Homeಕರ್ನಾಟಕ‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

- Advertisement -
- Advertisement -

ನಾನು ಆರನೇ ತರಗತಿಯಲ್ಲಿದ್ದಾಗ ಶುರುವಾದ ಆರೆಸ್ಸೆಸ್‌ನ ಒಡನಾಟ ಮೊದಲನೇ ಪಿ.ಯು.ಸಿ. ಓದುವಾಗ ಕೊನೆಯಾಯಿತು. ಒಂದು ದಿನ ಬಾಬರಿ ಮಸೀದಿ-ರಾಮಮಂದಿರ ವಿವಾದದ ಕುರಿತು ಮೊತ್ತಮೊದಲಿಗೆ ಶಾಖೆಯಲ್ಲಿ ಕೇಳಿದೆ. ಅಂದಿನ ಶಾಖೆಯಲ್ಲಿ ವಾತಾವರಣ ಎಂದಿನಂತೆ ಇರಲಿಲ್ಲ. ಶಾಖೆಯಲ್ಲಿ ಏನೋ ವಿಶೇಷ ’ಸಂಭ್ರಮ’, ’ಉತ್ಸಾಹ’ ಇದ್ದಂತೆ ನನಗೆ ಕಂಡಿತು. ನನ್ನ ಜೀವನಾನುಭವ, ಕುಟುಂಬದ ಆರ್ಥಿಕ ಸಮಸ್ಯೆಗಳು ಅದಕ್ಕಿಂತಲೂ ಮುಖ್ಯವಾಗಿ ಪಠ್ಯಪುಸ್ತಕಗಳ ಹೊರತಾದ ಓದು, ಓದಿನಿಂದ ಪಡೆದ ಅರಿವು ವಿವೇಕ – ಈ ಎಲ್ಲ ಕಾರಣಗಳಿಂದ ನಾನು ರಾಮಮಂದಿರದ ವಿಷಯದಲ್ಲಿ ಎಲ್ಲರಂತೆ ಸಂಭ್ರಮ ಪಡುವ ಮನಸ್ಥಿತಿಯಲ್ಲೇನು ಇರಲಿಲ್ಲ. ಜೊತೆಗೆ ಬೆಟ್ಟದಂತೆ ಬೆಳೆದಿದ್ದ ಕುಟುಂಬ ಸಾಲದ ಹೊರೆ ಇಳಿಸುವ ಚಿಂತೆ ನನ್ನ ಮನಸ್ಸನ್ನು ಆವರಿಸುತ್ತಿತ್ತು.

ಇದರ ಜೊತೆಗೇ ’ದೇಶಪ್ರೇಮ’ ಎಂದರೆ ಹಸಿವಿನಿಂದ ನರಳುತ್ತಿರುವ ದೇಶದ ಕೋಟಿಕೋಟಿ ಜನರ ಬದುಕಿನಲ್ಲಿ ಹೊಸ ಬದಲಾವಣೆ ತರುವುದು, ನಿರುದ್ಯೋಗ, ಬಡತನ, ಅಸ್ಪೃಶ್ಯತೆ-ಜಾತಿತಾರತಮ್ಯಗಳನ್ನು ನಿವಾರಿಸುವುದು ಎಂಬ ಕಣ್ಣೋಟ ನನ್ನಲ್ಲಿ ಆಗಲೇ ಸ್ಪಷ್ಟವಾಗುತ್ತಿತ್ತು. ಅರ್ಥವೇ ಗೊತ್ತಿಲ್ಲದೇ ಮಂತ್ರ ಹೇಳುವ ಪುರೋಹಿತರಂತೆ ದಿನವೂ ಶಾಖೆಯಲ್ಲಿ ’ದೇಶಪ್ರೇಮ’, ’ರಾಷ್ಟ್ರಭಕ್ತಿ’, ’ಭಾರತೀಯ ಸಂಸ್ಕೃತಿ’, ‘ಸನಾತನ ಸಂಸ್ಕೃತಿ’ ’ಸನಾತನ ಧರ್ಮ’ ಮುಂತಾದ ದೊಡ್ಡ ದೊಡ್ಡ ಪದಪುಂಜಗಳನ್ನು ಎಲ್ಲರೂ ಉದುರಿಸುತ್ತಿದ್ದರೂ ಸಹ ದೇಶ ಸುಡುತ್ತಿರುವ ಹಸಿವು, ಅಪಮಾನ, ದೌರ್ಜನ್ಯಗಳ ಬಗೆಗೆ ಯಾರೂ ಕಣ್ಣೆತ್ತಿ ನೋಡಲು ತಯಾರಿಲ್ಲ ಎಂಬುದು ನನಗೆ ಸ್ಪಷ್ಟವಾಯಿತು.

ಅದು 1985ರ ಕೊನೆ ಅಥವಾ 1986ರ ಆರಂಭ ಇರಬಹುದು. ಅಂದು ಶಾಖೆಯಲ್ಲಿ ಅಯೋಧ್ಯೆ-ರಾಮಮಂದಿರದ ಚಳವಳಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದೂ, ಈಗ ಇಡೀ ದೇಶ ಸಂಘದ ಕಡೆ ನೋಡುತ್ತಿದೆ ಎಂದು ನಮಗೆ ಹೇಳಲಾಯಿತು. ನನಗೆ ತೀವ್ರವಾದ ನಿರಾಶೆಯಾಯಿತು. ಅದೇ ಕೊನೆ ನಾನು ಶಾಖೆಗೆ ಹೋಗುವುದನ್ನು ನಿಲ್ಲಿಸಿದೆ.

