ಬೆಂಗಳೂರಿನ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದ್ದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಳುಕು ಹಾಕಿದ ಗಾಯಕ ಸೋನು ನಿಗಮ್ಗೆ ಅಸಹಕಾರ ತೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ನಿರ್ಧರಿಸಿದೆ.
ಸೋನು ನಿಗಮ್ ಅವರನ್ನು ಕನ್ನಡ ಚಿತ್ರಗಳಲ್ಲಿ ಹಾಡಿಸುವುದಕ್ಕೆ ನಿರ್ಬಂಧ ವಿಧಿಸಬೇಕು. ಅವರು ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ನೀಡದಂತೆ ತಡೆಯಬೇಕು ಮತ್ತು ಅವರ ವಿರುದ್ದ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿತ್ತು.
ಕನ್ನಡ ಜನತೆಯಿಂದಲೂ ಸೋನು ನಿಗಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಇಂದು ಸಭೆ ನಡೆಸಿದ ಕೆಎಫ್ಸಿಸಿ ಪದಾಧಿಕಾರಿಗಳು, ಸೋನು ನಿಗಮ್ಗೆ ಕನ್ನಡ ಚಿತ್ರಗಳಲ್ಲಿ ಹಾಡುವುದಕ್ಕೆ ಮತ್ತು ಕರ್ನಾಟಕದಲ್ಲಿ ಕಾರ್ಯಕ್ರಮ ನೀಡುವುದಕ್ಕೆ ಒಂದು ರೀತಿಯ ನಿರ್ಬಂಧ ವಿಧಿಸಿದ್ದಾರೆ.
“ಯಾರೂ ಸೋನು ನಿಗಮ್ ಅವರನ್ನು ಹಾಡಿಸಲು ಕರೆಯಬಾರದು, ಮ್ಯೂಸಿಕಲ್ ನೈಟ್ ಸೇರಿದಂತೆ ಅವರ ಜೊತೆಗೆ ಯಾವುದೇ ಚಟುವಟಿಕೆ ಮಾಡಕೂಡದು” ಎಂದು ಕೆಎಫ್ಸಿಸಿ ಅಧ್ಯಕ್ಷ ನರಸಿಂಹಲು ಎಂ. ತಿಳಿಸಿದ್ದಾರೆ.
ಸಂಗೀತ ನಿರ್ದೇಶಕರು, ನಿರ್ಮಾಪಕರು, ನಿರ್ದೇಶಕರ ಸಂಘ ಹೀಗೆ ಕೆಎಫ್ಸಿಸಿಯ ಅಂಗ ಸಂಸ್ಥೆಗಳ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ನರಸಿಂಹಲು ಪ್ರಕಟಿಸಿದ್ದಾರೆ.
“ಸೋನು ನಿಗಮ್ ವಿಡಿಯೋದಲ್ಲಿ ಕ್ಷಮೆ ಕೇಳಬಹುದು ಎಂದುಕೊಂಡಿದ್ದೆವು. ಆದರೆ ಅವರು ಕ್ಷಮಾಪಣೆ ಕೇಳಲಿಲ್ಲ. ಹಾಗಾಗಿ, ಕನ್ನಡ ಪರ ಸಂಘಟನೆಗಳು, ಸಂಗೀತ ನಿರ್ದೇಶಕರು, ನಿರ್ಮಾಪಕರು, ನಿರ್ದೇಶಕರ ಸಂಘ, ಹೀಗೆ ಕೆಫ್ಸಿಸಿಯ ಅಂಗ ಸಂಸ್ಥೆಗಳ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಕ್ಷಣದಿಂದಲೇ ಅಸಹಕಾರ ತೋರಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ನರಸಿಂಹಲು ತಿಳಿಸಿದ್ದಾರೆ.
“ಚಿತ್ರರಂಗದಲ್ಲಿ ಕಲಾವಿದರನ್ನು ನಿಷೇಧ ಮಾಡುವಂತಿಲ್ಲ. ಆದರೆ, ಸ್ವಯಂ ಪ್ರೇರಣೆಯಿಂದ ನಿರ್ಮಾಪಕರು, ಸಂಗೀತ ನಿರ್ದೇಶಕರು ಗಾಯಕರನ್ನು ದೂರ ಇಡಬಹುದು. ಕಲಾವಿದರಾಗಲಿ, ಗಾಯಕರನ್ನಾಗಲಿ ಅಧಿಕೃತವಾಗಿ ನಿಷೇಧ ಮಾಡುವ ಅಧಿಕಾರ ವಾಣಿಜ್ಯ ಮಂಡಳಿಗೆ ಇರುವುದಿಲ್ಲ. ಗಾಯಕನನ್ನು ಕೆಲವು ವರ್ಷ ದೂರವಿಟ್ಟು, ಯಾರೂ ಅವಕಾಶ ಕೊಡದೆ ಬುದ್ಧಿ ಕಳುಹಿಸಬಹುದು” ಎಂದು ನರಸಿಂಹಲು ಹೇಳಿದ್ದಾರೆ.
ಪೊಲೀಸರಿಂದ ನೋಟಿಸ್
ಸೋನು ನಿಗಮ್ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆ ಪೊಲೀಸರು ಸೋನು ನಿಗಮ್ಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದೊಳಗೆ ವಿವರಣೆ ನೀಡಲು ಸೂಚಿಸಲಾಗಿದೆ. ಕಾರ್ಯಕ್ರಮದ ಆಯೋಜಕರಿಗೂ ನೋಟಿಸ್ ನೀಡಲು ಸಿದ್ಧತೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮತ್ತೊಂದು ದೂರು
ಕರವೇ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಗೌಡ ಅವರು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಸೋನು ನಿಗಮ್ ಬಂಧನಕ್ಕೆ ಆಗ್ರಹ
ಸೋನು ನಿಗಮ್ ಕನ್ನಡ, ಕನ್ನಡಿಗರನ್ನು ಅವಮಾನಿಸಿದ್ದಾರೆ. ಅವರನ್ನು ಬಂಧಿಸಿ ಜೈಲಿಗಟ್ಟಬೇಕು. ಈ ಮೂಲಕ ಕನ್ನಡಿಗರ ಶಕ್ತಿ ಅವರಿಗೆ ಗೊತ್ತಾಗಬೇಕು. ಇನ್ನುಮುಂದೆ ಕನ್ನಡಗರನ್ನು ಅವಮಾನಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಹೇಳಿದ್ದಾರೆ.
ಸೋನು ನಿಗಮ್ ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ| ಇಂದಿನಿಂದ ವೈಜ್ಞಾನಿಕ ದತ್ತಾಂಶ ಸಂಗ್ರಹ: ಮೂರೂ ಹಂತಗಳಲ್ಲಿ ಸಮೀಕ್ಷೆ


