Homeಮುಖಪುಟ'ಮುಂಗಾರು’ ಪತ್ರಿಕೆಯ ಹಾದಿಯಲ್ಲೇ ಹೆಜ್ಜೆಹಾಕಿದ ‘ಜನವಾಹಿನಿ’...

‘ಮುಂಗಾರು’ ಪತ್ರಿಕೆಯ ಹಾದಿಯಲ್ಲೇ ಹೆಜ್ಜೆಹಾಕಿದ ‘ಜನವಾಹಿನಿ’…

ಪ್ರತೀ ವಾರ ಹಾಸ್ಯ ಲೇಖನ ಪ್ರಕಟವಾಗುವ ಜಾಗವನ್ನು ಖಾಲಿ ಬಿಟ್ಟು ಹೀಗೆ ಪ್ರಕಟಿಸಲಾಗಿತ್ತಂತೆ- ‘ದೇಶವು ಸಂಕಷ್ಟ ಸ್ಥಿತಿಯಲ್ಲಿದ್ದು, ಹಾಸ್ಯಕ್ಕಿದು ಕಾಲವಲ್ಲ!’

- Advertisement -
- Advertisement -

ಜನವಾಹಿನಿಯ ನೆನಪುಗಳು-11 : ನಿಖಿಲ್ ಕೋಲ್ಪೆ
ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಆದರ್ಶವಾದ, ನ್ಯಾಯಪರತೆ, ಜನಪರತೆಯ ವಿಷಯದಲ್ಲಿ ‘ಮುಂಗಾರು’ ಹಾಕಿಕೊಟ್ಟ ಹಾದಿಯಲ್ಲೇ ‘ಜನವಾಹಿನಿ’ ನಡೆಯುತ್ತಿತ್ತು. ಈ ಎರಡು ಪತ್ರಿಕೆಗಳಿಗೆ ಇದ್ದ ಸಾಮ್ಯ ಮತ್ತು ಭಿನ್ನತೆಗಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೆವು. ಮುಖ್ಯವಾಗಿ ಭಿನ್ನತೆ ಇದ್ದದ್ದು ತಾಂತ್ರಿಕ ವಿಭಾಗದಲ್ಲಿ. ಈ ಕುರಿತು ಈಗ ನೋಡೋಣ.

‘ಜನವಾಹಿನಿ’ಯ ತಾಂತ್ರಿಕ ಶ್ರೇಷ್ಟತೆಯ ಬಗ್ಗೆ ಹಿಂದೆ ಬರೆದಿದ್ದೆ. ‘ಮುಂಗಾರು’ ಈ ವಿಷಯದಲ್ಲಿ ತನ್ನ ಕಾಲಕ್ಕಿಂತಲೂ ಸ್ವಲ್ಪ ಹಿಂದೆಯೇ ಇತ್ತು. ‘ಜನವಾಹಿನಿ’ಯ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ನೀವಿಲ್ಲಿ ಓದಿದ್ದಿರಿ. ‘ಮುಂಗಾರು’ವಿನಲ್ಲಿ ನನ್ನ ಆಯ್ಕೆ ಪ್ರಕ್ರಿಯೆ ಬಗ್ಗೆ ಇಲ್ಲಿ ಸ್ವಲ್ಪ ಬರೆದರೆ ಅಪ್ರಸ್ತುತ ಆಗಲಾರದು ಎಂದು ಭಾವಿಸುವೆ.

