Homeಅಂಕಣಗಳುಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು: ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ

ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು: ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ

- Advertisement -
- Advertisement -

ಕಳೆದುಹೋದ ದಿನಗಳು – 29

ಈ ಘಟನೆ ನಡೆದದ್ದು 2010ರಲ್ಲಿ ಗಣಪಯ್ಯನವರ ಕಾಲಾನಂತರದಲ್ಲಿ. ಆದರೆ ಆಗ ತಿಳಿದ ವಿಚಾರಗಳು ಮತ್ತು ಅದರ ಹಿಂದಿನ ಸಂಗತಿಗಳು ಗಣಪಯ್ಯನವರ ಕುಟುಂಬಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಸಕಲೇಶಪುರ ತಾಲ್ಲೂಕಿನ ಗರಿಮೆಗೆ ಮತ್ತು ಇಲ್ಲಿ ನಡೆದ ಹಾಗೂ ನಡೆಯುತ್ತಿರುವ ಪರಿಸರ ಹೋರಾಟಕ್ಕೂ ಸಂಬಂಧಪಟ್ಟವುಗಳಾಗಿವೆ. ಆದ್ದರಿಂದ ಅದನ್ನಿಲ್ಲಿ ದಾಖಲಿಸಿದ್ದೇನೆ.

2010ರಲ್ಲಿ ಹಾನುಬಾಳಿನಲ್ಲಿ ಸಕಲೇಶಪುರ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಗ ನಾನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದೆ. (ಅದಕ್ಕೂ ಮೊದಲು ಸಕಲೇಶಪುರದಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ಎಚ್.ಜೆ.ಲಕ್ಕಪ್ಪಗೌಡರು ಸಮ್ಮೇಳನಾಧ್ಯಕ್ಷರಾಗಿದ್ದ ಆ ಸಮ್ಮೇಳನ ಬಹಳ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆದಿತ್ತು. ಆ ಸಮ್ಮೇಳನದ ರೂವಾರಿಗಳಲ್ಲಿ ಬಾಳ್ಳು ಜಗನ್ನಾಥ್  ಮುಖ್ಯರಾಗಿದ್ದರು)

ಹಾನುಬಾಳು ಊರಿನಲ್ಲಿ ಸಾಹಿತ್ಯ ಸಮ್ಮೇಳನದ ಬೆಳಗು

ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಾಗ ಅದನ್ನು ಹಾನುಬಾಳಿನಲ್ಲೇ ನಡೆಸಬೇಕೆಂದು ನನ್ನ ಆಸೆಯಾಗಿತ್ತು. ಅದಕ್ಕೆ ಕಾರಣ ಹಾನುಬಾಳು ನಾನು ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯವರೆಗೆ ಓದಿದ ಊರು. ನನ್ನ ನೂರಾರು ಗೆಳೆಯರು ಅಲ್ಲೇ ಸುತ್ತ ಮುತ್ತ ಇದ್ದಾರೆ, ಪರಿಚಯದ ಹಿರಿಯರಿದ್ದಾರೆ ಅದರಿಂದಾಗಿ ಸಂಘಟಿಸುವುದು ಸುಲಭ ಎಂಬ ಧೈರ್ಯವಿತ್ತು.

ಇವೆಲ್ಲದರ ಜೊತೆ ನನ್ನ ವೈಯಕ್ತಿಕ ಕಾರಣವೊಂದಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಚಿಕ್ಕ ಮೊಗಯ್ಯ ಎಂಬ ಒಬ್ಬರು ಮೇಷ್ಟ್ರು ಇದ್ದರು. ಶಾಲಾದಿನಗಳಲ್ಲಿಯೇ ಮಕ್ಕಳಿಗೆ ನಾಟಕದ ಗುಂಗು ಹತ್ತಿಸಿದ್ದರು. ಅವರು ಕಲಿಸಿದ ಪೃಥ್ವೀರಾಜನ ಕಥೆಯ ನಾಟಕದಲ್ಲಿ ನಾನೂ ಪಾತ್ರ ಮಾಡಿದ್ದೆ. ಚಿಕ್ಕ ಮೊಗಯ್ಯ ತಮ್ಮ ಸ್ವಂತ ಹಣದಿಂದ ಕನ್ನಡದ ಅತ್ಯುತ್ತಮ ಲೇಖಕರ ಪುಸ್ತಕಗಳನ್ನು ಕೊಂಡಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಕೊಟ್ಟು ಓದಿನ ರುಚಿ ಹತ್ತಿಸುತ್ತಿದ್ದರು. ಅವರು ನನಗೆ ಐದನೇ ತರಗತಿಯಲ್ಲಿಯೇ ಕಾರಂತರ ಕಾದಂಬರಿಗಳನ್ನು ಓದಿಸಿದ್ದರು.! ಇದೆಲ್ಲದರ ನೆನಪು ನನ್ನಲ್ಲಿದ್ದುದೂ ಒಂದು ಭಾವನಾತ್ಮಕ ಕಾರಣವಾಗಿತ್ತು.

