Homeಮುಖಪುಟದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ: ರಥಗಳು ಸ್ತಬ್ಧಗೊಂಡ ಪ್ರದೇಶ

ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ: ರಥಗಳು ಸ್ತಬ್ಧಗೊಂಡ ಪ್ರದೇಶ

ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ಜಿ.ಎನ್ ದೇವಿಯವರು ನಾನುಗೌರಿ.ಕಾಂಗಾಗಿ ಬರೆದ ವಿಶೇಷ ಲೇಖನ.

- Advertisement -
- Advertisement -

ಯಾರ್ಕ್‌ಶೈರ್‌ನಲ್ಲಿ ಹುಟ್ಟಿದ ಬ್ರಿಟಿಷ್ ಸೈಕಾಲಜಿಸ್ಟ್ ಡಾ. ಜಾನ್ ಜಾಕ್ಸನ್ (1835- 1911) ಇಂದು ಇಪ್ಪತ್ತೊಂದನೇ ಶತಮಾನದ ಭಾರತಕ್ಕೆ ಹೇಗೆ ಪ್ರಸ್ತುತ ಎಂಬುದಕ್ಕೆ ಮೇಲ್ನೋಟಕ್ಕೆ ಕಾಣುವ ಯಾವುದೇ ಕಾರಣಗಳಿಲ್ಲ. ಆದರೂ, ವಿಂಧ್ಯದ ದಕ್ಷಿಣಕ್ಕಿರುವ ಭಾರತದಲ್ಲಿ, ಬಿಜೆಪಿಯ ಅಸಾಂದರ್ಭಿಕ ತಪ್ಪು ಗುರಿಗಳ ಬಗ್ಗೆ ಮತ್ತು ಅವುಗಳೊಂದಿಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಡಾ. ಜಾಕ್ಸನ್ ಮುಖ್ಯವಾಗುತ್ತಾರೆ. ಮೊದಲಿಗೆ, ಡಾ. ಜಾಕ್ಸನ್ ಬಗ್ಗೆ; ನಾವಿಕರು ವಿಶಾಲವಾದ ಸಮುದ್ರಗಳಲ್ಲಿ ವಿಹರಿಸುತ್ತಿರುವಾಗ ಅವರಿಗೆ ದಿಕ್ಕುಗಳ ಬಗ್ಗೆ ದಿಕ್ಕುತಪ್ಪುವ ಅನುಭವವಾಗುವುದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಮೊದಲ ವಿಜ್ಞಾನಿ ಡಾ. ಜಾಕ್ಸನ್. ಈ ದಿಕ್ಕುಭ್ರಮಣೆ, ಜಾಕ್ಸನ್ ಅವರು ಅದನ್ನು ’ಟೋಪೋಲಾಜಿಕಲ್ ಅಗ್ನೋಸಿಯಾ’ ಎಂದು ಕರೆಯುತ್ತಾರೆ (ಅಂದರೆ, ದಿಕ್ಕುಗಳ ಬಗ್ಗೆ ತಿಳಿವನ್ನು ಕಳೆದುಕೊಳ್ಳುವುದು). ಅವರ ಪ್ರಕಾರ ಈ ಅಗ್ನೋಸಿಯಾ ಅಗುವುದು, ಒಬ್ಬ ವ್ಯಕ್ತಿಯ ಸ್ಮರಣೆಯು ವಿರೂಪಗೊಳ್ಳುವುದರಿಂದ.

