ಮಹಾರಾಷ್ಟ್ರ ಅಥವಾ ಮುಂಬೈ ತಮಗೆ ಸುರಕ್ಷಿತವಲ್ಲ ಎಂದು ಭಾವಿಸುವ ಕಂಗನಾ ರಾಣಾವತ್ರವರಿಗೆ ನಮ್ಮ ರಾಜ್ಯದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಮಹಾರಾಷ್ಟ್ರ ಪೊಲೀಸರನ್ನು ತೀವ್ರವಾಗಿ ಟೀಕಿಸಿದ್ದ ಕಂಗನಾ, ಮಹಾರಾಷ್ಟ್ರವನ್ನು ತಾಲಿಬಾನ್ ಆಳ್ವಿಕೆಯಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದ ಸೃಷ್ಠಿಸಿದ್ದರು.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕರ್ತವ್ಯನಿಷ್ಠೆ ಮೆರೆದು ತಮ್ಮ ಪ್ರಾಣಬಿಟ್ಟ ಹಲವಾರು ಪೊಲೀಸರುಗಳನ್ನು ನಾವು ನೋಡಿದ್ದೇವೆ. ಅಂತಹ ಪೊಲೀಸರ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಡುವವರನ್ನು ಸಹಿಸಲಾಗುವುದಿಲ್ಲ. ಇಂದು ಮುಂಬೈ ಮತ್ತು ಮಹಾರಾಷ್ಟ್ರ ನಮ್ಮ ಪೊಲೀಸರಿಂದ ಸುರಕ್ಷಿತವಾಗಿದೆ. ಇದು ಸುರಕ್ಷಿತವಲ್ಲ ಎಂದು ಭಾವಿಸುವವರಿಗೆ ಇಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.
ಹಲವರು ನನಗೆ ಮುಂಬೈಗೆ ಬಾರದಂತೆ ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ ನಾನು ಸೆಪ್ಟಂಬರ್ 9 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೇನೆ. ಧೈರ್ಯವಿದ್ದರೆ ತಡೆಯಲಿ ನೋಡೋಣ ಎಂದು ಕಂಗನಾ ಸವಾಲು ಹಾಕಿದ್ದಾರೆ.
ಅನಿಲ್ ದೇಶ್ಮುಖ್ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಪ್ರಜಾತಾಂತ್ರಿಕ ಹಕ್ಕುಗಳ ಮೇಲಿನ ದಾಳಿ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಈ ಮೊದಲು “ಶಿವಸೇನೆ ಮುಖಂಡ ಸಂಜಯ್ ರಾವತ್ ನಾನು ಮುಂಬೈಗೆ ಬರದಂತೆ ಬೆದರಿಕೆ ಹಾಕಿದ್ದಾರೆ. ಮೊದಲು ಅಜಾದಿ ಘೊಷಣೆಗಳಿದ್ದವು. ಈಗ ಬಹಿರಂಗ ಬೆದರಿಕೆಗಳಿವೆ. ಮುಂಬೈ ಏಕೆ ಪಾಕ್ ಆಕ್ರಮಿತ ಕಾಶ್ಮೀರದ ರೀತಿ ಕಾಣಿಸುತ್ತಿದೆ?” ಎಂದು ಕಂಗನಾ ಹೇಳಿದ್ದರು.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿ ಹಿನ್ನೆಲೆಯಲ್ಲಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಕಂಗಾನ ಕಾಶ್ಮೀರದ ಹೇಳಿಕೆಯಿಂದ ಬಿಜೆಪಿ ಪಕ್ಷವು ಅಂತರ ಕಾಯ್ದುಕೊಂಡಿದೆ. “ಮುಂಬೈ, ಮುಂಬೈಗರು ಮತ್ತು ಮಹಾರಾಷ್ಟ್ರದ ಬಗ್ಗೆ ಕಂಗನಾ ನಮಗೆ ಪಾಠ ಹೇಳಬೇಕಿಲ್ಲ. ಹಾಗೆಯೇ ಸಂಜಯ್ ರಾವತ್ ನಮ್ಮ ಹೆಸರೇಳಿ ಟೀಕಿಸುವ ಅಗತ್ಯವಿಲ್ಲ. ಆಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಪಕ್ಷದ ಮುಖಂಡ ಆಶೀಸ್ ಶೆಲಾರ್ ಹೇಳಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ಸಿಬಿಐ