ಪತ್ರಿಕೆ ಆರಂಭವಾದಾಗ ವಡ್ಡರ್ಸೆ ರಘುರಾಮ ಶೆಟ್ಟಿಯವರು ಬೆಂಗಳೂರಿನಿಂದ ಇಂದೂಧರ ಹೊನ್ನಾಪುರ ಮುಂತಾದ ಘಟಾನುಘಟಿಗಳನ್ನು ಜೊತೆಗೆ ತಂದಿದ್ದರು. ಆಗ ದಿನೇಶ್ ಅಮೀನ್ ಮಟ್ಟು, ಟಿ.ಕೆ. ತ್ಯಾಗರಾಜ್ ಮುಂತಾದ ಈಗ ಪ್ರಸಿದ್ಧರಾಗಿರುವ ಪತ್ರಕರ್ತರೂ ಇದ್ದರು. ಆ ಬಗ್ಗೆ ನನಗೆ ನಂತರ ತಿಳಿದದ್ದು. ನಾನು ಮುಂಬಯಿಯಿಂದ ಬಂದಾಗ ನನ್ನ ದೊಡ್ಡಪ್ಪ ಎಸ್. ಬಿ. ಕೋಲ್ಪೆಯವರು ತಮ್ಮ ಶಿಷ್ಯ ವಡ್ಡರ್ಸೆಯವರಿಗೆ ಒಂದು ಪತ್ರ ಕೊಟ್ಟಿದ್ದರು. ಆಗ ನನಗೆ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವವಿತ್ತು. ಜೊತೆಗೆ ಮುಂಬಯಿಯಲ್ಲಿ ಕೆ.ಟಿ ವೇಣುಗೋಪಾಲ್, ಈಶ್ವರ ಅಲೆಯೂರು, ಭರತಕುಮಾರ ಪೊಲಿಪು, ಶ್ರೀನಿವಾಸ ಜೋಕಟ್ಟೆ ಮುಂತಾದವರು ಇದ್ದ, ಸ್ವಲ್ಪ ಕಾಲ ಯಶಸ್ವಿಯಾಗಿಯೇ ನಡೆದ ‘ಮುಂಬಯಿವಾಣಿ’ ಎಂಬ ವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕ(!)ನಾಗಿಯೂ ಕೆಲಸ ಮಾಡಿದ್ದೆ!

ನಾನು ಅಲೆವೂರು ಅವರ ಜೊತೆ ಬಂಟ್ಸ್ ಹಾಸ್ಟೆಲ್ ಬಳಿ ಇದ್ದ ‘ಮುಂಗಾರು’ ನಗರ ಕಚೇರಿಗೆ ಹೋಗಿ ಆಗ ವರದಿಗಾರರಾಗಿದ್ದ ಚಿದಂಬರ ಬೈಕಂಪಾಡಿಯವರಿಗೆ ಪತ್ರ ತೋರಿಸಿದೆ. ಈಗ ವಡ್ಡರ್ಸೆಯವರು ಕಚೇರಿಗೆ ಬರುವುದು ಕಡಿಮೆ ಎಂದರವರು. (ಆಗ ಪತ್ರಿಕೆ ಬಿಕ್ಕಟ್ಟು ಎದುರಿಸುತ್ತಿತ್ತು). ವೈ.ಎಂ. ಹೆಗ್ಡೆಯವರ ಉಸ್ತುವಾರಿಯಲ್ಲಿ ಪತ್ರಿಕೆ ನಡೆಯುತ್ತಿತ್ತು. ಚಿದಂಬರ ಅವರ ಮನೆಗೆ ಫೋನ್ ಮಾಡಿ, ನಾನು ಬಂದಿರುವ ವಿಷಯ ತಿಳಿಸಿದರು. ಅವರೂ ಕೋಲ್ಪೆಯವರ ಶಿಷ್ಯ. ನನ್ನ ಹೆಸರು ಕೇಳಿ, ನಾನವರಿಗೆ ಸಂಬಂಧವೇ ಎಂದು ಕೇಳಿದರು. ಹೌದೆಂದಾಗ ತಕ್ಷಣ ಮನೆಗೆ ಕಳಿಸಿ ಎಂದರು. ಹಾಗೆ ಹೋದಾಗ ಅವರು ಹೇಳಿದ್ದು- “I owe him so much!”. ಆದರೆ, ಇಲ್ಲಿ ಶಿಫಾರಸ್ಸು ನಡೆಯುವುದಿಲ್ಲ. ಇಲ್ಲಿ ಸಂಬಳ ಕಡಿಮೆ. ನಿಮಗೆ ಅರ್ಹತೆ ಇದ್ದರೆ, ಕೆಲಸ ಕೊಡುತ್ತೇನೆ. ನಾಳೆ ಕಚೇರಿಗೆ ಬಂದು ಪರೀಕ್ಷೆ ಬರೆಯಿರಿ!”

