Homeಕರ್ನಾಟಕಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

ಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

"ಬಹುತ್ವ ನಿಮ್ಮ ಸಿದ್ಧಾಂತ, ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ; ನಮಗಲ್ಲ" ಎನ್ನುವ ಕಾರ್ಯಪ್ಪ ಅವರಿಗೆ ಸಾಂವಿಧಾನಿಕ ಆಶಯಗಳ ಬಗ್ಗೆ ನಂಬಿಕೆ ಇದೆಯೇ?

- Advertisement -
- Advertisement -

“ಚಕ್ರವರ್ತಿ ಸೂಲಿಬೆಲೆ ಅವರು ಹೇಳುವುದು ನಿಮಗೆ ಸುಳ್ಳಾಗಿರಬಹುದು, ಆದರೆ ನಮಗಲ್ಲ” ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ಡಿ.10ರಿಂದ ಡಿ.19ರವರೆಗೆ ನಡೆಯಲಿರುವ ಪ್ರತಿಷ್ಟಿತ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದ ವಿಚಾರ ಸಂಕಿರಣಕ್ಕೆ ಬಿಜೆಪಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯವರನ್ನು ಕರೆಸಲಾಗುತ್ತಿದೆ. ಈ ಕುರಿತಂತೆ ಪತ್ರಕರ್ತರು ಪ್ರಶ್ನಿಸಿದಾಗ, ತಮ್ಮ ನಿಲುವನ್ನು ಕಾರ್ಯಪ್ಪ ಅವರು ಸಮರ್ಥಿಸಿಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯವರಿಗೆ ‘ಸಮಾಜ ಸೇವಕ’ ಎಂದು ವಿಶೇಷಣವನ್ನು ನೀಡಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಉಡಾಫೆಯಾಗಿ ಕಾರ್ಯಪ್ಪ ಅವರು ಉತ್ತರಿಸಿದ್ದಾರೆ.

ಅಡ್ಡಂಡ ಸಿ.ಕಾರ್ಯಪ್ಪ ಅವರು ಮೈಸೂರು ರಂಗಾಯಣದ ನಿರ್ದೇಶಕರಾದ ಬಳಿಕ ಒಂದಿಲ್ಲೊಂದು ವಿವಾದಗಳಲ್ಲಿ ರಂಗಾಯಣ ಸಿಲುಕುತ್ತಲೇ ಇದ್ದು, ಪ್ರಸಕ್ತ ಬಹುರೂಪಿ ಕಾರ್ಯಕ್ರಮವೂ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಲಪಂಥೀಯ ವಿಚಾರಧಾರೆಯ ಅಡ್ಡಂಡ ಸಿ.ಕಾರ್ಯಪ್ಪ ಅವರು ಅದೇ ವಿಚಾರಧಾರೆಯುಳ್ಳವರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಯಣಕ್ಕೆ ಕರೆಸಿಕೊಳ್ಳುವುದು ಮತ್ತು ಹೆಚ್ಚಿನ ಅವಕಾಶ ನೀಡುವುದು ಈಗ ಗುಟ್ಟಿನ ವಿಷಯವೇನಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾ, ಸುಳ್ಳು ಸುದ್ದಿಗಳನ್ನು ಹರಡುತ್ತಾ, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ಚಕ್ರವರ್ತಿ ಸೂಲಿಬೆಲೆ ಅಂಥವರನ್ನು ಬಹುರೂಪಿ ನಾಟಕೋತ್ಸವ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಕರೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.


ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?


ಡಿಸೆಂಬರ್‌ 10ರಿಂದ ಡಿ.19ರವರೆಗೆ ಬಹುರೂಪಿ ನಡೆಯಲಿದ್ದು, ಉದ್ಘಾಟನಾ ಸಮಾರಂಭ ಡಿಸೆಂಬರ್‌‌ 11ರಂದು ಜರುಗಲಿದೆ. ಡಿಸೆಂಬರ್‌ 12 ಮತ್ತು 13ರಂದು ಬಹುರೂಪಿ ವಿಚಾರಸಂಕಿರಣ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಡಿ.13ರಂದು ನಡೆಯುವ ಭಾಷಣ ಸ್ಪರ್ಧೆಯ ಬಳಿಕ, ಅಂದು ಸಂಜೆ 4 ಗಂಟೆಗೆ ಬಿಜೆಪಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯವರು ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡಲಿದ್ದಾರೆ.

