Homeಕರ್ನಾಟಕಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯ, ಇಂದು ಮಧ್ಯರಾತ್ರಿಯಿಂದ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹ

ಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯ, ಇಂದು ಮಧ್ಯರಾತ್ರಿಯಿಂದ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹ

- Advertisement -
- Advertisement -

ಸರ್ಕಾರಕ್ಕೆ ಎಚ್ಚರಿಕೆ, ಜನತೆಗೆ ಕರೆ

ಬೆಂಗಳೂರು: ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಶೋಷಿತ ಸಮುದಾಯಗಳಿಗೆ ಇನ್ನೂ ಸಮಾನ ಹಕ್ಕುಗಳು ದಕ್ಕಿಲ್ಲ ಎಂದು ಆರೋಪಿಸಿ, ಒಳಮೀಸಲಾತಿ ಹೋರಾಟಗಾರರು ಆಗಸ್ಟ್ 14ರ ಮಧ್ಯರಾತ್ರಿಯಿಂದಲೇ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದು ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್‌ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ದಶಕಗಳಿಂದಲೂ ಕೇಳಿ ಬರುತ್ತಿರುವ ಒಳಮೀಸಲಾತಿಯ ಬೇಡಿಕೆಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಅನ್ವಯ ಜಾರಿಗೆ ತರುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೋರಾಟಗಾರ ಅಂಬಣ್ಣ ಅರೋಲಿಕರ್ ಸ್ಪಷ್ಟಪಡಿಸಿದ್ದಾರೆ.

ಮೂರು ದಶಕಗಳ ಕಾಲ ನಡೆದ ಈ ಹೋರಾಟ ಆಯೋಗ ರಚನೆ, ಅದರ ಅಧ್ಯಯನ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮತ್ತು ವರದಿ ಜಾರಿಗೆ ನಿರಂತರವಾಗಿ ನಡೆದಿದೆ. ಇದು ಆಳುವ ಸರ್ಕಾರಗಳ ಮಲತಾಯಿ ಧೋರಣೆಗೆ ಸ್ಪಷ್ಟ ನಿದರ್ಶನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಹೋರಾಟವೇ ನಮ್ಮ ಜೀವನ, ಹೋರಾಟದಿಂದಲೇ ಪ್ರಗತಿ ಸಾಧನ” ಎಂದು ಅವರು ಘೋಷಿಸಿದರು.

ಹೋರಾಟದ ಸ್ವರೂಪ ಮತ್ತು ಸಿದ್ಧತೆಗಳು

ಈ ಹೋರಾಟಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡದಲ್ಲಿ ಕರಿಯಪ್ಪ ಗುಡಿಮನಿ, ದಾನಪ್ಪ ನಿಲೋಗಲ್, ಜೆ.ಬಿ. ರಾಜು, ಅಂಬಣ್ಣ ಅರೋಲಿಕರ್, ಲೋಕೇಶ್ ಗೋಸಂಘಿ, ಮತ್ತು ಉಮಾದೇವಿ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇವರಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಎರಡನೇ ತಂಡದ ಸದಸ್ಯರಾದ ಚಂದ್ರು ತರಹುಣಿಸೆ, ಗಣೇಶ್, ಡೇವಿಡ್, ಮಂಜುನಾಥ್ ಮರಾಟ, ಮತ್ತು ವೇಣುಗೋಪಾಲ್ ಮೌರ್ಯ ಅವರು ಉಪವಾಸವನ್ನು ಮುಂದುವರೆಸಲಿದ್ದಾರೆ. ಈ ಮೂಲಕ ನಿರಂತರವಾಗಿ ಹೋರಾಟವನ್ನು ಜೀವಂತವಾಗಿ ಇಡಲು ನಿರ್ಧರಿಸಲಾಗಿದೆ ಎಂದರು.

ಹೋರಾಟದ ತೀವ್ರತೆಯನ್ನು ವಿವರಿಸಿದ ಅಂಬಣ್ಣ ಅರೋಲಿಕರ್, ಬ್ರಿಟಿಷರು ರಾತ್ರೋರಾತ್ರಿ ಭಾರತವನ್ನು ಬಿಟ್ಟು ಹೋಗಲು ಗಾಂಧೀಜಿಯವರ ಸತ್ಯಾಗ್ರಹ ಮಾತ್ರವಲ್ಲ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಅವರಂತಹ ಕ್ರಾಂತಿಕಾರಿಗಳ ಬಲಿದಾನವೂ ಕಾರಣ ಎಂದು ನೆನಪಿಸಿಕೊಂಡರು.

