‘ಈ ಸಲ ಕಪ್ ನಮ್ದೆ’ ಇದು RCB ಅಭಿಮಾನಿಗಳ 13 ವರ್ಷದ ಕೂಗು. ಆದರೆ ಇದುವರೆಗೂ 3 ಬಾರಿ ಫೈನಲ್ ತಲುಪಿರುವ RCB ತಂಡ ಒಮ್ಮೆಯೂ ಗೆಲುವು ಸಾಧಿಸಿ ಕಪ್ ತನ್ನದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ. 15ನೇ ಆವೃತ್ತಿಯ ಈ ಬಾರಿಯ IPL2022 ನಲ್ಲಿ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಅದು ನಂತರ ಸೋಲುಗಳ ಸುಳಿಗೆ ಸಿಲುಕಿ ಪ್ಲೇಆಫ್ ತಲುಪಲು ಒದ್ದಾಡುತ್ತಿದೆ. ಈ ಬಾರಿಯಾದರೂ ಆರ್ಸಿಬಿ ಕಪ್ ಗೆಲ್ಲಬೇಕಾದರೆ ಮುಂದಿನ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕು, ಜೊತೆಗೆ ಅದೃಷ್ಟವೂ ಇರಬೇಕು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದರು ಗೆದ್ದರಷ್ಟೆ ಅದು ಮುಂದಕ್ಕೆ ಸಾಗಲು ಸಾಧ್ಯ. ಇಲ್ಲದಿದ್ದಲ್ಲೆ ಮನೆಗೆ ಹೋಗಬೇಕಾಗುತ್ತದೆ. ಜೊತೆಗೆ ಅದೃಷ್ಟ ಎಂದರೆ ಮೇ 21ರ ಶನಿವಾರ ನಡೆಯುವ ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಡೆಲ್ಲಿ ಸೋತರಷ್ಟೇ ಆರ್ಸಿಬಿಗೆ ಅವಕಾಶ. ಒಂದು ವೇಳೆ ಆ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದರೆ ಅದು ಪ್ಲೇಆಫ್ ಪ್ರವೇಶಿಸುತ್ತದೆ. ಆರ್ಸಿಬಿ ಟೂರ್ನಿಯಿಂದ ಹೊರಬೀಳುತ್ತದೆ. ಅದು ಹೇಗೆಂದು ವಿವರವಾಗಿ ನೋಡೋಣ.
ಟೂರ್ನಿಯುದ್ದಕ್ಕೂ ಸಾಂಘಿಕ ಪ್ರದರ್ಶನ ನೀಡಿರುವ ಗುಜರಾತ್ ಟೈಟನ್ಸ್ ತಂಡ 10 ಗೆಲುವುಗಳೊಂದಿಗೆ 20 ಅಂಕ ಗಳಿಸಿ ಅಗ್ರಸ್ಥಾನದೊಂದಿಗೆ ಈಗಾಗಲೇ ಪ್ಲೇಆಫ್ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಮೂರನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ತಲಾ 16 ಅಂಕ ಪಡೆದಿದ್ದು, ಉಳಿದ ತಲಾ ಒಂದೊಂದು ಪಂದ್ಯಗಳಲ್ಲಿ ಗೆದ್ದರೂ, ಸೋತರೂ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿವೆ. ಉಳಿದ ಒಂದು ಸ್ಥಾನಕ್ಕಾಗಿ RCB ಸೇರಿದಂತೆ 5 ತಂಡಗಳು ಸೆಣಸಾಟ ನಡೆಸುತ್ತಿವೆ. ಆದರೆ ಹೆಚ್ಚಿನ ಸಾಧ್ಯತೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು RCB ತಂಡಕ್ಕಿದೆ.
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಚನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ ರೇಸ್ನಿಂದ ಈಗಾಗಲೇ ಹೊರಬಿದ್ದಿವೆ. ಉಳಿದ ಹೈದರಾಬಾದ್ ಸನ್ರೈಸರ್ಸ್ (10 ಅಂಕ), ಪಂಜಾಬ್ ಕಿಂಗ್ಸ್ (12 ಅಂಕ), ಕೋಲ್ಕತ್ತಾ ನೈಟ್ ರೈಡರ್ಸ್ (12 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (14 ಅಂಕ) ಮತ್ತು RCB (14 ಅಂಕ) ಪ್ಲೇ ಆಫ್ ಆಸೆ ಜೀವಂತವಾಗಿಟ್ಟುಕೊಂಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆದರೆ ಈ ಐದು ತಂಡಗಳಲ್ಲಿ ಒಂದು ತಂಡ ಮಾತ್ರ ಪ್ಲೇ ಆಫ್ ಪ್ರವೇಶ ಸಾಧ್ಯ. 14 ಅಂಕ ಗಳಿಸಿರುವ RCB ಪ್ಲೇ ಆಫ್ ತಲುಪಬೇಕಾದರೆ ಅದು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದರು ದೊಡ್ಡ ಅಂತರದಲ್ಲಿ ಜಯಿಸಬೇಕು. ಆಗ ಅದು 16 ಅಂಕ ಗಳಿಸಿರುತ್ತದೆ. ಇನ್ನೂ ವಿವರವಾಗಿ ನೋಡುವ ಮೊದಲು ಅಂಕ ಪಟ್ಟಿಯ ಮೇಲೆ ಕಣ್ಣಾಡಿಸೋಣ ಬನ್ನಿ.