ಈ ಅಗ್ನೋಸಿಯಾದಿಂದ ಬಳಲುವ ವ್ಯಕ್ತಿಗೆ ತನಗೆ ಗೊತ್ತಿದ್ದ ತಲುಪುದಾಣದ ಬಗ್ಗೆ ನೆನಪು ಮಾಡಿಕೊಳ್ಳಲು ಆಗುವುದಿಲ್ಲ ಅನ್ನುವುದರಿಂದ ಹಿಡಿದು ಅವನು/ಳು ತುಂಬಾ ಹಿಂದೆ ನೋಡಿದ್ದ ಪ್ರಮುಖ ಹೆಗ್ಗುರುತುಗಳನ್ನು ನೆನಪಿಸಿಕೊಳ್ಳಲಾಗುವುದಿಲ್ಲ. ಡಾ. ಜಾಕ್ಸನ್‌ನ ರೋಗಿಗಳಲ್ಲಿ ಹಲವು ಮಹಿಳೆಯರಿದ್ದರು, ಆ ಮಹಿಳೆಯರಿಗೆ ಲಂಡನ್ ಸೇತುವೆ ಎಲ್ಲಿದೆ ಎಂಬುದು ತಿಳಿದಿತ್ತು, ಆದರೆ ತಮ್ಮ ಮನೆಗಳಿಂದ ಅಲ್ಲಿಗೆ ಹೇಗೆ ಹೋಗಬೇಕೆನ್ನುವುದು ತಿಳಿಯುತ್ತಿರಲಿಲ್ಲ. ಅವರ ಸ್ಮರಣೆಯಲ್ಲಿ ಈ ’ಚಿಕ್ಕ ನಕ್ಷೆಗಳು ಅಳಿಸಿಹೋಗಿದ್ದವು, ಆದರೆ ಅದೇ ಸಮಯದಲ್ಲಿ ದೊಡ್ಡ ನಕ್ಷೆಗಳು ನೆನಪಿನಲ್ಲಿ ಚೆನ್ನಾಗಿ ಉಳಿದಿದ್ದವು. ಈ ದಿಶಾಹೀನ ಪ್ರಕ್ರಿಯೆಯಲ್ಲಿ ಯುರೋಪಿನ ವಸಾಹತುಶಾಹಿ ವಿಸ್ತರಣೆ ಸ್ಪಷ್ಟವಾಗಿ ಗುರುತಿಸಿಕೊಂಡಿದೆ. ಯುರೋಪಿನ ದಕ್ಷಿಣದಿಂದ ವಸಾಹತುಶಾಹಿ ಹರಡುತ್ತಿದ್ದಾಗ, ಆ ಶಕ್ತಿಗಳು ದಕ್ಷಿಣವನ್ನು ’ಪೂರ್ವ ಎಂದು ತಿಳಿದುಕೊಂಡಿದ್ದವು. ಹಾಗೂ ಪಶ್ಚಿಮ ಮತ್ತು ಪೂರ್ವದ ಮಧ್ಯೆ ಒಂದು ಗಟ್ಟಿಯಾದ ವೈರುಧ್ಯವನ್ನು ಸೃಷ್ಟಿಸಿದ್ದರು. ಬಿಜೆಪಿಯ ’ಮಿಷನ್ ಸೌತ್ ಅನ್ನು ಟೋಪೋಲಾಜಿಕಲ್ ಅಗ್ನೋಸಿಯಾ ಎಂಬ ಪದವು ಅತ್ಯಂತ ಸೂಕ್ತವಾಗಿ ವಿವರಿಸುತ್ತದೆ.

