Homeಮುಖಪುಟದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ: ರಥಗಳು ಸ್ತಬ್ಧಗೊಂಡ ಪ್ರದೇಶ

ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ: ರಥಗಳು ಸ್ತಬ್ಧಗೊಂಡ ಪ್ರದೇಶ

ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ಜಿ.ಎನ್ ದೇವಿಯವರು ನಾನುಗೌರಿ.ಕಾಂಗಾಗಿ ಬರೆದ ವಿಶೇಷ ಲೇಖನ.

- Advertisement -
- Advertisement -

ಯಾರ್ಕ್‌ಶೈರ್‌ನಲ್ಲಿ ಹುಟ್ಟಿದ ಬ್ರಿಟಿಷ್ ಸೈಕಾಲಜಿಸ್ಟ್ ಡಾ. ಜಾನ್ ಜಾಕ್ಸನ್ (1835- 1911) ಇಂದು ಇಪ್ಪತ್ತೊಂದನೇ ಶತಮಾನದ ಭಾರತಕ್ಕೆ ಹೇಗೆ ಪ್ರಸ್ತುತ ಎಂಬುದಕ್ಕೆ ಮೇಲ್ನೋಟಕ್ಕೆ ಕಾಣುವ ಯಾವುದೇ ಕಾರಣಗಳಿಲ್ಲ. ಆದರೂ, ವಿಂಧ್ಯದ ದಕ್ಷಿಣಕ್ಕಿರುವ ಭಾರತದಲ್ಲಿ, ಬಿಜೆಪಿಯ ಅಸಾಂದರ್ಭಿಕ ತಪ್ಪು ಗುರಿಗಳ ಬಗ್ಗೆ ಮತ್ತು ಅವುಗಳೊಂದಿಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಡಾ. ಜಾಕ್ಸನ್ ಮುಖ್ಯವಾಗುತ್ತಾರೆ. ಮೊದಲಿಗೆ, ಡಾ. ಜಾಕ್ಸನ್ ಬಗ್ಗೆ; ನಾವಿಕರು ವಿಶಾಲವಾದ ಸಮುದ್ರಗಳಲ್ಲಿ ವಿಹರಿಸುತ್ತಿರುವಾಗ ಅವರಿಗೆ ದಿಕ್ಕುಗಳ ಬಗ್ಗೆ ದಿಕ್ಕುತಪ್ಪುವ ಅನುಭವವಾಗುವುದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಮೊದಲ ವಿಜ್ಞಾನಿ ಡಾ. ಜಾಕ್ಸನ್. ಈ ದಿಕ್ಕುಭ್ರಮಣೆ, ಜಾಕ್ಸನ್ ಅವರು ಅದನ್ನು ’ಟೋಪೋಲಾಜಿಕಲ್ ಅಗ್ನೋಸಿಯಾ’ ಎಂದು ಕರೆಯುತ್ತಾರೆ (ಅಂದರೆ, ದಿಕ್ಕುಗಳ ಬಗ್ಗೆ ತಿಳಿವನ್ನು ಕಳೆದುಕೊಳ್ಳುವುದು). ಅವರ ಪ್ರಕಾರ ಈ ಅಗ್ನೋಸಿಯಾ ಅಗುವುದು, ಒಬ್ಬ ವ್ಯಕ್ತಿಯ ಸ್ಮರಣೆಯು ವಿರೂಪಗೊಳ್ಳುವುದರಿಂದ.

