ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಯುವ ನಾಯಕ ಕನ್ಹಯ್ಯಕುಮಾರ್ ಉಪನ್ಯಾಸ ಕಾರ್ಯಕ್ರಮ ರದ್ದಾದ ಬಳಿಕ ಅಂಬೇಡ್ಕರ್ ಮೈದಾನದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾದ ಕನ್ಹಯ್ಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಬ್ಬರಿಸಿದ್ದಾರೆ.
ಕೆಲ ವಿಷಯಗಳನ್ನು ತಡೆದಷ್ಟು ಬೆಳಕಿಗೆ ಬರುತ್ತಲೇ ಇರುತ್ತವೆ. ಈಗ ಮೋದಿ ಆಳ್ವಿಕೆಯಲ್ಲಿ ಹಿಂದೂ-ಮುಸ್ಲಿಮರು ಅಪಾಯದಲ್ಲಿಲ್ಲ. ಇಡೀ ಹಿಂದೂಸ್ಥಾನವೇ ಅಪಾಯದಲ್ಲಿದೆ. ನಮಗೆ ಯಾವುದೇ ಧರ್ಮ, ಜಾತಿಯ ಬಗ್ಗೆ ಆಕ್ಷೇಪವಿಲ್ಲ. ನಾವು ಸಂವಿಧಾನಾಧಾರಿತ ಜಾತ್ಯಾತೀತ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದೇವೆ. ನಮ್ಮದು ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳನ್ನು ಕಂಡಿರುವ ರಾಷ್ಟ್ರ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಮೂರು ವರ್ಷಗಳಿಂದ ನಾಪತ್ತೆಯಾಗಿರುವ ಜೆ.ಎನ್.ಯು ವಿದ್ಯಾರ್ಥಿ ನಜೀಬ್, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸೇರಿದಂತೆ ಅನೇಕ ವಿಚಾರಗಳ ಕುರಿತು ನ್ಯಾಯಕ್ಕಾಗಿ ಜನತೆ ಕೇಂದ್ರಕ್ಕೆ ಮೊರೆಯಿಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಉತ್ತರ ಸಿಗುತ್ತಿಲ್ಲ. ಜೆ.ಎನ್.ಯು ವಿಶ್ವವಿದ್ಯಾಲಯವನ್ನು ದೇಶ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳನ್ನು ಬಂದ್ ಮಾಡಬೇಕು. ಸಾರ್ವಜನಿಕರ ಹಣದಿಂದ ನಡೆಯುವ ವಿಶ್ವವಿದ್ಯಾಲಯವನ್ನು ಬಂದ್ ಮಾಡಬೇಕೆಂಬ ಕೂಗು, ಸಂದೇಶ ಹರಿದಾಡುತ್ತಿದೆ. ಅಲ್ಲಿ ಕಲಿತವರು ನಕ್ಸಲಿಯರಾಗುತ್ತಾರೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಕಲಿತ ವ್ಯಕ್ತಿಗೆ ನೊಬೆಲ್ ಪುರಸ್ಕಾರ ಸಿಕ್ಕಿದೆಯಲ್ಲವೇ ಎಂದು ವ್ಯಂಗ್ಯವಾಡಿದರು.
