ನೂತನ ಶಾಸಕರಿಗೆ ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆ, ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ, ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞ, ಬ್ರಹ್ಮಕುಮಾರಿಯ ಆಶಾ ದೀದಿ ಮತ್ತು ಬಲಪಂಥೀಯ ಬರಹಗಾರ ಗುರುರಾಜ ಕರ್ಜಗಿಯವರನ್ನು ಆಹ್ವಾನಿಸಿರುವ ಸ್ಪೀಕರ್ ಯು.ಟಿ ಖಾದರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೊಸದಾಗಿ ಆಯ್ಕೆಯಾದ ಸುಮಾರು 58 ಶಾಸಕರಿಗೆ ಜೂನ್ 26 ರಿಂದ 28ರ ವರೆಗೆ ನೆಲಮಂಗಲದಲ್ಲಿರುವ ವೀರೇಂದ್ರ ಹೆಗ್ಗಡೆಯವರ ‘ಕ್ಷೇಮವನ’ದಲ್ಲಿ ಮೂರುದಿನಗಳ ಶಿಬಿರ ಏರ್ಪಡಿಸಲಾಗಿದೆ. ಆದರೆ ಅಲ್ಲಿ ಮಾತನಾಡಲು ಆಹ್ವಾನಿಸಿರುವ ವ್ಯಕ್ತಿಗಳು ಒಂದಲ್ಲ ಹಲವು ರೀತಿಯಲ್ಲಿ ವಿವಾದಾತ್ಮಕವೆನಿಸಿದ್ದಾರೆ. ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ ಮೇಲೆ ಅಕ್ರಮ ಭೂಪರಭಾರೆ ಪ್ರಕರಣವಿದೆ. ಅಲ್ಲದೇ ಅವರು ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ನಕ್ಸಲರಾಗುತ್ತಾರೆ ಎಂಬ ದ್ವೇಷದ ಹೇಳಿಕೆ ನೀಡಿದ್ದರು. ಇನ್ನು ಡಾ. ವಿರೇಂದ್ರ ಹೆಗಡೆಯವರು ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸಂಸದರಾಗಿದ್ದಾರೆ. ಡಾ. ಗುರುರಾಜ್ ಕರ್ಜಗಿ ಬಲಪಂಥೀಯ ಭಾಷಣಕಾರರಾಗಿದ್ದು, ಇತಿಹಾಸ ತಿರುಚುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಬ್ರಹ್ಮಕುಮಾರಿಯ ಆಶಾ ದೀದಿ ಹಾಗೂ ಮೊಹಮ್ಮದ್ ಕುಂಞ ಸಹ ನೂತನ ಶಾಸಕರಿಗೆ ಪ್ರೇರಣೆ ಹೇಗೆ ನೀಡಬಲ್ಲರು ಎಂಬ ಪ್ರಶ್ನೆಗಳೆದ್ದಿವೆ.
ಹೊಸದಾಗಿ ಚುನಾಯಿತರಾಗಿ ಬಂದ ಶಾಸಕರಿಗೆ ಪಾಠ ಮಾಡಲು ನ್ಯಾಯಮೂರ್ತಿ ನಾಗಮೋಹನ ದಾಸ, ಗೋಪಾಲಗೌಡ, ರವಿವರ್ಮಕುಮಾರ, ಸಿ.ಎಸ್ ದ್ವಾರಕಾನಾಥ, ರಮೇಶ ಕುಮಾರ್ ಮುಂತಾದ ನುರಿತ ಸಂವಿಧಾನ ತಜ್ಞರು, ಕಾನೂನು ಪರಿಣಿತರು, ಹಿರಿಯ ಹಾಲಿ ಮತ್ತು ಮಾಜಿ, ಸ್ಪೀಕರ್ ಗಳು, ಶಾಸಕರು, ಅನುಭವಿ ಪತ್ರಕರ್ತರನ್ನು ಆಹ್ವಾನಿಸಿ ಉಪನ್ಯಾಸ ನೀಡಿಸಬೇಕು. ಆದರೆ ಸ್ಪೀಕರ್ ಖಾದರ್ ಸಾಹೇಬರು ಅದನ್ನು ಬಿಟ್ಟು ಆಧ್ಯಾತ್ಮವನ್ನು ದುಡ್ಡು ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಂಡವರಿಂದ, ಕೋಮುವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡವರಿಂದ ನೂತನ ಶಾಸಕರಿಗೆ ಪ್ರವಚನ ಮಾಡಿಸಲು ಹೊರಟಿದ್ದಾರೆ. ಇದರ ಅಗತ್ಯವಿಲ್ಲ. ಸ್ಪೀಕರ್ ಖಾದರ್ ಸಾಹೇಬರು ಮೈ ಮರೆಯದಿರಲಿ. ಎಲ್ಲರಿಗೂ ಒಳ್ಳೆಯವರಾಗಲು ಹೋಗಿ ನಿಮ್ಮ ಕಾಲ ಮೇಲೆ ನೀವೇ ಕಲ್ಲು ಹಾಕಿಕೊಳ್ಳಬೇಡಿ.. ಯಾರದೋ ಮಾತನ್ನು ಕೇಳಿ ಜನ ಆಡಿಕೊಳ್ಳುವಂತೆ ಮಾಡಬೇಡಿ. ಶಾಸಕರಿಗೆ ಧಾರ್ಮಿಕ ಗುರುಗಳ ಪಾಠ ಸಂವಿಧಾನಕ್ಕೆ ಅಪಚಾರ ಎಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ ಬೆಳಗಲಿ ಅಭಿಪ್ರಾಯಪಟ್ಟಿದ್ದಾರೆ.
