Homeಕರ್ನಾಟಕಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

ಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

- Advertisement -
- Advertisement -

ಅತ್ತ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಇತ್ತ ದೂರದ ಕೊಪ್ಪಳ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ತುಂಬುವುದು ಎಲ್ಲರಿಗೂ ಖಾತ್ರಿಯಾಗಿ ಹೋಯಿತು. ಮಳೆ ಸುರಿಯುವ ಮೊದಲು ಜಲಾಶಯದಲ್ಲಿ ಬರೀ 32 ಟಿಎಂಸಿ ಅಡಿ ನೀರಿತ್ತು. ಒಂದೇ ವಾರದಲ್ಲಿ 100 ಟಿಎಂಸಿ ಅಡಿಗೆ ಬಂತು ನಿಂತಿತು. ಆದರೆ, ಮಲೆನಾಡಿನಲ್ಲಿ ಮಳೆ ಮಾತ್ರ ನಿಂತಿರಲಿಲ್ಲ. ಸುಮಾರು 2 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಲೇ ಇತ್ತು. ಜಲಾಶಯದ ಗೇಟುಗಳನ್ನು ತೆರೆದು ನದಿಗೆ ನೀರು ಬಿಡುವುದು ಅನಿವಾರ್ಯವಾಯಿತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಕೊಪ್ಪಳದ ಯುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಜಲಾಶಯದಿಂದ ಎರಡೂವರೆ-ಮೂರು ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟರೆ ಜಗತ್ಪ್ರಸಿದ್ಧ ವಿಶ್ವಪಾರಂಪರಿಕ ತಾಣವಾದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗುತ್ತವೆ ಹಾಗೂ ಹಂಪಿಯ ಪಕ್ಕದಲ್ಲಿರುವ ವಿರುಪಾಪುರ ನಡುಗಡ್ಡೆಯಲ್ಲಿನ ಜನ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂಬುದನ್ನು ಮೊದಲೇ ಊಹಿಸಿದ್ದರು. ಅದಕ್ಕಾಗಿಯೇ ಅವರು ಅತ್ತ ಜಲಾಶಯದ ನೀರಿನ ಮಟ್ಟ ಏರುತ್ತಿದ್ದಂತೆ ವಿರುಪಾಪುರ ನಡುಗಡ್ಡೆಯಿಂದ ಜನರನ್ನು ತೆರವುಗೊಳಿಸುವ ಸಿದ್ಧತೆ ಮಾಡಿಕೊಂಡರು. ಮೊದಲು ತನ್ನ ಅಧಿಕಾರಿಗಳನ್ನು ಕಳಿಸಿ ಪ್ರವಾಸಿಗರು ನಡುಗಡ್ಡೆಗೆ ಬರುವುದನ್ನು ತಡೆಯಲು ಪ್ರಯತ್ನಿಸಿದರು. ಡಂಗೂರ ಹೊಡೆಸಿ ನಡುಗಡ್ಡೆಯಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸಾರಿಸಿದರು. ಕೊನೆಗೆ ತಾವೇ ಖುದ್ದಾಗಿ ನಡುಗಡ್ಡೆಗೆ ಹೋಗಿ ಎಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಗಳನ್ನು ಮುಚ್ಚಬೇಕು ಎಂದು ಅವುಗಳ ಮಾಲಿಕರಿಗೆ ನಿರ್ದೇಶನ ಕೊಟ್ಟು ಬಂದರು. ಅಷ್ಟೇ ಅಲ್ಲದೇ, ಈ ನಿಟ್ಟಿನಲ್ಲಿ ಒಂದು ಅಧಿಕೃತ ಆದೇಶವನ್ನೂ ಹೊರಡಿಸಿದರು.

ಇಷ್ಟೆಲ್ಲಾ ಮಾಡಿದ ನಂತರವೂ ಆಗಿದ್ದೇನು ಗೊತ್ತೆ?

