ಪಾಕಿಸ್ತಾನ ಗುರುವಾರ ಸಂಜೆ ತಡರಾತ್ರಿ ಜಮ್ಮು, ಪಠಾಣ್ಕೋಟ್ ಮತ್ತು ಉಧಂಪುರದಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಬಳಸಿದೆ ಎಂದು TNIE ವರದಿ ಮಾಡಿದೆ. ಈ ಎಲ್ಲಾ ಗುರಿಗಳು ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ (IB) ಗೆ ಸಮೀಪದಲ್ಲಿವೆ ಎಂದು ಅದು ಹೇಳಿದೆ.
ಸ್ಥಾಪಿತ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳಿಗೆ (SoPs) ಅನುಗುಣವಾಗಿ ಚಲನಶೀಲ ಮತ್ತು ಚಲನಶೀಲವಲ್ಲದ ಸಾಮರ್ಥ್ಯಗಳನ್ನು ಬಳಸಿಕೊಂಡುಭಾರತೀಯ ಸಶಸ್ತ್ರ ಪಡೆಗಳು ಈ ದಾಳಿಗಳನ್ನು ತಟಸ್ಥಗೊಳಿಸಿದವು ಎಂದು ವರದಿ ಹೇಳಿದೆ.
ದಾಳಿಯ ನಂತರ ಯಾವುದೇ ಸಾವುನೋವುಗಳು ಅಥವಾ ನಷ್ಟಗಳು ವರದಿಯಾಗಿಲ್ಲ. ಭಾರತವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಪ್ರಧಾನ ಕಚೇರಿಯ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (HQ IDS) ಮತ್ತು ರಕ್ಷಣಾ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ಚಲನಶೀಲ ಯುದ್ಧವು ಶತ್ರುಗಳನ್ನು ತಟಸ್ಥಗೊಳಿಸಲು ಭೌತಿಕ ಬಲ, ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ಬಳಸುವುದನ್ನು ಒಳಗೊಂಡಿರುತ್ತದೆ. ಚಲನಶೀಲವಲ್ಲದ ಯುದ್ಧವು ಶತ್ರುಗಳ ನೈತಿಕತೆ, ಸಾಮರ್ಥ್ಯಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸಲು ಆರ್ಥಿಕ ನಿರ್ಬಂಧಗಳು ಮತ್ತು ರಾಜತಾಂತ್ರಿಕ ನಿರ್ಬಂಧಗಳ ಬಳಕೆಯ ಜೊತೆಗೆ ಸೈಬರ್, ಎಲೆಕ್ಟ್ರಾನಿಕ್, ಮಾಹಿತಿ ಯುದ್ಧವನ್ನು ಒಳಗೊಂಡಿರುತ್ತದೆ.
ಪಾಕಿಸ್ತಾನದ ದಾಳಿಯ ನಂತರ, ಶ್ರೀನಗರ, ಜಮ್ಮು, ಪೂಂಚ್-ರಾಜೌರಿ, ಕುಪ್ವಾರಾ, ಜೈಸಲ್ಮೇರ್, ಚಂಡೀಗಢ, ಮೊಹಾಲಿ, ಗುರುದಾಸ್ಪುರ್ ಮತ್ತು ತರಣ್ ತರಣ್ ಸೇರಿದಂತೆ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ನ ಅನೇಕ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು. ಕೆಲವು ಸ್ಥಳಗಳಲ್ಲಿ ಸಂಜೆಯಿಡಿ ದೊಡ್ಡ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಜನರು ವರದಿ ಮಾಡಿದ್ದಾರೆ.
“ರಾತ್ರಿ 8 ಗಂಟೆಯಿಂದ ವಿದ್ಯುತ್ ಕಡಿತಗೊಳಿಸಲಾಗಿದೆ. ನಗರದಲ್ಲಿ ಕೆಲವು ದೊಡ್ಡ ಸ್ಫೋಟಗಳು ಕೇಳಿಬಂದವು ಮತ್ತು ರಾತ್ರಿಯ ಆಕಾಶವು ಸ್ಫೋಟಗಳಿಂದ ಬೆಳಗುತ್ತಿತ್ತು ಆದರೆ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಸರ್ಕಾರವು ಜನರನ್ನು ಮನೆಯೊಳಗೆ ಇರುವಂತೆ ಕೇಳಿದೆ ಮತ್ತು ಬುಧವಾರ ಶಾಲೆಗಳನ್ನು ಮುಚ್ಚಲಾಗಿದೆ” ಎಂದು ಹೆಸರು ಹೇಳಲು ಇಚ್ಛಿಸದ ಜಮ್ಮುವಿನ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಉತ್ತರ ಮತ್ತು ಪಶ್ಚಿಮ ಭಾರತದ ಇಪ್ಪತ್ತೈದು ವಿಮಾನ ನಿಲ್ದಾಣಗಳನ್ನು ಸಹ ತಾತ್ಕಾಲಿಕವಾಗಿ ಮುಚ್ಚಲಾಯಿತು. ಕಾಶ್ಮೀರ ಕಣಿವೆಯಲ್ಲಿ, ಡ್ರೋನ್ಗಳ ಬಳಕೆಯ ನಂತರ ಮುಂಚೂಣಿಯ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ಭಾರೀ ಶೆಲ್ ದಾಳಿ ವರದಿಯಾಗಿದೆ.
