ಉತ್ತರ ಪ್ರದೇಶಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ತಯಾರಾಗುತ್ತಿದ್ದಾರೆ. ಅವರು ಸರಣಿ ಸಭೆಗಳಿಗೆ ತೆರಳಿ ಭಾಷಣ ಮಾಡಲು ಈಗಾಗಲೆ ಪ್ರಾರಂಭಿಸಿದ್ದಾರೆ. ಸೋಮವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುವ ಮುನ್ನ ಹೆಣ್ಣು ಮಕ್ಕಳು, ಸಹೋದರಿಯರು, ಎಮ್ಮೆಗಳು ಮತ್ತು ಗೂಳಿಗಳು ಅಸುರಕ್ಷಿತವಾಗಿದ್ದವು ಎಂದು ಹೇಳಿದ್ದಾರೆ.
“ನಮ್ಮ ಕಾರ್ಯಕರ್ತರು ಎಲ್ಲಿಯಾದರೂ ಇದ್ದಾಗ, ಕುಟುಂಬದ ಮಹಿಳೆಯರು ಬಂದು, ‘ಉತ್ತರ ಪ್ರದೇಶ ಸುರಕ್ಷಿತವಾಗಿ ಇರಬಹುದೆ?’ ಎಂದು ಕೇಳುತ್ತಿದ್ದರು. ಈ ಹಿಂದೆ ನಮ್ಮ ಹೆಣ್ಣುಮಕ್ಕಳು, ಸಹೋದರಿಯರು ಅಸುರಕ್ಷಿತರಾಗಿದ್ದರು. ಪಶ್ಚಿಮ ಯುಪಿಯ ಎಲ್ಲಾದರೂ ಎತ್ತಿನಗಾಡಿ ಹೋದರೂ, ಅದರ ಎಮ್ಮೆಗಳು ಮತ್ತು ಹೋರಿಗಳು ಸುರಕ್ಷಿತವಾಗಿರಲಿಲ್ಲ” ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಅವರು ನಿನ್ನೆ ಲಕ್ನೋದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ವಕ್ತಾರರ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಈ ದೇಶ ಎಲ್ಲಾ ಧರ್ಮೀಯರಿಗೆ ಸೇರಿದ್ದು: ಆದಿತ್ಯನಾಥ್ರವರ ‘ಅಬ್ಬ ಜಾನ್’ ಹೇಳಿಕೆಗೆ ಬಿಜೆಪಿ ಮಿತ್ರ ಪಕ್ಷದ ಆಕ್ಷೇಪ
“ಈ ಎಲ್ಲಾ ಸಮಸ್ಯೆಗಳು ಪಶ್ಚಿಮ ಯುಪಿಯಲ್ಲಿ ಕಂಡು ಬಂದಿದ್ದವೆ ಹೊರತು, ಪೂರ್ವ ಯುಪಿಯಲ್ಲಿ ಅಲ್ಲ. ಆದರೆ ಇಂದು ಆ ರೀತಿ ಇಲ್ಲ. ನಿಮಗೆ ವ್ಯತ್ಯಾಸ ಕಾಣುತ್ತಿಲ್ಲವೇ? ಇಂದು ಎಮ್ಮೆಗಳು, ಎತ್ತುಗಳು ಅಥವಾ ಮಹಿಳೆಯರನ್ನು…ಬಲವಂತವಾಗಿ ಎತ್ತಿಕೊಂಡು ಹೋಗಲಾಗುತ್ತಿದೆಯೆ? ಇದಲ್ಲವೆ ವ್ಯತ್ಯಾಸ?” ಎಂದು ಆದಿತ್ಯನಾಥ್ ಹೇಳಿದ್ದಾರೆ.