ವಿಶ್ವಪ್ರಸಿದ್ಧ ಹಂಪಿಗೆ ದೇಶವಿದೇಶಗಳಿಂದ ಹಲವು ಪ್ರವಾಸಿಗರು ಬರುತ್ತಾರೆ. ಬಂದವರಲ್ಲಿ ಬಹುತೇಕರು ಮೋಜು-ಮಸ್ತಿಗೆ ಹೆಸರುವಾಸಿಯಾದ ಈ ವಿರುಪಾಪುರ ಗಡ್ಡಿಗೆ ಬಂದೇ ಬರುತ್ತಾರೆ. ದೇಶಿ-ವಿದೇಶಿ ಪ್ರವಾಸಿಗರನ್ನು ಹಲವು ರೀತಿಯಲ್ಲಿ ತೃಪ್ತಿಪಡಿಸುವುದಕ್ಕಾಗಿಯೇ ಅಲ್ಲಿ ಅನೇಕ ಐಷಾರಾಮಿ ಹೊಟೇಲುಗಳು, ರೆಸಾರ್ಟುಗಳು ತಲೆಯೆತ್ತಿವೆ. ದುಡ್ಡು ಮಾಡುವ ಖಯಾಲಿಗೆ ಬಿದ್ದಿರುವ ಹೊಟೇಲ್ ಮಾಲಿಕರು ಜಿಲ್ಲಾಧಿಕಾರಿ ನೀಡಿದ ಮನವಿ, ನಿರ್ದೇಶನ, ಎಚ್ಚರಿಕೆ ಮತ್ತು ಆದೇಶವನ್ನೂ ಗಾಳಿಗೆ ತೂರಿ ತಮ್ಮ ಹೊಟೇಲ್ ಮತ್ತು ರೆಸಾರ್ಟುಗಳನ್ನು ಬಂದ್ ಮಾಡಲಿಲ್ಲ.

ಅದೂ ಸಾಲದೆಂಬಂತೆ, “ನದಿಯಲ್ಲಿ ನೀರು ಹೆಚ್ಚಾದರೆ, ನಾವೇ ನಿಮ್ಮನ್ನು ಖಾಸಗಿ ದೋಣಿಗಳಲ್ಲಿ ಆಚೆಗೆ ಬಿಟ್ಟುಬರುತ್ತೇವೆ. ನೀವೇನು ಹೆದರಬೇಡಿ. ಬೇಕಿದ್ದರೆ ನಿಮ್ಮ ಕಾರುಗಳನ್ನು ನದಿಯಿಂದ ದೂರ ನಿಲ್ಲಿಸಿ ಬನ್ನಿ” ಎಂದು ಪ್ರವಾಸಿಗರನ್ನು ಹುರಿದುಂಬಿಸಿ, ಅವರಿಗೆ ಆಶ್ವಾಸನೆಗಳನ್ನು ಕೊಟ್ಟು ತಮ್ಮಲ್ಲೇ ಉಳಿಸಿಕೊಂಡರು. ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾಗ (ಈದ್) ರಜಾ ದಿನಗಳಾಗಿದ್ದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು; ಅಂತೆಯೇ ಹೊಟೇಲ್ ಮಾಲಿಕರಿಗೆ ಲಾಭವೂ ಕೂಡ.

ಆಮೇಲೆ ಏನಾಯಿತು? ಜಿಲ್ಲಾಧಿಕಾರಿ ಸುನೀಲ್ ಕುಮಾರ್ ನಿರೀಕ್ಷಿಸಿದಂತೆಯೇ ಮಲೆನಾಡಿನಲ್ಲಿ ಮಳೆ ಬಿಡಲಿಲ್ಲ. ತುಂಗಭದ್ರಾ ಜಲಾಶಯಕ್ಕೆ ಬೃಹತ್ ಪ್ರಮಾಣದ ಒಳಹರಿವು ಬರುವುದು ನಿಲ್ಲಲಿಲ್ಲ. ಜಲಾಶಯದಿಂದ ನೀರು ಹೊರಹರಿಸುವುದೂ ಅನಿವಾರ್ಯವಾಯಿತು. ಯಾವಾಗ ಜಲಾಶಯದಿಂದ ಹೊರಹರಿವು ಎರಡೂವರೆ ಲಕ್ಷ ಕ್ಯೂಸೆಕ್ ದಾಟಿತೋ ಅತ್ತ ಹಂಪಿ ಸ್ಮಾರಕಗಳೂ ಜಲಾವೃತವಾದವು, ಇತ್ತ ನಡುಗಡ್ಡೆಯಲ್ಲೂ ಜನ ನೆರವಿಗಾಗಿ ಕೂಗಲಾರಂಭಿಸಿದರು.

