Homeಮುಖಪುಟ’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

- Advertisement -
- Advertisement -

ಇತ್ತೀಚಿಗೆ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾದ ’ರತ್ನನ್ ಪ್ರಪಂಚ’ ಕನ್ನಡ ಸಿನಿಮಾ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ವಿಮರ್ಶೆಗಳಿಗೆ ಸಾಕ್ಷಿಯಾಯಿತು. ಕನ್ನಡ ಸಿನಿಮಾಗಳಿಗೆ ವಿಮರ್ಶೆಯ ವಿಚಾರದಲ್ಲಿ ವಿನಾಯಿತಿ ನೀಡಬೇಕು ಎಂಬ ಒಂದು ವಲಯದ ಕೂಗು ಆಗಾಗ ಅನುರಣನಿಸುತ್ತಿರುತ್ತದೆ. ಆದರೆ ಅದಕ್ಕೆ ನೀಡುವ ಕಾರಣಗಳು ಮತ್ತು ಸಮರ್ಥನೆಗಳು ಕನ್ನಡ ಸಿನಿಮಾರಂಗದ ಗುಣಮಟ್ಟದ ಬಗೆಗನ ಕಾಳಜಿಗಿಂತ ನಿರ್ಮಾಪಕರ, ನಿರ್ದೇಶಕರ ಅಥವಾ ತಮ್ಮ ನೆಚ್ಚಿನ ನಟರ ಬಗೆಗಿನ ತೀವ್ರ ಅಭಿಮಾನ ಅಲ್ಲಿ ಕೆಲಸ ಮಾಡಿರುತ್ತದೆ. ಅಭಿಮಾನ ತನ್ನಷ್ಟಕ್ಕೇ ಸಮಸ್ಯಾತ್ಮಕವಲ್ಲವಾದರೂ, ಜಾಗತಿಕವಾಗಿ ಅತ್ಯುತ್ತಮವಾದ ಅಂದರೆ ಜನಸಾಮಾನ್ಯರ ನೋವು ನಲಿವುಗಳನ್ನು, ಸಮಸ್ಯೆಗಳನ್ನು, ಬವಣೆಗಳನ್ನು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಮೂಡಿಸುತ್ತಿರುವ ಕಂಟೆಂಟ್ ಸುಲಭವಾಗಿ ಎಲ್ಲರಿಗೂ ಸಿಗುತ್ತಿರುವ ಇಂದಿನ ಸಂದರ್ಭದಲ್ಲಿ ಅಭಿಮಾನದ ಪ್ರತಿಷ್ಠೆಯಷ್ಟೇ ಕನ್ನಡ ಚಿತ್ರರಂಗಕ್ಕೆ ಸಾಲದಲ್ಲವೇ? ಕನ್ನಡನಾಡಿನ ಸಮುದಾಯಗಳ ಬದುಕು ಬವಣೆಗಳನ್ನು, ಕರ್ನಾಟಕದ ಜನರ ಕಥೆಗಳನ್ನು, ಸಾಮಾಜಿಕ ಪರಿಸದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವತ್ತ ಸಿನಿಮಾರಂಗ ಬೆಳೆಯುವತ್ತ ಎಲ್ಲರೂ ಚಿಂತಿಸುವುದು ಒಳಿತಲ್ಲವೇ?