ಮರುದಿನ ಕಚೇರಿಗೆ ಹೋದಾಗ ಸುದ್ದಿ ಸಂಪಾದಕ ಮಂಜುನಾಥ ಭಟ್ಟರಲ್ಲಿ, ಇವರಿಗೆ ಒಂದೆರಡು ಕಾಪಿ ಕೊಡಿ ನೋಡೋಣ ಎಂದರು. ಭಟ್ಟರು ಒಂದೆರಡಲ್ಲ ಹತ್ತು ಕಾಪಿ ಕೊಟ್ಟರು! ವಿಜ್ಞಾನ, ರಾಜಕೀಯ, ವಿಚಿತ್ರ ಸುದ್ದಿಗಳು ಎಲ್ಲವೂ ಇದ್ದವು! ಡೆಸ್ಕಿನಲ್ಲಿ ಜನರ ಕೊರತೆ ಇದೆ ಎಂದು ತಕ್ಷಣ ನನಗೆ ಗೊತ್ತಾಯಿತು. ಅನುವಾದಿಸಿ ಕೊಟ್ಟೆ. ಪತ್ರದ ಮೂಲಕ ಫಲಿತಾಂಶ ತಿಳಿಸುವುದಾಗಿ ಹೇಳಲಾಯಿತು. ನನಗೆ ಆತಂಕ. ಮರುದಿನ ಬೆಳಿಗ್ಗೆ ಪೇಟೆಗೆ ಓಡಿ ಪತ್ರಿಕೆ ನೋಡಿದೆ. ನಾನು ಅನುವಾದಿಸಿದ ಎಲ್ಲವೂ ಯಥಾವತ್ ಪ್ರಕಟವಾಗಿದ್ದವು. ಬರೆದದ್ದು ಸರಿಯಾಗಿದೆ; ಕೆಲಸ ಗ್ಯಾರಂಟಿ ಎಂದಾಯಿತು! ಹಾಗೆಯೇ ಆಯಿತು!

ಮುಂಬಯಿಯಲ್ಲಿ ನನಗೆ ಮೊಳೆ ಜೋಡಿಸುವ ಪದ್ಧತಿಯ ಟ್ರೆಡಲ್ ಮೆಷಿನ್‍ನಿಂದ ಹಿಡಿದು, ಸೀಸ ಕರಗಿಸಿ ಟೈಪ್ ಮಾಡಿ ಅಚ್ಚು ತಯಾರಿಸುವ ಲೈನೋ ಟೈಪ್, ವ್ಯಾಕ್ಯೂಂ ಮೂಲಕ ಕಾಗದ ಫೀಡ್ ಮಾಡುವ ಮರ್ಸಿಡಿಸ್ ಮುದ್ರಣ ಯಂತ್ರ ಇತ್ಯಾದಿಗಳು ಪರಿಚಯವಾಗಿದ್ದವು. ಆಗ ಫೊಟೋ ಪ್ರಕಟಿಸುವುದಿದ್ದರೆ, ಬ್ಲಾಕ್ ಮಾಡಿಸಬೇಕಾಗಿತ್ತು. ಇದಕ್ಕೆ ಖರ್ಚು, ಸಮಯ ಎರಡೂ ತಗಲುತ್ತಿದ್ದವು. ಅದೇ ಬ್ಲಾಕುಗಳನ್ನು ಮತ್ತೆ ಮತ್ತೆ ಬಳಸಬೇಕಾಗಿತ್ತು. ನಿತ್ಯ ಬರುವ ಫೊಟೋಗಳವರು ಚಿರಯೌವನಿಗರಾಗಿಯೇ ಇರುತ್ತಿದ್ದರು- ಹೊಸ ಬ್ಲಾಕ್ ಮಾಡಿಸುವ ತನಕ! ನಂತರ ಫೊಟೋ ಕಂಪೋಸಿಂಗ್, ಲೇಸರ್ ಪ್ರಿಂಟ್, ಡಿಟಿಪಿ, ಆಫ್‍ಸೆಟ್ ಮುದ್ರಣ ಎಲ್ಲಾ ಪರಿಚಯವಾಗಿತ್ತು.