ಆರ್ಸಿಬಿ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದರೂ ಸಹ ಅದರ ನೆಟ್ ರನ್ರೇಟ್ -323 ಇರುವುದು ಸಮಸ್ಯೆಯಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದೆ ಮತ್ತು ಅದರ ನೆಟ್ ರನ್ರೇಟ್ +255 ಇರುವುದು ಅದಕ್ಕೆ ವರವಾಗಿ ಪರಿಣಮಿಸಿದೆ.
ಗುರುವಾರ ಆರ್ಸಿಬಿ ತಂಡ ತನ್ನ ಲೀಗ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಎದುರು ಕಣಕ್ಕಿಳಿಯಲಿದೆ. ಅಲ್ಲಿ ಗೆದ್ದರಷ್ಟೆ ಅದಕ್ಕೆ ಅವಕಾಶ. ಗೆಲುವು ಸಾಧಿಸಿದರೆ 16 ಅಂಕಗಳೊಂದಿಗೆ ತನ್ನ ಲೀಗ್ ಹೋರಾಟ ಮುಕ್ತಾಯಗೊಳಿಸಿ ಡೆಲ್ಲಿ ಸೋಲಿಗಾಗಿ ಕಾಯುತ್ತಾ ಕೂರಬೇಕಿದೆ. ಒಂದು ವೇಳೆ ಆ ಪಂದ್ಯದಲ್ಲಿ ಆರ್ಸಿಬಿ ಸೋತಲ್ಲಿ ಅದು ಟೂರ್ನಿಯಿಂದ ಹೊರಬೀಳುತ್ತದೆ. ಏಕೆಂದರೆ ಆಗ ಅದು ಕೇವಲ 14 ಅಂಕ ಗಳಿಸಿರುತ್ತದೆ ಮತ್ತು ಅದರ ನೆಟ್ ರನ್ ರೇಟ್ ಡೆಲ್ಲಿ, ಕೋಲ್ಕತಾ ತಂಡಗಳಿಗಿಂತ ಕಡಿಮೆ ಇರುವುದರಿಂದ ಅವುಗಳಿಗೆ ಪ್ಲೇ ಆಫ್ ಅವಕಾಶವಿರುತ್ತದೆ.
ಡೆಲ್ಲಿ ತಂಡವೂ ಸಹ ಆರ್ಸಿಬಿ ಸೋಲಿಗಾಗಿ ಕಾಯುತ್ತಿದೆ. ಏಕೆಂದರೆ ಅದು ತನ್ನ ಕೊನೆಯ ಪಂದ್ಯ ಮುಂಬೈ ಇಂಡಿಯನ್ಸ್ ಎದುರು ಆಡಲಿದೆ. ಅಲ್ಲಿ ಗೆದ್ದರೆ ಅದು ಸುಲಭವಾಗಿ ಪ್ಲೇ ಆಫ್ ಪ್ರವೇಶಿಸುತ್ತದೆ. ಒಂದು ವೇಳೆ ಅಲ್ಲಿ ಸೋತರೂ ಕೂಡ 14 ಅಂಕಗಳೊಂದಿಗೆ ಉತ್ತಮ ನೆಟ್ ರನ್ರೇಟ್ ಇರುವುದರಿಂದ ಅದಕ್ಕೆ ಪ್ಲೇ ಆಫ್ ಅವಕಾಶ ಹೆಚ್ಚು. ಅದಕ್ಕಾಗಿ ಅದು ಆರ್ಸಿಬಿ ಸೋಲನ್ನು ಎದುರು ನೋಡುತ್ತಿದೆ.