MAID

ಇತ್ತೀಚೆಗೆ ಒಟಿಟಿ ವೇದಿಕೆಯೊಂದರಲ್ಲಿ ’ಮೇಯ್ಡ್’ (MAID) ಎಂಬ ಒಂದು ಇಂಗ್ಲಿಷ್ ವೆಬ್ ಸೀರೀಸ್ ಜನಪ್ರಿಯವಾಗಿದೆ. ಅಲೆಕ್ಸ್ ಎಂಬಾಕೆ ತನ್ನ ಅಬ್ಯೂಸಿವ್ ಗಂಡನನ್ನು ತೊರೆದು ದೂರಬಂದು, ಅಸಮಾನತೆಯ ವ್ಯವಸ್ಥೆಯ ಸಮಾಜದಲ್ಲಿ ಮನೆಕೆಲಸದಾಕೆಯಾಗಿ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ, ತನ್ನ ತಾಯಿಯ, ತನ್ನ ತಂದೆಯ ಮತ್ತು ತನ್ನ ಪತಿಯ ಜೊತೆಗಿನ ಸಂಬಂಧಗಳನ್ನು ಶೋಧಿಸಿಕೊಳ್ಳುವ ಕಥಾಹಂದರ ಹೊಂದಿರುವ ಈ ಸೀರಿಸ್ ಪುರುಷಾಧಿಪತ್ಯದ ವಿರುದ್ಧ ಸೆಟೆದು ನಿಲ್ಲುತ್ತದೆ. ಈ ಪಯಣದಲ್ಲಿ ಅಲೆಕ್ಸ್ ಪಾತ್ರವನ್ನು ಅನನ್ಯವಾಗಿ ಕಟ್ಟಿಕೊಡಲಾಗಿದೆ. ಪುಟ್ಟ ಮಗಳನ್ನು ಎತ್ತುಕೊಂಡು ತನ್ನ ಗಂಡನಿಂದ ದೂರ ಬಂದು ಮನೆಗೆಲಸದಾಕೆಯ ಕೆಲಸ ಹುಡುಕಿಕೊಂಡಿರುವ ಅಲೆಕ್ಸ್‌ಗೆ ವಸತಿಯ ಸಮಸ್ಯೆ ಆಗಾಗ ಕಾಡುತ್ತದೆ. ತಾಯಿಗೆ ಕೂಡ ಸರಿಯಾದ ನೆಲೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದೂರವಾಗಿದ್ದ ಅಪ್ಪನ ಬಳಿ ಸಣ್ಣ ಅವಧಿಗೆ ಆಶ್ರಯ ಪಡೆದಿರುತ್ತಾಳೆ. ಒಮ್ಮೆ ಮನೆಯೊಂದನ್ನು ಸ್ವಚ್ಛ ಮಾಡಲೆಂದು ಹೋಗಿರುವಾಗ ಅಟ್ಟದಂತಹ ಒಂದು ಗೂಡಿನ ಒಳಹೊಕ್ಕಾಗ, ಅದರ ಚಿಕ್ಕ ಬಾಗಿಲು ಆಕಸ್ಮಿಕವಾಗಿ ಮುಚ್ಚಿಕೊಂಡು ಕತ್ತಲಾಗುತ್ತದೆ. ಹೊರಗೆ ಬರಲಾರದೆ ಭಯಭೀತಿಯಿಂದ ಬೆವರುತ್ತಾಳೆ. ಹೇಗೋ ಹೊರಬಂದ ಮೇಲೆ, ಮರೆತಿದ್ದ ತನ್ನ ಬಾಲ್ಯದ ನೆನಪು ಮರುಕಳಿಸುತ್ತದೆ. ತನ್ನ ಬಾಲ್ಯದಲ್ಲಿ ತಂದೆ ತನ್ನ ತಾಯಿಯನ್ನು ಹೊಡೆಯುವ ಸಮಯದಲ್ಲಿ, ಅಲ್ಮೇರದಲ್ಲಿ ಹುದುಗಿ ಬಚ್ಚಿಟ್ಟುಕೊಳ್ಳುವ ಕರಾಳ ನೆನಪದು. ತಕ್ಷಣ ತನ್ನ ತಂದೆಯ ಮನೆಗೆ ತೆರಳಿ, ಮಗಳನ್ನು ಕರೆದುಕೊಂಡು ಆ ಮನೆಯನ್ನೂ ತೊರೆಯುತ್ತಾಳೆ. ಅಲೆಕ್ಸ್‌ಳ ಹೋರಾಟ ಮುಂದುವರೆಯುತ್ತದೆ..

