ಬಿಜೆಪಿ ನಾಯಕರ ಮತ್ತು ಅವರ ಬೆಂಬಲಿಗರ ಮೇಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಗಂಭಿರ ಸ್ವರೂಪದ ಹಲವು ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಕಾನೂನು ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸರಕಾರಿ ವ್ಯಾಜ್ಯಗಲ ಇಲಾಖೆಯ ಅಭಿಪ್ರಾಯವನ್ನು ಕಡೆಗಣಿಸಿ ಅರಣ್ಯ ಸಚಿವ ಆನಂದ್ ಸಿಂಗ್, ಸಂಸದ ಪ್ರತಾಪ್ ಸಿಂಹ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ ನೆಹರು ಓಲೆಕಾರ್ ಸೇರಿದಂತೆ ಇತರ ಬಿಜೆಪಿ ನಾಯಕರು ಮತ್ತು ಬೆಂಬಲಿಗರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು. “ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಮಾತ್ರ ವಾಪಸ್ ಪಡೆಯಲಾಗುತ್ತಿದೆ. ಆದರೆ, ಯಾವುದೇ ವೈಯಕ್ತಿಕ ಪ್ರಕರಣಗಳನ್ನು ಹಿಂಪಡೆಯಲಾಗುವುದಿಲ್ಲ ಎಂದು ಸ್ವತಃ ಕಾನೂನು ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ವಿವಾದಾತ್ಮಕ ವಿಡಿಯೋ: ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ʼಎಲ್ಲಾ ಕೇಸು ತೆಗೆದು ಹಾಕುತ್ತೇವೆʼ ಎಂದ ಗೃಹ ಸಚಿವರು!
ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ರವಿಕುಮಾರ್ ನಾನುಗೌರಿ.ಕಾಂನೊಂದಿಗೆ ಮಾತನಾಡಿ, “ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ವಿವಿಧ ಸಂದರ್ಭಗಳಲ್ಲಿ, ರೈತರ ಪರ, ಸಾರ್ವಜನಿಕರ ಪರ ಹೋರಾಟ ಮಾಡಿರುವ ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವ ಅಧಿಕಾರ ಸರ್ಕಾರಕ್ಕಿದೆ. ಹಾಗಾಗಿ ಇಂತಹ ಕೆಲವು ಹೋರಾಟಗಳಲ್ಲಿ ಭಾಗಿಯಾಗಿರುವವರ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಎಸ್ ಡಿ ಪಿ ಐ ಅಂತಹ ಸಂಘಟನೆಯ ವಿರುದ್ಧದ ಸುಮಾರು 175 ಪ್ರಕರಣಗಳನ್ನು ಹಿಂಪಡೆದಿತ್ತು. ನಾವು ಅಂತಹ ಪ್ರಕರಣಗಳನ್ನು ಹಿಂಪಡೆದಿಲ್ಲವಲ್ಲ” ಎಂದು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಎಸ್ ಡಿ ಪಿ ಐ ಮುಖಂಡರಾದ ಇಲ್ಯಾಸ್ ತುಂಬೆ ಮಾತನಾಡಿ, “ವಿ ಹೆಚ್ ಪಿಯ ಶರಣ್ ಪಂಪ್ ವೆಲ್ ಗೆ ‘ನಿಮ್ಮ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುತ್ತೇವೆ’ ಎಂದು ಭರವಸೆ ನೀಡಿದ್ದಾಗಲೇ ಇದರ ಬಗ್ಗೆ ಗೃಹಸಚಿವರು ಮುನ್ಸೂಚನೆಯನ್ನು ನೀಡಿದ್ದರು. ರಾಜ್ಯ ಸರ್ಕಾರದ ಈ ಅನೀತಿಯನ್ನ ಪ್ರಶ್ನಿಸಿ ನಾವು ನಿನ್ನೆಯೇ ಪತ್ರಿಕಾ ಸುದ್ಧಿಗೋಷ್ಟಿಯೊಂದನ್ನು ಏರ್ಪಡಿಸಿದ್ದೆವು. ಜನಪರ ಹೋರಾಟಗಾರರ ಪ್ರಕರಣಗಳನ್ನು ಅದರ ಸದುದ್ದೇಶದ ಆಧಾರದ ಮೇಲೆ ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆದರೆ ಈ ನೆಪದಲ್ಲಿ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುತ್ತಿರುವುದು ನಿಜಕ್ಕೂ ಖಂಡನೀಯ” ಎಂದು ಹೇಳಿದರು.