ಉತ್ತರದ ಹಿಂದಿ ಹೃದಯಭಾಗದಲ್ಲಿ ತನ್ನ ತವರುಮನೆಯಷ್ಟು ಹಿತವನ್ನು ಅನುಭವಿಸುವ ಬಿಜೆಪಿಗೆ ದಕ್ಷಿಣದಲ್ಲಿ ತನ್ನ ದಿಕ್ಕಿನ ಬಗ್ಗೆ ಏಕೆ ಅಷ್ಟು ಗೊಂದಲ ಎಂಬುದನ್ನು ತಿಳಿದುಕೊಳ್ಳಲು, ನಾವು ಅದರ ಅಡಿಪಾಯಗಳು ಎಲ್ಲಿವೆ ಎಂಬುದರ ಸಂದರ್ಭವನ್ನು ನೋಡಬೇಕಿದೆ. ಸ್ವಾಭಾವಿಕವಾಗಿಯೇ, ಹಿಂದುತ್ವ ಸಿದ್ಧಾಂತದ ಮೂಲ ಪರಿಕಲ್ಪನೆಗಳನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ನೋಡಬೇಕಾಗುತ್ತದೆ. ಇದರ ಮೂಲದಲ್ಲಿ, ತನ್ನ ಹೃದಯದಲ್ಲಿ ’ಆರ್ಯನ್ನರೆಂಬ ಶ್ರೇಷ್ಠ ಜನಾಂಗ’ ಎಂಬ ಅವೈಜ್ಞಾನಿಕ ಮತ್ತು ಅಪ್ರಾಮಾಣಿಕವಾದ ತತ್ವ ಇದೆ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಈ ಪರಿಕಲ್ಪನೆ 19ನೇ ಶತಮಾನದ ಕೆಲವು ಯೂರೋಪಿನ ಭಾಷಾಶಾಸ್ತ್ರಜ್ಞರ ನಡುವೆ ಚಾಲ್ತಿಯಲ್ಲಿತ್ತು. ಅವರು ಅಂದುಕೊಂಡಿದ್ದೇನೆಂದರೆ, ಮುಂಚೆ ಪ್ರಸ್ತಾಪಿಸಿದ ಇಂಡೋ-ಆರ್ಯನ್ ಎಂಬ ಭಾಷೆಯ ಹೆಸರನ್ನು ಒಂದು ಸಮುದಾಯದ (ಅಥವಾ ಜನಾಂಗ) ಹೆಸರು ಎಂದು. ಅದರಲ್ಲಿ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಉತ್ತರ ಯುರೋಪಿನಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲಿ ಆರ್ಯನ್ನರು ಜೀವಿಸುತ್ತಿದ್ದರು ಎಂದು ಸಾಬೀತುಪಡಿಸುವ ಮಟ್ಟಕ್ಕೆ ಹೋಗಿದ್ದರು.

ಕಾರ್ಲ್ ಪ್ಲೆಂಕಾ ಎಂಬುವವರು ಈ ’ಶ್ರೇಷ್ಠ ಮಾಸ್ಟರ್ ಜನಾಂಗ’ವು ಪರಿಶುದ್ಧ ಆರ್ಯನ್ನರ ಮಾಸ್ಟರ್ ಜನಾಂಗ ಎಂದು ಯಾವುದೇ ಪ್ರಶ್ನೆಯಿಲ್ಲದೇ, ಅಧ್ಯಯನವಿಲ್ಲದೇ ಒಪ್ಪಿಕೊಂಡು, ಈ ಕಾಲ್ಪನಿಕ ಶ್ರೇಷ್ಠ ಮಾಸ್ಟರ್ ಜನಾಂಗಕ್ಕೆ ಒಂದು ತಾಯ್ನಾಡನ್ನೇ ಕಲ್ಪಿಸಿಕೊಟ್ಟರು. 20ನೇ ಶತಮಾನದ ಮೂರನೆಯ ದಶಕದಲ್ಲಿ ಅಡಾಲ್ಫ್ ಹಿಟ್ಲರ್‌ನು ತನ್ನ ’ರಾಷ್ಟ್ರೀಯ ಸಮಾಜವಾದ’ಕ್ಕೆ (ಎನ್‌ಎಸ್) ಈ ಸಿದ್ಧಾಂತಗಳನ್ನೇ ಬುನಾದಿಯಾಗಿ ಬಳಸಿಕೊಂಡನು ಹಾಗೂ ತನ್ನ ’ಜನಾಂಗೀಯ ಶುದ್ಧೀಕರಣ’ಕ್ಕೂ ಇವುಗಳನ್ನೇ ಬಳಸಿಕೊಂಡ. ಆರ್‌ಎಸ್‌ಎಸ್‌ನ ಸಂಸ್ಥಾಪಕರು ಹಿಟ್ಲರ್‌ನ ಸಮಕಾಲೀನರಾಗಿದ್ದು, ’ಆರ್ಯನ್ ಶ್ರೇಷ್ಠತೆ’ಯ ಸಿದ್ಧಾಂತದ ಬಗ್ಗೆ ಈ ಈರ್ವರಲ್ಲೂ ಉತ್ಸಾಹ ಅಷ್ಟೇ ಪ್ರಮಾಣದಲ್ಲಿತ್ತು. ಭಾರತದ ಜನರ ಇತಿಹಾಸದ ಬೆನ್ನಲ್ಲಿ ಇದನ್ನು ನೋಡಿದರೆ ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದರೂ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಆರ್ಯನ್ನರ (ಕಲ್ಪಿತ) ಶ್ರೇಷ್ಠತೆಯನ್ನು, ದಕ್ಷಿಣವನ್ನು ಒಳಗೊಂಡಂತೆ ಒಟ್ಟಾರೆ ಭಾರತ ಉಪಖಂಡದ ವೈವಿಧ್ಯಮಯ ಜನರ ಮೇಲೆ ಭವಿಷ್ಯದಲ್ಲಿ ಒಂದು ದಿನ ಹೇರಬಹುದು ಎಂದು ನಂಬಲಿಚ್ಛಿಸುತ್ತಾರೆ.

