ಹೈದರಾಬಾದ್ನ ಕಾಂಚ ಗಚಿಬೌಲಿ ಪ್ರದೇಶದಲ್ಲಿ ಅರಣ್ಯನಾಶ ಮಾಡಿದ ತೆಲಂಗಾಣ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ (ಮೇ.15) ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಮತ್ತೆ ಅರಣ್ಯ ಬೆಳೆಸಿ, ಇಲ್ಲವೇ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಸಿದ್ಧರಾಗಿ” ಎಂದು ಎಚ್ಚರಿಕೆ ನೀಡಿದೆ.
“ಸರ್ಕಾರ ದೀರ್ಘ ವಾರಾಂತ್ಯದ (ಲಾಂಗ್ ವೀಕೆಂಡ್) ವೇಳೆ ಅರಣ್ಯ ನಾಶ ಮಾಡಿದೆ. ಹಾಗಾಗಿ, ಇದೊಂದು ಪೂರ್ವಯೋಜಿತ ಕೃತ್ಯ ಎಂದು ತೋರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಅವರ ಪೀಠ ಹೇಳಿದೆ ಎಂದು ವರದಿಯಾಗಿದೆ.
ಕಾಂಚ ಗಚಿಬೌಲಿಯ ಅರಣ್ಯದ ಸ್ಥಿತಿಯನ್ನು ಪರಿಶೀಲನೆ ನಡೆಸಿದ ಕೇಂದ್ರೀಯ ಸಬಲೀಕರಣ ಸಮಿತಿ (ಸಿಇಸಿ) ಆ ಪ್ರದೇಶವನ್ನು ಅರಣ್ಯವೆಂದು ಪರಿಗಣಿಸಿ, ರಾಜ್ಯ ಸರ್ಕಾರ ಮತ್ತೆ ಅರಣ್ಯ ಬೆಳೆಸಬೇಕೆಂದು ಶಿಫಾರಸು ಮಾಡಿ ಅಂತಿಮ ವರದಿಯನ್ನು ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಮೇಲಿನ ಆದೇಶ ನೀಡಿದೆ.
“ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ. ನೀವು ನಿಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಇದರಲ್ಲಿ ಎಲ್ಲಾ ಅಧಿಕಾರಿಗಳು ಭಾಗಿಯಾಗಿರುವುದರಿಂದ ನೀವು ದೊಡ್ಡ ತೊಂದರೆಗೆ ಸಿಲುಕುತ್ತೀರಿ. ದೀರ್ಘ ವಾರಾಂತ್ಯದ ಲಾಭ ಪಡೆದು ನೀವು ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದೀರಿ. ನೀವು ಪೋಟೋಗಳನ್ನು ನೋಡಿದ್ದೀರಾ? ಡಜನ್ಗಟ್ಟಲೆ ಬುಲ್ಡೋಜರ್ಗಳನ್ನು ತಂದು ನಿಲ್ಲಿಸಲಾಗಿತ್ತು. ಪ್ರಾಥಮಿಕವಾಗಿ, ಇದೆಲ್ಲವೂ ಪೂರ್ವ ಯೋಜಿತವಾಗಿದೆ ಎಂದು ತೋರುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹೇಳಿದ್ದಾರೆ.
“ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳನ್ನು ತಾತ್ಕಾಲಿಕ ಜೈಲಿಗೆ ಕಳುಹಿಸಬೇಕೆಂದು ನೀವು ಬಯಸಿದರೆ, ನಾವು ಅದನ್ನು ಮಾಡುತ್ತೇವೆ. ನಾವು ಯಾವಾಗಲೂ ಸುಸ್ಥಿರ ಅಭಿವೃದ್ಧಿಯ ಪ್ರತಿಪಾದಕರು, ಇಲ್ಲಿ ಪ್ರಶ್ನೆಯೆಂದರೆ 1,000 ಮರಗಳನ್ನು ತೆರವುಗೊಳಿಸಿರುವುದು ಮತ್ತು ದೀರ್ಘ ರಜೆಯ ಲಾಭವನ್ನು ದುರುಪಯೋಗ ಮಾಡಿಕೊಂಡಿರುವುದು (ಅರಣ್ಯ ನಾಶಕ್ಕೆ ಬಳಸಿರುವುದು)” ಎಂದಿದ್ದಾರೆ.
ತೆಲಂಗಾಣ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು, ವಾರಾಂತ್ಯದಲ್ಲಿ ತರಾತುರಿಯಲ್ಲಿ ಮರ ತೆರವು ಮಾಡಿಲ್ಲ. ಒಂದು ವರ್ಷದ ಸಾಂಸ್ಥಿಕ ಪ್ರಕ್ರಿಯೆ ಬಳಿಕ ತೆರವು ಮಾಡಲಾಗಿದೆ ಎಂದಿದ್ದಾರೆ. ಇದಕ್ಕೆ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಅರಣ್ಯ ನಾಶದ ನಿಮ್ಮ ಪ್ರಕ್ರಿಯೆ ನ್ಯಾಯಸಮ್ಮತವಾಗಿದ್ದರೆ ದೀರ್ಘ ವಾರಾಂತ್ಯದ ಆರಂಭದಲ್ಲಿ ಏಕೆ ಮರಗಳನ್ನು ತೆರವು ಮಾಡಲು ಪ್ರಾರಂಭಿಸಿದಿರಿ? ಪುನಃ ಅರಣ್ಯ ಬೆಳೆಸುವ ಯಾವುದೇ ಬದ್ಧತೆಯಿಲ್ಲದೆ ಸರ್ಕಾರ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದೆ ಮತ್ತು ಆ ಸ್ಥಳದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ತೆಲಂಗಾಣ ಸರ್ಕಾರ ಪರಿಸರ ಅನುಮತಿ ಪಡೆಯುವಲ್ಲಿ ವಿಫಲವಾಗಿರುವುದನ್ನು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ನಿರ್ಮಾಣದ ಒಪ್ಪಿಗೆ’ಗೆ ಮಾತ್ರ ಅರ್ಜಿ ಸಲ್ಲಿಸಿರುವುದನ್ನು ಸಿಇಸಿ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು ಎಂದು ವರದಿಯಾಗಿದೆ.