ಸಾರ್ವರ್ಕರ್ನಂತಹ ದೇಶವಿರೋಧಿ ಚಟುವಟಿಕೆ ಮಾಡಿದವರಿಗೆ ಭಾರತರತ್ನ ಕೊಡಲು ಬಿಜೆಪಿ ಮುಂದಾಗಿದೆ. ಇಂದು ನಿಮ್ಮ ಸರ್ಕಾರವಿದೆ, ಇಂದು ನಿಮ್ಮದೇ ನಾಯಕರಿದ್ದಾರೆ. ನಿಮಗಲ್ಲದೇ ಇನ್ಯಾರಿಗೆ ಭಾರತರತ್ನ ಕೊಡಲು ಸಾಧ್ಯ..? ಕೆಲ ದಿನಗಳ ಹಿಂದೆ ಮೋಹನ್ ಭಾಗವತ್, ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿ ಗುಂಪು ಹತ್ಯೆ ಭಾರತೀಯ ಶಬ್ದವಲ್ಲ ಎಂದಿದ್ದರು. ಆದರೆ ಬೆಳಗ್ಗೆ ಎದ್ದು ಕೈಯಲ್ಲಿ ಲಾಠಿ ಹಿಡಿದು ನಿಲ್ಲುತ್ತಾರೆ ಇದು ಯಾವ ದೇಶದ ಪರಂಪರೆ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಮೀಡಿಯಾಗಳಲ್ಲಿ, ಟಿವಿಗಳಲ್ಲಿ ದಿನನಿತ್ಯ ಒಂದೇ ಹೆಸರು ಕೇಳಿ ಬರುತ್ತದೆ. ಅದು ಮೋದಿ, ಮೋದಿ, ಮೋದಿ. ದಿನವೂ ಇದೇ ಹೆಸರನ್ನು ಕೇಳುತ್ತಿದ್ದರೆ, ಎಲ್ಲರಿಗೂ ಮೋದಿ ಬಿಟ್ಟರೆ ಹಿಂದೂಸ್ತಾನದಲ್ಲಿ ಬೇರೆ ನಾಯಕ ಇಲ್ಲವೇ ಇಲ್ಲ ಎಂದು ಮನದಲ್ಲಿ ಉಳಿಯುತ್ತೆ. ದೇಶದ ಪ್ರಧಾನಮಂತ್ರಿ ಯಾರಾಗಬೇಕು ಎಂದು ಪ್ರಶ್ನೆ ಇಟ್ಟು, ನಾಲ್ಕು ಆಪ್ಶನ್ಸ್ ಕೊಟ್ಟು ಅದರಲ್ಲಿ ಕೇವಲ ಬಿಜೆಪಿ, ಆರ್.ಎಸ್.ಎಸ್ ಆಪ್ಶನ್ಸ್ ತುಂಬಿದ್ರೆ ಜನರು ಏನು ಆಯ್ಕೆ ಮಾಡಬೇಕು..? ಅಬ್ ಕೀ ಬಾರ್ ಬಿಜೆಪಿ ಸರ್ಕಾರ್ ಅಲ್ಲ, ಅಬ್ ಕೀ ಬಾರ್ ಜಾಹಿರಾತು ಸರ್ಕಾರ್ ಆಗಿದೆ ಎಂದು ಕನ್ಹಯ್ಯ ಕುಟುಕಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ಹಯ್ಯ ಕುಮಾರ್ ಮೋದಿ ಬಡವರ ಮಗ ಎಂದು ಪ್ರಚಾರ ಮಾಡಿಕೊಳ್ಳಲ್ಲೆಂದೇ ಹತ್ತಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಜನರಿಗಾಗಿ ತನ್ನ ಮನೆ ಕಟ್ಟಿಕೊಳ್ಳದೇ ಇದ್ದ ಸರ್ದಾರ್ ಪಟೇಲ್ ಪ್ರತಿಮೆಗಾಗಿ 3000 ಕೋಟಿ ಖರ್ಚು ಮಾಡುವುದು ಏನನ್ನು ಸೂಚಿಸುತ್ತದೆ ಎಂದರು.
ಇಷ್ಟು ದಿನ ಸುಮ್ಮನಿದ್ದ ರಿಲೆಯೆನ್ಸ್ ಪೆಟ್ರೋಲಿಯಂ ಕಂಪನಿ ಸರ್ಕಾರಿ ಸ್ವಾಮ್ಯದ ಓಎನ್ಜಿಸಿಯನ್ನು ಖಾಸಗೀಕರಣ ಮಾಡುತ್ತೇನೆ ಎಂದು ಮೋದಿ ಘೋಷಿಸಿದ ಕೂಡಲೇ ಕೂಡಲೇ ರಿಲೆಯೆನ್ಸ್ ವ್ಯಾಪರಕ್ಕೆ ಮುಂದೆಬಂದಿದೆ ಎಂದರೆ ಮೋದಿ ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದಲ್ಲವೇ? ಎಂದು ಪ್ರಶ್ನಿಸಿದರು.
ಮೋದಿ ವಿದೇಶಕ್ಕೆ ಹೋದಾಗಲೆಲ್ಲಾ ಬುದ್ದನ ಕುರಿತು ಮಾತನಾಡಿದರೆ ಭಾರತಕ್ಕೆ ಬಂದ ಕೂಡಲೇ ಯುದ್ಧದ ಕುರಿತು ಮಾತನಾಡುತ್ತಾರೆ. ಈ ದ್ವಿಮುಖ ನೀತಿಗೆ ಏನನ್ನಬೇಕು ಎಂದು ಕನ್ಹಯ್ಯ ಕಿಡಿಕಾರಿದರು.