ಈ ಆಕಾಂಕ್ಷೆಗೆ ನೆರವಾಗಲು, ಹಿಂದು ಎಂದರೆ ಏನು ಎಂಬ ಅತ್ಯಂತ ತಪ್ಪಾಗಿ ರಚಿಸಲಾದ ಪರಿಕಲ್ಪನೆಯನ್ನು ಮುಂದುಮಾಡಿದೆ. ವಿಂಧ್ಯದ ದಕ್ಷಿಣದಲ್ಲಿರುವ ಭಾರತ ಉಪಖಂಡಕ್ಕೆ ಉತ್ತರದ ಪ್ರಾಬಲ್ಯಕ್ಕೆ ಪ್ರತಿರೋಧ ಒಡ್ಡುವ ದೀರ್ಘ ಇತಿಹಾಸವಿದೆ. ಅದರಾಚೆ, ಕಳೆದ ಮೂರು ಸಾವಿರ ವರ್ಷಗಳಿಂದ ದಕ್ಷಿಣದಲ್ಲಿ ಬೆಳೆದುಬಂದ ಆಧ್ಯಾತ್ಮ ಮತ್ತು ಆರಾಧನೆಯ ಸಂಪ್ರದಾಯ, ಪರಂಪರೆಗಳಿಗೆ ತಮ್ಮದೇ ಆದ ವಿಶಿಷ್ಟ ಮತ್ತು ಕೂಡಿ ಬೆಸೆಯುವ ಸಂಬಂಧ ಹೊಂದಿರುವ ಪಥಗಳಿವೆ. ಈ ಪಥಗಳು ಆರ್‌ಎಸ್‌ಎಸ್-ವಿಎಚ್‌ಪಿಯ ಹಿಂದೂಯಿಸಂನ ಪರಿಕಲ್ಪನೆಗೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಅಲ್ಲದೆ, ಬಸವಣ್ಣ, ಅಕ್ಕಮಹಾದೇವಿ, ಪೆರಿಯಾರ್, ಫುಲೆ, ಶಾಹು ಮತ್ತು ಅಂಬೇಡ್ಕರ್ ಅವರುಗಳು ಅತ್ಯಂತ ಸಮರ್ಥವಾಗಿ ಸಾಬೀತುಪಡಿಸಿದಂತೆ, ವಿಂಧ್ಯದ ದಕ್ಷಿಣದ ಬಹುತೇಕ ಜನರಿಗೆ ಇತಿಹಾಸದ ಈ ಸಂಕುಚಿತವಾದ, ಅಸ್ಪಷ್ಟವಾದ ಮತ್ತು ಅನ್ಯಗೊಳಿಸುವ (ಎಕ್ಸ್‌ಕ್ಲೂಷನರಿಯಾದ) ಸಾಮಾಜಿಕ ಮತ್ತು ಸಾಂಸ್ಕೃತಿಕ ತಿಳಿವಳಿಕೆಯನ್ನು ಸಂಪೂರ್ಣವಾಗಿ ಅಸಹ್ಯಕರವಾಗಿವಯೆಂದು ನಿರಾಕರಿಸಿ ತಿರಸ್ಕರಿಸುವ ಎಲ್ಲಾ ಕಾರಣಗಳಿವೆ. ಹಾಗಾಗಿ, 20ನೇ ಶತಮಾನದುದ್ದಕ್ಕೂ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ನ ನಡೆಸಿದ ಎಲ್ಲಾ ಹತಾಶ ಪ್ರಯತ್ನಗಳ ಹೊರತಾಗಿಯೂ, ದಕ್ಷಿಣದ ರಾಜ್ಯಗಳಲ್ಲಿ ಅವರ ಬೆಂಬಲ ನೆಲೆ ಅತ್ಯಲ್ಪವಾಗಿಯೇ ಉಳಿದಿದೆ.

