ಒಳ ಮೀಸಲಾತಿ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರ ವಾದ ಮಂಡಿಸಲು ಬಿಜೆಪಿ ಸರ್ಕಾರದಲ್ಲಿ ಅಡ್ವೋಕೇಟ್ ಜನರಲ್ ಆಗಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರನ್ನು ನೇಮಿಸಲಾಗಿದೆ.
ಆಗಸ್ಟ್ 26ರಂದು ಸರ್ಕಾರ ಹೊರಡಿಸಿರುವ ಒಳ ಮೀಸಲಾತಿ ಆದೇಶದ ವಿರುದ್ದ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಒಕ್ಕೂಟ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರ ಅಥವಾ ಸರ್ಕಾರದ ಪರ ವಾದ ಮಂಡಿಸಲು ಉದಯ್ ಹೊಳ್ಳ ಅವರನ್ನು ನೇಮಿಸಿ ಅಕ್ಟೋಬರ್ 15ರಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಕಲಾವತಿ ಎಸ್.ವಿ ಆದೇಶಿಸಿದ್ದಾರೆ.
ಆಗಸ್ಟ್ 19ರಂದು ಒಳ ಮೀಸಲಾತಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಆದರೆ, ನಾಗಮೋಹನ್ ದಾಸ್ ವರದಿಗೆ ವ್ಯತಿರಿಕ್ತವಾಗಿ ಬಲಗೈಗೆ ಶೇಕಡ 6, ಎಡಗೈಗೆ ಶೇಕಡ 6 ಮತ್ತು ಕೊಲಂಬೋ, ಅಲೆಮಾರಿಗಳಿಗೆ ಶೇಕಡ 5 ಮೀಸಲಾತಿಯನ್ನು ನಿಗದಿ ಮಾಡಿದೆ.
ನಾಗಮೋಹನ್ದಾಸ್ ವರದಿಯಲ್ಲಿ ಅಲೆಮಾರಿಗಳಿಗೆ ಶೇಕಡ 1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಪ್ರಸ್ತಾಪಿಸಲಾಗಿತ್ತು. ಆದರೆ, ಸರ್ಕಾರ ಅದನ್ನು ಕೊಲಂಬೋಗಳ ಶೇಕಡ 5ರ ಜೊತೆ ಸೇರಿಸಿದೆ. ಸರ್ಕಾರದ ಈ ನಿರ್ಧಾರದ ವಿರುದ್ದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ದೊಡ್ಡ ಮಟ್ಟದ ಹೋರಾಟಗಳು ನಡೆದಿವೆ. ಪ್ರಸ್ತುತ ಹೋರಾಟ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದೆ. ಹೋರಾಟಗಾರರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಈ ನಡುವೆ ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ, ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಪರ ವಾದ ಮಂಡಿಸಲು ಸರ್ಕಾರ ಉದಯ್ ಹೊಳ್ಳ ಅವರನ್ನು ನೇಮಿಸಿದೆ.
ಮೂರು ತಿಂಗಳಾದರೂ ಹೊರಬೀಳದ ‘ಡಿನೋಟಿಫಿಕೇಶನ್’ ಆದೇಶ; ಚನ್ನರಾಯಪಟ್ಟಣ ರೈತರಿಂದ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