ಈ ಸರ್ಕಾರವು ಕಾಲಹರಣ ಮಾಡುತ್ತಿದೆ, ಇದು ಕಾನೂನುಬಾಹಿರ, ಸಂವಿಧಾನಬಾಹಿರ, ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತಳೆದಿದೆ ಎಂದು ಅವರು ಹೇಳಿದರು. ಆದ್ದರಿಂದ, ಸ್ವಾತಂತ್ರ್ಯ ಸಿಗದ ನಮಗೆ “ಅನ್ನವೂ ಬೇಡ, ನೀರೂ ಬೇಡ” ಎಂದು ಘೋಷಿಸಿದ ಅವರು, ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸರ್ಕಾರವು ಇದಕ್ಕೆ “ಕುಂಟು ನೆಪಗಳನ್ನು ಹೇಳಿದರೆ ನಮ್ಮ ಆಕ್ರೋಶ, ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ” ಎಂದು ಎಚ್ಚರಿಸಿದರು.

ಸಮತಾ ಸೈನಿಕ ದಳದ ಮಾದರಿಯಲ್ಲಿ ಹೋರಾಟ

ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ಹೋರಾಟಗಾರರನ್ನು ರಕ್ಷಿಸಲು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮತಾ ಸೈನಿಕ ದಳದ ಪರಿಕಲ್ಪನೆಯಂತೆ ಉಳಿದ ಹೋರಾಟಗಾರರು ‘ರಕ್ಷಾ ಕವಚ’ದಂತೆ ಇರಬೇಕು ಎಂದು ಅಂಬಣ್ಣ ಕರೆ ನೀಡಿದರು.

ಅಂಬೇಡ್ಕರ್ ಅವರಿಗೆ ಭಾರತದ ಪ್ರಭುತ್ವವು ಬ್ರಿಟಿಷರಷ್ಟೇ ಕ್ರೂರವಾಗಿರುತ್ತದೆ ಎಂಬುದು ಗೊತ್ತಿತ್ತು, ಆದ್ದರಿಂದಲೇ ಅವರು ತಮ್ಮದೇ ಆದ ಸೈನ್ಯವನ್ನು ಕಟ್ಟಿದ್ದರು ಎಂದು ಅವರು ವಿವರಿಸಿದರು. ಈ ದಳಕ್ಕೆ ಬಿಳಿ ಮತ್ತು ಕಪ್ಪು ಬಣ್ಣದ ಡ್ರೆಸ್‌ಕೋಡ್ ಇತ್ತು, ಕೈಯಲ್ಲಿ ಲಾಠಿ ಮತ್ತು ಚಕ್ರದ ಚಿತ್ರಣವಿತ್ತು. ಈ ಹೋರಾಟಗಾರರು ನಿದ್ದೆಗೆಟ್ಟು ಹಗಲು ರಾತ್ರಿ ಟೆಂಟ್‌ ಸುತ್ತ ಕಾವಲು ಕಾಯಬೇಕು. ಉಪವಾಸದಲ್ಲಿರುವವರನ್ನು ಸರ್ಕಾರ ಎತ್ತಿಕೊಂಡು ಹೋಗಲು ಪ್ರಯತ್ನಿಸಿದರೆ, ಅದನ್ನು ಪ್ರತಿರೋಧಿಸಬೇಕು ಎಂದು ಸೂಚಿಸಿದರು. ಇದು ವ್ಯಕ್ತಿಗತ ಹೋರಾಟವಲ್ಲ, ಸಾಮೂಹಿಕ ಹೋರಾಟ ಎಂದು ಅವರು ಸ್ಪಷ್ಟಪಡಿಸಿದರು.