ಆಮೇಲೆ ಮುಂದುವರಿಯದ ಓದು, ಉದ್ಯೋಗಕ್ಕಾಗಿ ಹುಡುಕಾಟ, ನಿರಾಶೆ, ಬದುಕಿನ ಬಂಡಿಯನ್ನು ಎಳೆಯುವ ಸಲುವಾಗಿ ಚಿಕ್ಕಾಸಿಗಾಗಿ ನಡುಮುರಿಯುಂವಂತಹ ದುಡಿಮೆಯ ನೊಗಕ್ಕೆ ಕೊರಳೊಡ್ಡಿ ನಿಂತದ್ದು – ಹೀಗೆ ಬದುಕು ಏನೇನೋ ತಿರುವುಗಳನ್ನ ಪಡೆದುಕೊಂಡು ಹರಿಯುತ್ತಿತ್ತು.

ಇಂತಹ ಒಂದು ದಿನ… ಅದು ಸೆಪ್ಟೆಂಬರ್ 5, 1987ರಂದು ರಾಜಸ್ತಾನದ ಒಂದು ಆಘಾತಕಾರಿ ಸುದ್ದಿಯನ್ನು ಪತ್ರಿಕೆಯಲ್ಲಿ ಓದಬೇಕಾಗಿ ಬಂತು. ರಾಜಸ್ತಾನದ ರಾಜಧಾನಿ ಜೈಪುರಕ್ಕೆ ಸುಮಾರು 70 ಕಿ.ಮೀ. ದೂರದ ದೇವರಾಲು ಎಂಬ ಗ್ರಾಮದಲ್ಲಿ ರೂಪ್ ಕನ್ವರ್ ಎಂಬ 18ರ ಹರೆಯದ ಯುವತಿ ಸತ್ತ ತನ್ನ ಗಂಡನ ಚಿತೆಯೇರಿ ‘ಸತಿ ಹೋದ’ ಸುದ್ದಿ ಅದು. ರೂಪಳನ್ನು ಬಲಾತ್ಕಾರವಾಗಿ ಚಿತೆಗೆ ತಳ್ಳಲಾಯಿತು ಎಂಬುದು ಒಂದು ವರದಿಯಾದರೆ, ಆಕೆಯ ಗಂಡನ ಚಿತೆಗೆ ಆಕೆಯೇ ಸ್ವಯಂಪ್ರೇರಿತಳಾಗಿ ಹೋಗಿಬಿದ್ದಳು ಎಂಬುದು ಮತ್ತೊಂದು ವರದಿ. ಈ ದೃಶ್ಯವನ್ನು ಸುತ್ತ ನೂರಾರು ಜನರು ನಿಂತು ನೋಡುತ್ತಿದ್ದರಂತೆ. ಬಾಳಿಬದುಕಬೇಕಾದ ಒಂದು ಹೆಣ್ಣು ಗಂಡನ ಚಿತೆಯ ಮೇಲೆ ಬಿದ್ದು ಜ್ವಾಲೆಯಲ್ಲಿ ಜೀವಂತ ಸುಟ್ಟುಕೊಂಡು ನರಳಿನರಳಿ ಸಾಯುವುದೆಂದರೇನು? ಅದನ್ನು ನೂರಾರು ಜನರು ನೋಡುತ್ತಾ, ಬೆಂಬಲಿಸುತ್ತಾ ನಿಲ್ಲುವುದೆಂದರೇನು?

ಬಹಳ ಹಿಂದೆ ಹೀಗೆ ಸತಿ ಹೋಗುವ ಮಹಿಳೆಯರು ಬೆಂಕಿಯಲ್ಲಿ ಬೇಯುವಾಗ ಉರಿ ತಾಳಲಾಗದೇ ಚೀರಿಕೊಂಡು ಚಿತೆಯಿಂದ ಹೊರಕ್ಕೆ ನೆಗೆದರೆ ಸುತ್ತ ನಿಂತ ಜನರು ಉದ್ದನೆಯ ಬಡಿಗೆಗಳಿಂದ ಬಡಿದು ಮತ್ತೆ ಬೆಂಕಿಗೆ ತಳ್ಳುತ್ತಿದ್ದರಂತೆ. ಪತ್ರಿಕೆಗಳಲ್ಲಿ ರೂಪ್ ಕನ್ವರ್ ಘಟನೆಯ ವಿರುದ್ಧ ವ್ಯಾಪಕ ಖಂಡನೆಗಳು ವ್ಯಕ್ತವಾದವು. ಸತಿ ಪದ್ಧತಿಯನ್ನು ಎಂದೋ ನಿಷೇಧಿಸಿದ್ದಾಗಿತ್ತು. ಆದರೆ ಸತಿ ಪದ್ಧತಿಯನ್ನು ವೈಭವೀಕರಿಸುವುದನ್ನು ನಿಷೇಧಿಸುವ ಕಾಯ್ದೆ ತರಬೇಕು ಎಂದೂ ವ್ಯಾಪಕ ಚರ್ಚೆಯಾಯಿತು ಎಂದು ನೆನಪು.