ಈ ಅಗ್ನೋಸಿಯಾದಿಂದ ಬಳಲುವ ವ್ಯಕ್ತಿಗೆ ತನಗೆ ಗೊತ್ತಿದ್ದ ತಲುಪುದಾಣದ ಬಗ್ಗೆ ನೆನಪು ಮಾಡಿಕೊಳ್ಳಲು ಆಗುವುದಿಲ್ಲ ಅನ್ನುವುದರಿಂದ ಹಿಡಿದು ಅವನು/ಳು ತುಂಬಾ ಹಿಂದೆ ನೋಡಿದ್ದ ಪ್ರಮುಖ ಹೆಗ್ಗುರುತುಗಳನ್ನು ನೆನಪಿಸಿಕೊಳ್ಳಲಾಗುವುದಿಲ್ಲ. ಡಾ. ಜಾಕ್ಸನ್‌ನ ರೋಗಿಗಳಲ್ಲಿ ಹಲವು ಮಹಿಳೆಯರಿದ್ದರು, ಆ ಮಹಿಳೆಯರಿಗೆ ಲಂಡನ್ ಸೇತುವೆ ಎಲ್ಲಿದೆ ಎಂಬುದು ತಿಳಿದಿತ್ತು, ಆದರೆ ತಮ್ಮ ಮನೆಗಳಿಂದ ಅಲ್ಲಿಗೆ ಹೇಗೆ ಹೋಗಬೇಕೆನ್ನುವುದು ತಿಳಿಯುತ್ತಿರಲಿಲ್ಲ. ಅವರ ಸ್ಮರಣೆಯಲ್ಲಿ ಈ ’ಚಿಕ್ಕ ನಕ್ಷೆಗಳು ಅಳಿಸಿಹೋಗಿದ್ದವು, ಆದರೆ ಅದೇ ಸಮಯದಲ್ಲಿ ದೊಡ್ಡ ನಕ್ಷೆಗಳು ನೆನಪಿನಲ್ಲಿ ಚೆನ್ನಾಗಿ ಉಳಿದಿದ್ದವು. ಈ ದಿಶಾಹೀನ ಪ್ರಕ್ರಿಯೆಯಲ್ಲಿ ಯುರೋಪಿನ ವಸಾಹತುಶಾಹಿ ವಿಸ್ತರಣೆ ಸ್ಪಷ್ಟವಾಗಿ ಗುರುತಿಸಿಕೊಂಡಿದೆ. ಯುರೋಪಿನ ದಕ್ಷಿಣದಿಂದ ವಸಾಹತುಶಾಹಿ ಹರಡುತ್ತಿದ್ದಾಗ, ಆ ಶಕ್ತಿಗಳು ದಕ್ಷಿಣವನ್ನು ’ಪೂರ್ವ ಎಂದು ತಿಳಿದುಕೊಂಡಿದ್ದವು. ಹಾಗೂ ಪಶ್ಚಿಮ ಮತ್ತು ಪೂರ್ವದ ಮಧ್ಯೆ ಒಂದು ಗಟ್ಟಿಯಾದ ವೈರುಧ್ಯವನ್ನು ಸೃಷ್ಟಿಸಿದ್ದರು. ಬಿಜೆಪಿಯ ’ಮಿಷನ್ ಸೌತ್ ಅನ್ನು ಟೋಪೋಲಾಜಿಕಲ್ ಅಗ್ನೋಸಿಯಾ ಎಂಬ ಪದವು ಅತ್ಯಂತ ಸೂಕ್ತವಾಗಿ ವಿವರಿಸುತ್ತದೆ.