PC : Toppr

ಆದರೆ ಇದು 2014ರಿಂದ ಬದಲಾಗಿದೆ. ಪ್ರಸ್ತುತ ಆಡಳಿತವು ಇಡಿ (ಎನ್ಫೋರ್ಸ್‌ಮೆಂಟ್ ಡೈರೊಕ್ಟೊರೇಟ್), ಸಿಬಿಐ ಮತ್ತು ಟ್ರಾಲ್ ಪಡೆಯನ್ನು ಬಳಸಿ ರಾಜಕೀಯ ನಾಯಕರನ್ನು ಬೆದರಿಸುವಲ್ಲಿ ಹಿಂದೆಂದೂ ಕಾಣದ ರಣೋತ್ಸಾಹ ಪ್ರದರ್ಶಿಸಿದೆ. ಇದು ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಜನಪ್ರಿಯ ಅಭಿಪ್ರಾಯವನ್ನು ಸೃಷ್ಟಿಸುವುದಕ್ಕೆ ಪೋಸ್ಟ್-ಟ್ರೂತ್ ಮತ್ತು ಪ್ರಪಗಾಂಡವನ್ನು ಬಳಸುವಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದೆ. ಮಾಧ್ಯಮಗಳ ಮೌಲ್ಯಕುಸಿತ ಮತ್ತು ಪ್ರಜಾಪ್ರಭುತ್ವವನ್ನು ಸುರಕ್ಷಿತವಾಗಿಡುವ ಸಾಂವಿಧಾನಿಕ ವ್ಯವಸ್ಥೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿದ್ದ ಸಂಸ್ಥೆಗಳ ಕುಸಿದು ಬೀಳುತ್ತಿರುವ ಕಾರಣದಿಂದ ಬಿಜೆಪಿಯ ಮಿಷನ್ ಸೌತ್ ಯಶಸ್ವಿಯಾಗುವ ಅವಕಾಶಗಳನ್ನು ಹೆಚ್ಚಿಸಿವೆ. ಅಲ್ಲದೆ, ಪಕ್ಷ ಬದಲಾಯಿಸಲಿಕ್ಕೆ ಹಣದ ಬಳಕೆ ಮಾಡುವ ತಂತ್ರವನ್ನು ಬಿಜೆಪಿ ಕರಗತಮಾಡಿಕೊಂಡಿದೆ. ಈ ಎಲ್ಲಾ ಅಂಶಗಳು ತೋಳ್ಬಲದ ಬಳಕೆ, ಅಧಿಕೃತ ಆಡಳಿತ ವ್ಯವಸ್ಥೆಯ (ಕಾರ್ಯಾಂಗ) ದುರ್ಬಳಕೆ, ಹಣ, ಬೆದರಿಕೆ ಮತ್ತು ಪ್ರಪಗಾಂಡ – ಇವೆಲ್ಲವುಗಳು ಸೇರಿ ಬಿಜೆಪಿಯ ಒಡಕು ಮೂಡಿಸುವ, ಅನ್ಯಗೊಳಿಸುವ ಮತ್ತು ಸಂಕುಚಿತವಾದ ರಾಷ್ಟ್ರೀಯತೆ ತಳವೂರಲು ಪೂರಕವಾಗುವಷ್ಟು ದಕ್ಷಿಣವನ್ನು ದುರ್ಬಲಗೊಳಿಸುತ್ತಿವೆ.