1988 ಜೂನ್‌ನಲ್ಲಿ ನಾನು ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಕಲಾ ವಿಭಾಗಕ್ಕೆ ಸೇರಿದೆ. ನಾನು ಆ ಹೊತ್ತಿಗಾಗಲೇ ಸಂಘದಲ್ಲಿ ಸಕ್ರಿಯವಾಗಿರಲಿಲ್ಲ. ಸಂಘವು ದೇಶದ ಮುಂದೆ ತಂದಿಟ್ಟ ವಿಷಯಗಳು ರಾಷ್ಟ್ರೀಯ ಚರ್ಚೆಯ ವಿಷಯವಾಗಿಬಿಟ್ಟಿದ್ದವು. 1949ರಲ್ಲಿ ಡಿಸೆಂಬರ್ 22-23ರ ನಡುರಾತ್ರಿಯಲ್ಲಿ ಬಾಬರಿ ಮಸೀದಿಯೊಳಕ್ಕೆ ಕಳ್ಳತನದಲ್ಲಿ ರಾಮ-ಸೀತೆ-ಲಕ್ಷಣರ ವಿಗ್ರಹಗಳನ್ನು ಕೊಂಡೊಯ್ದು ಇರಿಸಿದ ಮೇಲೆ, ನೆಹರು ಅವರ ಆಡಳಿತ ಕಾಲದಲ್ಲಿ ಬೀಗಹಾಕಿ ಮುಚ್ಚಲಾಗಿತ್ತು. ಆದರೆ ಬಾಬರಿ ಮಸೀದಿಯ ಬೀಗ ತೆರೆದು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲು ರಾಜೀವ್ ಗಾಂಧಿಯವರು 1986ರಲ್ಲಿ ಅವಕಾಶ ನೀಡಿದ್ದರು. ಇದಲ್ಲದೇ ಸಂಘಪರಿವಾರದಿಂದ ರಾಮಮಂದಿರಕ್ಕಾಗಿ ರಾಮಜ್ಯೋತಿ, ಇಟ್ಟಿಗೆ ಯಾತ್ರೆಗಳು ನಡೆದಿದ್ದವು. ನಾನು ಈ ಬೆಳವಣಿಗೆಗಳೆಲ್ಲವನ್ನು ಗಮನಿಸುತ್ತಲಿದ್ದೆ.

ರೂಪ ಕನ್ವರ್ ಸತಿ ಪ್ರಕರಣ ವರದಿಯಾದ ನಂತರ ಸತಿ ಪದ್ಧತಿಯ ಬಗೆಗೆ ಆರೆಸ್ಸೆಸ್‌ನ ನಿಲುವು ಏನಿರಬಹುದು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಎದ್ದಿತು. ಆರೆಸ್ಸೆಸ್ ಸತಿ ಪದ್ಧತಿಯನ್ನು ಬೆಂಬಲಿಸಬಹುದು ಎಂಬ ಗುಮಾನಿಯೂ ನನ್ನ ಮನಸ್ಸಿನಲ್ಲಿತ್ತು. ಸ್ವಲ್ಪ ದಿನಗಳ ನಂತರ ನನಗೆ ಈ ಪ್ರಶ್ನೆಗೆ ಖಚಿತ ಉತ್ತರವೂ ಸಿಕ್ಕಿತು. ರಾಜಾಸ್ತಾನದ ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡರು ರೂಪ ಕನ್ವರ್ ಸತಿ ಹೋದದ್ದನ್ನು ವೈಭವೀಕರಿಸಿ ಆಕೆಗೆ ದೇಗುಲ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆಂಬ ಟೀಕೆಗಳು ಮಾಧ್ಯಮಗಳಲ್ಲಿ ಕೇಳಿಬಂದವು. ನೋಡನೋಡುತ್ತಲೇ ರೂಪಾ ಕನ್ವರ್‌ಗೆ ಒಂದು ದೇಗುಲ ಕಟ್ಟಬೇಕೆಂಬ ಚಳವಳಿ ಆರಂಭವಾಯಿತು. ಅದರ ನೇತೃತ್ವ ವಹಿಸಿದ್ದವರು ರಾಜಮಾತಾ ವಿಜಯರಾಜೇ ಸಿಂಧಿಯಾ. ಯಾರು ಈ ವಿಜಯರಾಜೇ ಸಿಂಧಿಯ? ಆರೆಸ್ಸೆಸ್‌ನ ಮಹಿಳಾ ಘಟಕ-‘ರಾಷ್ಟ್ರೀಯ ಸೇವಿಕಾ ಸಮಿತಿ’ಯ ಅಂದಿನ ಅಖಿಲ ಭಾರತ ನಾಯಕಿ.