ಆಗ ಈ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರವಿತ್ತು. ಸಮ್ಮೇಳನವನ್ನು ಯಶಸ್ಸುಗೊಳಿಸಲು ಕಾರಣರಾದವರು ನನ್ನ ಹಿರಿಯ ಸಹಪಾಠಿ, ಗೆಳೆಯ, ಸಕಲೇಶಪುರದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು.

ಇಂಥವರೆಲ್ಲ ಇದ್ದುದರಿಂದ ನಮಗೆ ಕವಿ ಸುಬ್ಬು ಹೊಲೆಯಾರ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲು ಸಾಧ್ಯವಾಯಿತು.

ಗೌರವ ಸ್ವೀಕರಿಸಿ ಮಾತನಾಡುತ್ತಿರುವ ಡಾ. ಅಪ್ಪಸ್ವಾಮಿ ಗೌಡರು

ಆ ಸಮ್ಮೇಳನ ನಾವೆಲ್ಲ ವಿದ್ಯೆ ಕಲಿತ ಹಾನುಬಾಳು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಹಾನುಬಾಳುವಿನ ಸುತ್ತಲಿನ ಎಲ್ಲ ಗೆಳೆಯರೂ ತಮ್ಮ ಮನೆಯ ಕಾರ್ಯಕ್ರಮವೆಂದು ದುಡಿದರು. ಸುಮಾರು ನಾಲ್ಕು ಸಾವಿರ ಜನರು ಸಮ್ಮೇಳನದಲ್ಲಿ ಭಾಗವಹಿಸಿದ್ದೊಂದು ದಾಖಲೆಯಾಯಿತು.

ಆ ಸಮ್ಮೇಳನದಲ್ಲೇ “ಪಶ್ಚಿಮ ಘಟ್ಟ ಉಳಿಸಿ” ಎಂಬ ನಿರ್ಣಯವನ್ನೂ ಮಂಡಿಸಿದೆವು.

ಸಮ್ಮೇಳನದಲ್ಲಿ ಕೆಲವರನ್ನು ಗೌರವಿಸುವುದು ಎಲ್ಲ ಕಡೆ ನಡೆಕೊಂಡು ಬಂದಿರುವ ಪದ್ಧತಿ. ಅಂತೆಯೇ ನಾವು ಕೆಲವರನ್ನು ಗೌರವಿಸಲು ಆರಿಸಿಕೊಂಡೆವು. ಆಗ ಹಾರ್ಲೆಯ ಡಾ.ರವೀಂದ್ರನಾಥರ ಹೆಸರು ಮತ್ತು ಹೆತ್ತೂರಿನ ಡಾ.ಅಪ್ಪಸ್ವಾಮಿಗೌಡರ ಹೆಸರು ಆದ್ಯತೆಯಲ್ಲಿ ಮುನ್ನೆಲೆಗೆ ಬಂತು.

ಅಪ್ಪಸ್ವಾಮಿಗೌಡರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ಆಗ ಅವರು ಊರಿಗೆ ಬಂದಿದ್ದುದು ನಮಗೆ ಅನುಕೂಲವಾಗಿತ್ತು. ನನಗೆ ಅಪ್ಪಸ್ವಾಮಿಗೌಡರ ಪರಿಚಯ ಇರಲಿಲ್ಲ ಅವರನ್ನು ಆಹ್ವಾನಿಸುವ ಹೊಣೆ ವಿಶ್ವನಾಥ್ ತೆಗೆದುಕೊಂಡರು. ಡಾ. ರವೀಂದ್ರನಾಥರನ್ನು ಒಪ್ಪಿಸುವ ಹೊಣೆ ನನ್ನದಾಗಿತ್ತು. ರವೀಂದ್ರನಾಥರು ಸನ್ಮಾನಗಳಿಗೆಲ್ಲ ಒಪ್ಪುವವರಲ್ಲ. ಅವರನ್ನು ಸನ್ಮಾನಕ್ಕೆ ಒಪ್ಪಿಸಿದ್ದೇ ಒಂದು ರೋಚಕ ಕಥೆಯಿದೆ ಮುಂದೆ ಎಂದಾದರೂ ಬರೆಯಬಹುದು.