ಅರ್ಥಪೂರ್ಣವಾದ ಮುಂಗಾರು ಸಂಕೇತ

ಅದರೆ, ‘ಮುಂಗಾರು’ ಸೇರಿದಾಗ ಅಲ್ಲಿದ್ದ ತಂತ್ರಜ್ಞಾನ ನನಗೆ ಪರಿಚಯ ಇದ್ದುದಕ್ಕಿಂತ ಕೆಲವು ವರ್ಷ ಹಳೆಯದಾಗಿತ್ತು. ‘ಬಂಧು’ ಎಂಬ ಕಂಪೆನಿಯ ವೆಬ್ ಆಫ್‍ಸೆಟ್ ಎಂಬ ಯಂತ್ರವಿತ್ತಾದರೂ, ಕಂಪ್ಯೂಟರ್‌ಗಳು ಲಭ್ಯವಿದ್ದರೂ, ವಡ್ಡರ್ಸೆಯವರು ಹೆಚ್ಚು ಕಾರ್ಮಿಕರಿಗೆ ಕೆಲಸಕೊಡುವ ಅದರ್ಶವಾದದ ಬೆನ್ನುಹತ್ತಿ ಪ್ರವಾಹದ ವಿರುದ್ಧ ಈಜಿದರು. ಮೊಳೆ ಜೋಡಿಸುವ ಪದ್ಧತಿಯನ್ನೇ ಅನುಸರಿಸಿದರು. ಇದುವೇ ಮುಂದೆ ನಷ್ಟ, ಮುಷ್ಕರ ಇತ್ಯಾದಿಗಳಿಗೆ ಕಾರಣವಾಯಿತು. ಕಂಪ್ಯೂಟರ್ ಬಳಸಿದ್ದರೆ, ಕಡಿಮೆ ಜನ ಮತ್ತು ಖರ್ಚಿನಲ್ಲಿ ಪತ್ರಿಕೆ ತರಬಹುದಾಗಿತ್ತು.

ಅಲ್ಲಿದ್ದ ವ್ಯವಸ್ಥೆಯ ಪ್ರಕಾರ ಪಿಟಿಐಯ ಟೆಲಿಪ್ರಿಂಟರ್‌ನಲ್ಲಿ ಬರುತ್ತಿದ್ದ ಸುದ್ದಿಗಳನ್ನು ಎಟೆಂಡರ್‌ಗಳು ಕತ್ತರಿಸಿ ಜೋಡಿಸಿ ಡೆಸ್ಕುಗಳಿಗೆ ಕೊಡುತ್ತಿದ್ದರು. ಅಲ್ಲಿ ಡೆಸ್ಕ್ ಮುಖ್ಯಸ್ಥರು ಸುದ್ದಿಗಳನ್ನು ಉಪ ಸಂಪಾದಕರಿಗೆ ಹಂಚುತ್ತಿದ್ದರು. ಅವರು ಅದನ್ನು ಅನುವಾದಿಸಿ, ಮರಳಿಸಿದ ಮೇಲೆ ಮುಖ್ಯಸ್ಥರು, ಅಥವಾ ಸುದ್ದಿ ಸಂಪಾದಕರು ಅದನ್ನು ನೋಡಿ, ಶೀರ್ಷಿಕೆ ಕೊಟ್ಟು ಮೊಳೆ ಜೋಡಿಸಲು ಕಳಿಸುತ್ತಿದ್ದರು. ಅಲ್ಲಿಂದ ಪ್ರೂಫ್ ರೀಡಿಂಗ್, ಕರೆಕ್ಷನ್ ಎಲ್ಲಾ ಮುಗಿದ ಮೇಲೆ ಪುಟ ಕಟ್ಟಿ ಹಳೆ ಕಾಲದ ಟ್ರೆಡಲ್ ಮೆಷಿನ್‍ನಲ್ಲಿ ಬಟರ್ ಪೇಪರ್ ಮೇಲೆ ರಿವರ್ಸ್ ಪ್ರಿಂಟ್ ತೆಗೆದು, ನೆಗೆಟಿವ್ ಮಾಡಿ, ಟಚ್ ಅಪ್ ಮಾಡಿ, ಪಾಸಿಟಿವ್ ಮಾಡಿ, ಪ್ಲೇಟು ಮಾಡಿ ಆಫ್‍ಸೆಟ್ ಮುದ್ರಣ ನಡೆಯುತ್ತಿತ್ತು. ಸ್ಥಳೀಯ ಸುದ್ದಿಗಳು ಬಸ್ ಪಾರ್ಸೆಲ್‍ಗಳಲ್ಲೋ, ಅಂಚೆಯಲ್ಲೋ ಬರುತ್ತಿದ್ದವು, ನಮ್ಮದೇ ವರದಿಗಾರರು ಕಳಿಸಿದ್ದು ಬಿಟ್ಟರೆ, ಉಳಿದವರು ಕಳಿಸುವ ರಾಮಾಯಣ ಕತೆಗಳನ್ನು, ಒಗಟಿನ ವರದಿಗಳನ್ನು ತಿದ್ದುವುದೇ ಗ್ರಾಮೀಣ ವಿಭಾಗದವರ ತಲೆಬಿಸಿಯ ಕೆಲಸವಾಗಿತ್ತು!