ರಾಜಮಾತಾ ವಿಜಯರಾಜೇ ಸಿಂಧಿಯಾ

ಇವರೇ ನಾನು ಸಂಘದಲ್ಲಿ ಕಂಡ ಮೊತ್ತ ಮೊದಲ ‘ರಾಷ್ಟ್ರೀಯ ಸೇವಿಕಾ ಸಮಿತಿ’ಯ ಪ್ರತಿನಿಧಿ. ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಉಪಾಧ್ಯಕ್ಷೆ ಕೂಡಾ ಆಗಿದ್ದರು. ಇದೇ ಸತಿ ದೇವಾಲಯದ ಪ್ರಚಾರಾಂದೋಲನದ ಅಂಗವಾಗಿ ಅವರು ಒಂದು ಆಂದೋಲನವನ್ನೆ ಮುನ್ನಡೆಸಿದರು. (ವಿಜಯರಾಜೇ ಸಿಂಧಿಯಾ ಅವರೊಬ್ಬರೇ ಅಲ್ಲ, ಬಿಜೆಪಿ ಪಕ್ಷದ ರಾಜಸ್ತಾನ ಘಟಕದ ಉಪಾಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ರಾಠೋಡ್, ಭಾರತೀಯ ಜನತಾ ಯುವಮೋರ್ಚಾ(ಬಿಜೆವೈಎಂ) ಅಧ್ಯಕ್ಷ ಪ್ರತಾಪ್ ಸಿಂಗ್ ಖಾಚರಿಯವಾಸ್ ಸತಿ ಪದ್ಧತಿಯನ್ನು ಬೆಂಬಲಿಸಿ, ಸತಿ ಪದ್ಧತಿಯನ್ನು ವೈಭವೀಕರಿಸಿ ಬೃಹತ್ ರ್‍ಯಾಲಿಗಳನ್ನು, ಪ್ರದರ್ಶನಗಳನ್ನು ನಡೆಸಿದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಇಂಥ ಒಂದು ರ್‍ಯಾಲಿಯಲ್ಲಿ 4 ಲಕ್ಷ ಜನರನ್ನು ಸೇರಿಸಲಾಗಿತ್ತಂತೆ. ರೂಪ ಕನ್ವರ್ ಸತಿ ಹೋದ ಸ್ಥಳವನ್ನು ಒಂದು ಧಾರ್ಮಿಕ ಕೇಂದ್ರವನ್ನಾಗಿ ಮಾಡಲಾಗಿತ್ತು.)

ಈ ಆಂದೋಲನ ನಡೆಯುವ ಕಾಲಘಟ್ಟದಲ್ಲೆ ವಿಜಯರಾಜೇ ಸಿಂಧಿಯಾ ಅವರು ಕರ್ನಾಟಕದ ಉಡುಪಿಗೂ ಭೇಟಿ ನೀಡಿದ್ದರು. ‘ತರಂಗ’ ವಾರಪತ್ರಿಕೆ ಅವರ ವಿವರವಾದ ಸಂದರ್ಶನ ನಡೆಸಿತ್ತು. (1990 ಅಕ್ಟೋಬರ್ 14 ರ ಸಂಚಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ.) ಸಂದರ್ಶನದಲ್ಲಿ ವಿಜಯರಾಜೇ ಸಿಂಧಿಯಾ ಅವರು ರೂಪಕನ್ವರ್‌ಗೆ ದೇಗುಲ ನಿರ್ಮಿಸುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಈ ಮುಂದೆ ಅವರ ಹೇಳಿಕೆಯ ಯಥಾವತ್ ರೂಪವನ್ನು ಕೊಡಲಾಗಿದೆ. ವಿಜಯರಾಜೇ ಸಿಂಧಿಯಾ ಅವರು ಈ ಸತಿ ದೇಗುಲ ನಿರ್ಮಾಣದ ಸಂಬಂಧ “ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುವ ಹಕ್ಕು ಯಾರಿಗೂ ಇಲ್ಲ” ಎಂದು ಘೋಷಿಸಿದ್ದಾರೆ. ಅವರ ಹೇಳಿಕೆ ಸ್ಪಷ್ಟವಾಗಿದೆ. “ಅಲ್ಲಿ (ರೂಪಾ ಕನ್ವರ್ ದಹನವಾದ ಸ್ಥಳ) ಜಾತ್ರೆ, ಮೇಳಗಳು ನಡೆಯುತ್ತವೆ.

ಸತಿ ದೇವಾಲಯಕ್ಕೆ ಇಂದಿಗೂ ಸಾಕಷ್ಟು ಜನ ಭಕ್ತಿಭಾವದಿಂದ ಬರುತ್ತಾರೆ. ರೂಪಾ ಕನ್ವರ್ ಘಟನೆ ನಡೆದ ಬಳಿಕ ಈ ಶಕ್ತಿಕೇಂದ್ರಗಳನ್ನು ಏಕಾಏಕಿ ನಾಶ ಮಾಡುವ ಪ್ರಯತ್ನ ನಡೆದಿತ್ತು”, ಮುಂದುವರೆದು “ಸತಿ” ಬಲಾತ್ಕಾರದಿಂದಲೋ ಅಥವಾ ದೌರ್ಜನ್ಯದಿಂದಲೋ ನಡೆದರೆ ಅದು ಖಂಡಿತಾ ತಪ್ಪು. ಅಂಥವುಗಳನ್ನು ನಾವು ವಿರೋಧಿಸಲೇಬೇಕು” ಎಂದು ಅವರು ಹೇಳಿದ್ದರು. “ಬಲಾತ್ಕಾರದಿಂದ ನಡೆದರೆ ತಪ್ಪು” ಎಂದರೆ ಏನು ಅರ್ಥ? ‘ಸ್ವಯಂಪ್ರೇರಣೆಯಿಂದ ಯಾರಾದರೂ ಸತಿ ಹೋದರೆ ಅದು ತಪ್ಪಲ್ಲ. ಅದು ದೇವಸ್ಥಾನ ಕಟ್ಟಿ ಪೂಜಿಸಬೇಕಾದ ಆದರ್ಶ ಪರಂಪರೆ!’ ಎಂದರ್ಥ ಅಲ್ಲವೆ. ರೂಪ ಕನ್ವರ್ ಸ್ವಯಂಪ್ರೇರಣೆಯಿಂದ ಸತಿ ಹೋಗಿರುವುದರಿಂದ ಆಕೆಗೆ ದೇವಸ್ಥಾನ ಕಟ್ಟುವುದು ನಮ್ಮ ಧಾರ್ಮಿಕ ನಂಬಿಕೆ. ಅದನ್ನು ಪ್ರಶ್ನೆ ಮಾಡಲು ಯಾರಿಗೂ ಹಕ್ಕಿಲ್ಲ ಎಂಬುದು ಅವರ ವಾದವಾಗಿತ್ತು.