’ರತ್ನನ್ ಪ್ರಪಂಚ’ ಚಿತ್ರದ ಚರ್ಚೆಯೊಂದಿಗೆ ಮೇಯ್ಡ್ ವೆಬ್ ಸೀರಿಸ್ ಎಳೆದುಕೊಂಡು ಬಂದದ್ದಕ್ಕೆ ಕಾರಣವಿದೆ. ಕಥೆಯ ತಿರುವುಗಳನ್ನು ನಿರೂಪಿಸುವಾಗ ಅದು ವೀಕ್ಷಕನನ್ನು ಚಿಂತನೆಗೆ ಹಚ್ಚುವಂತೆ ಮಾಡಿ, ಅವನನ್ನು ’ಇದು ಹೇಗೆ ಸಾಧ್ಯ’ ಎಂಬ ಸಂದೇಹಕ್ಕೆ ಒಳಪಡಿಸುವುದಕ್ಕಿಂತಲೂ, ಕಥೆಯ ಮುಂದುವರಿಕೆಯನ್ನು ಸಕಾರಣವಾಗಿ ಕನ್ವಿನ್ಸ್ ಮಾಡುವಂತಿರಬೇಕು. ’ಮೇಯ್ಡ್’ನಲ್ಲಿ ಅದು ಸಿದ್ಧಿಸಿರುವುದು ಸುಲಭವಾಗಿ ನಮಗೆ ಕಾಣಸಿಗುತ್ತದೆ. ಅದನ್ನು ಜಾಗತಿಕವಾಗಿ ಎಲ್ಲ ಒಳ್ಳೆಯ ಕಥೆಗಾರರೂ-ನಿರ್ದೇಶಕರೂ ಮಾಡಲು ಪ್ರಯತ್ನಿಸುತ್ತಾರೆ.

’ರತ್ನನ್ ಪ್ರಪಂಚ’ ಸಿನಿಮಾ ಕಟ್ಟುವಿಕೆಯಲ್ಲಿ ಪ್ರೇಕ್ಷಕನಿಗೆ ಆ ಕಟ್ಟುವಿಕೆ ಹೆಚ್ಚು ಕನ್ವಿನ್ಸ್ ಆಗುವುದಕ್ಕಿಂತಲೂ ಕಥೆಯಿಂದ ಕಳಿಚಿಕೊಂಡಂತಹ ಕೊಂಡಿಗಳೇ ಕೊನೆಯವರೆಗೂ ಕಾಡುತ್ತವೆ. ತನ್ನ ತಾಯಿ ಸರೋಜಾಳ (ಉಮಾಶ್ರೀ) ಜೊತೆಗೆ ಯಾವಾಗಲೂ ಕಚ್ಚಾಡುವ ಮಗ ರತ್ನಾಕರ (ಧನಂಜಯ್). ಇದು ಏಕೆ ಹೀಗೆ ಕಟ್ಟಲಾಗಿದೆ ಎಂಬುದು ಕೂಡ ಸರಿಯಾಗಿ ಮನವರಿಕೆಯಾಗುವುದೇ ಇಲ್ಲ! ಇನ್ನು ಆಕೆ ತನ್ನ ಹೆತ್ತ ತಾಯಿಯಲ್ಲ ಎಂದು ರತ್ನಾಕರ ತಿಳಿಯುವ ಸನ್ನಿವೇಶವನ್ನೇ ಗಮನಿಸಿ. ಕಳೆದುಹೋದ ನಾಯಿಯ ಬಗ್ಗೆ ಜಾಹೀರಾತು ನೀಡಲು ಹೋದ ಪತ್ರಿಕೆಯೊಂದರ ಕಚೇರಿಯಲ್ಲಿ, ಪರಿಚಯಳಾದ ಒಬ್ಬ ಪತ್ರಕರ್ತೆ, ತನ್ನ ಸಂಪಾದಕ ಹೇಳಿದ ಮಾತಿನ ಬೆನ್ನುಬಿದ್ದು ರತ್ನಾಕರನ ನಿಜ ತಾಯಿಯ ಬಗ್ಗೆ ಪತ್ತೆ ಹಚ್ಚಿ ಆತನಿಗೆ ಹೇಳುತ್ತಾಳೆ! ಸರಿ, ’ಅಪನಂಬಿಕೆಯನ್ನು ತೊಡೆದುಹಾಕುವ’ ದೃಶ್ಯಮಾಧ್ಯಮದ ಥಿಯರಿಯ ಪ್ರಕಾರವೇ ಮುಂದುವರೆದರೆ, ತನ್ನ ಹೆತ್ತತಾಯಿಯನ್ನು ಹುಡುಕುವ ಪ್ರಯತ್ನದಲ್ಲಿ ಪ್ರಯಾಣ ಬೆಳೆಸುವ ರತ್ನಾಕರನ ಮುಂದಿನ ಕಥೆ ಘನವಾದದ್ದೇನನ್ನಾದರೂ ಪ್ರೇಕ್ಷಕನಿಗೆ ದಾಟಿಸುತ್ತದೆಯೇ ಎಂದರೆ ಅಲ್ಲಿಯೂ ನಿರಾಸೆಯೇ ಕಟ್ಟಿಟ್ಟಬುತ್ತಿ. ಅತಿಭಾವುಕ ಸನ್ನಿವೇಶಗಳನ್ನು ಪ್ರೇಕ್ಷಕನ ಮೇಲೆ ಹೇರಿ ಭಾರವಾಗಿಸುವ ಹೆಚ್ಚುಗಾರಿಕೆಯಷ್ಟೇ ಸಿನಿಮಾದಲ್ಲಿ ಸಿದ್ಧಿಸಿರುವುದು. ಜೊತೆಗೆ ಕಥೆಗೆ ಪೂರಕವಲ್ಲದ ಸಂಭಾಷಣೆಗಳನ್ನು ಅಬ್ಬರದಲ್ಲಿ ತುಂಬಿರುವುದು..

