ರೈತ ಹೋರಾಟವು ಮುಖ್ಯವಾದ ಯಶಸ್ಸನ್ನು ಕಂಡಿದೆ. ಈ ಗೆಲುವಿನ ಹಿಂದೆ ರೈತರು ಮತ್ತು ಪ್ರತಿಯೊಬ್ಬ ಪಂಜಾಬಿಗರ ಪಾತ್ರವಿದೆ. ವಿಶೇಷವಾಗಿ, ಪಂಜಾಬ್ನ ಸಂಸ್ಕೃತಿ ಏನೆಂದರೆ, ಎಲ್ಲರೂ ಸುತ್ತಾ ಕೂತ್ಕೊಂಡು ಮಾತಾಡೋದು. ಹೀಗೆ ನಾಲ್ಕು ಜನರ ಮಧ್ಯೆ ಚರ್ಚೆಯಾಗುವ ವಿಚಾರ ಹತ್ತು ಜನರಿಗೆ, ನೂರು ಜನರಿಗೆ, ಸಾವಿರ ಜನರ ನಡುವೆ ವಿನಿಮಯ ಆಗುತ್ತದೆ. ಮಾತ್ರವಲ್ಲ, ಈ ರೀತಿಯ ಗುಂಪುಗಳಲ್ಲಿ ಒಬ್ಬ ಮಾತ್ರ ಒಂದು ವಿಚಾರ ಹೇಳಲ್ಲ, ಎಲ್ಲರೂ ಒಂದೊಂದು ರೀತಿಯ ವಿಚಾರ ಹೇಳುತ್ತಾರೆ. ಕೊರೊನಾ ವಿಚಾರದಲ್ಲೂ ಸರ್ಕಾರ ಒಂದು ಸೋಂಕಿನ ಸಮಯವನ್ನು ಬಳಸಿಕೊಂಡು, ರೈತರನ್ನ, ಕಾರ್ಮಿಕರನ್ನ ತುಳಿಯಲು ಮುಂದಾಗಿತ್ತು. ಅದನ್ನು ಪಂಜಾಬ್ ಜನರು ಅರ್ಥ ಮಾಡಿಕೊಂಡರು. ಹೀಗಾಗಿ, ಅವರೆಲ್ಲರೂ ಯಾವುದೇ ಸೋಂಕು ಇದ್ದರೂ ಪರವಾಗಿಲ್ಲ, ನಾವು ಕೋವಿಡ್ನಿಂದ ಬೇಕಿದ್ದರೂ ಸಾಯುತ್ತೇವೆ. ಆದರೆ, ಸರ್ಕಾರದ ದಮನದಿಂದ ಸಾಯುವುದಿಲ್ಲ ಎಂದು ರೈತರು ಗಟ್ಟಿ ನಿರ್ಧಾರ ತಳೆದರು. ಆ ನಿರ್ಧಾರದ ಗಟ್ಟಿತನ ಈ ಹೋರಾಟವನ್ನ ಒಂದು ವರ್ಷ ಎಳೆದು ತಂದಿದೆ. ಫ್ಯಾಸಿಸ್ಟ್ ಸರ್ಕಾರವನ್ನ ಮಣಿಸಿದೆ.
ಇದು ಸತ್ಯ ಮತ್ತು ಮಿಥ್ಯದ ನಡುವಿನ ಸಂಘರ್ಷ, ಆಳುವವರು ಮತ್ತು ದುಡಿಯುವವರ ನಡುವಿನ ಸಂಘರ್ಷ, ಬಂಡವಾಳಿಗರು ಮತ್ತು ಸ್ವಾಭಿಮಾನಿಗಳ ನಡುವಿನ ಸಂಘರ್ಷ… ಸತ್ಯದ ಪರವಾಗಿ ಹೋರಾಡುವುದು ನಮ್ಮ ಹಕ್ಕು. ಆ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನ ರಾಜ್ಯದ ಕಲಾವಿದರು, ವ್ಯಂಗ್ಯಚಿತ್ರಕಾರರು, ಸಂಗೀತಗಾರರು, ಕತೆಗಾರರು ಮಾಡುತ್ತಲೇ ಇದ್ದಾರೆ.