ಸತಿ ದೇಗುಲ ನಿರ್ಮಿಸುವ ನಿಲುವು ವಿಜಯರಾಜೇ ಸಿಂಧಿಯ ಅಥವಾ ಕೆಲವು ಬಿಜೆಪಿ ಮುಖಂಡರ ವೈಯಕ್ತಿಕ ನಿಲುವಾಗಿರಲಿಲ್ಲ. ಈ ವಿಷಯದಲ್ಲಿ ಆರೆಸ್ಸೆಸ್‌ನ ನಿಲುವು ಸಹ ಸ್ಪಷ್ಟವಾಗಿತ್ತು. ವಿಜಯರಾಜೇ ಸಿಂಧಿಯಾ ಅವರ ನಿಲುವು ಅವರ ವೈಯಕ್ತಿಕ ನಿಲುವಾಗಿದ್ದಿದ್ದರೆ ಅದನ್ನು ಬಹಿರಂಗ ಹೇಳಿಕೆಯ ಮೂಲಕ ಆರೆಸ್ಸೆಸ್ ಸ್ಪಷ್ಟಪಡಿಸಬಹುದಿತ್ತು. ರಾಜಾರಾಮ್ ಮೋಹನ ರಾಯ್ ಅವರ ನೇತೃತ್ವದ ಹೋರಾಟದ ಫಲವಾಗಿ ಬ್ರಿಟಿಷರ ಆಡಳಿತದಲ್ಲಿ 1828ರಲ್ಲೇ ನಿಷೇಧಿಸಲಾಗಿದ್ದ ಅಮಾನವೀಯ, ಕ್ರೂರ ಸತಿ ಪದ್ಧತಿಯ ಆಚರಣೆಯನ್ನು ಖಂಡಿಸಿ, ಸತಿ ದೇಗುಲ ನಿರ್ಮಾಣಕ್ಕೆ ಆರೆಸ್ಸೆಸ್ ಬೆಂಬಲ ಇಲ್ಲ ಎಂದು ಸಾರಬಹುದಿತ್ತು. ಸತಿ ದೇವಾಲಯ ನಿರ್ಮಾಣದ ವಿರುದ್ಧ ಪ್ರಚಾರಾಂದೋಲನ ನಡೆಸಬಹುದಿತ್ತು. ವಿಜಯರಾಜೇ ಸಿಂಧಿಯಾ ಅವರನ್ನು ತಿದ್ದಲು ಪ್ರಯತ್ನಿಸಬಹುದಿತ್ತು. ವಿಜಯರಾಜೇ ಸಿಂಧಿಯಾ ಸಂಘದ ಮಾತು ಕೇಳದಿದ್ದರೆ ಅವರ ಮೇಲೆ ಶಿಸ್ತು ಕ್ರಮವಹಿಸಿ ಅವರನ್ನು ‘ರಾಷ್ಟ್ರೀಯ ಸೇವಿಕಾ ಸಮಿತಿ’ಯಿಂದ ಹೊರಹಾಕಬಹುದಿತ್ತು ಮತ್ತು ಬಿಜೆಪಿ ಸಹ ವಿಜಯಾರಾಜೇ ಸಿಂಧಿಯಾ ಮತ್ತು ಸತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದ ಮುಖಂಡರನ್ನು ಪಕ್ಷದಿಂದ ಹೊರಹಾಕಬಹುದಿತ್ತು. ಅಂತಹ ಯಾವುದೂ ನಡೆಯಲಿಲ್ಲ.

