Homeಕರ್ನಾಟಕಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

- Advertisement -
- Advertisement -

ರಾಜಶೇಖರರ ಜೊತೆ ನನಗೆ ಇರುವ ಮೂವತ್ತು ವರ್ಷಗಳ ವಿಚಿತ್ರ ಗೆಳೆತನದ ಪ್ರಭಾವವೇ, ಅವರ ಬಗ್ಗೆ ಬರೆಯುವುದಕ್ಕೆ ತೀರಾ ಹಿಂಜರಿಯುವಂತೆ ಮಾಡುತ್ತಿದೆ. ಹಲವು ಜಗಳ, ವಕ್ರ ಹಾಸ್ಯಗಳ ರಕ್ಷಣಾ ಕವಚದಲ್ಲಿ ಬಚ್ಚಿಟ್ಟಿರುಂತಿರುವ ಆಪ್ತತೆಯನ್ನು ಆಡಿದರೆ ಅದು ‘ಶಬ್ದದೆಂಜಲು’ ಎನಿಸುವ ಹಾಗೆ ನಾವಿಬ್ಬರೂ ಬದುಕಿದ್ದೇವೆ. ಇಬ್ಬರಿಗೂ ಮೆಚ್ಚುಗೆಯಾದ ಬೇರೆಯವರ ಮಾತು-ಬರಹಗಳ ಬಗ್ಗೆ, ಯಾಕೆ ಮೆಚ್ಚುಗೆ ಆಯ್ತು ಎಂದು ಪರಸ್ಪರ ಗಂಟೆಗಟ್ಟಲೇ ಮಾತಾಡಿಕೊಂಡಿದ್ದೇವೆ; ಹಿಡಿಸದ ಬರಹಗಳ ಬಗ್ಗೆ ಯಾಕೆ ಹಿಡಿಸಿಲ್ಲವೆಂಬುದಾಗಿ ಟೀಕೆಗಳನ್ನು ಹಂಚಿಕೊಂಡಿದ್ದೇವೆ; ಆದರೆ, ಪರಸ್ಪರರ ಬರಹಗಳಲ್ಲಿ ಹಿಡಿಸದ್ದು ಇದ್ದರೆ, ಆ ಬರಹಗಳು ಪ್ರಕಟವಾದ ಪತ್ರಿಕೆಗಳಿಗೆ ನಮ್ಮ ನೇರ ಪ್ರತಿಕ್ರಿಯೆ ಕಳಿಸುವಂತಹ ಪರಿಪಾಠವನ್ನೂ ಕಲಿಸಿದ್ದೂ ರಾಜಶೇಖರರೇ; ಒಬ್ಬರ ಪ್ರತಿಕ್ರಿಯೆಯು ಇನ್ನೊಬ್ಬರಿಗೆ ಸರಿ ಅನಿಸಿದಾಗ ‘ಯು ಆರ್ ರೈಟ್. ಐ ಸ್ಟಾಂಡ್ ಕರೆಕ್ಟೆಡ್’ ಅಂತ ನೇರ ಮುಖಕ್ಕೆ ಹೇಳಬಲ್ಲ ಪ್ರಾಮಾಣಿಕತೆಯನ್ನು ಕಲಿಸಿದ್ದೂ ಅವರೇ.

ರಾಜಶೇಖರರ ಬರಹಗಳನ್ನು ಓದಿ ಬೆಳೆದಿರುವ ನನಗೆ, ಅವರ ಬರಹ ಇಷ್ಟವಾದಾಗ ‘ಹೇ! ನಂಗೆ ಹಿಡಿಸ್ತು. ಅದ್ರಲ್ಲೂ..’ ಅಂತ ಹೇಳ್ತಿರುವಾಗಲೇ ಅವರು ಬಹಳ ತಣ್ಣಗಿನ ದನಿಯಲ್ಲಿ ‘ಹೌದಾ? ಮತ್ತೇ ಇವತ್ತು ಕಾಲೇಜಿನ ಕೆಲಸ ಇಲ್ಲ್ವಾ. ಬಿಡುವಿದ್ರೆ (ಇಂಥಾ ಪತ್ರಿಕೆಯಲ್ಲಿ, ಇಂಥವರ) ಒಳ್ಳೆ ಬರಹವಿದೆ. ಓದಿ. ಛೇ! ನಾವೆಲ್ಲ ಸುತ್ತಲ ಸಂಗತಿಗಳ ಬಗ್ಗೆ ಎಷ್ಟು ಪೆದ್ದರಾಗಿದ್ದೀವಿ ಅಂತ ನಮಗೇ ಗೊತ್ತಾಗ್ತದೆ?’ ಅಂದು ಆ ಬರಹಗಳ ವಿಷಯವಾಗಿ ಚರ್ಚೆ ಶುರು ಮಾಡ್ತಾರೆ. ಹಾಗೆಯೇ, ಅವರಿಗೆ ಯಾವುದೇ ಬರಹ ಇಷ್ಟವಾದರೆ, ಬರೆದವರ ಪರಿಚಯವಿದ್ದರೆ ಅವರಿಗೆ ಫೋನಿನ ಅಥವ ಪತ್ರದ ಮೂಲಕ ‘ನಿಮ್ಮ ಬರಹ ಓದಿದೆ; ತುಂಬಾ ಚೆನ್ನಾಗಿದೆ’ ಎಂದು ಹೇಳ್ತಾರೆ ಅಂತ ತಿಳಿದಿರುವೆ; ಪರಿಚಯ ಇರದಿದ್ದರೆ ಬರೆದ ಪತ್ರಿಕೆಗೆ ತಮ್ಮ ಮೆಚ್ಚುಗೆಯ ಪತ್ರ ಬರೆದದ್ದನ್ನೂ ನೋಡಿರುವೆ; ಮತ್ತೂ ಹಲವಾರು ಗೆಳೆಯರಿಗೆ ಖುದ್ದಾಗಿ ಆ ಬರಹ ಓದಿರೆಂದು ಶಿಫಾರಸ್ಸು ಮಾಡಿರುವುದನ್ನೂ ಕಂಡಿರುವೆ.