“ಚಕ್ರವರ್ತಿ ಸೂಲಿಬೆಲೆಯವರು ಸಮಾರೋಪ ಭಾಷಣಕ್ಕೆ ಸೂಕ್ತವ್ಯಕ್ತಿ ಎನಿಸಿದ್ದರಿಂದ ನಾವು ಕರೆದಿದ್ದೇವೆ. ಚಕ್ರವರ್ತಿ ಸೂಲಿಬೆಲೆಯವರ ವಿಚಾರವನ್ನು ಬಿಟ್ಟುಬಿಡಿ. ಅವರನ್ನು ಕರೆದಿದ್ದೇವೆ. ಬರ್ತಾರೆ, ಸಮಾರೋಪ ಭಾಷಣ ಮಾಡ್ತಾರೆ. ಆ ಭಾಷಣದಲ್ಲಿ ದೋಷಗಳನ್ನು ಕಂಡು ಹಿಡಿದು ಅದನ್ನು ಪ್ರಕಟಿಸಿ, ಅದು ನಿಮ್ಮ ಸ್ವಾತಂತ್ರ್ಯ” ಎಂದು ಪತ್ರತರ್ಕರಿಗೆ ಬೋಧನೆ ಮಾಡಿದ್ದಾರೆ.

“ಜನರಿಗೆ ಇವರಿಂದ ಏನು ಸಂದೇಶ ಕೊಡುತ್ತೀರಿ?” ಎಂದು ಕೇಳಿದರೆ, “ಯುವಕರಿಗೆ ಸಂದೇಶವನ್ನು ಕೊಡುತ್ತೀವಿ” ಎಂದಿದ್ದಾರೆ. “ನಾವು ಚರ್ಚೆ ಮಾಡಿ ಒಂದಿಷ್ಟು ಜನರನ್ನು ಕರೆದಿದ್ದೇವೆ” ಎಂದು ಕಾರ್ಯಪ್ಪ ಪ್ರತಿಕ್ರಿಯೆ ನೀಡುತ್ತಾರೆ. “ಚಕ್ರವರ್ತಿ ಸೂಲಿಬೆಲೆಯವರು ರೈತರ ಬಗ್ಗೆ, ರಂಗಭೂಮಿ ಬಗ್ಗೆ ಯಾವತ್ತೂ ಮಾತನಾಡಲ್ಲ. ಯಾರೋ ಒಬ್ಬರನ್ನು ಒಲೈಸುತ್ತಾರೆ” ಎಂದು ಪತ್ರಕರ್ತರು ಕೇಳಿದರೆ, “ಮಾಧ್ಯಮದ ಕೆಲವರಿಗೆ ಹಾಗೆ ಅನ್ನಿಸಿರಬಹುದು, ಎಲ್ಲರಿಗೂ ಅಲ್ಲ” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿರಿ: ಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್‌ ಬರಹಕ್ಕೆ ಮಿಡಿದ ಕನ್ನಡಿಗರು


ಹೆಚ್ಚಿನ ವಿವರಗಳಿಗಾಗಿ ಅಡ್ಡಂಡ ಕಾರ್ಯಪ್ಪ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದಾಗಲೂ ಹೀಗೆಯೇ ಉಡಾಫೆ ಉತ್ತರಗಳನ್ನೇ ನೀಡಿದರು. “ಚಕ್ರವರ್ತಿ ಸೂಲಿಬೆಲೆಯವರು ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ. ಅವರನ್ನು ಕರೆಸುವುದು ಎಷ್ಟು ಸರಿ? ಸಂಘಪರಿವಾರದ ವಿಚಾರಧಾರೆಗಳ ವ್ಯಕ್ತಿಗಳಾದರೂ ಎಲ್ಲ ಜನವರ್ಗವನ್ನು ಗೌರವಿಸುವ ಬಲಪಂಥೀಯರನ್ನು ಕರೆಸಬಹುದಲ್ಲ?” ಎಂದು ಕೇಳಿದೆವು. ನಮ್ಮ ಮಾಧ್ಯಮದ ಕುರಿತೂ ಲಘುವಾಗಿ ಮಾತನಾಡುತ್ತಲೇ ಉತ್ತರಿಸಿದ ಅವರು, “ನಿಮಗೆ ಅವರು ಸುಳ್ಳು ಹೇಳಿದ್ದಾರೆಂದು ಅನಿಸಬಹುದು. ಆದರೆ ನಮಗೆ ಅವರು ಸತ್ಯಗಳನ್ನು ಹೇಳುತ್ತಿದ್ದಾರೆ ಅನಿಸುತ್ತದೆ. ಅವರನ್ನು ಕಂಡರೆ ನಿಮಗೆ ಆಗಲ್ಲ, ನಮಗೆ ಅವರನ್ನು ಕಂಡರೆ ಆಗುತ್ತದೆ” ಎಂದರು.