ಉತ್ತರದ ಹಿಂದಿ ಹೃದಯಭಾಗದಲ್ಲಿ ತನ್ನ ತವರುಮನೆಯಷ್ಟು ಹಿತವನ್ನು ಅನುಭವಿಸುವ ಬಿಜೆಪಿಗೆ ದಕ್ಷಿಣದಲ್ಲಿ ತನ್ನ ದಿಕ್ಕಿನ ಬಗ್ಗೆ ಏಕೆ ಅಷ್ಟು ಗೊಂದಲ ಎಂಬುದನ್ನು ತಿಳಿದುಕೊಳ್ಳಲು, ನಾವು ಅದರ ಅಡಿಪಾಯಗಳು ಎಲ್ಲಿವೆ ಎಂಬುದರ ಸಂದರ್ಭವನ್ನು ನೋಡಬೇಕಿದೆ. ಸ್ವಾಭಾವಿಕವಾಗಿಯೇ, ಹಿಂದುತ್ವ ಸಿದ್ಧಾಂತದ ಮೂಲ ಪರಿಕಲ್ಪನೆಗಳನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ನೋಡಬೇಕಾಗುತ್ತದೆ. ಇದರ ಮೂಲದಲ್ಲಿ, ತನ್ನ ಹೃದಯದಲ್ಲಿ ’ಆರ್ಯನ್ನರೆಂಬ ಶ್ರೇಷ್ಠ ಜನಾಂಗ’ ಎಂಬ ಅವೈಜ್ಞಾನಿಕ ಮತ್ತು ಅಪ್ರಾಮಾಣಿಕವಾದ ತತ್ವ ಇದೆ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಈ ಪರಿಕಲ್ಪನೆ 19ನೇ ಶತಮಾನದ ಕೆಲವು ಯೂರೋಪಿನ ಭಾಷಾಶಾಸ್ತ್ರಜ್ಞರ ನಡುವೆ ಚಾಲ್ತಿಯಲ್ಲಿತ್ತು. ಅವರು ಅಂದುಕೊಂಡಿದ್ದೇನೆಂದರೆ, ಮುಂಚೆ ಪ್ರಸ್ತಾಪಿಸಿದ ಇಂಡೋ-ಆರ್ಯನ್ ಎಂಬ ಭಾಷೆಯ ಹೆಸರನ್ನು ಒಂದು ಸಮುದಾಯದ (ಅಥವಾ ಜನಾಂಗ) ಹೆಸರು ಎಂದು. ಅದರಲ್ಲಿ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಉತ್ತರ ಯುರೋಪಿನಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲಿ ಆರ್ಯನ್ನರು ಜೀವಿಸುತ್ತಿದ್ದರು ಎಂದು ಸಾಬೀತುಪಡಿಸುವ ಮಟ್ಟಕ್ಕೆ ಹೋಗಿದ್ದರು.

ಕಾರ್ಲ್ ಪ್ಲೆಂಕಾ ಎಂಬುವವರು ಈ ’ಶ್ರೇಷ್ಠ ಮಾಸ್ಟರ್ ಜನಾಂಗ’ವು ಪರಿಶುದ್ಧ ಆರ್ಯನ್ನರ ಮಾಸ್ಟರ್ ಜನಾಂಗ ಎಂದು ಯಾವುದೇ ಪ್ರಶ್ನೆಯಿಲ್ಲದೇ, ಅಧ್ಯಯನವಿಲ್ಲದೇ ಒಪ್ಪಿಕೊಂಡು, ಈ ಕಾಲ್ಪನಿಕ ಶ್ರೇಷ್ಠ ಮಾಸ್ಟರ್ ಜನಾಂಗಕ್ಕೆ ಒಂದು ತಾಯ್ನಾಡನ್ನೇ ಕಲ್ಪಿಸಿಕೊಟ್ಟರು. 20ನೇ ಶತಮಾನದ ಮೂರನೆಯ ದಶಕದಲ್ಲಿ ಅಡಾಲ್ಫ್ ಹಿಟ್ಲರ್‌ನು ತನ್ನ ’ರಾಷ್ಟ್ರೀಯ ಸಮಾಜವಾದ’ಕ್ಕೆ (ಎನ್‌ಎಸ್) ಈ ಸಿದ್ಧಾಂತಗಳನ್ನೇ ಬುನಾದಿಯಾಗಿ ಬಳಸಿಕೊಂಡನು ಹಾಗೂ ತನ್ನ ’ಜನಾಂಗೀಯ ಶುದ್ಧೀಕರಣ’ಕ್ಕೂ ಇವುಗಳನ್ನೇ ಬಳಸಿಕೊಂಡ. ಆರ್‌ಎಸ್‌ಎಸ್‌ನ ಸಂಸ್ಥಾಪಕರು ಹಿಟ್ಲರ್‌ನ ಸಮಕಾಲೀನರಾಗಿದ್ದು, ’ಆರ್ಯನ್ ಶ್ರೇಷ್ಠತೆ’ಯ ಸಿದ್ಧಾಂತದ ಬಗ್ಗೆ ಈ ಈರ್ವರಲ್ಲೂ ಉತ್ಸಾಹ ಅಷ್ಟೇ ಪ್ರಮಾಣದಲ್ಲಿತ್ತು. ಭಾರತದ ಜನರ ಇತಿಹಾಸದ ಬೆನ್ನಲ್ಲಿ ಇದನ್ನು ನೋಡಿದರೆ ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದರೂ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಆರ್ಯನ್ನರ (ಕಲ್ಪಿತ) ಶ್ರೇಷ್ಠತೆಯನ್ನು, ದಕ್ಷಿಣವನ್ನು ಒಳಗೊಂಡಂತೆ ಒಟ್ಟಾರೆ ಭಾರತ ಉಪಖಂಡದ ವೈವಿಧ್ಯಮಯ ಜನರ ಮೇಲೆ ಭವಿಷ್ಯದಲ್ಲಿ ಒಂದು ದಿನ ಹೇರಬಹುದು ಎಂದು ನಂಬಲಿಚ್ಛಿಸುತ್ತಾರೆ.

