Homeಮುಖಪುಟಜೆಡಿಎಸ್‌ನವರಿಗಿಂತಲೂ ಹೆಚ್ಚು ಬಿಜೆಪಿಗರಿಂದ ಹುಟ್ಟುಹಬ್ಬದ ಅಭಿನಂದನೆ ಪಡೆದುಕೊಂಡ ಎಚ್‌ ಡಿ ಕುಮಾರಸ್ವಾಮಿ! ಏನಿದರ ಮರ್ಮ?

ಜೆಡಿಎಸ್‌ನವರಿಗಿಂತಲೂ ಹೆಚ್ಚು ಬಿಜೆಪಿಗರಿಂದ ಹುಟ್ಟುಹಬ್ಬದ ಅಭಿನಂದನೆ ಪಡೆದುಕೊಂಡ ಎಚ್‌ ಡಿ ಕುಮಾರಸ್ವಾಮಿ! ಏನಿದರ ಮರ್ಮ?

ಕುಮಾರಸ್ವಾಮಿಗೆ ವಿಶ್ ಮಾಡಿದ ನರೇಂದ್ರ ಮೋದಿಯಿಂದ ಹಿಡಿದು ಬಹುತೇಕ ಬಿಜೆಪಿ ಮುಖಂಡರು ತಮ್ಮದೇ ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್‌ರವರ ಜನ್ಮದಿನಕ್ಕೆ ವಿಶ್ ಮಾಡಿಲ್ಲ!

- Advertisement -
- Advertisement -

ಮೊನ್ನೆ ಡಿಸೆಂಬರ್ 16 ರಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿಯವರು ತಮ್ಮ 62 ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬವಿದ್ದಾಗ ಪಕ್ಷಬೇಧ ಮರೆತು ಎಲ್ಲರೂ ಅಭಿನಂದನೆ ಸಲ್ಲಿಸುವುದು ವಾಡಿಕೆ. ಆದರೆ ಈ ಬಾರಿಯ ಕುಮಾರಸ್ವಾಮಿಯವರ ಜನ್ಮದಿನಕ್ಕೆ ಯಾರು ಯಾರು ಅಭಿನಂದನೆ ಸಲ್ಲಿಸಿದರು ಮತ್ತು ಯಾರು ಯಾರು ಅಭಿನಂದನೆ ಹೇಳಲಿಲ್ಲ ಎನ್ನುವುದನ್ನು ಗಮನಿಸಿದರೆ ವಾಡಿಕೆ ಮೀರಿ ಮತ್ತೇನೂ ನಡೆಯುತ್ತಿದೆ ಅನಿಸದೇ ಇರಲಾರದು.

ಈ ಬಾರಿಯ ಕುಮಾರಸ್ವಾಮಿಯವರ ಜನ್ಮದಿನಕ್ಕೆ ಕಾಂಗ್ರೆಸ್ ನಾಯಕರ್ಯಾರೂ ಅಭಿನಂದನೆ ಸಲ್ಲಿಸಿಲ್ಲ. ಜೆಡಿಎಸ್‌ನ ಕೆಲವರು ಮಾತ್ರ ಅಭಿನಂದಿಸಿದರೆ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಬಹುತೇಕ ಸಚಿವರು, ಶಾಸಕರು ಮತ್ತು ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಹೊರರಾಜ್ಯದ ಬಿಜೆಪಿ ಸಂಸದರು, ಬಿಜೆಪಿ ನಾಯಕರು ಸಹ ಮೊದಲ ಬಾರಿಗೆ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದರೆ ಏನರ್ಥ? ಸರಿ ಯಾರು ಯಾರು ಅಭಿನಂದಿಸಿದ್ದಾರೆ ಮೊದಲು ನೋಡಿ ಬಿಡೋಣ.