“ಬಹುರೂಪಿಯು ಬಹುತ್ವವನ್ನು ಪ್ರತಿನಿಧಿಸುವ ಒಂದು ಕಾರ್ಯಕ್ರಮ. ಬಹುತ್ವದ ಬಗ್ಗೆ ನಂಬಿಕೆ ಇರದವರನ್ನು ವೇದಿಕೆಗೆ ಕರೆಸುವುದು ಎಷ್ಟು ಸರಿ?” ಎಂದು ಕೇಳಿದರೆ, “ಈ ಸಿದ್ಧಾಂತವನ್ನೆಲ್ಲ ನಿಮಗೆ ಇಟ್ಟುಕೊಳ್ಳಿ. ನಮಗಲ್ಲ. ಇನ್ನೊಬ್ಬರನ್ನು ಓಲೈಸಲು ಆಗಲ್ಲ. ಸೂಲಿಬೆಲೆ ನಿಮಗೆ ಸುಳ್ಳುಗಾರರಾಗಿರಬಹುದು. ನಮಗೆ ಸುಳ್ಳುಗಾರನಲ್ಲ. ಒಂದು ವರ್ಷ ಅಧಿಕಾರದಲ್ಲಿರುತ್ತೇನೆ, ಏನು ಬರೆದುಕೊಳ್ಳುತ್ತೀರೋ ಬರೆದುಕೊಳ್ಳಿ. ಯಾವುದಕ್ಕೂ ಧೃತಿಗೆಡುವುದಿಲ್ಲ” ಎಂದ ಅವರು ಬಹುತ್ವದ ವಿಷಯವನ್ನೇ ನಿರಾಕರಿಸಿದರು.

“ಸ್ವತಃ ಚಕ್ರವರ್ತಿ ಸೂಲಿಬೆಲೆಯವರೇ ತಾವು ಹೇಳಿರುವ ಮಾತುಗಳನ್ನು ಸತ್ಯವೆಂದು ಸಾಬೀತು ಮಾಡಲು ಸಾಧ್ಯವಾಗದಿರುವಾಗ, ನೀವು ಹೇಗೆ ಅವರು ಹೇಳುತ್ತಿರುವುದು ಸತ್ಯ ಎಂದು ಸಾಬೀತು ಮಾಡುತ್ತೀರಿ?” ಎಂದು ಕೇಳಿದೆವು. “ನಾನು ಅಷ್ಟು ಆಳಕ್ಕೆ ಇಳಿದಿಲ್ಲರ್‍ರೀ, ನೀವು ಆಳಕ್ಕೆ ಇಳಿದು ಏಕಮುಖ ವಿಚಾರಗಳನ್ನು ಬಿತ್ತುವ ಜನ್ಮದಲ್ಲಿ ಹುಟ್ಟಿದ್ದೀರಿ, ವಿವಾದ ಮಾಡಿಕೊಳ್ಳಿ” ಎಂದು ಹೇಳುತ್ತಾ ಮಾತುಮುಗಿಸಿದರು.