ಸತಿ ಪದ್ಧತಿಯನ್ನು ಬೆಂಬಲಿಸಿ ರೂಪ ಕನ್ವರ್‌ಗೆ ದೇಗುಲ ನಿರ್ಮಿಸುವ ಸಂಬಂಧ ‘ತರಂಗ’ ಪತ್ರಿಕೆಯಲ್ಲಿ ವಿಜಯರಾಜೇ ಸಿಂಧಿಯ ಅವರ ಸಂದರ್ಶನ ಪ್ರಕಟವಾಗುವ ಹೊತ್ತಿಗಾಗಲೇ ನಾನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ.)ನ ಸಕ್ರಿಯ ಕಾರ್ಯಕರ್ತನಾಗಿದ್ದೆ. 1988ರ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನಾನು ಎ.ಪಿ.ಎಸ್. ಸಂಜೆ ಕಾಲೇಜಿನಲ್ಲಿ 50 ಪೈಸೆ ವಾರ್ಷಿಕ ಶುಲ್ಕ ಕೊಟ್ಟು ಎಸ್ಸೆಫೈಗೆ ಸದಸ್ಯನಾಗಿದ್ದೆ. ನನ್ನ ಸಹಪಾಠಿ ಶ್ರೀರಾಮ್ ನನ್ನನ್ನು ಎಸ್ಸೆಫೈಗೆ ಸದಸ್ಯನ್ನಾಗಿ ಮಾಡಿದ್ದರು. ನಾನು ಕೊಟ್ಟ 50 ಪೈಸೆಗೆ ನನಗೆ ರಸೀದಿ ಸಹ ಸಿಕ್ಕಿತ್ತು. ರಸೀದಿಯಲ್ಲಿ ಎಸ್‌ಎಫ್‌ಐನ ವಿಚಾರ, ಬೇಡಿಕೆಗಳು ಎಲ್ಲವೂ ಇದ್ದವು. ನಾನು ಎಸ್ಸೆಫೈ ಸದಸ್ಯನಾದದ್ದಕ್ಕೆ ದಾಖಲೆ ಇತ್ತು. ಎಸ್ಸೆಫೈನ ವಿಚಾರಗಳು ತಿಳಿಯುತ್ತಾ ಹೋದಂತೆ ಕ್ರಮೇಣ ನಾನು ಎಸ್ಸೆಫೈನಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಾ ಹೋದೆ. ನಮ್ಮದು ಸಂಜೆ ಕಾಲೇಜಾಗಿತ್ತು. ನಾನು ಹಗಲು ಕೆಲಸ ಮಾಡುತ್ತಿದ್ದೆ. ಸಂಜೆ ಕಾಲೇಜಿಗೆ ಬರುತ್ತಿದ್ದೆ.

ನಾನು ಒಂದು ಕಡೆ ಎಸ್ಸೆಫೈನ ಸದಸ್ಯ, ಕಾರ್ಯಕರ್ತನಾಗಿದ್ದರೂ ಆರೆಸ್ಸೆಸ್‌ಗೆ ಅಧಿಕೃತವಾಗಿ ರಾಜಿನಾಮೆಯನ್ನೇನೂ ಕೊಟ್ಟಿರಲಿಲ್ಲ. ಆರೆಸ್ಸೆಸ್‌ನಲ್ಲಿ ಸದಸ್ಯತ್ವ, ಸದಸ್ಯತ್ವ ನೋಂದಣಿ, ಸದಸ್ಯತ್ವ ರಸೀದಿ ಇಂತಹ ಯಾವ ಕ್ರಮವನ್ನೂ, ದಾಖಲೆಯನ್ನೂ ನಾನು ನೋಡಿಯೇ ಇಲ್ಲ. ಇನ್ನೂ ರಾಜಿನಾಮೆ ಕೊಡುವುದು ಹೇಗೆ? ಬಾಬರಿ ಮಸೀದಿ-ರಾಮಮಂದಿರ ಎಂದು ಗದ್ದಲ ಎಬ್ಬಿಸುವ ಆರೆಸ್ಸೆಸ್ ನೀತಿಯ ಬಗೆಗೆ ನನ್ನಲ್ಲಿ ತಿರಸ್ಕಾರ ಮೂಡಿದಾಗ ಶಾಖೆಗೆ ಹೋಗುವುದನ್ನು ನಿಲ್ಲಿಸಿ ಹಾಗೇ ಸುಮ್ಮನಾಗಿದ್ದೆ ಅಷ್ಟೆ.