ಅಂತೂ ಸಮ್ಮೇಳನದ ದಿನ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹನ್ನೆರಡು ಜನರನ್ನು ಗೌರವಿಸಿದೆವು. ಅಲ್ಲೊಂದು ವಿಶೇಷವೆಂದರೆ ರವೀಂದ್ರನಾಥರು ವೇದಿಕೆಯಲ್ಲಿದ್ದರು. ಅದೇ ವೇದಿಕೆಯಲ್ಲಿ ಒಂದು ಕಾಲದಲ್ಲಿ ಅವರ ಮನೆಯಲ್ಲಿ ದನ ಕಾಯುತ್ತ ಸ್ವಾಧ್ಯಾಯಿಯಾಗಿ ಓದು ಕಲಿತು ನಂತರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನೂ ಅನುಭವಿಸಿ, ಮುಂದಿನ ದಿನಗಳಲ್ಲಿ ನಮ್ಮ ರಂಗ ತಂಡದಲ್ಲಿ ದಶಕಗಳ ಕಾಲ ನಟನಾಗಿ, ಸಂಘಟಕನಾಗಿ ದುಡಿದ ನನ್ನ ರಂಗ ಸಂಗಾತಿ ಉಗ್ಗಪ್ಪನವರಿಗೂ ಸನ್ಮಾನವಿದ್ದುದು.

ಡಾ.ರವೀಂದ್ರನಾಥ ರಿಗೆ ಗೌರವ ಸಮರ್ಪಣೆ ಜೊತೆಯಲ್ಲಿ ಕಮಲಾ ರವೀಂದ್ರನಾಥ, ಬಿ.ಬಿ.ಶಿವಪ್ಪ, ಹೆಚ್.ಎಂ.ವಿಶ್ವನಾಥ್, ಅಂದಿನ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ, ಅಂದಿನ ಸಕಲೇಶಪುರ ಪುರಸಭಾಧ್ಯಕ್ಷ ಯಾದಗಾರ್ ಇಬ್ರಾಹಿಂ, ಇಂದಿನ‌ ಪುರಸಭಾಧ್ಯಕ್ಷ ಕಾಡಪ್ಪ ಇವರುಗಳೆಲ್ಲರು ಇದ್ದಾರೆ.

“ಉಗ್ಗಪ್ಪನ ಜೊತೆ ವೇದಿಕೆ ಹಂಚಿಕೊಂಡದ್ದು ನನಗೆ ತುಂಬ ಸಂತೋಷವಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು” ಎಂದು ರವೀಂದ್ರನಾಥರು ತಮಗೆ ಸಂದ ಗೌರವಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಹೇಳಿದರು. ಈ ಒಂದು ಘಟನೆಯನ್ನು ಹಾಸನದ ಅನೇಕ ಪತ್ರಿಕೆಗಳು ವಿಶೇಷವಾಗಿ ಗಮನಿಸಿ ಸುದ್ದಿಮಾಡಿದ್ದವು.

ಅಪ್ಪಸ್ವಾಮಿ ಗೌಡರ ಸರದಿ ಬಂದಾಗ ಗೌರವ ಸ್ವೀಕರಿಸಿ ಅವರು ಕೆಲವು ಮಾತುಗಳನ್ನಾಡಿದರು. ಅವರು ರವೀಂದ್ರನಾಥರನ್ನು ತೋರಿಸಿ “ಡಾ. ರವಿ ಇಲ್ಲಿದ್ದಾರೆ ನನಗೆ ಅವರ ಕುಟುಂಬದ್ದೊಂದು ಋಣವಿದೆ” ಎಂದು ಹೇಳಿ ಆ ವಿಚಾರದ ವಿವರಗಳನ್ನು ಹೇಳುತ್ತಾ ಹೋದರು.

