121 ಮಂದಿ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತ ದುರ್ಘಟನೆಯ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದ್ದು, ಅಲಹಾಬಾದ್ ಹೈಕೋರ್ಟ್ಗೆ ತೆರಳಲು ಅರ್ಜಿದಾರರಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, “ಇಂತಹ ಘಟನೆಗಳು ಗೊಂದಲಕಾರಿ; ಆದರೆ ಅಂತಹ ಪ್ರಕರಣಗಳನ್ನು ಎದುರಿಸಲು ಹೈಕೋರ್ಟ್ಗಳು ಸಜ್ಜಾಗಿದೆ” ಎಂದು ಹೇಳಿದರು.
“ಖಂಡಿತ, ಇವು ಗೊಂದಲದ ಘಟನೆಗಳು. ಇಂತಹ ಘಟನೆಗಳನ್ನು ದೊಡ್ಡದಾಗಿ ಮಾಡಲು ಸಾಮಾನ್ಯವಾಗಿ ಇಲ್ಲಿ (ಪಿಐಎಲ್ ಸಲ್ಲಿಸುವುದು) ಅರ್ಜಿ ಸಲ್ಲಿಸಲಾಗುತ್ತದೆ. ಈ ಪ್ರಕರಣವನ್ನು ಎದುರಿಸಲು ಹೈಕೋರ್ಟ್ ಸಜ್ಜಾಗಿದೆ” ಎಂದು ಪೀಠ ಹೇಳಿದೆ.
ವಕೀಲರು ಮತ್ತು ಅರ್ಜಿದಾರ ವಿಶಾಲ್ ತಿವಾರಿ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ಹೋಗುವಂತೆ ಸುಪ್ರೀಂ ಸೂಚಿಸಿದ್ದು, ಪಿಐಎಲ್ ಅನ್ನು ವಿಲೇವಾರಿ ಮಾಡಿದೆ.
ಇಂತಹ ಘಟನೆಗಳನ್ನು ಎದುರಿಸಲು ಸರಿಯಾದ ವೈದ್ಯಕೀಯ ಸೌಲಭ್ಯಗಳ ಲಭ್ಯತೆಯಿಲ್ಲದಿರುವ ವಿಷಯವು ರಾಷ್ಟ್ರಮಟ್ಟದ ಕಾಳಜಿಯಾಗಿದ್ದು, ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಕೂಡ ವ್ಯವಹರಿಸಬಹುದು ಎಂದು ತಿವಾರಿ ಹೇಳಿದರು.
ಜುಲೈ 2 ರಂದು ನಡೆದ ಕಾಲ್ತುಳಿತ ಘಟನೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐದು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು. ಜುಲೈ 2 ರಂದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಧಾರ್ಮಿಕ ಸಭೆಯೊಂದರಲ್ಲಿ ಕಾಲ್ತುಳಿತ ಸಂಭವಿಸಿದೆ.
ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಸಾಕರ್ ವಿಶ್ವಹಾರಿ ಮತ್ತು ಭೋಲೆ ಬಾಬಾ ಎಂದು ಕರೆಯಲ್ಪಡುವ ಬಾಬಾ ನಾರಾಯಣ ಹರಿ ನಡೆಸಿದ ‘ಸತ್ಸಂಗ’ಕ್ಕಾಗಿ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದರು. ಕೇವಲ 80,000 ಮಂದಿಗೆ ಮಾತ್ರ ಅನುಮತಿ ನೀಡಲಾಗಿದ್ದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರಿದ್ದು, ಸಾಕ್ಷಿಗಳನ್ನು ಮರೆಮಾಚಿದ್ದಾರೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ; ದೆಹಲಿ ವಿಶ್ವವಿದ್ಯಾಲಯದ ಕಾನೂನು ಕೋರ್ಸ್ನಲ್ಲಿ ಮನುಸ್ಮೃತಿ ಬೋಧನೆಗೆ ಶಿಕ್ಷಕರ ವಿರೋಧ