ಚಿಕ್ಕಂದಿನಲ್ಲಿ ಬಡತನದ ಕಾರಣಕ್ಕಾಗಿ ತನ್ನ ಮೂರೂ ಮಕ್ಕಳನ್ನು ಮೂರು ವಿಭಿನ್ನ ಕುಟುಂಬಗಳಿಗೆ ದತ್ತುಕೊಟ್ಟಿರುವ ತಾಯಿ. ಇಲ್ಲೂ ಸಾಮಾಜಿಕ ಪರಿಸರವನ್ನು ಕಟ್ಟಿಕೊಡುವ ಅಗತ್ಯ ನಿರ್ದೇಶಕರಿಗೆ ಕಂಡುಬಂದಂತಿಲ್ಲ. ಬಡತನದ ಕಾರಣ ಹೇಳಿಬಿಟ್ಟರೆ ಸಾಕು! ಆಕೆ ಮೂರೂ ವಿಭಿನ್ನ ಸಮುದಾಯದವರಿಗೆ
ಮಕ್ಕಳನ್ನು ದತ್ತುಕೊಟ್ಟಿದ್ದಾಳೆ, ಹಾಗಾಗಿ ಸೋದರ-ಸೋದರಿಯರು ವಿಭಿನ್ನ ಧರ್ಮೀಯರಾಗಿ, ಸಮುದಾಯದವರಾಗಿ ತಮ್ಮ ಸಾಕಿದವರ ಬಳಿ, ತಾವು ಜೊತೆಯಾದವರ ಬಳಿ ಅಕ್ಕರೆಯಿಂದ ಇದ್ದಾರೆ ಎಂಬ ಉದಾತ್ತ ಆಶಯವನ್ನು ತ್ರಾಸದಾಯಕವಾಗಿ ನಿರೂಪಿಸಲು ನಿರ್ದೇಶಕ ಶ್ರಮಿಸಿದ್ದಾರೆ.

