ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗಳಾದ ಜೆಇಇ ಮತ್ತು ನೀಟ್ ಮುಂದೂಡುವ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಎರಡನೇ ಬಾರಿಗೆ ತಿರಸ್ಕರಿಸಿದೆ. ವಿರೋಧ ಪಕ್ಷದ ಆರು ರಾಜ್ಯಗಳು ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶವನ್ನು ಪರಿಶೀಲಿಸುವಂತೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದವು.
ನೀಟ್ ಮತ್ತು ಜೆಇಇ ಪ್ರವೇಶ ಪರೀಕ್ಷೆ ನಡೆಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ತಮ್ಮ ನಿಲುವುಗಳನ್ನು ಬಿಟ್ಟುಕೊಡುತ್ತಿಲ್ಲ. ಈಗಾಗಲೇ ಸೆಪ್ಟಂಬರ್ 1 ರಿಂದ ಜೆಇಇ ಪರೀಕ್ಷೆ ಪ್ರಾರಂಭವಾಗಿತ್ತು. ಆದರೆ ಪರೀಕ್ಷೆಯ ಮೊದಲ ದಿನ, 50% ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದರು.
ಬಿಹಾರ, ಅಸ್ಸಾಂ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಕೊರೊನಾ ವೈರಸ್ ಮತ್ತು ಪ್ರವಾಹಕ್ಕೆ ಒಳಗಾಗಿರುವುದರಿಂದ, ಆ ರಾಜ್ಯಗಳ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಅಲ್ಲದೆ, ಎಲ್ಲೆಡೆ ಸರ್ಮಪಕ ಸಾರಿಗೆ ವ್ಯವಸ್ಥೆಯನ್ನು ಇನ್ನೂ ಆರಂಭಿಸದ ಕಾರಣ ದೇಶದ ಹಲವಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ಹಲವು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದವು.
ಇದನ್ನೂ ಓದಿ: ಮೊದಲ ದಿನದ ಜೆಇಇ ಪರೀಕ್ಷೆಗೆ 50% ರಷ್ಟು ವಿದ್ಯಾರ್ಥಿಗಳು ಗೈರು: ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ
ವಿದ್ಯಾರ್ಥಿ ಸಂಘಟನೆಗಳು ಪರೀಕ್ಷೆಗೆ ಗೈರಾಗಿರುವ ವಿದ್ಯಾರ್ಥಿಗಳಿಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದವು. ಆದರೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿಯವರಿದ್ದ ನ್ಯಾಯಪೀಠ “ರಾಜ್ಯ ಸರ್ಕಾರಗಳ ಅರ್ಜಿ ಪರಿಶೀಲಿಸಿದ ನಂತರ ಅರ್ಜಿಯಲ್ಲಿ ಯಾವುದೇ ಪರಿಗಣಿಸುವ ಅಂಶಗಳಿಲ್ಲ, ನಮ್ಮ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಲು ಯಾವುದೇ ಉದಾಹರಣೆ ಇಲ್ಲ” ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ.
ಈ ಹಿಂದೆ 11 ರಾಜ್ಯಗಳ 11 ವಿದ್ಯಾರ್ಥಿಗಳು ಇದೇ ರೀತಿಯ ಮನವಿ ಸಲ್ಲಿಸಿದ್ದರು. ಆದರೆ ಆಗಸ್ಟ್ 17 ರಂದು ಸುಪ್ರೀಂ ಕೋರ್ಟ್ ಆ ಅರ್ಜಿ ತಿರಸ್ಕರಿಸಿತ್ತು. ಉನ್ನತ ನ್ಯಾಯಾಲಯದ ಆದೇಶವು ವಿದ್ಯಾರ್ಥಿಗಳ “ಜೀವನದ ಹಕ್ಕನ್ನು” ಭದ್ರಪಡಿಸುವಲ್ಲಿ ವಿಫಲವಾಗಿದೆ ಎಂದು ಅರ್ಜಿ ಸಲ್ಲಿಸಿದ್ದ ರಾಜ್ಯಗಳು ಹೇಳಿವೆ.
ಆಗಸ್ಟ್ 17 ರ ಆದೇಶ ಪರಿಶೀಲಿಸದಿದ್ದರೆ ನಮ್ಮ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಗಂಭೀರ ಮತ್ತು ಸರಿಪಡಿಸಲಾಗದ ಹಾನಿ ಮತ್ತು ಗಾಯಗಳು ಉಂಟಾಗುತ್ತವೆ ಮತ್ತು ನೀಟ್ಗೆ ಹಾಜರಾಗುವ ವಿದ್ಯಾರ್ಥಿಗಳು / ಅಭ್ಯರ್ಥಿಗಳ ಆರೋಗ್ಯ, ಕಲ್ಯಾಣ ಮತ್ತು ಸುರಕ್ಷತೆ ಮಾತ್ರವಲ್ಲದೇ ಜೆಇಇ ಪರೀಕ್ಷೆಗಳು ದುರ್ಬಲಗೊಳ್ಳುತ್ತವೆ ಎಂದು ರಾಜ್ಯಗಳ ಮನವಿಯಲ್ಲಿ ತಿಳಿಸಲಾಗಿತ್ತು
ಇದನ್ನೂ ಓದಿ: ಜೆಇಇ, ನೀಟ್ ಪರೀಕ್ಷೆಗಳ ಬಗ್ಗೆ ಚರ್ಚಿಸಿ ಎಂದರೆ, ಪ್ರಧಾನಿ, ಗೊಂಬೆಗಳ ಬಗ್ಗೆ ಮಾತನಾಡಿದ್ದಾರೆ: ರಾಹುಲ್ ಗಾಂಧಿ
ಮಹಾರಾಷ್ಟ್ರ, ಬಂಗಾಳ, ಪಂಜಾಬ್, ರಾಜಸ್ತಾನ, ಜಾರ್ಖಂಡ್, ಛತ್ತಿಸ್ಗಢ ಮತ್ತು ಪುದುಚೇರಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರಲು ನಿರ್ಧರಿಸಿದ್ದವು.
ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ, “ಜೀವನವು ಮುಂದುವರಿಯಬೇಕು” ಮತ್ತು “ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳು ಅಮೂಲ್ಯವಾದ ವರ್ಷವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಜೆಇಇ ಪರೀಕ್ಷೆಯು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಿದೆ ಮತ್ತು ಸೆಪ್ಟೆಂಬರ್ 6 ರವರೆಗೆ ಮುಂದುವರಿಯಲಿದೆ. ಸೆಪ್ಟೆಂಬರ್ 13 ರಂದು ನೀಟ್ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆಗೆ 15.97 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: 10 ಲಕ್ಷ ಡಿಸ್ಲೈಕ್ ಮೂಲಕ ದಾಖಲೆ ಬರೆದ ಮೋದಿಯ ‘ಮನ್-ಕಿ-ಬಾತ್’!: ಡಿಸ್ಲೈಕ್ ತೆಗೆದುಹಾಕಲಾಗಿದೆಯೆಂಬ ಆರೋಪ?