ನಡುಗಡ್ಡೆಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (NDRF), ನಾಗರಿಕ ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ದಳಗಳನ್ನು ಕರೆಸಲಾಯಿತು. ಮೋಜು-ಮಸ್ತಿಗಾಗಿ ನಡುಗಡ್ಡೆಯಲ್ಲಿ ಉಳಿದಿದ್ದ ಪ್ರವಾಸಿಗರನ್ನು ಹಾಗೂ ಲಾಭಕ್ಕಾಗಿ ಅವರನ್ನು ಉಳಿಸಿಕೊಂಡಿದ್ದ ಹೊಟೆಲ್ ಮಾಲಿಕರು/ನಿರ್ವಾಹಕರನ್ನು ರಕ್ಷಿಸಲು ರಕ್ಷಣಾ ದಳಗಳ ಯೋಧರು ತಮ್ಮ ಪ್ರಾಣಗಳನ್ನು ಪಣಕ್ಕೊಡ್ಡಿ ಮೈಯಿಗೆ ಲೈಫ್ ಜಾಕೇಟ್ ಹಾಕಿಕೊಂಡು ಭೋರ್ಗರೆಯುತ್ತಿದ್ದ ನದಿಗೆ ಇಳಿಯಬೇಕಾಯಿತು. ಎನ್.ಡಿ.ಆರ್.ಎಫ್ ತಂಡ ಆಗಲೇ ರಬ್ಬರ್ ಬೋಟ್ ಬಳಸಿ ಒಂದು ಟ್ರಿಪ್ ಹೋಗಿ ಬಂದು ವಿದೇಶಿ ಪ್ರವಾಸಿಗರನ್ನು ಕರೆತಂದಿತ್ತು. ನಡುಗಡ್ಡೆಯಲ್ಲಿ ಸುಮಾರು ಮುನ್ನೂರು ಜನ ಇದ್ದಿದ್ದರಿಂದ ಒಂದೇ ದೋಣಿಯಲ್ಲಿ ಪ್ರತೀ ಸಾರಿ ನಾಲ್ಕೈದು ಜನರನ್ನು ರಕ್ಷಿಸುತ್ತಾ ಹೋದರೆ ಒಂದು ವಾರ ಬೇಕಾಗುತ್ತದೆ. ಆದ್ದರಿಂದ ಇನ್ನೊಂದು ದೋಣಿ ಧುಮ್ಮಿಕ್ಕಿ ಬರುತ್ತಿದ್ದ ಅಪಾಯಕಾರಿ ನದಿಗೆ ಇಳಿಯಿತು. ಅದರಲ್ಲಿ ಐವರು ರಕ್ಷಣಾ ಸಿಬ್ಬಂದಿಗಳಿದ್ದರು. ಅದು ತನ್ನ ಮೊದಲ ಬಾರಿಗೆ ಪ್ರವಾಸಿಗರನ್ನು ಕರೆತರಲು ನಡುಗಡ್ಡೆಯತ್ತ ಹೋಗುವಾಗಲೇ ನದಿಯ ನಡುವೆ ನಿಂತಿದ್ದ ಮರಕ್ಕೆ ಬಡಿದು ಮಗುಚಿಬಿದ್ದಿತು..! ಜನರ ರಕ್ಷಣೆಗೆ ಹೋಗಿದ್ದ ಐವರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದರು.

ಕೂಡಲೇ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ವಾಯುಪಡೆ ಮತ್ತು ನೌಕಾಪಡೆಗಳನ್ನು ಸಂಪರ್ಕಿಸಿ ಮೂರು ಹೆಲಿಕ್ಯಾಪ್ಟರ್ ಗಳನ್ನು ತರಿಸಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ರಕ್ಷಿಸುವ ಕೆಲಸ ಪ್ರಾರಂಭಿಸಿದರು. ಅದೃಷ್ಟವಶಾತ್ ಕೆಲವೇ ಗಂಟೆಗಳಲ್ಲಿ ಎಲ್ಲಾ ಐವರನ್ನೂ  ರಕ್ಷಿಸುವಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಹೆಲಿಕ್ಯಾಪ್ಟರುಗಳು ಯಶಸ್ವಿಯಾದವು.

ಕೊನೆಗೆ ದೋಣಿಯ ಮೂಲಕ ನಡುಗಡ್ಡೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸುವ ಯೋಚನೆಯನ್ನೇ ಬಿಟ್ಟು ಇದೇ ಹೆಲಿಕ್ಯಾಪ್ಟರುಗಳ ಮೂಲಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕೆಲಸ ಪ್ರಾರಂಭಿಸಿದರು.