ಈ ನಿರೂಪಣೆಯಲ್ಲಿ ರತ್ನಾಕರನ ಪಾತ್ರವನ್ನು ಗಮನಿಸಿ. ತನ್ನ ನಿಜ ತಾಯಿಯ ಬಗ್ಗೆ ತಿಳಿಯುವ ಮೊದಲೇ, ಆತನ ಸಿಟ್ಟಿನ-ಹುಚ್ಚಾಟದ ವರ್ತನೆಗೆ ಗಟ್ಟಿ ಕಾರಣಗಳನ್ನು ನಿರ್ದೇಶಕ ಕಟ್ಟಿಕೊಡುವುದಿಲ್ಲ. ತನ್ನ ಹೆತ್ತ ತಾಯಿಯ ಶೋಧಕ್ಕೆ ಜತೆಯಾಗುವ ಪತ್ರಕರ್ತೆಯ ಜೊತೆಗೆ ವರ್ತಿಸುವಾಗ ವಿಜೃಂಭಿಸುವ ’ಮಿಸೋಜಿನಿ’ಗೆ ಸರಿಯಾದ ಪ್ರತಿರೋಧವನ್ನೇ ಸಿನಿಮಾದಲ್ಲಿ ಕಟ್ಟಿಕೊಡುವುದಿಲ್ಲ. ರತ್ನಾಕರನ ತಾಯಿಯ ಪಾತ್ರದ್ದೂ ಇಂತಹ ಮಿಸೋಜಿನಿಯ ಅತಿರೇಕದ ಸಂಭಾಷಣೆಯನ್ನು ಹೊತ್ತು ಮೆರೆದಿದೆ. ಮಗನಿಗೆ ಹೆಣ್ಣು ಹುಡುಕಲು ಹೋಗುವ ಸನ್ನಿವೇಶವನ್ನು ಕಟ್ಟಿಕೊಟ್ಟಿರುವ ರೀತಿ, ತನ್ನ ಸೊಸೆಯನ್ನು ಹಂಗಿಸುವ ರೀತಿ ಇವೆಲ್ಲಾ ಹಾಸ್ಯದ ಹೆಸರಿನಲ್ಲಿ ಅಭಿರುಚಿಹೀನತೆಯನ್ನು ಮೆರೆಸಿವೆ.

ಇನ್ನು ರತ್ನಾಕರ ತನ್ನ ಸಹೋದರಿಯನ್ನು ಹುಡುಕಿ ಜಮ್ಮುಕಾಶ್ಮೀರಕ್ಕೆ ತೆರಳುವುದು, ಅಲ್ಲಿ ಇನ್ನೊಬ್ಬ ಸಹೋದರನ ಬಗ್ಗೆ ತಿಳಿದು ಉತ್ತರ ಕರ್ನಾಟಕಕ್ಕೆ ತೆರಳುವುದು ಹೀಗೆ ಕಥೆಯ ಜಾಡು ಬೆಳೆಯುತ್ತದೆಯೇ ಹೊರತು ಎಲ್ಲೂ ಹೃದಯಕ್ಕೆ ಇಳಿಯುವುದಿಲ್ಲ. ರತ್ನಾಕರನ ಈ ವೈಯಕ್ತಿಕ ಬಿಕ್ಕಟ್ಟಿನಲ್ಲಿ ಸಮಾಜದ ಆಗುಹೋಗುಗಳು, ವ್ಯವಸ್ಥೆಯ ರೂಪಗಳು ಯಾವುವೂ ಪ್ರತಿಧ್ವನಿಸುವುದಿಲ್ಲ. ತನ್ನ ಹೆತ್ತ ತಾಯಿಗಿಂತ ಸಾಕಿ ಸಲಹಿದ ತಾಯಿ ಸರೋಜಾಳ ಮೇಲೆ ಪ್ರೀತಿ ಮುಖ್ಯ ಎಂದು ಬದಲಾಗುವ ರತ್ನಾಕರನ ಪಯಣದಲ್ಲಿ ಪ್ರೇಕ್ಷಕನನ್ನು ಸಹಪಯಣಿಗನನ್ನಾಗಿಸುವ ಶಕ್ತಿಯನ್ನು ಸಿನಿಮಾ ಹೊಂದಿದೆಯೇ ಎಂಬ ಪ್ರಶ್ನೆಗೆ ನಿರಾಸೆಯೇ ಉತ್ತರ! ಬಿಂಬಿಸಿರುವ ಅಬ್ಬರಕ್ಕೆ ಬದಲಾಗಿ, ಕಟ್ಟಿಕೊಡಬೇಕೆಂದುಕೊಂಡಿರುವ ಆಶಯಕ್ಕೆ ಬದಲಾಗಿ ಸಂಬಂಧಗಳ ಸೂಕ್ಷ್ಮಗಳನ್ನು ಅವಲೋಕಿಸಲು ಪ್ರಯತ್ನಿಸಿದ್ದರೆ ಸಿನಿಮಾ ತುಸುವಾದರೂ ಗಟ್ಟಿಯಾಗಿ ಮೂಡಿರುತ್ತಿತ್ತು.