ಬಿ.ಎಲ್ ಶಂಕರ್ ರವರು ತಮ್ಮ 45 ನೇ ವಯಸ್ಸಿಗೆಲ್ಲ ಜನತಾ ಪಕ್ಶದಲ್ಲಿ ಹಲವಾರು ಅವಕಾಶಗಳನ್ನು ಪಡೆದಿದ್ದರು. ಆಮೇಲೆ ಕಾಂಗ್ರೆಸ್ ಸೇರಿ ಪಕ್ಶದ ವಕ್ತಾರರು ಪೋಸ್ಟ್ ನಿಂದ ಮೇಲಕ್ಕೆ ಏರಲಿಲ್ಲ. ಶಾಸಕರಿಗೆ ಟ್ರೈನಿಂಗ್ ಕೊಡಲು ಶಂಕರ್ ರವರಿಗಿಂತ ಸೂಪರ್ ಸಂಪನ್ಮೂಲ ವ್ಯಕ್ತಿ ಬೇಕಿಲ್ಲ. ಆದರೂ ಶಂಕರ್ ರವರಿಗೆ ಒಂದು ಬಾಶಣಕ್ಕೂ ಅವಕಾಶ ಇಲ್ಲ ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯನವರು ಕಿಡಿಕಾರಿದ್ದಾರೆ.
ಯು.ಟಿ.ಖಾದರ್ ಸಾಹೇಬರೇ.. ಈವರೆಗೆ ಈ ರಾಜ್ಯದಲ್ಲಿ ಅದೆಷ್ಟೋ ಸ್ಪೀಕರ್ಗಳು ಆಗಿ ಹೋಗಿದ್ದಾರೆ. ಅವರ್ಯಾರೂ ಮಾಡಿಸಿರದಂತಹ ಈ ಮೋಟಿವೇಶನಲ್ ಟಾಕ್ಗಳ ಅಗತ್ಯ ಈ ರಾಜ್ಯದ ಜನಪ್ರತಿನಿಧಿಗಳಿಗೆ ಯಾಕೆ ಬೇಕಿತ್ತು? ಇದನ್ನು ಮಾಡಿಸುವ ಮೂಲಕ ಖಂಡಿತಾ ನೀವು ಒಳ್ಳೆಯ ಹೆಸರನ್ನು ಗಳಿಸಲಾರಿರಿ ಎಂದು ಇಸ್ಮತ್ ಪಜೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಡಿಯಲಾಜಿಕಲ್ ಪಾಲಿಟಿಕ್ಸ್ ನಿಮಗೆ ಗೊತ್ತಿಲ್ಲದಿರಬಹುದು. ಆದರೆ ನಿಮ್ಮನ್ನು ರಾಜಕೀಯವಾಗಿ ಈ ಹಂತದವರೆಗೆ ತಂದ ಪಕ್ಷವನ್ನು ಅದರ ಜಾತ್ಯಾತೀತ ಸಿದ್ಧಾಂತವನ್ನು ಒಪ್ಪುವವರು ಯಾರು ಎಂಬ ಕನಿಷ್ಠ ಪ್ರಜ್ಞೆ ನಿಮಗಿಲ್ಲದಾಯಿತೇ..? ಈ ಜಾತ್ಯಾತೀತತೆ ಎಂದರೆ ಯಾರದೇ ಔದಾರ್ಯವಲ್ಲ.ಅದು ಈ ನೆಲದ ಮೂಲಗುಣ, ಈ ದೇಶದ ಸಂವಿಧಾನದ ಅಂತಃ ಸತ್ವ ಅಡಗಿರುವುದೇ ಅದರ ಪರಮ ಜಾತ್ಯಾತೀತ ಗುಣದಲ್ಲಿ.