“ಬಿಜೆಪಿ ನಾಯಕರ ಮತ್ತು ಶಾಸಕರ ಗುರುತರವಾದ ಕ್ರಿಮಿನಲ್ ಕೃತ್ಯಗಳನ್ನು ಒಳಗೊಂಡಂತೆ 62 ಕೇಸುಗಳನ್ನು ರದ್ದುಗೊಳಿಸಲು ತನ್ನ ಸಂಪುಟ ಸಭೆಯಲ್ಲಿ ನಿರ್ಧರಿಸುವ ಮೂಲಕ ಕ್ರಿಮಿನಲ್ ಹಾಗೂ ಕೋಮುಗಲಭೆಯ ಕಿಡಿಗೇಡಿಗಳನ್ನು ರಕ್ಷಿಸುತ್ತಿದೆ. ಇಂತಹ ಸರಕಾರದಿಂದ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ನೆಲೆಸಲು ಹೇಗೆ ಸಾಧ್ಯ? ಕುರಿಗಳ ವೇಷದಲ್ಲಿ ತೋಳಗಳು ರಾಜ್ಯವನ್ನು ಆಳಿದಂತಾಗಿದೆ” ಎಂದು ಎಸ್.ಡಿ.ಪಿ.ಐ ರಾಜ್ಯಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಸ್ ಡಿ ಪಿ ಐ ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆದಿತ್ತು ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, “ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಸಂಘಟನೆಯ ಕೇವಲ 3 ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗಿತ್ತು. ಅದೂ ಈ ಪ್ರಕರಣಗಳಲ್ಲಿ ನಮ್ಮ ಸಂಘಟನೆಯ ಕೇವಲ 4-5 ಜನ ಕಾರ್ಯಕರ್ತರು ಭಾಗಿಯಾಗಿದ್ದರು. ಅದಾಗ್ಯೂ ಶ್ರೀರಾಮಸೇನೆಯ 10 ಪ್ರಕರಣಗಳನ್ನೂ ಕಾಂಗ್ರೆಸ್ ಸರ್ಕಾರವೇ ಹಿಂಪಡೆಯಲಾಗಿತ್ತು” ಎಂದು ಹೇಳಿದರು.
“ಪರೇಶ್ ಮೇಸ್ತಾ ಕೊಲೆ ಪ್ರಕರಣದ ಗಲಭೆಯಲ್ಲಿ ಕಾರವಾರದಲ್ಲಿ ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಿದ ಘಟನೆ ಹಾಗೂ ಐಜಿಪಿ ಕಾರ್ ಚಾಲಕನಿಗೆ ಅವರ ಎದುರಲ್ಲೇ ಥಳಿಸಿದ ಘಟನೆಯ ಸಂಘಪರಿವಾರದ ಆರೋಪಿಗಳ ಕೇಸುಗಳನ್ನು ಬಿಜೆಪಿ ಸರಕಾರ ವಾಪಸ್ ಪಡೆದುಕೊಂಡಿತ್ತು. ದ್ವೇಷ ರಾಜಕಾರಣ, ಕೋಮು ವಿಭಜನೆಯ ಮೂಲಕವೇ ಅಧಿಕಾರಕ್ಕೇರಿದ ಬಿಜೆಪಿ ಅಧಿಕಾರವನ್ನು ಉಳಿಸಲು ಎಂತಹ ನಿಕೃಷ್ಟತೆಗೂ ತಲುಪಲು ಹೇಸದು ಎಂದು ಇದರಿಂದ ಸಾಬೀತಾಗುತ್ತಿದೆ. ಇಂತಹ ಸರಕಾರದ ವಿರುದ್ಧ ರಾಜ್ಯದ ಜನತೆ ಎಚ್ಚೆತ್ತು ಕೊಳ್ಳಬೇಕು. ಇದರ ವಿರುದ್ಧ ನಾವು ಪ್ರತಿಭಟನಾತ್ಮಕ ಹೋರಾಟ ಮತ್ತು ಕಾನೂನಾತ್ಮಕ ಹೋರಾಟಗಳನ್ನೂ ಮಾಡುತ್ತೇವೆ. ಇದನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತೇವೆ” ಎಂದು ಇಲ್ಯಾಸ್ ತುಂಬೆ ಹೇಳಿದ್ದಾರೆ.