ರತ್ನಾಕರನ ಪಯಣದಲ್ಲಿ ಜತೆಯಾಗುವ ಮಯೂರಿಯದ್ದೂ (ರೆಬಾ ಮೊನಿಕಾ ಜಾನ್) ಹೆಚ್ಚುಕಮ್ಮಿ ಇದೇ ರೀತಿಯ ಕಥೆ. ಬಾಲ್ಯದಲ್ಲಿಯೇ ತಂದೆತಾಯಿ ಆಕೆಯನ್ನು ತೊರೆದಿರುವುದರಿಂದ ಟ್ರಾನ್ಸ್‌ಜೆಂಡರ್ ಒಬ್ಬರು ಸಾಕಿ ಬೆಳೆಸಿದ್ದಾರೆ. ಈ ವಿಷಯ ಆಕೆಯನ್ನು ವರಿಸುವಬೇಕಾಗಿರುವವನಿಗೆ ಅಪಥ್ಯ. ಈ ಪಯಣದಲ್ಲಿ ತನ್ನ ಫಿಯಾನ್ಸಿಯನ್ನು ತೊರೆಯುವ ಧೈರ್ಯವನ್ನು ಮಯೂರಿ ಮಾಡುತ್ತಾಳೆ. ಇಲ್ಲೂ ಉದಾತ್ತವಾದ ಆಶಯಗಳನ್ನು ನಿರ್ದೇಶಕ ಇಟ್ಟುಕೊಂಡಿದ್ದರೂ, ಅದನ್ನು ಸಿನಿಮ್ಯಾಟಿಕ್ ರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸದೆ ಅದನ್ನು ತುರುಕಿದಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ.