ಅಪ್ಪಸ್ವಾಮಿ ಗೌಡರ ತಂದೆಯದು ದೊಡ್ಡ ಸಂಸಾರ ಮನೆ ತುಂಬ ಮಕ್ಕಳು. ಹಾಗಾಗಿ ಮಗನನ್ನು ಓದಿಸಲು ಕಷ್ಟವಿತ್ತು. ಆದ್ದರಿಂದ ಅಪ್ಪಸ್ವಾಮಿ ಗೌಡರು ಓದನ್ನು ನಿಲ್ಲಿಸಿ ಏನಾದರೂ ಉದ್ಯೋಗ ಮಾಡಬೇಕೆಂದುಕೊಂಡು ಟೈಲರಿಂಗ್ ಕಲಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯ ದುಡಿದು ನಂತರ ಓದು ಮುಂದುವರೆಸುವ ಹಂಬಲ ಅವರದು. ಉಚ್ಛಂಗಿಯಲ್ಲಿ ಒಬ್ಬರ ಬಳಿ ಟೈಲರಿಂಗ್ ಕಲಿತರು. ಆದರೆ ಮುಂದೆ ಕೆಲಸ ಮಾಡಲು ಹೊಲಿಗೆ ಯಂತ್ರ ಬೇಕಿತ್ತು. ಹಣವಿಲ್ಲ ಆಗ ಸಹಾಯಕ್ಕೆ ಬಂದವರು ಗಣಪಯ್ಯನವರ ಸಹೋದರ ಕೋಗರವಳ್ಳಿ ಕೃಷ್ಣಮೂರ್ತಿಯವರು. ಅವರು ಅಪ್ಪಸ್ವಾಮಿಗೌಡರಿಗೆ ಹೊಲಿಗೆ ಯಂತ್ರ ಕೊಳ್ಳಲು  ಎಂಟುನೂರು ರೂಪಾಯಿಗಳನ್ನು ಕೊಟ್ಟರಂತೆ. ಆ ಎಂಟುನೂರು ರೂಪಾಯಿಗಳಿಂದ ಅಪ್ಪಸ್ವಾಮಿಗೌಡರು ಹೊಲಿಗೆ ಯಂತ್ರವನ್ನು ಕೊಂಡು ಸಕಲೇಶಪುರದಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಿದರು. ನಂತರ ಅವರ ವಿದ್ಯೆಯೂ ಮುಂದುವರಿಯಿತು.

“ಅಂದು ಕೋಗರವಳ್ಳಿ ಕೃಷ್ಣಮೂರ್ತಿಯವರು ಕೊಟ್ಟ ಎಂಟುನೂರು ರೂ ನನಗೆ ಎಂಟು ಕೋಟಿ ರೂಪಾಯಿಗಳಿಗೆ ಸಮ” ಎಂದರು ಅಪ್ಪಸ್ವಾಮಿಗೌಡರು.

ನಂತರ ಅಪ್ಪಸ್ವಾಮಿಗೌಡರು ವೈದ್ಯಕೀಯ ಕಲಿತರು, ಉನ್ನತಾಭ್ಯಾಸ ಮಾಡಿದರು. ಅಮೆರಿಕಾಕ್ಕೆ ಹೋಗಿ ನೆಲೆಸಿದರು. ಅಮೆರಿಕಾದಲ್ಲಿಯೂ ಬಹಳ ಉನ್ನತ ಸ್ಥಾನವನ್ನು ತಲುಪಿದರು.

ನಂತರ ಅವರು ಮುಂದುವರಿದು “ನಾನು ಆ ಎಂಟುನೂರು ರೂಪಾಯಿಗಳ ಋಣವನ್ನ ಈಗಲೂ ತೀರಿಸುತ್ತಾ ಇದ್ದೇನೆ. ಹೇಗೆಂದರೆ ನಾನು ಭಾರತಕ್ಕೆ ಬಂದಾಗೆಲ್ಲ ಊರಿಗೆ ಬರುತ್ತೇನೆ. ಹಾಗೆ ಬಂದಾಗ ಇಲ್ಲಿ ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ಹೊಲಿಗೆಯಂತ್ರಗಳನ್ನು ಕೊಡಿಸುತ್ತೇನೆ” ಎಂದರು.

ಅಪ್ಪಸ್ವಾಮಿಗೌಡರು ಹೀಗೆ ಉಚಿತವಾಗಿ ಹಂಚಿದ ಹೊಲಿಗೆ ಯಂತ್ರಗಳು ನೂರಾರು. ಅವರು ಇದನ್ನೊಂದು ವ್ರತದಂತೆ ನಡೆಸಿಕೊಂಡು ಬಂದಿದ್ದಾರೆ.

ಹಲವಾರು ಶಾಲೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ, ಪರಿಕರಗಳು ಮುಂತಾದವನ್ನು ದಾನ ಮಾಡಿದ್ದಾರೆ. ಹತ್ತಾರು ವಿದ್ಯಾಸಂಸ್ಥೆಗಳಿಗೆ ಲಕ್ಷಾಂತರ ರೂಗಳ ಪುಸ್ತಕಗಳನ್ನು ಕೊಟ್ಟಿದ್ದಾರೆ.