ಸ್ಥಾಪಕ ಸಂಪಾದಕ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿ

ಫ್ಯಾಕ್ಸ್-ಗೀಕ್ಸ್ ಏನೂ ಇರಲಿಲ್ಲ. ಮೊಬೈಲ್, ಇಂಟರ್‍ನೆಟ್ ಎಲ್ಲಾ ಎಲ್ಲೋ ವಿದೇಶಗಳಲ್ಲಿ ಇವೆ ಎಂದು ಕೇಳುತ್ತಿದ್ದ ವಿಷಯವಾಗಿತ್ತು. ಏನಾದರೂ ತುರ್ತು ಸುದ್ದಿ ಇದ್ದರೆ ಫೋನ್ ಮೂಲಕ ಕೊಡಲಾಗುತ್ತಿತ್ತು! ಹೀಗಿದ್ದರೂ ‘ಮುಂಗಾರು’ ವೃತ್ತಿಪರತೆಯಲ್ಲಿ ಹಿಂದೆಬಿದ್ದಿರಲಿಲ್ಲ! ಸೀಮಿತ ಅವಕಾಶದಲ್ಲಿಯೂ ಹಲವರು ಹಲವಾರು ಪ್ರಯೋಗಗಳನ್ನು ಪುಟವಿನ್ಯಾಸದಲ್ಲಿ ನಡೆಸಿದ್ದರು.

‘ಮುಂಗಾರು’ ಸ್ವಂತ ಛಾಯಾಚಿತ್ರಗಾರರನ್ನು ಹೊಂದಿತ್ತು. ಇಲ್ಲಿ ಕೃಪಾಕರ್ ಅವರು ಕೆಲಸ ಮಾಡಿದ್ದರು ಎಂದು ಕೇಳಿದ್ದೇನೆ. ಅವರ ಹಕ್ಕಿಯ ಚಿತ್ರವೊಂದು ಮತ್ತು ದಿವಂಗತ ಕೇಶವ ವಿಟ್ಲ ಅವರ ಚಿತ್ರವೊಂದು ಬಹಳ ಕಾಲ ನಮ್ಮ ಲೈಬ್ರರಿಯಲ್ಲಿ ಇದ್ದವು.

