ಆಲ್ವಾಡಾ (ಬನಸ್ಕಾಂತ): ದಶಕಗಳ ಕಾಲದ ಜಾತಿ ಆಧಾರಿತ ತಾರತಮ್ಯಕ್ಕೆ ತೆರೆ ಎಳೆದ ಐತಿಹಾಸಿಕ ಘಟನೆಯೊಂದಕ್ಕೆ ಗುಜರಾತ್ನ ಬನಸ್ಕಾಂತ ಜಿಲ್ಲೆಯ ಆಲ್ವಾಡಾ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಕ್ಷೌರ ಮಾಡಿಸಿಕೊಳ್ಳಲು ಇದ್ದ ಅಲಿಖಿತ ನಿಷೇಧ ಕೊನೆಗೊಂಡಿದ್ದು, ಇದು ಸಾಮಾಜಿಕ ಸಮಾನತೆಯ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಬದಲಾವಣೆಯು ದಲಿತ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದ್ದು, ಗ್ರಾಮದ ಹಿರಿಯರು ಮತ್ತು ಆಡಳಿತದ ಸಹಕಾರದಿಂದ ಇದು ಸಾಧ್ಯವಾಗಿದೆ.
ಆಗಸ್ಟ್ 7, ಈ ಗ್ರಾಮದ ದಲಿತ ಸಮುದಾಯಕ್ಕೆ ಒಂದು ಹೊಸ ಶಕೆ ಆರಂಭವಾಯಿತು. 24 ವರ್ಷದ ಯುವ ಕೃಷಿ ಕಾರ್ಮಿಕ ಕೀರ್ತಿ ಚೌಹಾಣ್, ಗ್ರಾಮದ ಕ್ಷೌರದ ಅಂಗಡಿಯೊಂದಕ್ಕೆ ಕಾಲಿಟ್ಟ ಮೊದಲ ದಲಿತ ಎನಿಸಿಕೊಂಡರು. ಈ ಅಂಗಡಿಯ ಮಾಲೀಕ ಪಿಂಟು ನಾಯ್ ಅವರು ಯಾವುದೇ ತಾರತಮ್ಯವಿಲ್ಲದೆ ಕೀರ್ತಿಗೆ ಕ್ಷೌರ ಮಾಡಿದರು. ಇದುವರೆಗೆ ಕ್ಷೌರಕ್ಕಾಗಿ ಮೈಲಿಗಟ್ಟಲೆ ಪ್ರಯಾಣ ಮಾಡಬೇಕಿದ್ದ ದಲಿತರಿಗೆ ಇದು ಒಂದು ದೊಡ್ಡ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ಗ್ರಾಮದಲ್ಲಿರುವ ಎಲ್ಲಾ ಐದು ಕ್ಷೌರದ ಅಂಗಡಿಗಳು ಈಗ ಯಾವುದೇ ಜಾತಿ, ಭೇದವಿಲ್ಲದೆ ಎಲ್ಲರಿಗೂ ಸೇವೆ ನೀಡಲು ಮುಂದಾಗಿವೆ.
ಪೀಳಿಗೆಗಳ ದುಸ್ಥಿತಿ ಅಂತ್ಯ
ಆಲ್ವಾಡಾ ಗ್ರಾಮದಲ್ಲಿ ಸುಮಾರು 6,500 ಜನಸಂಖ್ಯೆ ಇದ್ದು, ಇದರಲ್ಲಿ 250ಕ್ಕೂ ಹೆಚ್ಚು ದಲಿತರು ವಾಸಿಸುತ್ತಿದ್ದಾರೆ. ಪೀಳಿಗೆಗಳಿಂದ, ಈ ಸಮುದಾಯವು ಕ್ಷೌರಕ್ಕಾಗಿ ನೆರೆಯ ಗ್ರಾಮಗಳಿಗೆ ಹೋಗಬೇಕಾಗಿತ್ತು. ಅಲ್ಲಿ ತಮ್ಮ ಜಾತಿಯನ್ನು ಬಹಿರಂಗಪಡಿಸದೆ ಸೇವೆ ಪಡೆಯುವ ಅನಿವಾರ್ಯತೆ ಇತ್ತು. ಇದು ಒಂದು ಮೂಲಭೂತ ಅಗತ್ಯಕ್ಕಾಗಿ ನಡೆಯುತ್ತಿದ್ದ ನೋವಿನ ಪ್ರಯಾಣ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
“24 ವರ್ಷಗಳಲ್ಲಿ ಮೊದಲ ಬಾರಿಗೆ, ನನ್ನ ಸ್ವಂತ ಗ್ರಾಮದಲ್ಲಿ, ನಾನು ನಿಜವಾಗಿಯೂ ಸ್ವತಂತ್ರ ಭಾವನೆ ಅನುಭವಿಸಿದ್ದೇನೆ. ಈ ಅನಿಸಿಕೆಯು ನನ್ನ ಬದುಕಿನಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.” ಎಂದು ಕೀರ್ತಿ ಚೌಹಾಣ್ ಭಾವನಾತ್ಮಕವಾಗಿ ಹೇಳಿದರು. “ನಾವು ಕ್ಷೌರ ಮಾಡಿಸಿಕೊಳ್ಳಲು ನಮ್ಮ ಗುರುತನ್ನು ಮರೆಮಾಚಬೇಕಿತ್ತು. ಈ ದಿನವನ್ನು ನಾವು ಎಂದಿಗೂ ಮರೆಯುವುದಿಲ್ಲ” ಎಂದಿದ್ದಾರೆ.