ಈ ಆಕಾಂಕ್ಷೆಗೆ ನೆರವಾಗಲು, ಹಿಂದು ಎಂದರೆ ಏನು ಎಂಬ ಅತ್ಯಂತ ತಪ್ಪಾಗಿ ರಚಿಸಲಾದ ಪರಿಕಲ್ಪನೆಯನ್ನು ಮುಂದುಮಾಡಿದೆ. ವಿಂಧ್ಯದ ದಕ್ಷಿಣದಲ್ಲಿರುವ ಭಾರತ ಉಪಖಂಡಕ್ಕೆ ಉತ್ತರದ ಪ್ರಾಬಲ್ಯಕ್ಕೆ ಪ್ರತಿರೋಧ ಒಡ್ಡುವ ದೀರ್ಘ ಇತಿಹಾಸವಿದೆ. ಅದರಾಚೆ, ಕಳೆದ ಮೂರು ಸಾವಿರ ವರ್ಷಗಳಿಂದ ದಕ್ಷಿಣದಲ್ಲಿ ಬೆಳೆದುಬಂದ ಆಧ್ಯಾತ್ಮ ಮತ್ತು ಆರಾಧನೆಯ ಸಂಪ್ರದಾಯ, ಪರಂಪರೆಗಳಿಗೆ ತಮ್ಮದೇ ಆದ ವಿಶಿಷ್ಟ ಮತ್ತು ಕೂಡಿ ಬೆಸೆಯುವ ಸಂಬಂಧ ಹೊಂದಿರುವ ಪಥಗಳಿವೆ. ಈ ಪಥಗಳು ಆರ್‌ಎಸ್‌ಎಸ್-ವಿಎಚ್‌ಪಿಯ ಹಿಂದೂಯಿಸಂನ ಪರಿಕಲ್ಪನೆಗೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಅಲ್ಲದೆ, ಬಸವಣ್ಣ, ಅಕ್ಕಮಹಾದೇವಿ, ಪೆರಿಯಾರ್, ಫುಲೆ, ಶಾಹು ಮತ್ತು ಅಂಬೇಡ್ಕರ್ ಅವರುಗಳು ಅತ್ಯಂತ ಸಮರ್ಥವಾಗಿ ಸಾಬೀತುಪಡಿಸಿದಂತೆ, ವಿಂಧ್ಯದ ದಕ್ಷಿಣದ ಬಹುತೇಕ ಜನರಿಗೆ ಇತಿಹಾಸದ ಈ ಸಂಕುಚಿತವಾದ, ಅಸ್ಪಷ್ಟವಾದ ಮತ್ತು ಅನ್ಯಗೊಳಿಸುವ (ಎಕ್ಸ್‌ಕ್ಲೂಷನರಿಯಾದ) ಸಾಮಾಜಿಕ ಮತ್ತು ಸಾಂಸ್ಕೃತಿಕ ತಿಳಿವಳಿಕೆಯನ್ನು ಸಂಪೂರ್ಣವಾಗಿ ಅಸಹ್ಯಕರವಾಗಿವಯೆಂದು ನಿರಾಕರಿಸಿ ತಿರಸ್ಕರಿಸುವ ಎಲ್ಲಾ ಕಾರಣಗಳಿವೆ. ಹಾಗಾಗಿ, 20ನೇ ಶತಮಾನದುದ್ದಕ್ಕೂ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ನ ನಡೆಸಿದ ಎಲ್ಲಾ ಹತಾಶ ಪ್ರಯತ್ನಗಳ ಹೊರತಾಗಿಯೂ, ದಕ್ಷಿಣದ ರಾಜ್ಯಗಳಲ್ಲಿ ಅವರ ಬೆಂಬಲ ನೆಲೆ ಅತ್ಯಲ್ಪವಾಗಿಯೇ ಉಳಿದಿದೆ.