ಸರ್ಕಾರದ ಈ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ನಟರಾಜ್ ಗೌಡ, “ಸಾಮಾನ್ಯವಾಗಿ ಜನಪರ, ರೈತರ ಹಕ್ಕುಗಳಿಗಾಗಿ, ಕನ್ನಡಪರ, ಪರಿಸರ, ನೆಲ-ಜಲ-ಭಾಷೆಗಾಗಿ ಹೋರಾಟಗಳನ್ನು ಮಾಡಿದವರ ವಿರುದ್ಧ ಕೆಲವು ಪ್ರಕರಣಗಳನ್ನು ಕೈಬಿಡುವುದು ಸರ್ಕಾರದ ಅಧಿಕಾರದಲ್ಲಿರುತ್ತದೆ. ಈ ಅಧಿಕಾರವನ್ನು, ಇನ್ನೂ ಇತ್ಯರ್ಥವಾಗದೇ ಉಳಿದಿರುವ ರೈತರ, ಕನ್ನಡಪರ ಹೊರಾಟಗಾರರ ಪ್ರಕರಣಗಳನ್ನು ಹಿಂಪಡೆಯಲು ಉಪಯೋಗಿಸದೇ ಇಂತಹ ನೀಚ ಕೆಲಸಕ್ಕೆ ಮುಂದಾಗಿರುವ ಈ ಲಜ್ಜೆಗೇಡಿತನದ ಸರ್ಕಾರ ಈಗ ಗಂಭಿರ ಸ್ವರೂಪದ ಪ್ರಕರಣಗಳನ್ನು ಕೈಬಿಡುವುದರ ಮೂಲಕ ಜನರ ಮುಂದೆ ಬೆತ್ತಲಾಗಿದೆ. ಸರ್ಕಾರದ ಈ ನಿರ್ಧಾರ ಈಗ ಜನತಾ ನ್ಯಾಯಾಲಯದಲ್ಲಿದೆ. ಜನರೇ ಇವರಿಗೆ ಸರಿಯಾದ ತೀರ್ಪನ್ನು ನೀಡುತ್ತಾರೆ” ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಸ್ ಡಿ ಪಿ ಐ ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆದಿತ್ತು ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, “ರವಿಕುಮಾರ್ ಒಬ್ಬ ಅಲ್ಪಮತಿ. ನಮ್ಮ ಸರ್ಕಾರ ಏನು ಮಾಡಿದೆಯೋ ಅದು ದಾಖಲೆಗಳಲ್ಲಿದೆ. ಯಾರು ಬೇಕಾದರೂ ಪರಿಶೀಲಿಸಬಹುದು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ಇಂತಹ ಸುಳ್ಳುಗಳನ್ನು ಹೇಳುತ್ತಲೇ ಇದೆ. ಇದು ಹೊಸದೇನಲ್ಲ. ಇವರು ಇಂತಹ ಗಂಭೀರ ಪ್ರಕರಣಗಳನ್ನು ಕೈಬಿಟ್ಟಿರುವುದು ಮೊದಲನೆಯ ತಪ್ಪು. ಎರಡನೆಯದಾಗಿ, ಅದನ್ನು ಮುಚ್ಚಿಹಾಕಲು ಸುಳ್ಳು ಹೇಳುತ್ತಿರುವುದು ಇನ್ನೊಂದು ತಪ್ಪು” ಎಂದು ಹೇಳಿದರು.
ಇದನ್ನೂ ಓದಿ: #ResignBSBommai; ರಾಜ್ಯ ಗೃಹಸಚಿವ ರಾಜಿನಾಮೆ ನೀಡುವಂತೆ ಟ್ವಿಟ್ಟರ್ ಟ್ರೆಂಡ್