58 ವರ್ಷದ ಛೋಗಾಜಿ ಚೌಹಾಣ್ ಅವರ ಮಾತುಗಳು ಈ ತಾರತಮ್ಯದ ಆಳವನ್ನು ಬಿಚ್ಚಿಟ್ಟವು. “ನಮ್ಮ ತಂದೆಯವರು ಸ್ವಾತಂತ್ರ್ಯಕ್ಕೂ ಮುಂಚೆ ಇದೇ ರೀತಿ ತಾರತಮ್ಯ ಅನುಭವಿಸಿದ್ದರು. ನನ್ನ ಮಕ್ಕಳೂ ಕೂಡ ಸುಮಾರು ದಶಕಗಳ ಕಾಲ ಇದೇ ಪರಿಸ್ಥಿತಿ ಎದುರಿಸಿದರು. ಆದರೆ, ಈಗ ಈ ಪರಿಸ್ಥಿತಿ ಬದಲಾಗಿದೆ, ಇದು ನಮ್ಮ ಪೀಳಿಗೆಗೆ ಸಿಕ್ಕಿರುವ ದೊಡ್ಡ ಸಮಾಧಾನ” ಎಂದು ಅವರು ಹೇಳುತ್ತಾರೆ.
ನಿರ್ಣಾಯಕ ಪಾತ್ರ ವಹಿಸಿದ ಪೊಲೀಸ್
ಈ ಬದಲಾವಣೆಯ ಹಿಂದಿನ ಶಕ್ತಿ ಸ್ಥಳೀಯ ಕಾರ್ಯಕರ್ತ ಚೇತನ್ ದಾಭಿ. ಅವರ ನೇತೃತ್ವದಲ್ಲಿ ದಲಿತ ಸಮುದಾಯವು ಸುದೀರ್ಘ ಹೋರಾಟ ನಡೆಸಿತು. ಅವರು ಗ್ರಾಮದ ಮೇಲ್ಜಾತಿ ನಿವಾಸಿಗಳು ಮತ್ತು ಕ್ಷೌರಿಕರಿಗೆ ಈ ತಾರತಮ್ಯವು ಅಸಂವಿಧಾನಿಕ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಕೆಲವು ತಿಂಗಳ ಪ್ರಯತ್ನಗಳ ನಂತರವೂ ಹೋರಾಟ ಮುಂದುವರೆಯಿತು.
ಈ ಸಂದರ್ಭದಲ್ಲಿ, ಬನಸ್ಕಾಂತ ಜಿಲ್ಲಾಡಳಿತ ಮತ್ತು ಪೊಲೀಸರು ಮಧ್ಯಪ್ರವೇಶಿಸಿದ್ದು ನಿರ್ಣಾಯಕವಾಯಿತು. ಮಮ್ಲತದಾರ ಜನಕ್ ಮೆಹ್ತಾ ಅವರು ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸಾಮರಸ್ಯದ ಪರಿಹಾರಕ್ಕೆ ಒತ್ತಾಯಿಸಿದರು. “ತಾರತಮ್ಯದ ಕುರಿತು ದೂರುಗಳು ಬಂದ ಕೂಡಲೇ ನಾವು ಕಾರ್ಯಪ್ರವೃತ್ತರಾದೆವು. ಗ್ರಾಮದ ಹಿರಿಯರ ಸಹಕಾರದಿಂದ ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲಾಗಿದೆ” ಎಂದು ಮೆಹ್ತಾ ತಿಳಿಸಿದರು.
ಗ್ರಾಮದ ಸರಪಂಚ್ ಸುರೇಶ್ ಚೌಧರಿ ಕೂಡ ಈ ಬದಲಾವಣೆಯನ್ನು ಸ್ವಾಗತಿಸಿದರು. “ಈ ಹಿಂದಿನ ಪದ್ಧತಿಯ ಬಗ್ಗೆ ನನಗೆ ತೀವ್ರ ಅಪರಾಧ ಭಾವನೆ ಇತ್ತು. ನನ್ನ ಅವಧಿಯಲ್ಲಿ ಇದು ಅಂತ್ಯಗೊಂಡಿದ್ದಕ್ಕೆ ನನಗೆ ನಿಜಕ್ಕೂ ಹೆಮ್ಮೆ ಇದೆ” ಎಂದು ಅವರು ಹೇಳಿದರು.
