Homeಅಂಕಣಗಳುಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು: ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ

ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು: ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ

- Advertisement -
- Advertisement -

ಕಳೆದುಹೋದ ದಿನಗಳು – 29

ಈ ಘಟನೆ ನಡೆದದ್ದು 2010ರಲ್ಲಿ ಗಣಪಯ್ಯನವರ ಕಾಲಾನಂತರದಲ್ಲಿ. ಆದರೆ ಆಗ ತಿಳಿದ ವಿಚಾರಗಳು ಮತ್ತು ಅದರ ಹಿಂದಿನ ಸಂಗತಿಗಳು ಗಣಪಯ್ಯನವರ ಕುಟುಂಬಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಸಕಲೇಶಪುರ ತಾಲ್ಲೂಕಿನ ಗರಿಮೆಗೆ ಮತ್ತು ಇಲ್ಲಿ ನಡೆದ ಹಾಗೂ ನಡೆಯುತ್ತಿರುವ ಪರಿಸರ ಹೋರಾಟಕ್ಕೂ ಸಂಬಂಧಪಟ್ಟವುಗಳಾಗಿವೆ. ಆದ್ದರಿಂದ ಅದನ್ನಿಲ್ಲಿ ದಾಖಲಿಸಿದ್ದೇನೆ.

2010ರಲ್ಲಿ ಹಾನುಬಾಳಿನಲ್ಲಿ ಸಕಲೇಶಪುರ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಗ ನಾನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದೆ. (ಅದಕ್ಕೂ ಮೊದಲು ಸಕಲೇಶಪುರದಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ಎಚ್.ಜೆ.ಲಕ್ಕಪ್ಪಗೌಡರು ಸಮ್ಮೇಳನಾಧ್ಯಕ್ಷರಾಗಿದ್ದ ಆ ಸಮ್ಮೇಳನ ಬಹಳ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆದಿತ್ತು. ಆ ಸಮ್ಮೇಳನದ ರೂವಾರಿಗಳಲ್ಲಿ ಬಾಳ್ಳು ಜಗನ್ನಾಥ್  ಮುಖ್ಯರಾಗಿದ್ದರು)

ಹಾನುಬಾಳು ಊರಿನಲ್ಲಿ ಸಾಹಿತ್ಯ ಸಮ್ಮೇಳನದ ಬೆಳಗು

ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಾಗ ಅದನ್ನು ಹಾನುಬಾಳಿನಲ್ಲೇ ನಡೆಸಬೇಕೆಂದು ನನ್ನ ಆಸೆಯಾಗಿತ್ತು. ಅದಕ್ಕೆ ಕಾರಣ ಹಾನುಬಾಳು ನಾನು ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯವರೆಗೆ ಓದಿದ ಊರು. ನನ್ನ ನೂರಾರು ಗೆಳೆಯರು ಅಲ್ಲೇ ಸುತ್ತ ಮುತ್ತ ಇದ್ದಾರೆ, ಪರಿಚಯದ ಹಿರಿಯರಿದ್ದಾರೆ ಅದರಿಂದಾಗಿ ಸಂಘಟಿಸುವುದು ಸುಲಭ ಎಂಬ ಧೈರ್ಯವಿತ್ತು.

ಇವೆಲ್ಲದರ ಜೊತೆ ನನ್ನ ವೈಯಕ್ತಿಕ ಕಾರಣವೊಂದಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಚಿಕ್ಕ ಮೊಗಯ್ಯ ಎಂಬ ಒಬ್ಬರು ಮೇಷ್ಟ್ರು ಇದ್ದರು. ಶಾಲಾದಿನಗಳಲ್ಲಿಯೇ ಮಕ್ಕಳಿಗೆ ನಾಟಕದ ಗುಂಗು ಹತ್ತಿಸಿದ್ದರು. ಅವರು ಕಲಿಸಿದ ಪೃಥ್ವೀರಾಜನ ಕಥೆಯ ನಾಟಕದಲ್ಲಿ ನಾನೂ ಪಾತ್ರ ಮಾಡಿದ್ದೆ. ಚಿಕ್ಕ ಮೊಗಯ್ಯ ತಮ್ಮ ಸ್ವಂತ ಹಣದಿಂದ ಕನ್ನಡದ ಅತ್ಯುತ್ತಮ ಲೇಖಕರ ಪುಸ್ತಕಗಳನ್ನು ಕೊಂಡಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಕೊಟ್ಟು ಓದಿನ ರುಚಿ ಹತ್ತಿಸುತ್ತಿದ್ದರು. ಅವರು ನನಗೆ ಐದನೇ ತರಗತಿಯಲ್ಲಿಯೇ ಕಾರಂತರ ಕಾದಂಬರಿಗಳನ್ನು ಓದಿಸಿದ್ದರು.! ಇದೆಲ್ಲದರ ನೆನಪು ನನ್ನಲ್ಲಿದ್ದುದೂ ಒಂದು ಭಾವನಾತ್ಮಕ ಕಾರಣವಾಗಿತ್ತು.

