ಭಾರತ ಸರ್ಕಾರ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಪ್ರಾಧಾನ್ಯತೆಯನ್ನೇ ನೀಡುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯ ನಮ್ಮ ಮುಂದಿರುವ ತಕ್ಷಣದ ಆತಂಕವಾಗಿದೆ. ಭಾರತದಲ್ಲಿ ವೈದ್ಯಕೀಯ ವ್ಯವಸ್ಥೆಯ ಪರಿಸ್ಥಿತಿ ಸುಧಾರಿಸಬೇಕು. ಸರ್ಕಾರದ ತಪ್ಪಿನಿಂದಾಗಿ ವೈದ್ಯಕೀಯ ಸಿಬ್ಬಂದಿ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಸ್ಟಿಸ್ N.V.ರಮಣ ನಿನ್ನೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಡಯಾಬಿಟೀಸ್ ವಿರುದ್ಧದ ಹೈದರಾಬಾದ್ ಸಂಸ್ಥೆಯ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧೀನ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಚಿಸಬೇಕು. ಜುಲೈ 1 ರಂದು ವೈದ್ಯರ ದಿನಾಚರಣೆಯನ್ನು ಆಚರಿಸುವ ಮತ್ತು ಶುಭಾಷಯ ಕೋರುವುದಕ್ಕೆ ಆಗ ಅರ್ಥ ಬರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನಿನ್ನೆ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತದ ವೈದ್ಯಕೀಯ ಬಿಕ್ಕಟ್ಟಿನ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು ವೈದ್ಯಕೀಯ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ದರ್ಜೆಗೆ ಏರಿಸುವ ಅಗತ್ಯ ಈ ದಿನದ ತುರ್ತು ಎಂದರು.
ಕಾರ್ಯನಿರತ ವೈದ್ಯರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಕ್ರೂರ ದಾಳಿಗಳಿಗೆ ಗುರಿಯಾಗುತ್ತಿದ್ದಾರೆ. ವ್ಯವಸ್ಥೆಯ ವೈಫಲ್ಯಕ್ಕೆ ವೈದ್ಯರನ್ನು ಹೊಣೆ ಮಾಡುತ್ತಿರುವುದು ದೇಶದ ಅತ್ಯಂತ ದುರದೃಷ್ಟಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಗತ್ಯ ಪ್ರಮಾಣದ ವೈದ್ಯರ ಕೊರತೆ, ಮೂಲಭೂತ ಸೌಕರ್ಯಗಳ ಅಲಭ್ಯತೆ, ಔಷಧಗಳ ಕೊರತೆ, ತಂತ್ರಜ್ಞಾನದಲ್ಲಿನ ಹಿನ್ನಡೆ ಮತ್ತು ವೈದ್ಯಕೀಯ ವ್ಯವಸ್ಥೆಯೆಡೆಗೆ ಸರ್ಕಾರದ ನಿರ್ಲಕ್ಷ್ಯ ದೇಶದ ಮುಂದಿರುವ ತುರ್ತು ಆತಂಕಗಳಾಗಿವೆ. ಕುಟುಂಬ ವೈದ್ಯರ ಸಂಸ್ಕೃತಿ ಪದ್ಧತಿ ನಾಶವಾಗುತ್ತಿದ್ದು ಕಾರ್ಪೊರೇಟರ್ಗಳು ಮತ್ತು ಉದ್ಯಮಿಗಳ ಲಾಭಕೋರತನಕ್ಕೆ ವ್ಯದ್ಯರ ಮೇಲೆ ಅಪವಾದವನ್ನು ಹೊರಿಸುವ ಮನಸ್ಥಿತಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ : ಕೇರಳದ ಪ್ರಯಾಣಿಕರಿಗೆ ರಾಜ್ಯದ ನಿರ್ಬಂಧ – ಕರ್ನಾಟಕ ಪ್ರವೇಶಿಸುವುದು ಹೇಗೆ? ಇಲ್ಲಿದೆ ಮಾಹಿತಿ!