ಕ್ಷೌರದ ಅಂಗಡಿಯ ಮಾಲೀಕ ಪಿಂಟು ನಾಯ್ ಅವರು, “ಹಿರಿಯರು ಹೇಳಿದಂತೆ ನಾವು ನಡೆದುಕೊಳ್ಳುತ್ತಿದ್ದೆವು. ಈಗ ಹಿರಿಯರು ಬದಲಾವಣೆಗೆ ಒಪ್ಪಿದ ನಂತರ ನಮ್ಮಿಂದ ಯಾವುದೇ ತಕರಾರಿಲ್ಲ. ಇದೀಗ ಎಲ್ಲರೂ ನಮ್ಮ ಗ್ರಾಹಕರು. ಇದು ನಮ್ಮ ವ್ಯಾಪಾರಕ್ಕೂ ಒಳ್ಳೆಯದಾಗಿದೆ” ಎಂದು ಹೇಳಿದರು.
ಬದಲಾವಣೆ, ಇನ್ನೂ ಉಳಿದಿರುವ ಸವಾಲುಗಳು
ಪಟಿದಾರ್ ಸಮುದಾಯದ ಪ್ರಮುಖರಾದ ಪ್ರಕಾಶ್ ಪಟೇಲ್ ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸಿದರು. ಈ ಕುರಿತು ಮಾತನಾಡಿದ ಅವರು, “ನನ್ನ ಕಿರಾಣಿ ಅಂಗಡಿಯಲ್ಲಿ ಎಲ್ಲರಿಗೂ ಸ್ವಾಗತವಿದೆ. ಹೀಗಿರುವಾಗ, ಕ್ಷೌರದ ಅಂಗಡಿಯಲ್ಲಿ ತಾರತಮ್ಯವೇಕೆ? ಈ ರೀತಿಯ ತಪ್ಪು ಪದ್ಧತಿ ಕೊನೆಗೊಂಡಿರುವುದು ಸಂತೋಷದ ವಿಷಯ” ಎಂದು ಹೇಳಿದ್ದಾರೆ. ಅವರ ಈ ಮಾತುಗಳು ಸಮಾನತೆ ಮತ್ತು ಎಲ್ಲರನ್ನು ಒಳಗೊಳ್ಳುವಿಕೆಯ ಸಂದೇಶವನ್ನು ಬಲವಾಗಿ ಪ್ರತಿಬಿಂಬಿಸುತ್ತವೆ.
ದಲಿತ ಸಮುದಾಯದವರು ಈ ಸಣ್ಣ ಬದಲಾವಣೆಯನ್ನು “ಚಿಕ್ಕ ಕಟ್, ದೊಡ್ಡ ಕ್ರಾಂತಿ” ಎಂದು ಬಣ್ಣಿಸುತ್ತಿದ್ದಾರೆ. ಇದು ಶತಮಾನಗಳಿಂದಲೂ ಇರುವ ತಾರತಮ್ಯದ ಗೋಡೆಗಳನ್ನು ಕೆಡವಲು ಇಟ್ಟ ಮೊದಲ ಮತ್ತು ಮಹತ್ವದ ಹೆಜ್ಜೆ ಎಂದು ಅವರು ಹೇಳುತ್ತಾರೆ.
ಆದರೂ, ದಲಿತ ರೈತ ಈಶ್ವರ್ ಚೌಹಾಣ್ ಅವರ ಪ್ರಕಾರ, ಪೂರ್ವಾಗ್ರಹವು ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ. “ಸಮುದಾಯದ ಹಬ್ಬಗಳಲ್ಲಿ ನಮಗೆ ಇನ್ನೂ ಪ್ರತ್ಯೇಕ ಆಸನಗಳನ್ನು ನೀಡಲಾಗುತ್ತದೆ. ಈ ಅಸಮಾನತೆಯೂ ಕೂಡ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ ಎಂದು ನಾವು ದೃಢವಾಗಿ ನಂಬಿದ್ದೇವೆ” ಎಂದು ಅವರು ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮಾತುಗಳು, ಸಮಾಜದಲ್ಲಿ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟವನ್ನು ಪ್ರತಿಬಿಂಬಿಸುತ್ತವೆ.
ಆಲ್ವಾಡಾ ಗ್ರಾಮದ ಈ ಘಟನೆ, ಭಾರತದ ಅನೇಕ ಹಳ್ಳಿಗಳಲ್ಲಿ ಇನ್ನೂ ಬೇರೂರಿರುವ ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದೆ. ಇದು ಕೇವಲ ಕ್ಷೌರದ ಹಕ್ಕುಗಳ ಬಗ್ಗೆ ಮಾತ್ರವಲ್ಲ, ಬದಲಾಗಿ ಎಲ್ಲರೂ ಸಮಾನರು ಎಂಬ ತತ್ವದ ಗೆಲುವಿನ ಸಂಕೇತವಾಗಿದೆ.
ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…