ರಾಷ್ಟ್ರೀಯತೆಯ ತಪ್ಪುತಪ್ಪಾದ ಪರಿಕಲ್ಪನೆಗಳನ್ನು ಮತ್ತು ಇತರರನ್ನು ಅನ್ಯವಾಗಿಸುವ ಧರ್ಮದ ಸಂಕುಚಿತವಾದದ ದೃಷ್ಟಿಕೋನವನ್ನು ಹಿಮ್ಮೆಟ್ಟಿಸುವುದು ವಿಂಧ್ಯದ ದಕ್ಷಿಣ ಭಾಗದ ಜನರ, ಭಾಷಾ-ಸಮುದಾಯಗಳು ಮತ್ತು ರಾಜಕೀಯ ಪಕ್ಷಗಳ ತುರ್ತು ಅಗತ್ಯವಾಗಿದೆ. ಬಹುಶಃ, ಅವರು ಮಾತ್ರ ಈಗ ಈ ಸಾಮರ್ಥ್ಯವನ್ನು ಹೊಂದಿದ್ದಾರೆ, ಏಕೆಂದರೆ, ’ಹಿಂದಿ, ಹಿಂದು, ಹಿಂದುಸ್ತಾನ್ ಎಂಬ ರಾಗವು ಹಿಂದಿಹೃದಯದ ಜನರನ್ನು ಮತ್ತು ರಾಜ್ಯಗಳನ್ನು ವಶಪಡಿಸಿಕೊಂಡಿದೆ. ಆದರೆ, ಹಿಂದುತ್ವದ ಮತ್ತು ಹುಸಿ ರಾಷ್ಟ್ರೀಯತೆಯ ದಾಳಿಯನ್ನು 21ನೇ ಶತಮಾನದ ಮೂರನೇ ದಶಕದಲ್ಲಿ ವರ್ಗ ಆಧಾರಿತ ಅಥವಾ ಜಾತಿ ಆಧಾರಿತ ತಿಳಿವಳಿಕೆ ಆಧಾರದ ವಿಶ್ಲೇಷಣೆ ಮತ್ತು ಸವೆದು ಹೋದ ನುಡಿಗಟ್ಟುಗಳನ್ನು ಹೇಳುವುದರಿಂದ ಹಿಮ್ಮೆಟ್ಟಿಸಬಹುದೆಂದು ನಂಬಿಕೊಂಡರೆ ಅದು ಮುಗ್ಧತೆಯಾದೀತು. ಅದರೊಂದಿಗೆ, ಯಾವುದೇ ಭೌಗೋಳಿಕ, ಭಾಷಾವಾರು ಅಥವಾ ಸಾಮಾಜಿಕ ಗುಂಪುಗಾರಿಕೆಯ ಕಡು ವಿರೋಧಿಯಾಗಿರುವ ನಾವುಗಳು ತಮ್ಮ ರಾಜಕೀಯ ಮತ್ತು ರಾಜಕೀಯ ನುಡಿಗಟ್ಟನ್ನು ಮರುಶೋಧಿಸಬೇಕಿದೆ. ಸಂಪೂರ್ಣವಾಗಿ ಸಂವಿಧಾನದ ಚೌಕಟ್ಟಿನಲ್ಲಿಯೇ ಉಳಿದುಕೊಂಡು, ದಕ್ಷಿಣದ ರಾಜ್ಯಗಳು ಮತ್ತು ಜನರು ಭಾರತದ ಉಳಿದ ಭಾಗಕ್ಕೆ ನೀಡಬಹುದಾದ ಒಂದು ಪ್ರಬಲ ಸಂದೇಶವೆಂದರೆ, ಅದು ಒಕ್ಕೂಟ ವ್ಯವಸ್ಥೆ ಅಥವಾ ಫೆಡರಲಿಸಂಗೆ ಸಂಬಂಧಿಸಿದ್ದು.