ರಾಜಧಾನಿ ರಸ್ತೆಗಳು ರಣಾಂಗಣವಾಗಲಿ

“ನಾವು ಅ. 16ರಂದು ಒಳಮೀಸಲಾತಿ ಜಾರಿಯಾಗಲಿದೆ ಎಂದು ಸಂತೋಷದಿಂದ ಇಲ್ಲಿಂದ ಹೋಗುತ್ತೇವೆ ಎಂದುಕೊಂಡಿದ್ದೆವು. ಆದರೆ ಸರ್ಕಾರವು ’16ರಲ್ಲ, 26ರಲ್ಲ, 46 ಮಾಡುತ್ತೇವೆ’ ಎಂದು ಹೊರಟಿದೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು, “ಯಾವುದೇ ಕ್ಷಣದಲ್ಲಿಯೂ ಈ ರಾಜಧಾನಿಯ ರಸ್ತೆ ರಣಾಂಗಣವಾಗಲಿಕ್ಕೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು. ಇದು ಒಂದು ಅಗ್ನಿಪರೀಕ್ಷೆ ಎಂದು ಹೋರಾಟಗಾರರಿಗೆ ಹೇಳಿದರು.

ಸುಪ್ರೀಂ ಕೋರ್ಟ್ ಒಪ್ಪಿದ ಒಳಮೀಸಲಾತಿಯನ್ನು ಜಾರಿಗೆ ತರದಿರುವುದು ನ್ಯಾಯಾಲಯದ ತೀರ್ಮಾನಕ್ಕೆ ಅಗೌರವ ಮತ್ತು ಸಂವಿಧಾನ ವಿರೋಧಿ ನಡೆ. ಇದು 101 ಜಾತಿಗಳನ್ನು ಮತ್ತಷ್ಟು ತಾತ್ಸಾರ ಮಾಡುವ ದುರಹಂಕಾರದ ಪ್ರತೀಕ ಎಂದು ಅವರು ಗುಡುಗಿದರು.

ಹುಟ್ಟುಹಬ್ಬವನ್ನು ತ್ಯಾಗ ಮಾಡಿದ ಹೋರಾಟಗಾರ

ಇದೇ ಸಂದರ್ಭದಲ್ಲಿ, ಅಂಬಣ್ಣ ಅರೋಲಿಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಒಳಮೀಸಲಾತಿ ಹೋರಾಟಕ್ಕೆ ಅದನ್ನು ಸಮರ್ಪಿಸಿದ್ದಾರೆ. ದೇವನೂರು ಮಹಾದೇವ ಅವರು ಕೂಡಲೇ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿ, ಅವರಿಗೆ ತಂಡದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ ಅದನ್ನು ಜಾರಿಗೊಳಿಸದಿರುವುದು ಸಂವಿಧಾನ ವಿರೋಧಿ ಮತ್ತು ಕೋರ್ಟ್ ತೀರ್ಪಿಗೆ ಅಗೌರವ ಎಂದು ಅರೋಲಿಕರ್ ಗುಡುಗಿದರು. ಇದು 101 ಜಾತಿಗಳನ್ನು ಮತ್ತಷ್ಟು ತಾತ್ಸಾರ ಮಾಡುವ ದುರಹಂಕಾರದ ಪರಮಾಧಿಕಾರ ಎಂದು ಆಕ್ರೋಶ ಹೊರಹಾಕಿದರು.

ಇದು ಅಂತಿಮ ಯುದ್ಧ: ಸರ್ಕಾರದ ನಿಲುವಿಗೆ ಸ್ಪಷ್ಟ ಸಂದೇಶ

“ಉಪವಾಸ ಸತ್ಯಾಗ್ರಹಿಗಳಿಗೆ ಸಾಯುವ ಪರಿಸ್ಥಿತಿ ಬಂದರೆ, ನಾವು ಸಾಯಲಿಕ್ಕೂ ಸಿದ್ಧ” ಎಂದು ಹೇಳಿದ ಅರೋಲಿಕರ್, ಇದು ಅಂತಿಮ ಯುದ್ಧ ಎಂದು ಘೋಷಿಸಿದರು.

