಹ ಹೇಳಿದ್ದರು. 2002ರಲ್ಲಿ ಗುಜರಾತ್ನಲ್ಲಿ ಮುಸ್ಲಿಂರ ಮಾರಣಹೋಮಕ್ಕೆ ಕಾರಣದಾಗ ಮೋದಿ ಇಂದು ಅಲ್ಪಸಂಖ್ಯಾತರನ್ನು ನಾವು ಜೊತೆಯಲ್ಲಿ ಕರೆದೊಯ್ಯಬೇಕೆಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈಗ ಅಸಲಿ ವಿಷಯಕ್ಕೆ ಬರುವುದಾದರೆ ಗಂಭೀರ್ ಟ್ವೀಟ್ಗಳಿಗೆ ಸ್ವತಃ ಬಿಜೆಪಿಯೇ ಭಯಬಿದ್ದಿದೆ. ನಮ್ಮ ಪಕ್ಷದ ವಿರುದ್ಧವೇ ಮಾತಾಡುವಷ್ಟು ಧೈರ್ಯವೇ ಈತನಿಗೆ ಎಂದು ಕ್ರೋಧಗೊಂಡಿದೆ. ತಾನೀಗ ಕ್ರಿಕೆಟರ್ ಅಲ್ಲ ಎಂಬುದನ್ನು ಗಂಭೀರ್ ನೆನಪಿಡಬೇಕು, ಆತನಾಡುವ ಮಾತುಗಳು ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿರುತ್ತವೆ ಮಾತ್ರವಲ್ಲ ವಿಪಕ್ಷಗಳು ನಮ್ಮ ಮೇಲೆ ಮುಗಿಬೀಳಲು ಆಧಾರವಾಗುತ್ತವೆ ಎಂದು ದೆಹಲಿಯ ಹಿರಿಯ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳಾದಾಗ ಮಾತಾಡದೇ ಈಗ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆದಾಗ, ಅದರಲ್ಲೂ ಬಿಜೆಪಿ ಕಾರ್ಯಕರ್ತರೆ ಹಲ್ಲೆ ಮಾಡಿದ್ದಾರೆ ಎಂಬ ಅನುಮಾನಗಳಿದ್ದಾಗ ಗಂಭೀರ್ ಹೀಗೆ ಮಾತಾಡುವುದು ಪಕ್ಷಕ್ಕೆ ವಿರುದ್ಧ ಎಂದು ಬಿಜೆಪಿ ಮುಖಂಡರು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಂದರೆ ತಪ್ಪನ್ನು ಬಿಜೆಪಿಯವರು ಮಾಡಿದರೆ ಸರಿ, ಬೇರೆ ಪಕ್ಷದವರು ಮಾಡಿದರೆ ತಪ್ಪು ಎನ್ನುವ ಸರ್ವಾಧಿಕಾರಿ ಧೋರಣೆಯಲ್ಲಿ ಬಿಜೆಪಿಯವರು ಮಾತಾಡುತ್ತಿರುವುದು ಈ ದೇಶ ಎತ್ತ ಸಾಗುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.
‘ಇನ್ನು ಟ್ವಿಟ್ಟರ್ನಲ್ಲಿನ ವಿಷಕಾರಿ ಹೇಳಿಕೆಗಳನ್ನು ಗಮನಿಸಿದರೆ ಈ ದೇಶದ ಹಲವಾರು ಜನ ಅಲ್ಪಸಂಖ್ಯಾತರು, ದಲಿತರ ಮೇಲೆ ಕೆಟ್ಟ ಅಭಿಪ್ರಾಯ ಹೊಂದಿದ್ದಾರೆ. ಹೊಡಿ ಬಡಿ ರೀತಿಯಲ್ಲಿಯೇ ಮಾತನಾಡಿ ಮುಸ್ಲಿಂರ ಮೇಲಿನ ಹಲ್ಲೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಗಂಭೀರ್ ಥರದ ನಾಯಕರೆ ಅದನ್ನು ನಿಲ್ಲಿಸಿ ಎಂದರೂ ಕೇಳದೇ ಅವರನ್ನೇ ತರಾಟೆಗೆ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅಂದರೆ ಉನ್ಮಾದದ ಮನಸ್ಥಿತಿ ತಲುಪಿರುವ ಇವರು ಮುಂದೆ ಯಾವ ನಾಯಕರ ಮಾತನ್ನು ಕೇಳದೇ ದೇಶದಲ್ಲಿ ದೊಂಬಿ, ಗದ್ದಲ, ಅರಾಜಕತೆ ಉಂಟು ಮಾಡುವುದರಲ್ಲಿ ಸಂದೇಹವಿಲ್ಲ. ಅದನ್ನು ತಡೆದು ಪ್ರೀತಿ-ವಿಶ್ವಾಸದ, ಶಾಂತಿಯ ನಾಡನ್ನಾಗಿ ಪರಿವರ್ತಿಸಬೇಕಾದ ಜವಾಬ್ದಾರಿ ಪ್ರಜ್ಞಾವಂತರ ಮೇಲಿದೆ.’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸರೋವರ್ ಹೇಳುತ್ತಾರೆ.
ಹೊಡಿ ಬಡಿ ಯಲ್ಲಿ ವಿಶ್ವಾಸ ಇದ್ದವರಿಗೆ ಅದೇ ರೀತಿ ಉತ್ತರ ಕೊಟ್ಟರೆ ಸರಿಯಾಗುತ್ತಾರೆ