ಆಗ ಈ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರವಿತ್ತು. ಸಮ್ಮೇಳನವನ್ನು ಯಶಸ್ಸುಗೊಳಿಸಲು ಕಾರಣರಾದವರು ನನ್ನ ಹಿರಿಯ ಸಹಪಾಠಿ, ಗೆಳೆಯ, ಸಕಲೇಶಪುರದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು.

ಇಂಥವರೆಲ್ಲ ಇದ್ದುದರಿಂದ ನಮಗೆ ಕವಿ ಸುಬ್ಬು ಹೊಲೆಯಾರ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲು ಸಾಧ್ಯವಾಯಿತು.

ಗೌರವ ಸ್ವೀಕರಿಸಿ ಮಾತನಾಡುತ್ತಿರುವ ಡಾ. ಅಪ್ಪಸ್ವಾಮಿ ಗೌಡರು

ಆ ಸಮ್ಮೇಳನ ನಾವೆಲ್ಲ ವಿದ್ಯೆ ಕಲಿತ ಹಾನುಬಾಳು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಹಾನುಬಾಳುವಿನ ಸುತ್ತಲಿನ ಎಲ್ಲ ಗೆಳೆಯರೂ ತಮ್ಮ ಮನೆಯ ಕಾರ್ಯಕ್ರಮವೆಂದು ದುಡಿದರು. ಸುಮಾರು ನಾಲ್ಕು ಸಾವಿರ ಜನರು ಸಮ್ಮೇಳನದಲ್ಲಿ ಭಾಗವಹಿಸಿದ್ದೊಂದು ದಾಖಲೆಯಾಯಿತು.

ಆ ಸಮ್ಮೇಳನದಲ್ಲೇ “ಪಶ್ಚಿಮ ಘಟ್ಟ ಉಳಿಸಿ” ಎಂಬ ನಿರ್ಣಯವನ್ನೂ ಮಂಡಿಸಿದೆವು.

ಸಮ್ಮೇಳನದಲ್ಲಿ ಕೆಲವರನ್ನು ಗೌರವಿಸುವುದು ಎಲ್ಲ ಕಡೆ ನಡೆಕೊಂಡು ಬಂದಿರುವ ಪದ್ಧತಿ. ಅಂತೆಯೇ ನಾವು ಕೆಲವರನ್ನು ಗೌರವಿಸಲು ಆರಿಸಿಕೊಂಡೆವು. ಆಗ ಹಾರ್ಲೆಯ ಡಾ.ರವೀಂದ್ರನಾಥರ ಹೆಸರು ಮತ್ತು ಹೆತ್ತೂರಿನ ಡಾ.ಅಪ್ಪಸ್ವಾಮಿಗೌಡರ ಹೆಸರು ಆದ್ಯತೆಯಲ್ಲಿ ಮುನ್ನೆಲೆಗೆ ಬಂತು.

ಅಪ್ಪಸ್ವಾಮಿಗೌಡರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ಆಗ ಅವರು ಊರಿಗೆ ಬಂದಿದ್ದುದು ನಮಗೆ ಅನುಕೂಲವಾಗಿತ್ತು. ನನಗೆ ಅಪ್ಪಸ್ವಾಮಿಗೌಡರ ಪರಿಚಯ ಇರಲಿಲ್ಲ ಅವರನ್ನು ಆಹ್ವಾನಿಸುವ ಹೊಣೆ ವಿಶ್ವನಾಥ್ ತೆಗೆದುಕೊಂಡರು. ಡಾ. ರವೀಂದ್ರನಾಥರನ್ನು ಒಪ್ಪಿಸುವ ಹೊಣೆ ನನ್ನದಾಗಿತ್ತು. ರವೀಂದ್ರನಾಥರು ಸನ್ಮಾನಗಳಿಗೆಲ್ಲ ಒಪ್ಪುವವರಲ್ಲ. ಅವರನ್ನು ಸನ್ಮಾನಕ್ಕೆ ಒಪ್ಪಿಸಿದ್ದೇ ಒಂದು ರೋಚಕ ಕಥೆಯಿದೆ ಮುಂದೆ ಎಂದಾದರೂ ಬರೆಯಬಹುದು.