‘ಮುಂಗಾರು’ ಸ್ವಂತ ವ್ಯಂಗ್ಯಚಿತ್ರಗಾರರನ್ನೂ ಹೊಂದಿತ್ತು. ಬಹುಶಃ ಪಂಜು ಗಂಗೊಳ್ಳಿಯವರು ಮತ್ತು ಸಂಗೀತಗಾರ ವಿ. ಮನೋಹರ್ ಅವರು ಇಲ್ಲಿ ಕೆಲಸ ಮಾಡಿದ್ದರೆಂದು ಕೇಳಿದ್ದೇನೆ. ಪ್ರಕಾಶ್ ಶೆಟ್ಟಿಯವರ ವ್ಯಂಗ್ಯಚಿತ್ರಗಳಂತೂ ಜನಪ್ರಿಯವಾಗಿದ್ದವು. ನಾನು ಸೇರಿದಾಗ ಅವರೆಲ್ಲಾ ಬಿಟ್ಟುಹೋಗಿದ್ದರು. ಆಗ ಇದ್ದವರು ಮತ್ತು ಅಗಾಧವಾಗಿ ಬೆಳೆದವರು ಗೆಳೆಯ ಪಿ. ಮಹಮ್ಮದ್ ಅವರು.

‘ಮುಂಗಾರು’ ಪತ್ರಿಕೆಯಲ್ಲಿ ಒಂದು ಸಾಕಷ್ಟು ಒಳ್ಳೆಯ ಲೈಬ್ರೆರಿ ಕೂಡಾ ಇತ್ತು. ವಿಮರ್ಶೆಗೆ ಬಂದ ಪುಸ್ತಕಗಳು ಇಲ್ಲಿ ಸೇರ್ಪಡೆಯಾಗುತ್ತಿದ್ದವು. ಈಗ ಪ್ರಸಿದ್ಧ ಕತೆ, ಕಾದಂಬರಿಗಾರ್ತಿಯಾಗಿರುವ ಎಚ್. (ಹೊನ್ನಕಟ್ಟೆ?) ನಾಗವೇಣಿಯವರು ಇಲ್ಲಿ ಕೆಲಸ ಮಾಡಿದ್ದರಂತೆ. ಅವರು ನೀಟಾಗಿ ಇಂಡೆಕ್ಸ್ ಮಾಡಿ ಜೋಡಿಸಿದ್ದ ಪೇಪರ್ ಕಟ್ಟಿಂಗ್‍ಗಳು, ಪೋಟೋ ಪಾಸಿಟಿವ್‍ಗಳು ನಮಗೆ ತುಂಬಾ ಉಪಯೋಗಕ್ಕೆ ಬಂದಿದ್ದವು.

‘ಮುಂಗಾರು’ ಮತ್ತು ‘ಜನವಾಹಿನಿ’ಗೆ ಒಂದು ವಿಷಯದಲ್ಲಿ ತುಂಬಾ ವ್ಯತ್ಯಾಸವಿತ್ತು. ಅದೆಂದರೆ ಸಂಬಳದ ವಿಷಯ. ನಾನು ಸೇರಿದ ಕಾಲಕ್ಕೆ ‘ಮುಂಗಾರು’ ಆರ್ಥಿಕ ಸಂಕಷ್ಟದಲ್ಲಿತ್ತು. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಡಾ. ಚಂದ್ರಶೇಖರ ಚೌಟ ಅವರು ಪತ್ರಿಕೆ ನಡೆಸಲು ಪರದಾಡುತ್ತಿದ್ದರು. ಕೆಲವೊಮ್ಮೆ ನ್ಯೂಸ್‍ಪ್ರಿಂಟಿಗೂ ತತ್ವಾರ! 750, 800 ರೂ. ಸಂಬಳ. ಕಡಿಮೆ ಸಂಬಳವೂ ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಕಂತಿನಲ್ಲಿ ಸಂಬಳ! ಒಮ್ಮೆ ಎರಡು ರೂ. ನೋಟುಗಳಲ್ಲಿ, ಒಮ್ಮೆ ಒಂದು ರೂ. ಪಾವಲಿಯಲ್ಲಿ ಸಂಬಳವಾದದ್ದೂ ಇದೆ! ಇವರೇನು ದೇವಸ್ಥಾನದ ಕಾಣಿಕೆಡಬ್ಬಿ ಕದಿಯುತ್ತಾರೋ ಎಂದು ನಾವು ವ್ಯಂಗ್ಯವಾಡಿದ್ದೆವು. ಇದಕ್ಕಾಗಿ ಸಂಘರ್ಷವೂ ನಡೆಯುತ್ತಿತ್ತು.