ಇದನ್ನೂ ಓದಿ:ಸಂಸತ್ ಅಧಿವೇಶನ: ಅನ್ನದಾತರಿಗಾಗಿ ಸೂರ್ಯೋದಯ ಎಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ
ಒಂದು ಸಣ್ಣ ವ್ಯತ್ಯಾಸ ಏನಂದರೆ, ಪಂಜಾಬಿಗರಿಗೆ ಸಂಘರ್ಷ ಹೊಸದಲ್ಲ.. ಅದು ತಲೆಮಾರುಗಳಿಂದ ಪಂಜಾಬಿಗರಿಗೆ ರಕ್ತದಲ್ಲೇ ಬಂದಿದೆ. ಭಗತ್ ಸಿಂಗ್ ಅಜ್ಜ ಆರಂಭಿಸಿದ ಪಗಡಿ ಸಮಾಜ ಜಟ್ಟ ಹೋರಾಟ(ಸತತ ಒಂಬತ್ತು ತಿಂಗಳ ಕಾಲ ನಡೆಯಿತು)ದಿಂದ ಹಿಡಿದು, ಇಂದಿನವರೆಗೂ ಹೋರಾಟದ ಕಿಚ್ಚು ಪಂಜಾಬಿಗರ ದೇಹದ ನರ-ನಾಡಿಗಳಲ್ಲಿ ತುಂಬಿದೆ. ಲಾಂಗ್ ಲೀವ್ ರೆವಲೂಷನ್ ಎಂಬುದನ್ನು ನಾವು ನಿರಂತರವಾಗಿ ಪಾಲಿಸುತ್ತಾ ಬಂದಿದ್ದೇವೆ.
ಯಾವಾಗ, ರೈತರು ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಬೀದಿಗಿದ್ದಾರೆ ಎಂದು ಜನರಿಗೆ ಅರ್ಥವಾಗುತ್ತದೋ, ಆಗ ಇಡೀ ರಾಜ್ಯವೇ ರೈತರೊಂದಿಗೆ ನಿಲ್ಲತ್ತದೆ. ನಾವೂ ಎಣಿಸಿರಲಿಲ್ಲ ಈ ಹೋರಾಟ ಈ ಮಟ್ಟಿಗಿನ ಯಶಸ್ಸನ್ನು ಕಾಣುತ್ತದೆ ಎಂದು. ಅಲ್ಲದೆ, ಹರಿಯಾಣ ಕೂಡ ಈ ಮಟ್ಟಿಗೆ ಮುನ್ನುಗ್ಗಿ ಬರುತ್ತದೆ ಎಂದೂ ಗೊತ್ತಿರಲಿಲ್ಲ. ಹರಿಯಾಣಿಗರಿಗೆ ಅವರದ್ದೇ ಆದ ಸಾಕಷ್ಟು ಸಮಸ್ಯೆಗಳಿವೆ.
ಆದರೆ, ಅವರೂ ನಮ್ಮ ಜೊತೆಗೂಡಿದರು. ಸಾಕಷ್ಟು ಬೆಂಬಲ ನೀಡಿದರು. ಹಾಲು, ಗೂಧಿ ಹಿಟ್ಟು ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳನ್ನು ಯತೇಚ್ಚವಾಗಿ ರೈತ ಹೋರಾಟಕ್ಕೆ ನೀಡಿದರು. ಹರಿಯಾಣ ಗಡಿಯಲ್ಲಿ ಹರಿಯಾಣದ ಜನರು ಜೊತೆಗೂಡದಿದ್ದರೆ, ಪಂಜಾಬಿಗರು ದೆಹಲಿ ತಲುಪುವುದಗಲೀ, ದೆಹಲಿ ಚಲೋ ಆಗಲೀ ಈ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ. ಅವರು ಗಡಿಯಲ್ಲಿ ಪೊಲೀಸರನ್ನ ತಡೆದು ನಿಲ್ಲಿಸಿದ್ದೇ ಒಂದು ಮೈಲುಗಲ್ಲು, ಪಂಜಾಬ್-ಹರಿಯಾಣ ಅಣ್ಣ-ತಮ್ಮಂದಿರಿದ್ದಂತೆ. ಅವರು ಅಣ್ಣನಿಗೆ ಅಗತ್ಯದ ಸಮಯದಲ್ಲಿ ಜೊತೆಗೂಡಿದರು. ನಂತರ, ಉತ್ತರ ಪ್ರದೇಶ, ಬಿಹಾರ ಎಲ್ಲರೂ ಅದೇ ಕಿಚ್ವಿನೊಂದಿಗೆ ಸಾಥ್ ಕೊಟ್ಟರು.