ಅಂತೂ ಸಮ್ಮೇಳನದ ದಿನ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹನ್ನೆರಡು ಜನರನ್ನು ಗೌರವಿಸಿದೆವು. ಅಲ್ಲೊಂದು ವಿಶೇಷವೆಂದರೆ ರವೀಂದ್ರನಾಥರು ವೇದಿಕೆಯಲ್ಲಿದ್ದರು. ಅದೇ ವೇದಿಕೆಯಲ್ಲಿ ಒಂದು ಕಾಲದಲ್ಲಿ ಅವರ ಮನೆಯಲ್ಲಿ ದನ ಕಾಯುತ್ತ ಸ್ವಾಧ್ಯಾಯಿಯಾಗಿ ಓದು ಕಲಿತು ನಂತರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನೂ ಅನುಭವಿಸಿ, ಮುಂದಿನ ದಿನಗಳಲ್ಲಿ ನಮ್ಮ ರಂಗ ತಂಡದಲ್ಲಿ ದಶಕಗಳ ಕಾಲ ನಟನಾಗಿ, ಸಂಘಟಕನಾಗಿ ದುಡಿದ ನನ್ನ ರಂಗ ಸಂಗಾತಿ ಉಗ್ಗಪ್ಪನವರಿಗೂ ಸನ್ಮಾನವಿದ್ದುದು.

ಡಾ.ರವೀಂದ್ರನಾಥ ರಿಗೆ ಗೌರವ ಸಮರ್ಪಣೆ ಜೊತೆಯಲ್ಲಿ ಕಮಲಾ ರವೀಂದ್ರನಾಥ, ಬಿ.ಬಿ.ಶಿವಪ್ಪ, ಹೆಚ್.ಎಂ.ವಿಶ್ವನಾಥ್, ಅಂದಿನ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ, ಅಂದಿನ ಸಕಲೇಶಪುರ ಪುರಸಭಾಧ್ಯಕ್ಷ ಯಾದಗಾರ್ ಇಬ್ರಾಹಿಂ, ಇಂದಿನ‌ ಪುರಸಭಾಧ್ಯಕ್ಷ ಕಾಡಪ್ಪ ಇವರುಗಳೆಲ್ಲರು ಇದ್ದಾರೆ.

“ಉಗ್ಗಪ್ಪನ ಜೊತೆ ವೇದಿಕೆ ಹಂಚಿಕೊಂಡದ್ದು ನನಗೆ ತುಂಬ ಸಂತೋಷವಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು” ಎಂದು ರವೀಂದ್ರನಾಥರು ತಮಗೆ ಸಂದ ಗೌರವಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಹೇಳಿದರು. ಈ ಒಂದು ಘಟನೆಯನ್ನು ಹಾಸನದ ಅನೇಕ ಪತ್ರಿಕೆಗಳು ವಿಶೇಷವಾಗಿ ಗಮನಿಸಿ ಸುದ್ದಿಮಾಡಿದ್ದವು.

ಅಪ್ಪಸ್ವಾಮಿ ಗೌಡರ ಸರದಿ ಬಂದಾಗ ಗೌರವ ಸ್ವೀಕರಿಸಿ ಅವರು ಕೆಲವು ಮಾತುಗಳನ್ನಾಡಿದರು. ಅವರು ರವೀಂದ್ರನಾಥರನ್ನು ತೋರಿಸಿ “ಡಾ. ರವಿ ಇಲ್ಲಿದ್ದಾರೆ ನನಗೆ ಅವರ ಕುಟುಂಬದ್ದೊಂದು ಋಣವಿದೆ” ಎಂದು ಹೇಳಿ ಆ ವಿಚಾರದ ವಿವರಗಳನ್ನು ಹೇಳುತ್ತಾ ಹೋದರು.