ಬಿಜೆಪಿ ಪಕ್ಷವು 2018ರ ಮೇ ತಿಂಗಳಿನಿಂದ 2020ರ ಅಕ್ಟೋಬರ್‌ವರೆಗೂ ಕುಮಾರಸ್ವಾಮಿಯವರನ್ನು ಟೀಕಿಸುತ್ತಲೆ ಇದೆ. ಹಲವು ವಿಚಾರಗಳಿಗೆ ಟ್ರೋಲ್ ಮಾಡುತ್ತಲೆ ಇದೆ. ಅದೇ ಬಿಜೆಪಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಡಾ.ಕೆ ಸುಧಾಕರ್, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಸಿ.ಟಿ ರವಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ನಂತರ ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಚೆ, ಪಿ.ಸಿ ಮೋಹನ್, ಬಿ.ವೈ ರಾಘವೇಂದ್ರ, ಶಶಿಕಲಾ ಜೊಲ್ಲೆ ಅಭಿನಂದನೆ ತಿಳಿಸಿದ್ದಾರೆ.

ವಿಶೇಷವೆಂದರೆ ರಾಜಸ್ಥಾನದ ರಾಜ್‌ಸಮಂದ್‌ನ ಬಿಜೆಪಿ ಸಂಸದರಾದ ದಿಯಾ ಕುಮಾರಿ, ಹರಿಯಾಣದ ಬಿಜೆಪಿ ಸಂಸದ ಸಂಜಯ್ ಭಾಟಿಯಾ ಮತ್ತು ಮಹಾರಾಷ್ಟ್ರದ ಬಿಜೆಪಿ ರಾಜ್ಯಸಭಾ ಸದಸ್ಯ ಸುರೇಶ್ ಪ್ರಭುರವರು ಸಹ ಕರ್ನಾಟಕ ಮಾಜಿ ಸಿಎಂಗೆ ಟ್ವೀಟ್‌ ಮೂಲಕ ಶುಭ ಹಾರೈಸಿರುವುದು ಅಚ್ಚರಿ ಮೂಡಿಸಿದೆ.

ಇನ್ನು ಜೆಡಿಎಸ್ ವತಿಯಿಂದ ಎಚ್.ಡಿ ರೇವಣ್ಣ, ಸಿ.ಎಸ್ ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸಾ.ರ ಮಹೇಶ್, ವೈಎಸ್‌ವಿ ದತ್ತ, ಡಿ.ಸಿ ಗೌರಿಶಂಕರ್, ಆರ್ ಮಂಜುನಾಥ್ ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ. ಆದರೆ ಒಂದು ವರ್ಷ ಜೆಡಿಎಸ್‌ ಜೊತೆ ಮೈತ್ರಿ ಸರ್ಕಾರ ನಡೆಸಿದ್ದ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರು ಟ್ವೀಟ್ ಮೂಲಕ ಶುಭಾಶಯ ತಿಳಿಸಿಲ್ಲ.

ಇನ್ನು ತಮಗೆ ಹುಟ್ಟು ಹಬ್ಬದ ಶುಭಾಶಯ ಕೋರಿದವರಿಗೆ ಧನ್ಯವಾದ ತಿಳಿಸುತ್ತಾ ಕುಮಾರಸ್ವಾಮಿಯವರು “ತತ್ವ-ಸಿದ್ಧಾಂತಗಳೆಂಬುದು ಕ್ಲಿಷೆಯ ಮಾತಾಗಿರುವ ಈ ದಿನಗಳಲ್ಲಿ ನಾಡಿನ ಜನರ ಒಳಿತಿಗಾಗಿ ದುಡಿವುದಷ್ಟೆ ಒಂದು ಸಿದ್ಧಾಂತವಾಗಬೇಕು” ಎಂಬ ಮಾತುಗಳನ್ನಾಡಿದ್ದಾರೆ. ತಮ್ಮ ಪಕ್ಷ ಜಾತ್ಯಾತೀತ ಜನತಾದಳವೆಂದೂ, ತಾವು ರೈತಪರವೆಂದು ಘೋಷಿಸಿಕೊಂಡಿದ್ದ ಕುಮಾರಸ್ವಾಮಿಯವರು ನಿಧಾನವಾಗಿ ತಮ್ಮ ಸಿದ್ದಾಂತದ ಅರ್ಥವನ್ನು ಬದಲಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.