PC : Toppr

ಆದರೆ ಇದು 2014ರಿಂದ ಬದಲಾಗಿದೆ. ಪ್ರಸ್ತುತ ಆಡಳಿತವು ಇಡಿ (ಎನ್ಫೋರ್ಸ್‌ಮೆಂಟ್ ಡೈರೊಕ್ಟೊರೇಟ್), ಸಿಬಿಐ ಮತ್ತು ಟ್ರಾಲ್ ಪಡೆಯನ್ನು ಬಳಸಿ ರಾಜಕೀಯ ನಾಯಕರನ್ನು ಬೆದರಿಸುವಲ್ಲಿ ಹಿಂದೆಂದೂ ಕಾಣದ ರಣೋತ್ಸಾಹ ಪ್ರದರ್ಶಿಸಿದೆ. ಇದು ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಜನಪ್ರಿಯ ಅಭಿಪ್ರಾಯವನ್ನು ಸೃಷ್ಟಿಸುವುದಕ್ಕೆ ಪೋಸ್ಟ್-ಟ್ರೂತ್ ಮತ್ತು ಪ್ರಪಗಾಂಡವನ್ನು ಬಳಸುವಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದೆ. ಮಾಧ್ಯಮಗಳ ಮೌಲ್ಯಕುಸಿತ ಮತ್ತು ಪ್ರಜಾಪ್ರಭುತ್ವವನ್ನು ಸುರಕ್ಷಿತವಾಗಿಡುವ ಸಾಂವಿಧಾನಿಕ ವ್ಯವಸ್ಥೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿದ್ದ ಸಂಸ್ಥೆಗಳ ಕುಸಿದು ಬೀಳುತ್ತಿರುವ ಕಾರಣದಿಂದ ಬಿಜೆಪಿಯ ಮಿಷನ್ ಸೌತ್ ಯಶಸ್ವಿಯಾಗುವ ಅವಕಾಶಗಳನ್ನು ಹೆಚ್ಚಿಸಿವೆ. ಅಲ್ಲದೆ, ಪಕ್ಷ ಬದಲಾಯಿಸಲಿಕ್ಕೆ ಹಣದ ಬಳಕೆ ಮಾಡುವ ತಂತ್ರವನ್ನು ಬಿಜೆಪಿ ಕರಗತಮಾಡಿಕೊಂಡಿದೆ. ಈ ಎಲ್ಲಾ ಅಂಶಗಳು ತೋಳ್ಬಲದ ಬಳಕೆ, ಅಧಿಕೃತ ಆಡಳಿತ ವ್ಯವಸ್ಥೆಯ (ಕಾರ್ಯಾಂಗ) ದುರ್ಬಳಕೆ, ಹಣ, ಬೆದರಿಕೆ ಮತ್ತು ಪ್ರಪಗಾಂಡ – ಇವೆಲ್ಲವುಗಳು ಸೇರಿ ಬಿಜೆಪಿಯ ಒಡಕು ಮೂಡಿಸುವ, ಅನ್ಯಗೊಳಿಸುವ ಮತ್ತು ಸಂಕುಚಿತವಾದ ರಾಷ್ಟ್ರೀಯತೆ ತಳವೂರಲು ಪೂರಕವಾಗುವಷ್ಟು ದಕ್ಷಿಣವನ್ನು ದುರ್ಬಲಗೊಳಿಸುತ್ತಿವೆ.