ಗುರುವಾರ ಸಲ್ಲಿಸಿದ ವರದಿಯಲ್ಲಿ ಕಾಂಚ ಗಚಿಬೌಲಿ ಪ್ರದೇಶ ಅರಣ್ಯದ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿದೆ ಎಂದು ಸಿಇಸಿ ದೃಢಪಡಿಸಿದೆ. ಆ ಪ್ರದೇಶವನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಮೀಸಲು ಅರಣ್ಯ ಎಂದು ಘೋಷಿಸಲು ಶಿಫಾರಸು ಮಾಡಿದೆ.
ಹೈದರಾಬಾದ್ ಕೇಂದ್ರೀಯ ವಿವಿಯ ಜಮೀನಿಗೆ ಹೊಂದಿಕೊಂಡಿರುವ ನಗರದ ‘ಕಾಂಚಿ ಗಚಿಬೌಲಿ’ಯ 400 ಎಕರೆ ಅರಣ್ಯವನ್ನು ನಾಶ ಮಾಡಿ ಅಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು.
ವಿವಾದಿತ ಜಾಗವನ್ನು ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿರುವ ಹೈದಾರಾಬಾದ್ನ ಐಟಿ ಹಬ್ ಫಿನಾಶಿಯಲ್ ಡಿಸ್ಟ್ರಿಕ್ನ ‘ಶ್ವಾಸಕೋಶ’ ಎಂದು ಕರೆಯಲಾಗುತ್ತದೆ. ಫಿನಾಶಿಯಲ್ ಡಿಸ್ಟ್ರಿಕ್ ಸಂಪೂರ್ಣ ಕಾಂಕ್ರೀಟ್ ಕಟ್ಟಡಗಳಿಂದ ತುಂಬಿದ್ದು, ಈ ವಿವಾದಿತ ಜಾಗ ಮಾತ್ರ ವನ್ಯ ಜೀವಿಗಳ ಏಕೈಕ ಅಶ್ರಯ ತಾಣವಾಗಿ ಉಳಿದಿದೆ.
ಈ ಜಾಗ ಬಫಲೋ ಲೇಕ್, ಪೀಕಾಕ್ ಲೇಕ್, ಮಶ್ರೂಮ್ ರಾಕ್ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಜಿಂಕೆ, ನವಿಲು ಸೇರಿದಂತೆ ಅನೇಕ ವನ್ಯ ಜೀವಿಗಳ ಆಶ್ರಯ ತಾಣವಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸರ್ಕಾರ ಬುಲ್ಡೋಜರ್ಗಳನ್ನು ತಂದು ರಾತ್ರೋ ರಾತ್ರಿ ಮರಗಳ ತೆರವಿಗೆ ಮುಂದಾಗಿತ್ತು. ಇದಕ್ಕೆ ಹೈದರಾಬಾದ್ ವಿವಿಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮರಗಳ ತೆರವು ವಿರೋಧಿಸಿ ಪ್ರತಿಭಟಿಸಿದ್ದ ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ದಬ್ಬಾಳಿಕೆ ನಡೆಸಿದ್ದರು. ಬುಲ್ಡೋಜರ್ ತಂದು ಮರಗಳನ್ನು ಧರೆಗುಳಿಸುತ್ತಿರುವುದನ್ನು ವಿಡಿಯೋ ಮಾಡಿದ ವಿದ್ಯಾರ್ಥಿಯೊಬ್ಬರನ್ನು ಬಂಧಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ರೇವಂತ್ ರೆಡ್ಡಿ ಸರ್ಕಾರದ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿತ್ತು. ರಾತ್ರಿ ಹೊತ್ತು ಮರಗಳನ್ನು ಉರುಳಿಸುವಾಗ ನವಿಲುಗಳು ಚೀರಾಡುವ, ಎಲ್ಲಿಗೆ ಹೋಗಬೇಕೆಂದು ದಿಕ್ಕು ತೋಚದೆ ಓಡಾಡುವ ಜಿಂಕೆಗಳು ಹಾಗೂ ಮತ್ತಿತರ ವನ್ಯ ಜೀವಿಗಳ ಮನಕಲಕುವ ವಿಡಿಯೋಗಳು ಭಾರೀ ವೈರಲ್ ಆಗಿತ್ತು.
ಅರಣ್ಯ ನಾಶ ತಡೆಯುವಂತೆ ಕೋರಿ ತೆಲಂಗಾಣ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು.
ಮದುವೆಗೆ ಒಪ್ಪಿಗೆ: ಅತ್ಯಾಚಾರ ಅಪರಾಧಿಯ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್