ಅದನ್ನು ಬಿಲ್ಕುಲ್ ಒಪ್ಪದ ರವಿಶಂಕರ್ , ಸ್ಪಷ್ಟವಾಗಿ ಬಿಜೆಪಿಯೊಂದಿಗೆ ಗುರುತಿಸಿರುವ ವೀರೇಂದ್ರ ಹೆಗ್ಗಡೆ, ಮೊನ್ನೆ ಮೊನ್ನೆ ನಿಮ್ಮದೇ ಸರಕಾರ ಪಠ್ಯಪುಸ್ತಕಗಳ ವಿಚಾರದಲ್ಲಿ ತೆಗೆದುಕೊಂಡ ನಿಲುವನ್ನು ಯಾವ ಮುಚ್ಚುಮರೆಯೂ ಇಲ್ಲದೇ ವಿರೋಧಿಸಿ ಹಿಂದಿನ ಜನವಿರೋಧೀ ಬಿಜೆಪಿ ಸರಕಾರ ವಿಷಯುಕ್ತಗೊಳಿಸಿದ ಪಠ್ಯ ಪುಸ್ತಕಗಳ ಪರ ವಕಾಲತ್ತು ವಹಿಸಿದ ಗುರುರಾಜ ಕರ್ಜಗಿ ಮುಂತಾದವರಿಂದ ಎಂತಹ ಮೋಟಿವೇಶನಲ್ ಕ್ಲಾಸ್ಗಳು ಸಿಗಬಹುದು..? ಮೊನ್ನೆ ಮೊನ್ನೆಯವರೆಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೆಂದು ಶ್ರಮಿಸಿದ ದೇವನೂರು ಮಹಾದೇವ, ಪುರುಷೋತ್ತಮ ಬಿಳಿಮಲೆ ಮುಂತಾದ ಹಿರಿಯರನ್ನು ತಾವು ಇಷ್ಟು ಬೇಗ ಮರೆತಿರಾ..?
ನಾವು ಈಗಲೂ ಹೇಳುತ್ತೇವೆ. ನೀವು ನಮ್ಮ ಸೆಕ್ಯುಲರ್ ಸಾಹಿತಿಗಳನ್ನೂ ಕರೆಯಬೇಡಿ.
ನಮ್ಮ ದೇಶದಲ್ಲಿ ನಮ್ಮ ಪವಿತ್ರ ಸಂವಿಧಾನಕ್ಕಿಂತ ಮಿಗಿಲಾದ ಮೋಟಿವೇಟರ್ ಬೇರೊಂದಿಲ್ಲ. ಅದನ್ನೇ ಒಪ್ಪದವರಿಂದ ನೀವೆಂತಹ ಮೋಟಿವೇಶನ್ ಮಾಡಿಸಬಲ್ಲಿರಿ..? ನಮ್ಮ ಜನಪ್ರತಿನಿಧಿಗಳಿಗೆ ಎಲ್ಲಕ್ಕಿಂತ ತುರ್ತಾಗಿ ಬೇಕಿರುವುದು ಸಂವಿಧಾನದ ಅರಿವು. ಅದನ್ನು ಮನವರಿಕೆ ಮಾಡಿಸಿ ಕೊಡುವ ಒಂದು ತರಗತಿಯನ್ನು ವ್ಯವಸ್ಥೆ ಮಾಡಿಸಿ ಪುಣ್ಯ ಕಟ್ಕೊಳ್ಳಿ.. ಸೆಕ್ಯುಲರಿಸಮ್ಮನ್ನು ಮತ್ತು ಸಂವಿಧಾನವನ್ನು ಒಪ್ಪದವರಿಂದ ಮಾಡಿಸ ಹೊರಟ ಮೋಟಿವೇಶನಲ್ ಸೆಶನ್ ಕೂಡಲೇ ನಿಲ್ಲಿಸಿ ಎಂದು ಇಸ್ಮತ್ ಪಜೀರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ: ಅಮಿತ್ ಶಾಗೆ ಸಿದ್ದರಾಮಯ್ಯ ಮನವರಿಕೆ