ತನ್ನನ್ನು ಸಿಎಂ ಕುರ್ಚಿಯಿಂದ ಇಳಿಸಿದ ಬಿಜೆಪಿ ಬಗ್ಗೆ ಕುಮಾರಸ್ವಾಮಿಯವರಿಗೆ ಸಿಟ್ಟಿಲ್ಲ. ಕಳೆದ ಆರು ತಿಂಗಳುಗಳಿಂದ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸಖ್ಯವನ್ನು, ಅದೇ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆಯನ್ನು ಮುಂದುವರೆಸಿದ್ದಾರೆ. ನೇರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಪ್ರತಿದಿನ ಟೀಕಿಸುತ್ತಿದ್ದಾರೆ. ತಾನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ದರಾಮಯ್ಯ ಕಾರಣ ಎಂದು ಇಂದೂ ಸಹ ಆರೋಪಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಹುಟ್ಟು ಹಬ್ಬಕ್ಕೂ ಒಂದು ವಾರ ಮುಂಚಿತವಾಗಿ ಡಿಸೆಂಬರ್ 08 ರಂದು ರಾಜ್ಯ ವಿಧಾನ ಮಂಡಲದ ವಿಧಾನ ಪರಿಷತ್‌ನಲ್ಲಿ ಬಿಜೆಪಿಯು ಕರ್ನಾಟಕ ಭೂಸುಧಾರಣೆ ತಿದ್ದುಪಡಿ ವಿಧೇಯಕ 2020 ಅನ್ನು ಮಂಡಿಸಿತು. ರೈತರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಮೂರು ತಿಂಗಳ ಹಿಂದೆ ತಾನೇ ಅದನ್ನು ವೀರಾವೇಷದಿಂದ ವಿರೋಧಿಸಿತ್ತು. ಆದರೆ ಡಿಸೆಂಬರ್ 08 ರಂದು ಮಾತ್ರ ಸದ್ದಿಲ್ಲದೆ ಭೂಸುಧಾರಣೆ ವಿಧೇಯಕದ ಪರವಾಗಿ ಮತಹಾಕಿ ಪರಿಷತ್‌ನಲ್ಲಿ ಅದು ಅಂಗೀಕಾರವಾಗಲು ಕಾರಣವಾಯಿತು! ಆ ಮೂಲಕ ಬಿಜೆಪಿಯೊಂದಿಗೆ ಬಹಿರಂಗ ದೋಸ್ತಿ ಘೋಷಿಸಿತು.

ಅದಾದ ಒಂದು ವಾರದ ನಂತರ ಒಂದು ದಿನದ ವಿಧಾನಪರಿಷತ್ ಅಧಿವೇಶನ ಕರೆಯಲಾಯಿತು. ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಮತ್ತು ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಆಡಳಿತರೂಢ ಬಿಜೆಪಿ ಪಕ್ಷ ಎಣಿಸಿತ್ತು. ಆಗ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿಯವರನ್ನು ಪದಚ್ಯುತಿಗೊಳಿಸಲು ಕುಮಾರಸ್ವಾಮಿಯವರು ಬಿಜೆಪಿಗೆ ಬೇಷರತ್ ಬೆಂಬಲ ನೀಡಿದರು. ಸಭಾಪತಿಗಳಾದ ಪ್ರತಾಪ್ ಚಂದ್ರಶೆಟ್ಟಿಯವರು ಆಸೀನರಾಗುವ ಮೊದಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಸೇರಿ ಉಪಸಭಾಪತಿ ಧರ್ಮೇಗೌಡ ಅವರನ್ನು ಕುಳ್ಳಿರಿಸಿ ಭಾರೀ ಗದ್ದಲ ನಡೆಯಲು ಕಾರಣರಾದರು!

ಇನ್ನು ಕರ್ನಾಟಕದಲ್ಲಿ ದಿನೇ ದಿನೇ ಜೆಡಿಎಸ್ ಬಲ ಕುಗ್ಗುತ್ತಿರುವುದರಿಂದ ಕುಮಾರಸ್ವಾಮಿಯವರು ಬಿಜೆಪಿಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಅನುಗುಣವಾಗಿಯೇ ಕುಮಾರಸ್ವಾಮಿಯವರು ಬಿಜೆಪಿಯವರೊಡನೆ ಸೌಮ್ಯವಾಗಿಯೂ, ಕಾಂಗ್ರೆಸ್‌ನವರೊಡನೆ ಉಗ್ರವಾಗಿಯೂ ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ರಾಜ್ಯದ ಎಲ್ಲಾ ಮುಖಂಡರು, ಹೊರರಾಜ್ಯದ ಸಂಸದರು, ಮುಖಂಡರು ಸಹ ಕುಮಾರಸ್ವಾಮಿಯವರ ಜನ್ಮದಿನಕ್ಕೆ ಶುಭಾಶಯ ಕೋರಿ ಪಕ್ಷಕ್ಕೆ ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ.