ಆದರೆ, ರತ್ನಾಕರನ ಸಹೋದರ ಉಡಾಳನ ಪಾತ್ರವನ್ನು ವಿಜೃಂಭಿಸುವಾಗ ನಿರ್ದೇಶಕ ಉದಾರವಾಗಿ ಅದಕ್ಕೆ ಸ್ಪೇಸ್ ಕೊಡುತ್ತಾರೆ. ಉಡಾಳ ಕುಡುಕನೊಬ್ಬನನ್ನು ಬೆದರಿಸುವ ಅತಿ ಕೆಟ್ಟ ರೀತಿಯ ಸಂಭಾಷಣೆಯಿಂದ ಹಿಡಿದು, ಅದರಿಂದ ಆ ಕುಡುಕ ಸರಿಹೋಗಿ ಧನ್ಯವಾದಗಳನ್ನು ಅರ್ಪಿಸುವವರೆಗೂ ಅದಕ್ಕೆ ವಿಪುಲ ಅವಕಾಶವಿದೆ. ಹೀಗೆ ಹೆಚ್ಚು ಪುರುಷಕೇಂದ್ರಿತ ಪಾತ್ರಗಳ ವಿಜೃಂಭಣೆಯ ಎಂದಿನ ಭಾರತೀಯ ಸಿನಿಮಾಗಳ ಸಾಮಾನ್ಯ ಧಾಟಿಯನ್ನು ಈ ಚಿತ್ರವೂ ಮುಂದುವರೆಸಿದೆ. ಹಾಗೆಯೇ ಮುಸ್ಲಿಂ ಪಾತ್ರಗಳು ಕನ್ನಡ ಮಾತನಾಡುವ ಬಗೆಗೆ ಕನ್ನಡ ಸಿನಿಮಾಗಳಲ್ಲಿ ಇರುವ ಪೂರ್ವಗ್ರಹವೂ ಇಲ್ಲಿ ಮುಂದುವರೆದಿದೆ.

ಯಾವುದೇ ಕಥೆಯನ್ನು ಹೇಳುವಾಗ ಸುತ್ತಲಿನ ಪರಿಸರ ಅದಕ್ಕೆ ಹೇಗೆ ಕಾರಣ ಮತ್ತು ವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಒಳಗೊಳ್ಳುವುದು ಸಶಕ್ತ ಕಥಾನಿರೂಪಣೆಯ ಬಗೆ. ತಂತ್ರಜ್ಞಾನ, ಸಿನಿಮಾ ಬಗೆಗಿನ ಚಿಂತನೆ ಹೆಚ್ಚೆಚ್ಚು ಬೆಳೆದಂತೆ ಇದನ್ನು ದೃಶ್ಯ ಮಾಧ್ಯಮದಲ್ಲಿಯೂ ಸುಲಭವಾಗಿ ಒಳಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕಥೆಯನ್ನು ಕಟ್ಟಿಕೊಡುವಾಗ ಸೃಷ್ಟಿಸುವ ಪರಿಸರ, ಘರ್ಷಣೆಯನ್ನು ನಿರೂಪಿಸಲು ಬೇಕಾದ ಗಟ್ಟಿ ಕಾರಣಗಳು, ಅದನ್ನು ಬಗೆಹರಿಸಲು ಉಪಯೋಗಿಸುವ ತಂತ್ರ ಇವುಗಳ ಬಗ್ಗೆ ಕನ್ನಡದ ನಿರ್ದೇಶಕರು ಇನ್ನೂ ಗಂಭೀರವಾಗಿ ಚಿಂತಿಸುವುದು ಒಟ್ಟಾರೆ ಕನ್ನಡ ಸಿನಿಮಾರಂಗದ ದೃಷ್ಟಿಯಿಂದ ಒಳಿತು. ತಾಯಿ-ಮಕ್ಕಳ ಸಂಬಂಧದ ರಮಣೀಯ ಭಾವುಕತೆ ಎಂದೆಂದಿಗೂ ಸರಕಾಗುತ್ತದೆ ಎಂಬ ದೃಷ್ಟಿಕೋನದಿಂದ ಹೊರಬಂದು ಇನ್ನೂ ಆಳದ ಗ್ರಹಿಕೆಗೆ, ವಿಶಾಲವಾದ ಅವಲೋಕನಕ್ಕೆ ಮುಂದಾಗುವ ದಿನ ಕನ್ನಡ ಚಿತ್ರರಂಗಕ್ಕೆ ಶೀಘ್ರಬರಲಿ!


ಇದನ್ನೂ ಓದಿ: ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಇದನ್ನೂ ಒದಿ: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವ: ಅತ್ಯುತ್ತಮ LGBTQI+ ಚಿತ್ರ ಪ್ರಶಸ್ತಿ ಪಡೆದ ಕನ್ನಡದ ‘ನಾನು ಲೇಡಿಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...