ಉತ್ತರ ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಎಲ್ಒಸಿ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಮೊತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ನರ್ಗಿಸ್ ಬೇಗಂ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಹಫೀಜಾ ಎಂದು ಗುರುತಿಸಲಾಗಿದೆ. ಅದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
“ಪಾಕಿಸ್ತಾನವು ಪ್ರದೇಶಗಳನ್ನು ವೀಕ್ಷಿಸಲು ಡ್ರೋನ್ಗಳನ್ನು ಬಳಸುತ್ತಿದೆ, ನಂತರ ಅವರು ಭಾರೀ ಶೆಲ್ ದಾಳಿ ನಡೆಸುತ್ತಿದ್ದಾರೆ. ಅವರು ಎಲ್ಒಸಿಯಲ್ಲಿ ಭಾರೀ ಶೆಲ್ ದಾಳಿಯೊಂದಿಗೆ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದಾರೆ. ಇದು ಕೆಲವು ನಾಗರಿಕರ ಜೀವಗಳನ್ನು ಮತ್ತು ಅವರ ಆಸ್ತಿಗಳನ್ನು ಬಲಿ ತೆಗೆದುಕೊಂಡಿದೆ. ಶತ್ರುಗಳ ರಾಡಾರ್ ಅಡಿಯಲ್ಲಿ ಇರುವ ಶ್ರೀನಗರವನ್ನು ರಕ್ಷಿಸುವುದು ಪ್ರಸ್ತುತ ಗಮನದಲ್ಲಿದೆ” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೂಲವೊಂದು ತಿಳಿಸಿದೆ ಎಂದು TNIE ವರದಿ ಹೇಳಿದೆ.
ಚಂಡೀಗಢದಲ್ಲಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಬ್ಲ್ಯಾಕೌಟ್
“ಸೈರನ್ ಮೊಳಗಿಸಲಾಯಿತು ಮತ್ತು ಬ್ಲ್ಯಾಕೌಟ್ ವಿಧಿಸಲಾಯಿತು. ನಾವು ಕತ್ತಲೆಯಲ್ಲಿ ಕುಳಿತಿದ್ದೇವೆ ಮತ್ತು ಬ್ಲ್ಯಾಕೌಟ್ ಎಷ್ಟು ಕಾಲ ಇರುತ್ತದೆ ಎಂದು ನಮಗೆ ತಿಳಿದಿಲ್ಲ. ನಮ್ಮಲ್ಲಿ ಹಲವರು ಯಾವುದೇ ತುರ್ತು ಪರಿಸ್ಥಿತಿಗಾಗಿ ಮೊಬೈಲ್ ಫೋನ್ ಚಾರ್ಜ್ ಅನ್ನು ಉಳಿಸುತ್ತಿದ್ದೇವೆ” ಎಂದು ಚಂಡೀಗಢದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಪಠಾಣ್ಕೋಟ್ನಲ್ಲಿಯೂ ಸಹ, ಅಂಗಡಿಗಳನ್ನು ಮುಚ್ಚಲು ಕೇಳಲಾಯಿತು ಮತ್ತು ಜನರನ್ನು ಮನೆಗೆ ಹೋಗಲು ಹೇಳಲಾಯಿತು. ಎಲ್ಒಸಿಯಾದ್ಯಂತ ಪಾಕಿಸ್ತಾನದ ಅಪ್ರಚೋದಿತ ಶೆಲ್ ದಾಳಿಯ ನಂತರ ಎಲ್ಒಸಿಗೆ ಹತ್ತಿರವಿರುವ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗುತ್ತಿದ್ದರೂ, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಗಡಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಚಲನೆ ವರದಿಯಾಗುತ್ತಿದೆ.
ಇದಕ್ಕೂ ಮುನ್ನ, ಗುರುವಾರ ಸಂಜೆ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚಿಸುತ್ತಿರುವ ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಏಪ್ರಿಲ್ 22 ರಂದು 25 ಭಾರತೀಯ ಪ್ರವಾಸಿಗರು ಮತ್ತು ಒಬ್ಬ ನೇಪಾಳಿಯನ್ನು ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಗುಂಡಿಕ್ಕಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು “ಮೊದಲ ಉಲ್ಬಣ” ಎಂದು ಕರೆದ ಅವರು, ಭಾರತವು ಸಂಯಮದಿಂದ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಿದ್ದಾರೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ)ದ ಪ್ರಮುಖ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಅದಾಗ್ಯೂ, ನಂತರ ಅದು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದೆ.
‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಯಾವುದೇ ಪಾಕಿಸ್ತಾನಿ ನಾಗರಿಕರಿಗೆ ಹಾನಿಯಾಗಿಲ್ಲ ಎಂದು ಅವರು ಪುನರುಚ್ಚರಿಸಿದ್ದು, ನಾಗರಿಕ ಸಾವುನೋವುಗಳಿಗೆ ಸಂಬಂಧಿಸಿದ ಪಾಕಿಸ್ತಾನದ ಎಲ್ಲಾ ಪ್ರತಿಪಾದನೆಗಳನ್ನು ನಿರಾಕರಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಮೇ 7 ರ ಮಧ್ಯರಾತ್ರಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದೊಳಗಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದೆ. ಇದರಲ್ಲಿ 100 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಕ್ಸಲರು ನಡೆಸಿದ ನೆಲಬಾಂಬ್ ಸ್ಫೋಟಕ್ಕೆ 3 ಗ್ರೇಹೌಂಡ್ಸ್ ಕಮಾಂಡೋ ಪೊಲೀಸರ ಸಾವು
ನಕ್ಸಲರು ನಡೆಸಿದ ನೆಲಬಾಂಬ್ ಸ್ಫೋಟಕ್ಕೆ 3 ಗ್ರೇಹೌಂಡ್ಸ್ ಕಮಾಂಡೋ ಪೊಲೀಸರ ಸಾವು