ಎಲ್ಲರೂ ಈ ಹೋರಾಟದಲ್ಲಿ ಸೈನಿಕರಂತೆ ಭಾಗವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಅನಗತ್ಯ ವಾದ-ವಿವಾದಗಳಲ್ಲಿ ತೊಡಗಬಾರದು. ಜಾಲತಾಣಿಗರ ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ತಮ್ಮ ಕೆಲಸವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

“ನಮ್ಮ ಮನವಿ ಮತ್ತೊಂದು ಏನೂ ಇಲ್ಲ. ಸಾವಿರಕ್ಕೂ ಹೆಚ್ಚಿರುವ ಸಮಗ್ರ ಒಳಮೀಸಲಾತಿ ವರದಿ ಜಾರಿ ಮಾಡಬೇಕೆಂಬುದೇ ನಮ್ಮ ಬೇಡಿಕೆಯಾಗಿದೆ” ಎಂದರು. ಯಾವುದೇ ರಾಜಕಾರಣಿಗಳು ಟೆಂಟ್‌ಗೆ ಬರುವುದಾದರೆ, ಒಳಮೀಸಲಾತಿಯನ್ನು ಅಂಗೀಕಾರ ಮಾಡುವ ಆದೇಶ ಪತ್ರದೊಂದಿಗೆ ಬರಬೇಕು ಎಂದು ಸ್ಪಷ್ಟಪಡಿಸಿದರು. ಹೋರಾಟಕ್ಕೆ ಬೆಂಬಲವಾಗಿ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಪ್ರತಿರೋಧ ಆರಂಭವಾಗುತ್ತದೆ ಎಂದು ತಿಳಿಸಿ, “ಜೈ ಭೀಮ್” ಎಂದು ಘೋಷಿಸಿದರು.

ಸರ್ಕಾರಕ್ಕೆ ಎಚ್ಚರಿಕೆ ಮತ್ತು ಬೆಂಬಲದ ಮಾತುಗಳು

ಇಂತಹ ಹೋರಾಟಕ್ಕೆ ಸರ್ಕಾರ ಅವಕಾಶ ನೀಡಬಾರದಿತ್ತು ಎಂದು ಜಾಗೃತ ಕರ್ನಾಟಕದ ಮುತ್ತುರಾಜ್ ಹೇಳಿದ್ದಾರೆ. ಇಷ್ಟು ದಿನ ಹಸಿವಿನಿಂದ ಬಳಲಿದವರು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸುವುದನ್ನು ನೋಡಿ ನೋವಾಗುತ್ತಿದೆ ಎಂದ ಅವರು, ಸರ್ಕಾರವು ಹೋರಾಟಗಾರರನ್ನು ಕರೆದು ಮಾತನಾಡಿ, ಉಪವಾಸ ಕೈಬಿಡುವಂತೆ ಮನವಿ ಮಾಡುವ ಮೂಲಕ ತನ್ನ ದೊಡ್ಡತನ ತೋರಬೇಕು ಎಂದು ಆಶಿಸಿದರು.

ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಒಳಮೀಸಲಾತಿ ಹೋರಾಟಗಾರ ಪ್ರಶಾಂತ್ ದಾನಪ್ಪ ಅವರು, “ಸಾಮಾಜಿಕ ಅನ್ಯಾಯದ ಜಿಡ್ಡುಗಟ್ಟಿದ ಮೌಲ್ಯಗಳಿಂದ ಸ್ವಾತಂತ್ರ್ಯವು ವಂಚಿತ ದುರ್ಬಲ ಸಮುದಾಯಗಳಿಗೆಲ್ಲಾ ಸಿಗಲಿ… ಬಾಬಾಸಾಹೇಬರ ಸಂವಿಧಾನದ ಆಶಯಗಳು ಚಿರಾಯುವಾಗಲಿ” ಎಂದು ಹಾರೈಸಿದರು.

“ನನ್ನ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ಬೀದಿಗೆ ಬರುವಂತೆ ಮಾಡಿಬಿಟ್ಟರು, ನಾವು ಯಾವುದನ್ನು ನಂಬಿದ್ದೆವೋ ಅದೆಲ್ಲವೂ ಉರುಳುತ್ತಿದೆ, ಸಂವಿಧಾನದ ಕಣ್ಣುಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ, ಅದರೂ ನನ್ನ ಸಮುದಾಯದ ಸ್ಥಿತಿಯನ್ನು ನೆನಸಿಕೊಂಡರೆ ನಿಜಕ್ಕೂ ಬಹಳ ದುಃಖವೆನಿಸುತ್ತದೆ” ಎಂದು ಅವರು ತಮ್ಮ ಅಂತರಾಳದ ನೋವನ್ನು ಹಂಚಿಕೊಂಡರು.

ಒಳಮೀಸಲಾತಿ ತಕ್ಷಣ ಜಾರಿಗೆ ಆಗ್ರಹ: ಮುಖ್ಯಮಂತ್ರಿಯವರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...