ಇನ್ನು ಕೋಲ್ಕತ್ತಾ ಮತ್ತು ಪಂಜಾಬ್ ತಂಡಗಳು ಡೆಲ್ಲಿ ಮತ್ತು ಆರ್ಸಿಬಿ ಎರಡೂ ತಂಡಗಳ ಸೋಲಿಗಾಗಿ ಪ್ರಾರ್ಥಿಸುತ್ತಿವೆ. ಏಕೆಂದರೆ ಆ ಎರಡು ತಂಡಗಳು ತಲಾ 12 ಅಂಕ ಗಳಿಸಿದ್ದು ತಮ್ಮ ಕಡೆಯ ಪಂದ್ಯದಲ್ಲಿ ಅತಿ ದೊಡ್ಡ ಅಂತರದಲ್ಲಿ ಗೆದ್ದು ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ಗೇರಲು ಕನಸು ಕಾಣುತ್ತಿವೆ. ಹೈದರಾಬಾದ್ ಸನ್ರೈಸರ್ಸ್ ತಂಡ ಕೇವಲ 10 ಅಂಕ ಗಳಿಸಿದ್ದು, ಉಳಿದ ಎರಡೂ ಪಂದ್ಯ ದೊಡ್ಡ ಅಂತರದಲ್ಲಿ ಗೆದದ್ದು 14 ಅಂಕ ಮತ್ತು ಉತ್ತಮ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಕನಸು ಕಾಣುತ್ತಿದೆ. ಆದರೆ ಅದರ ಸಾಧ್ಯತೆ ತೀರಾ ಕಡಿಮೆ ಇದೆ.
ವ್ಯತ್ಯಾಸ ನೋಡಿ.
ನಿಮ್ಮ ಮಕ್ಕಳು ಏನಾಗಬೇಕು?
ಹಿಂಸೆಯ ತ್ರಿಶೂಲ ಹಿಡಿಯಬೇಕೆ?
ತ್ರಿವರ್ಣ ಧ್ವಜ ಹಿಡಿದು ಸಾಮರಸ್ಯದ ಹಾಡು ಹಾಡಬೇಕೆ?
ಆಯ್ಕೆ ನಿಮ್ಮದು…!#NaanuGauri #SaamarasyaUdupi #Udupi4unity #may14th2022 #Udupi #SayNoToViolence #airguns #PonnamPete #ಬಜರಂಗದಳ pic.twitter.com/7wvOHkgMOr— Naanu Gauri (@naanugauri) May 16, 2022
ಒಂದು ವೇಳೆ ಆರ್ಸಿಬಿ ಬಯಸಿದಂತೆ ಅದು ಗುಜರಾತ್ ಎದುರು ಗೆದ್ದು, ಡೆಲ್ಲಿ ತಂಡವು ಮುಂಬೈ ಎದುರು ಸೋತರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸುತ್ತದೆ. ಆದರೆ ಅಲ್ಲಿ ಅದು ಅಗ್ರ 4ರಲ್ಲಿ 4 ಸ್ಥಾನದಲ್ಲಿರುವುದರಿಂದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ 3ನೇ ಸ್ಥಾನದ ತಂಡದೊಂದಿಗೆ ಕಣಕ್ಕಿಳಿದು ಗೆಲುವು ಸಾಧಿಸಬೇಕು. ನಂತರ ಸೆಮಿಫೈನಲ್ (2ನೇ ಕ್ವಾಲಿಫೈಯರ್) ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಮತ್ತು ಅಂತಿಮವಾಗಿ ಫೈನಲ್ ನಲ್ಲಿ ಗೆಲುವು ಸಾಧಿಸಿದರೆ ಈ ಸಲ ಕಪ್ ನಮ್ದೆ ಎಂಬ ಘೋಷಣೆ ನಿಜವಾಗುತ್ತದೆ. ಕಷ್ಟದ ಹಾದಿ ಮುಂದಿದೆ. ಆದರೆ ಅಸಾಧ್ಯವಾದುದ್ದೇನಲ್ಲ. ಆರ್ಸಿಬಿ ಯಾವ ರೀತಿ ಪ್ರದರ್ಶನ ನೀಡುತ್ತದೆ ನೋಡೋಣ.
ಇದನ್ನೂ ಓದಿ: ಥಾಮಸ್ ಕಪ್: ಚೊಚ್ಚಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ
ಇದನ್ನೂ ಓದಿ: ಪೊನ್ನಂಪೇಟೆಯಲ್ಲಿ ಕೊಟ್ಟಿದ್ದು ಏರ್ಗನ್ ತರಬೇತಿ- ಸಿ.ಟಿ.ರವಿ; ನಡೆದದ್ದು ಯೋಗ ತರಬೇತಿ ಎಂದ ಹಿಂಜಾವೇ ಮುಖಂಡ