ವಾಯುಪಡೆಯ ಒಂದು ಹೆಲಿಕ್ಯಾಪ್ಟರ್ 20 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದು ಹೆಲಿಕ್ಯಾಪ್ಟರ್ 10 ಜನರನ್ನು ತುಂಬಿಕೊಂಡು ಹೋಗುವ ಸಾಮರ್ಥ್ಯ ಹೊಂದಿತ್ತು. ಈ ಹೆಲಿಕ್ಯಾಪ್ಟರುಗಳು ಕಂಡಕಂಡಲ್ಲಿ ಇಳಿಯುವುದು ಕಷ್ಟ. ಹಾಗಾಗಿ, ನಡುಗಡ್ಡೆಯಿಂದ ಹೊತ್ತೊಯ್ದ ಜನರನ್ನು ಜಿಂದಾಲ್ ಏರ್ ಸ್ಟ್ರಿಪ್ ನಲ್ಲಿ ಇಳಿಸಿದವು. ಇನ್ನೊಂದು ನೌಕಾಪಡೆಯ ಹೆಲಿಕ್ಯಾಪ್ಟ್ ಕೇವಲ ಏಳೆಂಟು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದು ಅದು ಯಾವುದೇ ಸಪಾಟು ನೆಲದ ಮೇಲೆ ಇಳಿಯಬಲ್ಲದು. ಅದು ಸಮೀಪದ ರಸ್ತೆಗಳಲ್ಲಿಯೇ ಜನರನ್ನು ಇಳಿಸಿತು. ಹೀಗೆ ಸಂಜೆಯ ಹೊತ್ತಿಗೆ ಸುಮಾರು ಇನ್ನೂರೈವತ್ತು ಜನರನ್ನು ವಾಯುಪಡೆ ಮತ್ತು ನೌಕಾಪಡೆಯ ಯೋಧರು ರಕ್ಷಿಸಿದರು. ಇನ್ನೂ ನೂರು ಮಂದಿ ಅಲ್ಲೇ ಉಳಿದಿದ್ದರು. ಇವತ್ತು ಅವರನ್ನು ಕರೆತರುವ ಕಾರ್ಯಾಚರಣೆ ಶುರುವಾಗಿಬಹುದು.

ಇಷ್ಟೆಲ್ಲಾ ಏಕೆ ಬರೆಯಬೇಕಾಯಿತು ಎಂದರೆ, ಜಿಲ್ಲಾಧಿಕಾರಿಯ ಮಾತನ್ನು ಪ್ರವಾಸಿಗರು, ಹೊಟೇಲ್ ಮಾಲಿಕರು ಕೇಳಿದ್ದರೆ ಇಷ್ಟೆಲ್ಲಾ ತೊಂದರೆಯಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಇಷ್ಟೊಂದು ಸಮಯ, ಹಣ, ಶಕ್ತಿ ಪೋಲಾಗುವ ಸಂಭವವೇ ಇರುತ್ತಿರಲಿಲ್ಲ. ಮೋಜು-ಮಸ್ತಿ ಮಾಡುವವರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ನದಿಗಿಳಿದು ಕೊಚ್ಚಿಹೋದ ಯೋಧರಿಗೆ ಏನಾದರೂ ಹೆಚ್ಚೂಕಮ್ಮಿಯಾಗಿದ್ದರೆ ಅದಕ್ಕೆ ಯಾರು ಹೊಣೆ?

ನಮ್ಮ ಜನಕ್ಕೆ ಯಾವಾಗ ಬುದ್ದಿ ಬರುತ್ತೆ ಅಂತ ಅರ್ಥವಾಗುತ್ತಿಲ್ಲ. 

ಅಂದಹಾಗೆ, ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಗೂ ಈಗ ಪಿತ್ತ ನೆತ್ತಿಗೇರಿದ ಹಾಗೆ ಕಾಣುತ್ತಿದೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಹೊಟೆಲ್/ ರೆಸಾರ್ಟ್ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಕ್ಕೆ ಅವರು ಮುಂದಾಗಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ತನಗೆ ಸಹಕಾರ ತೋರದ ಈ ಮಾಲಿಕರ ವಿರುದ್ಧ  ವಿಕೋಪ ನಿರ್ವಹಣಾ ಕಾಯ್ದೆಯ ಅಡಿಯಲ್ಲೂ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇವರ ಲೈಸನ್ಸುಗಳನ್ನು ರದ್ಧುಪಡಿಸುವ ಸಂಭವವೂ ಇದೆ. ಹಾಗಾದಾಗ ಮಾತ್ರ ಈ ಧನದಾಹಿಗಳು ಒಂದಿಷ್ಟು ಬುದ್ದಿಕಲಿಯುತ್ತಾರೆ ಅನ್ನಿಸುತ್ತದೆ.

ಕೃಪೆ- ಕುಮಾರ್ ಬುರಡಿಕಟ್ಟಿಯವರ ಫೇಸ್ ಬುಕ್ ಗೋಡೆಯಿಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...