ರಾಷ್ಟ್ರೀಯತೆಯ ತಪ್ಪುತಪ್ಪಾದ ಪರಿಕಲ್ಪನೆಗಳನ್ನು ಮತ್ತು ಇತರರನ್ನು ಅನ್ಯವಾಗಿಸುವ ಧರ್ಮದ ಸಂಕುಚಿತವಾದದ ದೃಷ್ಟಿಕೋನವನ್ನು ಹಿಮ್ಮೆಟ್ಟಿಸುವುದು ವಿಂಧ್ಯದ ದಕ್ಷಿಣ ಭಾಗದ ಜನರ, ಭಾಷಾ-ಸಮುದಾಯಗಳು ಮತ್ತು ರಾಜಕೀಯ ಪಕ್ಷಗಳ ತುರ್ತು ಅಗತ್ಯವಾಗಿದೆ. ಬಹುಶಃ, ಅವರು ಮಾತ್ರ ಈಗ ಈ ಸಾಮರ್ಥ್ಯವನ್ನು ಹೊಂದಿದ್ದಾರೆ, ಏಕೆಂದರೆ, ’ಹಿಂದಿ, ಹಿಂದು, ಹಿಂದುಸ್ತಾನ್ ಎಂಬ ರಾಗವು ಹಿಂದಿಹೃದಯದ ಜನರನ್ನು ಮತ್ತು ರಾಜ್ಯಗಳನ್ನು ವಶಪಡಿಸಿಕೊಂಡಿದೆ. ಆದರೆ, ಹಿಂದುತ್ವದ ಮತ್ತು ಹುಸಿ ರಾಷ್ಟ್ರೀಯತೆಯ ದಾಳಿಯನ್ನು 21ನೇ ಶತಮಾನದ ಮೂರನೇ ದಶಕದಲ್ಲಿ ವರ್ಗ ಆಧಾರಿತ ಅಥವಾ ಜಾತಿ ಆಧಾರಿತ ತಿಳಿವಳಿಕೆ ಆಧಾರದ ವಿಶ್ಲೇಷಣೆ ಮತ್ತು ಸವೆದು ಹೋದ ನುಡಿಗಟ್ಟುಗಳನ್ನು ಹೇಳುವುದರಿಂದ ಹಿಮ್ಮೆಟ್ಟಿಸಬಹುದೆಂದು ನಂಬಿಕೊಂಡರೆ ಅದು ಮುಗ್ಧತೆಯಾದೀತು. ಅದರೊಂದಿಗೆ, ಯಾವುದೇ ಭೌಗೋಳಿಕ, ಭಾಷಾವಾರು ಅಥವಾ ಸಾಮಾಜಿಕ ಗುಂಪುಗಾರಿಕೆಯ ಕಡು ವಿರೋಧಿಯಾಗಿರುವ ನಾವುಗಳು ತಮ್ಮ ರಾಜಕೀಯ ಮತ್ತು ರಾಜಕೀಯ ನುಡಿಗಟ್ಟನ್ನು ಮರುಶೋಧಿಸಬೇಕಿದೆ. ಸಂಪೂರ್ಣವಾಗಿ ಸಂವಿಧಾನದ ಚೌಕಟ್ಟಿನಲ್ಲಿಯೇ ಉಳಿದುಕೊಂಡು, ದಕ್ಷಿಣದ ರಾಜ್ಯಗಳು ಮತ್ತು ಜನರು ಭಾರತದ ಉಳಿದ ಭಾಗಕ್ಕೆ ನೀಡಬಹುದಾದ ಒಂದು ಪ್ರಬಲ ಸಂದೇಶವೆಂದರೆ, ಅದು ಒಕ್ಕೂಟ ವ್ಯವಸ್ಥೆ ಅಥವಾ ಫೆಡರಲಿಸಂಗೆ ಸಂಬಂಧಿಸಿದ್ದು.