ಅಪ್ಪಸ್ವಾಮಿ ಗೌಡರ ತಂದೆಯದು ದೊಡ್ಡ ಸಂಸಾರ ಮನೆ ತುಂಬ ಮಕ್ಕಳು. ಹಾಗಾಗಿ ಮಗನನ್ನು ಓದಿಸಲು ಕಷ್ಟವಿತ್ತು. ಆದ್ದರಿಂದ ಅಪ್ಪಸ್ವಾಮಿ ಗೌಡರು ಓದನ್ನು ನಿಲ್ಲಿಸಿ ಏನಾದರೂ ಉದ್ಯೋಗ ಮಾಡಬೇಕೆಂದುಕೊಂಡು ಟೈಲರಿಂಗ್ ಕಲಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯ ದುಡಿದು ನಂತರ ಓದು ಮುಂದುವರೆಸುವ ಹಂಬಲ ಅವರದು. ಉಚ್ಛಂಗಿಯಲ್ಲಿ ಒಬ್ಬರ ಬಳಿ ಟೈಲರಿಂಗ್ ಕಲಿತರು. ಆದರೆ ಮುಂದೆ ಕೆಲಸ ಮಾಡಲು ಹೊಲಿಗೆ ಯಂತ್ರ ಬೇಕಿತ್ತು. ಹಣವಿಲ್ಲ ಆಗ ಸಹಾಯಕ್ಕೆ ಬಂದವರು ಗಣಪಯ್ಯನವರ ಸಹೋದರ ಕೋಗರವಳ್ಳಿ ಕೃಷ್ಣಮೂರ್ತಿಯವರು. ಅವರು ಅಪ್ಪಸ್ವಾಮಿಗೌಡರಿಗೆ ಹೊಲಿಗೆ ಯಂತ್ರ ಕೊಳ್ಳಲು  ಎಂಟುನೂರು ರೂಪಾಯಿಗಳನ್ನು ಕೊಟ್ಟರಂತೆ. ಆ ಎಂಟುನೂರು ರೂಪಾಯಿಗಳಿಂದ ಅಪ್ಪಸ್ವಾಮಿಗೌಡರು ಹೊಲಿಗೆ ಯಂತ್ರವನ್ನು ಕೊಂಡು ಸಕಲೇಶಪುರದಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಿದರು. ನಂತರ ಅವರ ವಿದ್ಯೆಯೂ ಮುಂದುವರಿಯಿತು.

“ಅಂದು ಕೋಗರವಳ್ಳಿ ಕೃಷ್ಣಮೂರ್ತಿಯವರು ಕೊಟ್ಟ ಎಂಟುನೂರು ರೂ ನನಗೆ ಎಂಟು ಕೋಟಿ ರೂಪಾಯಿಗಳಿಗೆ ಸಮ” ಎಂದರು ಅಪ್ಪಸ್ವಾಮಿಗೌಡರು.

ನಂತರ ಅಪ್ಪಸ್ವಾಮಿಗೌಡರು ವೈದ್ಯಕೀಯ ಕಲಿತರು, ಉನ್ನತಾಭ್ಯಾಸ ಮಾಡಿದರು. ಅಮೆರಿಕಾಕ್ಕೆ ಹೋಗಿ ನೆಲೆಸಿದರು. ಅಮೆರಿಕಾದಲ್ಲಿಯೂ ಬಹಳ ಉನ್ನತ ಸ್ಥಾನವನ್ನು ತಲುಪಿದರು.

ನಂತರ ಅವರು ಮುಂದುವರಿದು “ನಾನು ಆ ಎಂಟುನೂರು ರೂಪಾಯಿಗಳ ಋಣವನ್ನ ಈಗಲೂ ತೀರಿಸುತ್ತಾ ಇದ್ದೇನೆ. ಹೇಗೆಂದರೆ ನಾನು ಭಾರತಕ್ಕೆ ಬಂದಾಗೆಲ್ಲ ಊರಿಗೆ ಬರುತ್ತೇನೆ. ಹಾಗೆ ಬಂದಾಗ ಇಲ್ಲಿ ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ಹೊಲಿಗೆಯಂತ್ರಗಳನ್ನು ಕೊಡಿಸುತ್ತೇನೆ” ಎಂದರು.

ಅಪ್ಪಸ್ವಾಮಿಗೌಡರು ಹೀಗೆ ಉಚಿತವಾಗಿ ಹಂಚಿದ ಹೊಲಿಗೆ ಯಂತ್ರಗಳು ನೂರಾರು. ಅವರು ಇದನ್ನೊಂದು ವ್ರತದಂತೆ ನಡೆಸಿಕೊಂಡು ಬಂದಿದ್ದಾರೆ.

ಹಲವಾರು ಶಾಲೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ, ಪರಿಕರಗಳು ಮುಂತಾದವನ್ನು ದಾನ ಮಾಡಿದ್ದಾರೆ. ಹತ್ತಾರು ವಿದ್ಯಾಸಂಸ್ಥೆಗಳಿಗೆ ಲಕ್ಷಾಂತರ ರೂಗಳ ಪುಸ್ತಕಗಳನ್ನು ಕೊಟ್ಟಿದ್ದಾರೆ.

