ಬೆಂಗಳೂರು: ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಹೆಜ್ಜೆ ಇಟ್ಟಿರುವ ಕಾಂಗ್ರೆಸ್ ಸರ್ಕಾರದ ಮುಂದೆ ನಿನ್ನೆ (ಬುಧವಾರ) 6 ನಕ್ಸಲ್ ನಾಯಕರು ಮುಖ್ಯವಾಹಿನಿಗೆ ಬಂದಿದ್ದರು. ರಾಜ್ಯದ ನಕ್ಸಲ್ ನಾಯಕರಾದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್, ಮಾರೆಪ್ಪ ಅರೋಲಿ ಅವರನ್ನು ಇಂದು ಚಿಕ್ಕಮಗಳೂರು ಡಿವೈಎಸ್ಪಿ ಬಾಲಾಜಿ ಸಿಂಗ್ ಎನ್ಐಎ ವಿಶೇಷ ಕೋರ್ಟ್ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರುಪಡಿಸಿದ್ದರು. ಆ ಆರು ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.
ಶರಣಾದ 6 ನಕ್ಸಲರನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ NIA ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರು ಪಡಿಸಿರುವ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರುಪಡಿಸುವ ಮುನ್ನ 6 ನಕ್ಸಲರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಶರಣಾದ ನಕ್ಸಲರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರಿದ್ದಾರೆ. ಅವರಲ್ಲಿ ತಮಿಳುನಾಡು ಮೂಲದ ವಸಂತ್ ಎಂಬಾತ ಬಿಟೆಕ್ ಪದವೀಧರನಾಗಿದ್ದಾನೆ. ಶರಣಾದವರಲ್ಲಿ ಶೃಂಗೇರಿಯ ಮುಂಡಗಾರು ಲತಾ, ರಾಯಚೂರಿನ ಮಾರೆಪ್ಪ ಅರೋಲಿ, ದಕ್ಷಿಣ ಕನ್ನಡದ ಸುಂದರಿ ಕೊತ್ಲೂರು, ಚಿಕ್ಕಮಗಳೂರಿನ ವನಜಾಕ್ಷಿ ಬಾಳೆಹೊಳೆ, ಕೇರಳ ಮೂಲದ ಜಿಶಾ ಸೇರಿದ್ದಾರೆ.