ಸಂವಿಧಾನವು ನಮ್ಮ ದೇಶವನ್ನು ’ರಾಜ್ಯಗಳ ಒಕ್ಕೂಟ’ ಎಂದು ಕರೆದಿದೆ. ಹಾಗೂ ಈ ಒಕ್ಕೂಟವನ್ನು ಅಖಂಡವಾಗಿ ಉಳಿಸಿಕೊಳ್ಳುವ ಸಲುವಾಗಿ ನಿಯಮಗಳನ್ನು ಹೊಂದಿದೆ ಹಾಗೂ ವೈವಿಧ್ಯತೆ ಮತ್ತು ಭಿನ್ನತೆಗಳನ್ನು ಗೌರವಿಸಿ ಒಗ್ಗಟ್ಟಾಗುವಂತೆ ಹೇಳುತ್ತದೆ. ಹಾಗಾಗಿ, ಒಕ್ಕೂಟ ವ್ಯವಸ್ಥೆಯ ಸಿದ್ಧಾಂತದ ಮೇಲೆ ಒತ್ತುನೀಡುವುದು ಎಂದರೆ ಸಾಂವಿಧಾನಿಕ ಮೌಲ್ಯಗಳ ಮೇಲೆ ನಾವು ಒತ್ತುನೀಡಿದಂತೆ. ಅದು ವೈವಿಧ್ಯತೆಯನ್ನು, ಬಹುತ್ವವನ್ನು ಗುರುತಿಸುವ ಮತ್ತು ಗೌರವಿಸುವ ಅವಶ್ಯಕತೆಗೆ ಒತ್ತು ನೀಡಿದಂತಾಗುತ್ತದೆ. ಹಾಗಾಗಿ, ಅದರಿಂದ ಆರ್‌ಎಸ್‌ಎಸ್-ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ನಿರಾಕರಿಸಿದಂತೆ ಆಗುತ್ತದೆ.

ವಿಂಧ್ಯದ ದಕ್ಷಿಣದಲ್ಲಿರುವ ರಾಜ್ಯಗಳಲ್ಲಿಯ ಸಮುದಾಯಗಳು, ಚಳವಳಿಗಳು, ಭಾಷಾವಾರು ಗುಂಪುಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಥಗಳು ಮತ್ತು ಸಾಂಸ್ಕೃತಿಕ ಉದ್ಯಮಗಳು ಈ ತಿಳಿವಳಿಕೆಯನ್ನು ಒಪ್ಪಿಕೊಂಡಲ್ಲಿ, ಅವರೆಲ್ಲಾ ಜೊತೆಗೂಡಿ, ಬಿಜೆಪಿಯನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸಬಹುದು ಹಾಗೂ ಭಾರತದಲ್ಲಿ ಫ್ಯಾಸಿಸಂನ ಅದೃಷ್ಟವನ್ನು ಹಿಮ್ಮೆಟ್ಟಿಸಬಹುದು. ಇದು ಭಾರತಕ್ಕಾಗಿ, ನಮ್ಮ ಪವಿತ್ರ ದೇಶಕ್ಕಾಗಿ ನಾವು ಮಾಡಬೇಕಾದ ಕರ್ತವ್ಯವಾಗಿದೆ. ಕಳೆದ ಸಾವಿರ ವರ್ಷಗಳಲ್ಲಿ ದಕ್ಷಿಣವು ಕಟ್ಟಿದ ನಾಗರಿಕತೆಯ ಅಸಾಧಾರಣ ಪರಂಪರೆಗೆ ಮಾಡಬೇಕಾದ ಕರ್ತವ್ಯವಾಗಿದೆ.

ನಾಗರಿಕರ ಮತ್ತು ಸಾಮಾಜಿಕ ಕಾರ್ಯಕರ್ತರ ಒಂದು ಸಾಮೂಹಿಕ ವೇದಿಕೆಯಾದ ದಿ ಸೌತ್ ಫೋರಮ್, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

  • ಜಿ ಎನ್ ದೇವಿ

ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವ ಶಕ್ತಿಗಳು ಮೇಲುಗೈ ಪಡೆದಿದ್ದು ಹೇಗೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...