ಇದನ್ನೂ ಓದಿ: ಬಿಜೆಪಿಯ ದುರಹಂಕಾರಕ್ಕಾಗಿಯು ರೈತ ಚಳುವಳಿ ನೆನಪಿನಲ್ಲಿ ಉಳಿಯುತ್ತದೆ: ಪ್ರಿಯಾಂಕಾ ಗಾಂಧಿ
ಪಂಜಾಬ್, ಹರಿಯಾಣ, ಯುಪಿ, ಬಿಹಾರಿ ಜನರಿಗೆ ಎಂಎಸ್ಪಿ ಬಗ್ಗೆ ಹೇಗೆ ತಿಳಿಸುವುದು ಎಂದು ಚಿಂತಿಸುವಾಗ ಯುಪಿ ಮತ್ತು ಬಿಹಾರದಲ್ಲಿ ರೈತರ ಮೇಲೆ ಅತಿ ಹೆಚ್ಚಾಗಿ ದಮನ-ಲೂಟಿ ನಡೆಯುತ್ತಿದೆ ಎಂದು ಅರ್ಥವಾಯಿತು. ಪಂಜಾಬ್, ಹರಿಯಾಣದಲ್ಲಿ ಒಂದು ಕ್ವಿಂಟಾಲ್ ಗೋಧಿಗೆ 1,900 ರೂ. ಕೊಟ್ಟರೆ, ಯುಪಿ ಮತ್ತು ಬಿಹಾರದಲ್ಲಿ ಕೇವಲ 900 ರೂ. ಕೊಡುತ್ತಿದ್ದಾರೆ. ಈ ಪ್ರಮಾಣದಲ್ಲಿ ಆ ಎರಡೂ ರಾಜ್ಯಗಳ ರೈತರನ್ನು ಲೂಟಿ ಮಾಡಲಾಗುತ್ತಿದೆ. ಎಲ್ಲಾ ಪಕ್ಷಗಳೂ ಅವರನ್ನ ಲೂಟಿ ಮಾಡಿವೆ, ಮಾಡುತ್ತಿವೆ.
ಇಷ್ಟು ದೊಡ್ಡ ಸಂಘರ್ಷ ಇಷ್ಟು ದಿನ ಮುಂದುವರೆಯುವುದರಲ್ಲಿ ಇಲ್ಲಿನ ನಾಯಕತ್ವದ ಪಾತ್ರ ತುಂಬಾ ಇದೆ. ನಮ್ಮ ಶತ್ರು ಯಾರು ಎಂದು ಗುರುತಿಸಿ, ಆ ಶತ್ರುಗಳು ಯಾವ ರೀತಿಯಲ್ಲಿ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಜನರಿಗೆ ತಿಳಿಸುವಲ್ಲಿ ಅವರ ಪಾತ್ರ ಭಾರೀ ಇದೆ. ಇಲ್ಲಿನ ಹೋರಾಟಗಳನ್ನು ಒಡೆದು, ಸಧೆ ಬಡಿಯುವುದು ಸರ್ಕಾರಗಳ ಮೊದಲ ಅಜೆಂಡಾ ಆಗಿರುತ್ತದೆ. ಅಂತಹ ಹುನ್ನಾರಕ್ಕೆ ಈ ಹೋರಾಟ ಬಲಿಯಾಗದಂತೆ ಮುನ್ನಡೆಸುವಲ್ಲಿ ರೈತ ನಾಯಕತ್ವ ಸಾಕಷ್ಟು ಶ್ರಮಿಸಿದೆ. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ನಮ್ಮ ಮುಂದಿರುವ ಶತ್ರು ಈಗ ಹಿಂದೆ ಸರಿದಿರಬಹುದು, ಆದರೆ ಅವರು ಸಂಪೂರ್ಣವಾಗಿ ಹಿಂದೆ ಹೋಗುವುದಿಲ್ಲ. ಅವರನ್ನು ಮಣಿಸಲು ನಮ್ಮ ಹೋರಾಟ ಮುನ್ನಡೆಯುತ್ತಲೇ ಇರಬೇಕು. ಅಲ್ಲದೆ, ಭಾರತ WTO (ವಿಶ್ವ ವಾಣಿಜ್ಯ ಸಂಸ್ಥೆ), LPG (ಉದಾರೀಕರಣ, ಖಾಸಗೀಕರಣ, ಜಾಗತೀಕರಣ)ಯಿಂದ ಹೊರಬರಬೇಕು. ಅದೇ ನಮ್ಮ ಹೋರಟ ಮುಂದಿನ ಗುರಿ…ಈ ಗುರಿಯನ್ನು ಜಯಿಸಿದರೆ, ಭಾರತ ಗೆಲ್ಲುತ್ತದೆ.
- ~ಸುರೀಂದರ್ ಸಿಂಗ್
ಬಿಕೆಯು ಡೆಕೌಂದ (ಭಾರತ್ ಕಿಸಾನ್ ಯೂನಿಯನ್)
ಇದನ್ನೂ ಓದಿ: ರೈತರ ಆತ್ಮಹತ್ಯೆ: ವಾಸ್ತವದಿಂದ ದೂರವಿರುವ ಸರಕಾರದ ವರದಿಗಳು