ಸಂವಿಧಾನವು ನಮ್ಮ ದೇಶವನ್ನು ’ರಾಜ್ಯಗಳ ಒಕ್ಕೂಟ’ ಎಂದು ಕರೆದಿದೆ. ಹಾಗೂ ಈ ಒಕ್ಕೂಟವನ್ನು ಅಖಂಡವಾಗಿ ಉಳಿಸಿಕೊಳ್ಳುವ ಸಲುವಾಗಿ ನಿಯಮಗಳನ್ನು ಹೊಂದಿದೆ ಹಾಗೂ ವೈವಿಧ್ಯತೆ ಮತ್ತು ಭಿನ್ನತೆಗಳನ್ನು ಗೌರವಿಸಿ ಒಗ್ಗಟ್ಟಾಗುವಂತೆ ಹೇಳುತ್ತದೆ. ಹಾಗಾಗಿ, ಒಕ್ಕೂಟ ವ್ಯವಸ್ಥೆಯ ಸಿದ್ಧಾಂತದ ಮೇಲೆ ಒತ್ತುನೀಡುವುದು ಎಂದರೆ ಸಾಂವಿಧಾನಿಕ ಮೌಲ್ಯಗಳ ಮೇಲೆ ನಾವು ಒತ್ತುನೀಡಿದಂತೆ. ಅದು ವೈವಿಧ್ಯತೆಯನ್ನು, ಬಹುತ್ವವನ್ನು ಗುರುತಿಸುವ ಮತ್ತು ಗೌರವಿಸುವ ಅವಶ್ಯಕತೆಗೆ ಒತ್ತು ನೀಡಿದಂತಾಗುತ್ತದೆ. ಹಾಗಾಗಿ, ಅದರಿಂದ ಆರ್‌ಎಸ್‌ಎಸ್-ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ನಿರಾಕರಿಸಿದಂತೆ ಆಗುತ್ತದೆ.

ವಿಂಧ್ಯದ ದಕ್ಷಿಣದಲ್ಲಿರುವ ರಾಜ್ಯಗಳಲ್ಲಿಯ ಸಮುದಾಯಗಳು, ಚಳವಳಿಗಳು, ಭಾಷಾವಾರು ಗುಂಪುಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಥಗಳು ಮತ್ತು ಸಾಂಸ್ಕೃತಿಕ ಉದ್ಯಮಗಳು ಈ ತಿಳಿವಳಿಕೆಯನ್ನು ಒಪ್ಪಿಕೊಂಡಲ್ಲಿ, ಅವರೆಲ್ಲಾ ಜೊತೆಗೂಡಿ, ಬಿಜೆಪಿಯನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸಬಹುದು ಹಾಗೂ ಭಾರತದಲ್ಲಿ ಫ್ಯಾಸಿಸಂನ ಅದೃಷ್ಟವನ್ನು ಹಿಮ್ಮೆಟ್ಟಿಸಬಹುದು. ಇದು ಭಾರತಕ್ಕಾಗಿ, ನಮ್ಮ ಪವಿತ್ರ ದೇಶಕ್ಕಾಗಿ ನಾವು ಮಾಡಬೇಕಾದ ಕರ್ತವ್ಯವಾಗಿದೆ. ಕಳೆದ ಸಾವಿರ ವರ್ಷಗಳಲ್ಲಿ ದಕ್ಷಿಣವು ಕಟ್ಟಿದ ನಾಗರಿಕತೆಯ ಅಸಾಧಾರಣ ಪರಂಪರೆಗೆ ಮಾಡಬೇಕಾದ ಕರ್ತವ್ಯವಾಗಿದೆ.

ನಾಗರಿಕರ ಮತ್ತು ಸಾಮಾಜಿಕ ಕಾರ್ಯಕರ್ತರ ಒಂದು ಸಾಮೂಹಿಕ ವೇದಿಕೆಯಾದ ದಿ ಸೌತ್ ಫೋರಮ್, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

  • ಜಿ ಎನ್ ದೇವಿ

ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವ ಶಕ್ತಿಗಳು ಮೇಲುಗೈ ಪಡೆದಿದ್ದು ಹೇಗೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...