ಸತಿ ಪದ್ಧತಿಯನ್ನು ಆರೆಸ್ಸೆಸ್ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಬೆಂಬಲಿಸುವ ವಿಚಾರ ನೋಡಿ ನನ್ನಲ್ಲಿ ಒಂದು ಬಗೆಯ ಸಾತ್ವಿಕ ಆಕ್ರೋಶ ತಲೆಯೆತ್ತಿತು. ಆರೆಸ್ಸೆಸ್‌ನ ಈ ಜೀವ ವಿರೋಧಿ ನಿಲುವನ್ನು ಪ್ರಶ್ನಿಸಬೇಕು, ಸುಮ್ಮನೆ ಬಿಡಬಾರದು ಎಂದು ನನಗೆ ತೀವ್ರವಾಗಿ ಅನ್ನಿಸಿತು. ಈಗ ನಾನು ಮತ್ತೊಮ್ಮೆ ಆರೆಸ್ಸೆಸ್ ಶಾಖೆಯತ್ತ ಮುಖ ಮಾಡಿದೆ. ಮೊದಲಿಗೆ ಶ್ರೀನಗರದ ನನ್ನದೇ ಊರಿನ ಶಾಖೆಗೆ ಹೋದೆ. ಮನಸ್ಸಿಲ್ಲದಿದ್ದರೂ ಎದೆಯ ಮೇಲೆ ಕೈಯಿಟ್ಟು ಆರೆಸ್ಸೆಸ್‌ನ ಕೇಸರಿ ಧ್ವಜಕ್ಕೆ ವಂದನೆ ಸಲ್ಲಿಸಿದೆ. ತಡವಾಗಿ ಶಾಖೆ ಸೇರಿಕೊಳ್ಳುವವರು ಹೀಗೆ ಮೊದಲು ‘ಧ್ವಜವಂದನೆ’ ಸಲ್ಲಿಸಿ ಸೇರಿಕೊಳ್ಳುವುದು ಕ್ರಮ. ಅದು, ಇದು ಆಟಗಳು ಆದ ಮೇಲೆ ಎಲ್ಲರೂ ವೃತ್ತಾಕಾರವಾಗಿ ಕುಳಿತುಕೊಂಡು ಮಾತನಾಡುವಾಗ ನನ್ನ ಪ್ರಶ್ನೆಗಳ ಸುರುಳಿ ಬಿಚ್ಚಿದೆ. “ಆರೆಸ್ಸೆಸ್ ಸತಿ ಪದ್ಧತಿಯನ್ನು ಬೆಂಬಲಿಸುವುದು ಎಷ್ಟು ಸರಿ?”, “ರೂಪ್ ಕನ್ವರ್ಗೆ ದೇವಸ್ಥಾನ ಕಟ್ಟುವ ಚಳುವಳಿ ನಡೆಸುವುದು ಅಂದರೆ ಸತಿ ಪದ್ದತಿಯನ್ನು ಬೆಂಬಲಿಸಿದಂತೆಯೇ ಅಲ್ಲವೇ?” ನನ್ನ ಪ್ರಶ್ನೆಗಳು ನೇರವಾಗಿದ್ದವು. ಆದರೆ ಉತ್ತರ ನೇರವಾಗಿರಲಿಲ್ಲ. “ಬಲವಂತವಾಗಿ ಮಹಿಳೆಯರು ಸತಿ ಹೋಗುವಂತೆ ಮಾಡಿದರೆ ಅದು ತಪ್ಪು. ಆದರೆ ಸ್ವಯಂ ಪ್ರೇರಣೆಯಿಂದ ಮಹಿಳೆಯರು ಸತಿ ಹೋದರೆ ಅದು ತಪ್ಪೇನಲ್ಲ. ರೂಪ ಕನ್ವರ್ ಸತಿ ಹೋಗಲು ಯಾರೂ ಬಲವಂತ ಮಾಡಿಲ್ಲ. ಆದ್ದರಿಂದ ರೂಪ್ ಕನ್ವರ್‌ಗೆ ದೇವಸ್ಥಾನ ಕಟ್ಟುವುದರಲ್ಲಿ ಯಾವುದೇ ತಪ್ಪಿಲ್ಲ” ಎನ್ನುವ ಉತ್ತರ ನನಗೆ ಸಿಕ್ಕಿದ್ದು!

ಇದಾದನಂತರ ನಾನು ಆರೆಸ್ಸೆಸ್ ಕೇಂದ್ರ ಕಚೇರಿಯಾದ ಬಸವನಗುಡಿ ಸಮೀಪದ ರಂಗರಾವ್ ರಸ್ತೆಯ ‘ಕೇಶವ ಕೃಪ’ದ ಆವರಣದಲ್ಲಿ ನಡೆಯುತ್ತಿದ್ದ ‘ಸಾಯಂ ಶಾಖೆ’ಗೆ, ಅಂದರೆ ಸಂಜೆಯ ಶಾಖೆಗೆ ಹೋದೆ. ಅಲ್ಲಿಯೂ ಹೀಗೆ ಇದೇ ಪ್ರಶ್ನೆಯನ್ನೇ ಮುಂದಿಟ್ಟೆ. ಬಹುತೇಕ ಅಂಥದ್ದೇ ಉತ್ತರ. ಬಲವಂತವಾಗಿ ಪತಿಯ ಚಿತೆಗೆ ಮಹಿಳೆಯನ್ನು ತಳ್ಳುವುದು ತಪ್ಪು. ಆದರೆ ಸ್ವಯಂ ಪ್ರೇರಣೆಯಿಂದ ಹೆಂಡತಿ ಸತಿ ಹೋದರೆ ಅದು ತಪ್ಪಲ್ಲ!!