ಎಲ್ಲ ಜನವರ್ಗವನ್ನು ಕಟ್ಟು ನಿಟ್ಟಿನಲ್ಲಿ ರಂಗಾಯಣ ಮಾಡಿರುವ ಕೆಲಸಕ್ಕೆ ಅದರದ್ದೇ ಆದ ತೂಕವಿದೆ. ಬಿ.ವಿ.ಕಾರಂತರಂತಹ ರಂಗಭೂಮಿ ಭೀಷ್ಮರು ಕಟ್ಟಿದ ರಂಗಾಯಣದಲ್ಲಿ ಹಲವು ಮಹನೀಯರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅರ್ಥಪೂರ್ಣ ಪ್ರಯೋಗಗಳನ್ನು ರಂಗಾಯಣ ಮಾಡಿದೆ. ಆದರೆ ಮಹಾನ್‌ ಇತಿಹಾಸವನ್ನು ಹೊಂದಿರುವ ರಂಗಾಯಣದ ಚುಕ್ಕಾಣಿ ಹಿಡಿದಿರುವ ಕಾರ್ಯಪ್ಪ ಅವರು ಆಡುವ ಮಾತುಗಳು ಆತಂಕವನ್ನು ಹುಟ್ಟಿಸುತ್ತವೆ. “ಬಹುತ್ವ ನಿಮ್ಮ ಸಿದ್ಧಾಂತ, ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ; ನಮಗಲ್ಲ” ಎನ್ನುವ ಕಾರ್ಯಪ್ಪ ಅವರಿಗೆ ಸಾಂವಿಧಾನಿಕ ಆಶಯಗಳ ಬಗ್ಗೆ ನಂಬಿಕೆ ಇದೆಯೇ? ಬಹುತ್ವ ಸಂವಿಧಾನದ ಸಿದ್ಧಾಂತವೆಂದು ಅವರಿಗೆ ತಿಳಿದಿಲ್ಲವೇ? ಜನರ ತೆರಿಗೆ ಹಣದಲ್ಲಿ ನಡೆಯುವ ರಂಗಾಯಣದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಮಾತನಾಡಬಹುದೇ?


ಇದನ್ನೂ ಓದಿರಿ: ಹೋರಾಟಗಾರ್ತಿ ‘ಸುಧಾ ಭಾರದ್ವಾಜ್‌’ ಅವರಿಗೆ ಜಾಮೀನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹುಚ್ಚರಂತೆ ಪ್ರಶ್ನೆ ಮಾಡುತ್ತಿರುವ ಈ ಲೇಖನವನ್ನು ಓದುತಿದ್ದರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತಿದೆ, ತಲೆ ಬುಡ ವಿಲದಂತೆ ಹೀಗೆ ಏನೇನೋ ಬರೆದರೆ ಜನರು ಇದನ್ನು ಓದಿ ಒಪ್ಪಿಕೊಳುತಾರೆ ಅಂದುಕೊಂಡಿದೀರಾ? ರಾಷ್ಟ್ರದ ಬಗ್ಗೆ ಪ್ರಚಾರ ಮಾಡುವ ಮನುಷ್ಯನನ್ನು ಮೋದಿಯ ಬಗ್ಗೆ 30-40 ಭಾಷಣ ಮಾಡಿದಕ್ಕೆ ಬಿಜೆಪಿ ಪ್ರಚಾರಕ ಎಂದು ಒತ್ತಿ ಒತ್ತಿ ಹೇಳಿದರೆ ಓದುವ ಜನ ನಗುತಾರೆ ಹೊರತು ಇದನ್ನು ಒಪ್ಪಿಕೊಳುವುದಿಲ್ಲ, ವೆಬ್ಸೈಟ್ ನಲ್ಲಿ ಕುಳಿತುಕೊಂಡು ಯಾವದ್ಯಾವುದೋ ವಿಚಾರಗಳ್ಳನ್ನ ಸಂಗ್ರಹಿಸಿ ವೆಬ್ಸೈಟ್ ನಲ್ಲಿ ಬಿಟ್ಟು ಸುಲಭವಾಗಿ ಕುಳಿತಲ್ಲಿಯೇ ದುಡ್ಡು ಮಾಡಿದಷ್ಟು ಸುಲಭವಾಲ್ಲ ಸಾವಿರಾರು ಜನರು ಒಪ್ಪುವಂತೆ ಭಾಷಣ ಮಾಡುವುದು ಅದನ್ನು ಮೊದಲು ತಿಳಿದುಕೊಳ್ಳಿ…..

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...