ಅಚ್ಚರಿಯ ಮತ್ತು ನೀವು ನಂಬಲೇಬೇಕಾದ ಮತ್ತೊಂದು ಅಂಶವೆಂದರೆ ಕುಮಾರಸ್ವಾಮಿಯವರ ಜನ್ಮದಿನದ ಎರಡು ದಿನದ ನಂತರ ಅಂದರೆ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಸಹ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ಕುಮಾರಸ್ವಾಮಿಯವರಿಗೆ ವಿಶ್ ಮಾಡಿದ್ದ ಬಿಜೆಪಿಯ ನರೇಂದ್ರ ಮೋದಿ ಆದಿಯಾಗಿ ಸುರೇಶ್ ಪ್ರಭು, ದಿಯಾ ಕುಮಾರಿ, ಸಂಜಯ್ ಭಾಟಿಯಾ ಸೇರಿ ಬಹುತೇಕರು ತಮ್ಮದೇ ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್‌ರವರಿಗೆ ಜನ್ಮದಿನದ ಶುಭಾಶಯ ತಿಳಿಸಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಸ್ಪಷ್ಟ. ಬಿಜೆಪಿಯು ಕುಮಾರಸ್ವಾಮಿಯವರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗಾಗಿ ಅವರ ಪಕ್ಷದ ನಿರ್ಣಯದಂತೆ ಕುಮಾರಸ್ವಾಮಿಯವರಿಗೆ ವಿಶ್ ಮಾಡಿ ಸಂಬಂಧ ವೃದ್ದಿಸಿಕೊಳ್ಳಲು ನೋಡುತ್ತಿದೆ. ಕುಮಾರಸ್ವಾಮಿಯವರಿಗೂ ಅದೇ ಬೇಕಿತ್ತು ಎನ್ನುವಂತೆ ವರ್ತಿಸುತ್ತಿದ್ದಾರೆ ಅಷ್ಟೇ.

ಇನ್ನು ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾರಿಗೆ ನೌಕರರು ಬಸ್‌ ಸೇವೆ ನಿಲ್ಲಿಸಿ ಹೋರಾಟ ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯ ಪರವಾಗಿ ವಿಧಾನ ಪರಿಷತ್ತಿನಲ್ಲಿ ಮತ ಹಾಕಿದ ಜೆಡಿಎಸ್‌ ವಿರುದ್ಧ ಕೆಂಡಾಮಂಡಲವಾಗಿದ್ದರು. “ಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡಲು” ಎಂದು ಕೋಡಿಹಳ್ಳಿ ಆಕ್ರೋಶ ಹೊರಹಾಕಿದ್ದರು. ಆಗ ಸಿಎಂ ಬಿ.ಎಸ್ ಯಡಿಯೂರಪ್ಪನವರು ತಮ್ಮ ಪ್ರಕಟಣೆಯಲ್ಲಿ “ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿಯವರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್‌ರವರು ಲಘುವಾಗಿ ಮಾತನಾಡಿರುವುದು ಖಂಡನೀಯ” ಎಂದು ಬರೆದು ಎಚ್‌ಡಿಕೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಗೆ ಕಾಲ ಕೂಡಿಬರುತ್ತಿದೆಯೇ? ಅಥವಾ ಕುಮಾರಸ್ವಾಮಿಯವರೆ ಬಿಜೆಪಿಯತ್ತ ನಡೆಯುತ್ತಿದ್ದಾರೆಯೇ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.


ಇದನ್ನೂ ಓದಿ: ವಿಸ್ಟ್ರಾನ್ ಬಿಕ್ಕಟ್ಟು – ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...