‘ತರಂಗ’ ಪತ್ರಿಕೆಯಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಸಂದರ್ಶನ

ಮುಂದಿನ ಸರದಿ ನರಸಿಂಹರಾಜ ಕಾಲೋನಿಯ ಆಚಾರ್ಯ ಪಾಠಶಾಲಾ ಮೈದಾನದ ಪಕ್ಕದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂದೆ ನಡೆಯುತ್ತಿದ್ದ ಶಾಖೆಯದು. ಅಲ್ಲಿ ನಾಲ್ಕಾರು ಮಕ್ಕಳು, ನಾಲ್ಕೈದು ಜನ ವಯಸ್ಕರು ಶಾಖೆಯಲ್ಲಿ ಪಾಲ್ಗೊಂಡಿದ್ದರು. ನಾನು ಎಂದಿನಂತೆ ತಂಡದೊಳಗೆ ಸೇರಿಕೊಂಡೆ. ಆ ತಂಡದಲ್ಲಿ ಒಬ್ಬ ಯುವಕನಿದ್ದ. ಅವನು ಎಂ.ಟೆಕ್. ವಿದ್ಯಾರ್ಥಿ. ನಾನು ಅವನಿಗೆ ಸಂಘವು ಸತಿ ಪದ್ಧತಿಯನ್ನು ಬೆಂಬಲಿಸುತ್ತಿರುವ ಬಗೆಗೆ ಕೇಳಿದೆ. ಆಗ ಅವನು ಹೇಳಿದ ಉತ್ತರ ಕೇಳಿ ನನಗೆ ಅಘಾತವಾಯಿತು. ಆತ ಹೇಳಿದ, “ಸಂಘದಲ್ಲಿ ನಾವು ಹಿರಿಯರು ಹೇಳಿದ್ದನ್ನು ಪಾಲಿಸುತ್ತೇವೆ. ಅವರು ಎಲ್ಲವನ್ನೂ ಯೋಚಿಸಿ ತೀರ್ಮಾನ ಕೈಗೊಂಡಿರುತ್ತಾರೆ. ನಾವು ಆ ತೀರ್ಮಾನಗಳನ್ನು ವಿಮರ್ಶೆ ಮಾಡಲು ಹೋಗುವುದಿಲ್ಲ”!!!

ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ರೂಪ ಕನ್ವರ್‌ಗೆ ದೇಗುಲ ಕಟ್ಟುವ ಚಳವಳಿ ವಿಜಯರಾಜೇ ಸಿಂಧಿಯಾ ಅವರ ವೈಯಕ್ತಿಕ ನಿಲುವಲ್ಲ. ಈ ಚಳವಳಿಗೆ ಸಂಘ ಪರಿವಾರದ ಸಮ್ಮತಿ ಮತ್ತು ಬೆಂಬಲ ಎರಡೂ ಇದೆ.

ಆರೆಸ್ಸೆಸ್‌ಗೆ ರಾಜಿನಾಮೆ..

ಈಗ ನಾನು ಸಂಘಕ್ಕೆ ಅಧಿಕೃತವಾಗಿ ರಾಜೀನಾಮೆ ಕೊಟ್ಟೆ, ಅದು ನನ್ನದೇ ಆದ ಶೈಲಿಯಲ್ಲಿ. ಅಂದು ಮನೆಯಲ್ಲಿ ಬೆಳಿಗ್ಗೆ ನೀರೊಲೆಗೆ ಒಟ್ಟಿದ್ದ ಸೌದೆಗಳು ಹೊತ್ತಿಕೊಂಡು ಒಲೆ ಧಗಧಗ ಉರಿಯುತ್ತಿದ್ದವು. ಈಗ ನಾನು ನನ್ನ ಖಾಸಗಿ ವಸ್ತುಗಳನ್ನು ಇಟ್ಟುಕೊಂಡಿದ್ದ ಕಬ್ಬಿಣದ ಹಳೆಯ ಟ್ರಂಕನ್ನು ತೆರೆದೆ. ಆ ಟ್ರಂಕ್‌ನಲ್ಲಿ ಆರೆಸ್ಸೆಸ್‌ನಲ್ಲಿದ್ದಾಗ ತೊಡುತ್ತಿದ್ದ ಕರಿಟೋಪಿ ಹಾಗೇ ಇತ್ತು. ಹಾಗೆಯೇ ಶಾಖೆಯಲ್ಲಿ ನನಗೆ ಕೊಟ್ಟಿದ್ದ ‘ನಮಸ್ತೆ ಸದಾ ವತ್ಸಲೆ’ ಸಂಘಗೀತೆ ಇದ್ದ ಕಿರು ಹೊತ್ತಿಗೆಯೂ ಇತ್ತು. ಅವುಗಳನ್ನು ಎಳೆದು ಹೊರಗೆ ತೆಗೆದೆ. ಅವುಗಳನ್ನು ಒಂದೊಂದಾಗಿ ಬೆಂಕಿಗೆ ಹಾಕಿದೆ. ಆರೆಸ್ಸೆಸ್‌ನ ಕರಿ ಟೋಪಿ ಮತ್ತು ಸಂಘಗೀತೆಯಿದ್ದ ಕಿರು ಪುಸ್ತಕ ಎರಡೂ ನೀರೊಲೆಯ ಬೆಂಕಿಯಲ್ಲಿ ಧಗಧಗಿಸಿ ಹೊತ್ತಿಕೊಂಡು ಉರಿದು ಬೂದಿಯಾದವು. ಹೀಗೆ ಆರೆಸ್ಸೆಸ್‌ಗೆ ನಾನು ಕೊಟ್ಟ ರಾಜಿನಾಮೆ ಅಂಗೀಕಾರವಾಗಿತ್ತು.

ಆರ್.ರಾಮಕೃಷ್ಣ (ಗವಿಪುರಂ) ದಾಸರಹಳ್ಳಿ,

ಪತ್ರಕರ್ತರು, ಬೆಂಗಳೂರು


ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಇದನ್ನೂ ಓದಿ: ‘ಫೇಕ್‌‌ ಅಕೌಂಟ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಬಿಜೆಪಿ ಸಂಸದನಿಗೆ ವಿನಾಯಿತಿ ನೀಡಲಾಗಿತ್ತು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...