ಉಗ್ಗಪ್ಪನವರಿಗೆ ಗೌರವ ಸಮರ್ಪಣೆ

ದಟ್ಟ ಮಲೆನಾಡಿನಲ್ಲಿ ಹುಟ್ಟಿದ ಅಪ್ಪಸ್ವಾಮಿಗೌಡರ ಪರಿಸರ ಪ್ರೇಮವೂ ಮುಖ್ಯವಾದದ್ದು. ಗುಂಡ್ಯ ಜಲವಿದ್ಯುತ್ ಯೋಜನೆಯ ವಿರೋಧದ ಹೋರಾಟಕ್ಕೆ ಬೆಂಬಲ ಮತ್ತು ಧನಸಹಾಯ ಮಾಡಿದ್ದಲ್ಲದೆ. ಇಂದಿಗೂ ಮಲೆನಾಡನ್ನು ಉಳಿಸುವ ಎಲ್ಲ ಹೋರಾಟಗಳಿಗೆ ಬೆಂಬಲಿಗರಾಗಿದ್ದಾರೆ.

ಪರಿಸರ ಹೋರಾಟಗಳಿಗೆ ಬೆಂಬಲ ನೀಡುವುದು ನಿಮ್ಮ ಕರ್ತವ್ಯ ಎಂದು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಗಳಿಗೂ ಪತ್ರ ಅವರು ಬರೆದಿದ್ದರು. ಮಠ ಮಾನ್ಯರುಗಳು ಪರಿಸರ ಉಳಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸಬೇಕೆಂದು ಅಪ್ಪ ಸ್ವಾಮಿಗೌಡರ ಖಚಿತ ಅಭಿಪ್ರಾಯ.

ಭಾಷಣದ ಕೊನೆಯಲ್ಲಿ ಡಾ.ಅಪ್ಪಸ್ವಾಮಿ ಗೌಡರು “ಡಾ.ರವಿಯವರ ಕುಟುಂಬದವರು ನೂರಾರು ಜನರಿಗೆ ಸಹಾಯ ಮಾಡಿದವರು. ಅವರೊಡನೆ ಕುಳಿತು ಗೌರವಕ್ಕೆ ಪಾತ್ರನಾಗುವುದು ನನಗೂ ಸಂತಸ ತಂದಿದೆ” ಎಂದರು.

ಗಣಪಯ್ಯನವರ ಸಹೋದರ ಕೃಷ್ಣಮೂರ್ತಿಯವರು ಸಕಲೇಶಪುರ ಕಸಬಾದ ಕೋಗರವಳ್ಳಿಯಲ್ಲಿ ನೆಲೆಸಿದ್ದರು. ಅವರ ಪತ್ನಿ ಭವಾನಿಯಮ್ಮ ಕೊಡಗಿನಲ್ಲಿದ್ದಾಗ ತಾವೇ ತೋಟದಲ್ಲಿ ಕೆಲಸಮಾಡುತ್ತಿದ್ದ ಶ್ರಮಜೀವಿ. ನೂರಾರು ಕಾಫಿಗಿಡಗಳನ್ನು ಅವರೇ ಗುಂಡಿ ತೆಗೆದು ನೆಟ್ಟಿದ್ದರಂತೆ. ಭವಾನಿಯಮ್ಮ ಅವರ ಧಾರಾಳತನದಿಂದ ಕೊಡುಗೈ ಅಮ್ಮನೆಂದು ಹೆಸರಾದವರು.

ಕೋಗರವಳ್ಳಿಗೆ ಬಂದ ನಂತರ ಅನೇಕರಿಗೆ ನೆರವಾದರು. ಆ ಕಾಲದಲ್ಲೇ ಜೀಪು ಚಲಾವಣೆ ಮಾಡುವುದನ್ನು ಕಲಿತು ಒಮ್ಮೊಮ್ಮೆ ಜೀಪು ಚಲಾಯಿಸಿಕೊಂಡು ತೋಟಕ್ಕೆ ಬರುತ್ತಿದ್ದರಂತೆ. ಕೃಷ್ಣಮೂರ್ತಿ ದಂಪತಿಗಳು ಹಲವಾರು ಜನರಿಗೆ ಸಹಾಯ ಮಾಡಿದ್ದರು. ಆ ಪ್ರದೇಶದ ಜನರು ಈಗಲೂ ಅವರನ್ನು ನೆನೆಯುತ್ತಾರೆ. ಈಗ ಅವರ ಮಕ್ಕಳಾದ ರಾಮಮೂರ್ತಿ ಮತ್ತು ಶ್ಯಾಮರಾವ್ ಕೃಷಿಕರಾಗಿ ಮುಂದುವರೆದಿದ್ದಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...