‘ಜನವಾಹಿನಿ’ಯಲ್ಲಿ ಸಮಯಕ್ಕೆ ಸರಿಯಾಗಿ ಸಂಬಳ ನಮ್ಮ ಬ್ಯಾಂಕ್ ಖಾತೆಗೆ ಬೀಳುತ್ತಿತ್ತು. ಬೇಕಾದರೆ ಮುಂಗಡ ಕೂಡಾ ಸಿಗುತ್ತಿತ್ತು. ಮುಂದೆ ನಾನು ಕೆಲಸ ಬಿಟ್ಟ ನಂತರ ‘ಮುಂಗಾರು’ವಿನ ಪರಿಸ್ಥಿತಿ ‘ಜನವಾಹಿನಿ’ಗೂ ಬಂತೆಂದು ಕೇಳಿದ್ದೇನೆ. ಹೇಗಿದ್ದ ಪತ್ರಿಕೆಯನ್ನು ಕೆಲವು ಸ್ವಾರ್ಥಿಗಳು ಎಂತಹ ಸ್ಥಿತಿಗೆ ತಂದು ಕೊಂದರೆಂದು ಯೋಚಿಸಿದರೆ ದುಃಖವಾಗುತ್ತದೆ!

ಹಾಸ್ಯಕ್ಕಿದು ಕಾಲವಲ್ಲ!

‘ಮುಂಗಾರು’ ಪತ್ರಿಕೆಯಲ್ಲಿ ದೊಡ್ಡ ಸಮಸ್ಯೆ ಎಂದರೆ ಉತ್ತಮ ಲೇಖನ, ಅದರಲ್ಲೂ ಹಾಸ್ಯ ಬರಹಗಳ ಕೊರತೆ. ಓದುಗರಿಂದ ಬರಹಗಳು ಬರದಿದ್ದಾಗ ಉಪಸಂಪಾದಕರುಗಳೇ ಒಂದು ಕೈ ತೋರಿಸುತ್ತಿದ್ದರು! ಮುಂದೆ ನಾನು ಮ್ಯಾಗಜಿನ್ ವಿಭಾಗದ ಉಸ್ತುವಾರಿ ವಹಿಸಿಕೊಂಡಾಗ ಇದು ಸರಿಯಾಗಿ ಅನುಭವಕ್ಕೆ ಬಂತು!

ನಾನು ಸೇರುವ ಬಹಳ ಮೊದಲು ಒಂದು ಘಟನೆ ನಡೆಯಿತಂತೆ! ಅದು ಇಂದಿರಾ ಗಾಂಧಿಯವರು ಹತ್ಯೆಗೀಡಾದ ವಾರವಂತೆ. ಮ್ಯಾಗಜಿನ್ ವಿಭಾಗಕ್ಕೆ ಹಾಸ್ಯ ಲೇಖನ ಒಂದೂ ಬಂದಿರಲಿಲ್ಲ. ತಕ್ಷಣಕ್ಕೆ ಹಾಸ್ಯ ಲೇಖನ ಬರೆಯುವುದು ಸುಲಭವಲ್ಲ! ಏನು ಮಾಡುವುದು?!

ಪ್ರತೀ ವಾರ ಹಾಸ್ಯ ಲೇಖನ ಪ್ರಕಟವಾಗುವ ಜಾಗವನ್ನು ಖಾಲಿ ಬಿಟ್ಟು ಹೀಗೆ ಪ್ರಕಟಿಸಲಾಗಿತ್ತಂತೆ- ‘ದೇಶವು ಸಂಕಷ್ಟ ಸ್ಥಿತಿಯಲ್ಲಿದ್ದು, ಹಾಸ್ಯಕ್ಕಿದು ಕಾಲವಲ್ಲ!’

ಆಗ ‘ಮುಂಗಾರು’ ಪತ್ರಿಕೆಯಲ್ಲಿ ಎಂತೆಂತಹ ‘ಪ್ರಚಂಡ’ರು ಇದ್ದಿರಬಹುದು ಎಂಬುದನ್ನು ನೆನಪಿಸಲು ಇದನ್ನು ಬರೆಯುತ್ತಿದ್ದೇನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...