#WATCH | "…Earlier our daughters, sisters felt unsafe. Potholes on roads symbolized UP. Even buffaloes, bulls didn't feel safe. These problems persisted in Western UP, not eastern UP…But it's not the same today. Can you not see the difference…," says CM Yogi Adityanath pic.twitter.com/sytpciJVab
— ANI UP (@ANINewsUP) September 13, 2021
“ಮೊದಲಿಗೆ ಉತ್ತರಪ್ರದೇಶದ ಗುರುತು ಯಾವುದಿತ್ತು? ಎಲ್ಲಿಂದ ರಸ್ತೆಯ ಗುಂಡಿಗಳು ಶುರುವಾಗುತ್ತಿದ್ದವೋ ಮತ್ತು ಎಲ್ಲಿಂದ ಕತ್ತಲು ಇದೆಯೋ ಅಲ್ಲಿಂದ ಉತ್ತರ ಪ್ರದೇಶ ಪ್ರಾರಂಭ ಎಂಬಂತಿತ್ತು. ಯಾವುದೇ ಸುಸಂಸ್ಕೃತ ವ್ಯಕ್ತಿ ರಾತ್ರಿಯಲ್ಲಿ ಬೀದಿಗಳಲ್ಲಿ ನಡೆಯಲು ಹೆದರುತ್ತಿದ್ದರು. ಆದರೆ ಇಂದು ಹಾಗೆ ಇಲ್ಲ” ಎಂದು ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಮುಂಚೆ ‘ಅಬ್ಬ ಜಾನ್’ ಎನ್ನುವವರಿಗೆ ಮಾತ್ರ ರೇಷನ್ ಸಿಗುತ್ತಿತ್ತು: ಯುಪಿ ಸಿಎಂ ಆದಿತ್ಯನಾಥ್ ಹೇಳಿಕೆಗೆ ಭಾರೀ ವಿರೋಧ
ದಿನಗಳ ಹಿಂದೆಯಷ್ಟೇ, ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರವನ್ನು ಕೀಳು ಮಟ್ಟದಲ್ಲಿ ಅವರು ಟೀಕಿಸಿದ್ದರು. “2017 ಕ್ಕೂ ಮೊದಲು (ಸಮಾಜವಾದಿ ಸರ್ಕಾರ ಇದ್ದಗ) ‘ಅಬ್ಬಾ ಜಾನ್’ ಎಂದು ಹೇಳುವ ಜನರಿಗೆ ಮಾತ್ರ ಪಡಿತರ ಸಿಗುತ್ತಿತ್ತು” ಎಂದು ಆದಿತ್ಯನಾಥ್ ಹೇಳಿದ್ದರು. ‘ಅಬ್ಬಾ ಜಾನ್’ ಎಂದರೆ ಉರ್ದು ಭಾಷೆ ಮಾತನಾಡುವ ಮುಸ್ಲಿಮರು ತಂದೆಯನ್ನು ಸಂಭೋಧಿಸುವ ಪದವಾಗಿದೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. 2017 ರ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತವನ್ನು ಪಡೆದು ಅಧಿಕಾರಕ್ಕೆ ಏರಿತ್ತು. ಪಕ್ಷವು ಮತ್ತೆ ಯುಪಿಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಈಗಾಗಲೆ ತಯಾರಾಗುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ಯುಪಿ ಸರ್ಕಾರದ ದುರಾಡಳಿತ ಮತ್ತು ರೈತ ಹೋರಾಟದ ಸಮಯದಲ್ಲಿ ಸರ್ಕಾರವು ನಡೆದುಕೊಂಡ ರೀತಿಯ ಬಗ್ಗೆ ರಾಜ್ಯದಲ್ಲಿ ಈಗಾಗಲೆ ಆಕ್ರೋಶ ವ್ಯಕ್ತವಾಗಿದ್ದು, ಆಡಳಿತ ವಿರೋಧಿ ಅಲೆಯಿದೆ. ಹೀಗಾಗಿ ತಮ್ಮ ಹಳೆಯ ನೀತಿಯಂತೆ ಮುಸ್ಲಿಂ ದ್ವೇಷ ಮತ್ತು ಕೋಮುವಾದವನ್ನು ಹಿಡಿದುಕೊಂಡು ಬಿಜೆಪಿ ಪ್ರಚಾರಕ್ಕೆ ತೆರಳುವ ಹಾದಿಯಲ್ಲಿದೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಜನ್ಮದಿನಕ್ಕೆ ಮೋದಿಯೇಕೆ ಶುಭಾಶಯದ ಟ್ವೀಟ್ ಮಾಡಲಿಲ್ಲ? ಬಿಜೆಪಿ ನಾಯಕತ್ವಕ್ಕೆ ಯೋಗಿ ಬಗ್ಗೆ ಅಸಮಾಧಾನವೇ?