ಉಗ್ಗಪ್ಪನವರಿಗೆ ಗೌರವ ಸಮರ್ಪಣೆ

ದಟ್ಟ ಮಲೆನಾಡಿನಲ್ಲಿ ಹುಟ್ಟಿದ ಅಪ್ಪಸ್ವಾಮಿಗೌಡರ ಪರಿಸರ ಪ್ರೇಮವೂ ಮುಖ್ಯವಾದದ್ದು. ಗುಂಡ್ಯ ಜಲವಿದ್ಯುತ್ ಯೋಜನೆಯ ವಿರೋಧದ ಹೋರಾಟಕ್ಕೆ ಬೆಂಬಲ ಮತ್ತು ಧನಸಹಾಯ ಮಾಡಿದ್ದಲ್ಲದೆ. ಇಂದಿಗೂ ಮಲೆನಾಡನ್ನು ಉಳಿಸುವ ಎಲ್ಲ ಹೋರಾಟಗಳಿಗೆ ಬೆಂಬಲಿಗರಾಗಿದ್ದಾರೆ.

ಪರಿಸರ ಹೋರಾಟಗಳಿಗೆ ಬೆಂಬಲ ನೀಡುವುದು ನಿಮ್ಮ ಕರ್ತವ್ಯ ಎಂದು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಗಳಿಗೂ ಪತ್ರ ಅವರು ಬರೆದಿದ್ದರು. ಮಠ ಮಾನ್ಯರುಗಳು ಪರಿಸರ ಉಳಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸಬೇಕೆಂದು ಅಪ್ಪ ಸ್ವಾಮಿಗೌಡರ ಖಚಿತ ಅಭಿಪ್ರಾಯ.

ಭಾಷಣದ ಕೊನೆಯಲ್ಲಿ ಡಾ.ಅಪ್ಪಸ್ವಾಮಿ ಗೌಡರು “ಡಾ.ರವಿಯವರ ಕುಟುಂಬದವರು ನೂರಾರು ಜನರಿಗೆ ಸಹಾಯ ಮಾಡಿದವರು. ಅವರೊಡನೆ ಕುಳಿತು ಗೌರವಕ್ಕೆ ಪಾತ್ರನಾಗುವುದು ನನಗೂ ಸಂತಸ ತಂದಿದೆ” ಎಂದರು.

ಗಣಪಯ್ಯನವರ ಸಹೋದರ ಕೃಷ್ಣಮೂರ್ತಿಯವರು ಸಕಲೇಶಪುರ ಕಸಬಾದ ಕೋಗರವಳ್ಳಿಯಲ್ಲಿ ನೆಲೆಸಿದ್ದರು. ಅವರ ಪತ್ನಿ ಭವಾನಿಯಮ್ಮ ಕೊಡಗಿನಲ್ಲಿದ್ದಾಗ ತಾವೇ ತೋಟದಲ್ಲಿ ಕೆಲಸಮಾಡುತ್ತಿದ್ದ ಶ್ರಮಜೀವಿ. ನೂರಾರು ಕಾಫಿಗಿಡಗಳನ್ನು ಅವರೇ ಗುಂಡಿ ತೆಗೆದು ನೆಟ್ಟಿದ್ದರಂತೆ. ಭವಾನಿಯಮ್ಮ ಅವರ ಧಾರಾಳತನದಿಂದ ಕೊಡುಗೈ ಅಮ್ಮನೆಂದು ಹೆಸರಾದವರು.

ಕೋಗರವಳ್ಳಿಗೆ ಬಂದ ನಂತರ ಅನೇಕರಿಗೆ ನೆರವಾದರು. ಆ ಕಾಲದಲ್ಲೇ ಜೀಪು ಚಲಾವಣೆ ಮಾಡುವುದನ್ನು ಕಲಿತು ಒಮ್ಮೊಮ್ಮೆ ಜೀಪು ಚಲಾಯಿಸಿಕೊಂಡು ತೋಟಕ್ಕೆ ಬರುತ್ತಿದ್ದರಂತೆ. ಕೃಷ್ಣಮೂರ್ತಿ ದಂಪತಿಗಳು ಹಲವಾರು ಜನರಿಗೆ ಸಹಾಯ ಮಾಡಿದ್ದರು. ಆ ಪ್ರದೇಶದ ಜನರು ಈಗಲೂ ಅವರನ್ನು ನೆನೆಯುತ್ತಾರೆ. ಈಗ ಅವರ ಮಕ್ಕಳಾದ ರಾಮಮೂರ್ತಿ ಮತ್ತು ಶ್ಯಾಮರಾವ್ ಕೃಷಿಕರಾಗಿ ಮುಂದುವರೆದಿದ್ದಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...