ಆದರೆ, ನನ್ನ ಸ್ವತಂತ್ರ ಬರಹಗಳ ಬಗ್ಗೆ ಅವರ ವರಸೆ ಬೇರೆಯೇ. ‘ಫಣಿರಾಜ್, (ಇಂಥಲ್ಲಿ ಪ್ರಕಟವಾದ) ನಿಮ್ಮ ಬರಹ ಓದಿದೆ, ಮತ್ತೇ ಏನು ಸಮಾಚಾರ?’ ಅಂತಲೋ, ಮೂಡ್ ಇದ್ದರೆ ‘ಹಾಡಿ ಹಾಡಿ ರಾಗ ಬಂತು ಅನ್ನೋ ಹಾಗೆ, ನೀವು ನನ್ನ ಕಾಪಿ ಮಾಡಿ ಮಾಡಿ ಬರೆಯೋದನ್ನ ಒಂದಿಷ್ಟು ಕಲ್ತಿದ್ದೀರಾ..’ ಅಂದು ಜೋರಾಗಿ ನಗುತ್ತಲೋ ತಿಳಿಸುವುದು ವಾಡಿಕೆ-ಅಷ್ಟರಿಂದ ಅವರಿಗೆ ಬರಹ ಹಿಡಿಸಿದೆ ಅಂದ್ಕೋಬೇಕು! ಇಲ್ಲ ಯಾರೋ ಮತ್ತೊಬ್ಬರು ಗೆಳೆಯರಿಗೆ ಇವರೇ ನನ್ನ ಬರಹ ಶಿಫಾರಸ್ಸು ಮಾಡಿ, ಅವರು ಓದಿ ‘ರಾಜಶೇಖರ್ ಓದಿ ಅಂದ್ರು? ಹುಡುಕಿ ಓದಿದೆ..’ ಎಂದಾಗ ಮಾತ್ರ, ಈ ಆಸಾಮಿಗೆ ಹಿಡಿಸಿದೆ ಅಂತ ತಿಳಿಯುವುದು. ಇಷ್ಟು ಮಾತ್ರವಲ್ಲದೇ, ಹೆಸರುಳ್ಳ ಬರಹಗಾರರು, ತಾವು ಖ್ಯಾತರು ಎಂಬ ಅಹಂ ಕಳೆದುಕೊಂಡ ಪ್ರಸಂಗಗಳನ್ನು, ರಾಜಶೇಖರ ಸಾಕಷ್ಟು ಸಾರಿ ನನಗೆ ಮಜಕೂರವೆಂಬಂತೆ ನಿರೂಪಿಸಿದ್ದು ಇದೆ. ಹಾಗೆಯೇ, ರಾಜಶೇಖರರ ಜೊತೆ ನಾನು ಹಲವು ಸ್ಥಳ ಅಧ್ಯಯನ ಮಾಡಿದ್ದೇನೆ; ಇಬ್ಬರೂ ನಮ್ಮ ಕರಡು ಬರೆದು, ಪರಸ್ಪರ ತಿದ್ದಿ, ಒಟ್ಟಂದದ ಬರಹಗಳನ್ನು ಬರೆದಿದ್ದೇವೆ; ಆದರೆ, ಪ್ರಕಟಣೆಯಾಗುವ ವೇಳೆ, ಮೂರನೆಯವರು ಯಾರಾದರೂ ಸ್ಥಳ ಅಧ್ಯಯನದಲ್ಲಿ ಜೊತೆಗಿದ್ದರೆ, ಬರಹಗಾರರಾಗಿ ಅವರ ಹೆಸರನ್ನೂ ಸೇರಿಸಬೇಕು ಎಂಬ ನಿಯಮವನ್ನು ರೂಪಿದವರು ರಾಜಶೇಖರ. ಹೊಗಳಿಕೆಯನ್ನು ಕಡ್ಡಿತುಂಡು ಮಾಡಿದಂತೆ ನಿರಾಕರಿಸುವ, ಬರೆದವರ ಹೆಸರಿಗಿಂತ ಬರಹದ ವಸ್ತು-ವಿಷಯದ ನೈಜತೆ ಮುಖ್ಯ ಎಂಬ ನಿಲುವಿನ ವ್ಯಕ್ತಿಯೊಬ್ಬ ತನ್ನ ಸಹಜೀವಿಗಳಿಗೂ ಈ ಗುಣ ರೂಢಿಯಾಗಲಿ ಎಂಬಂತೆ ವರ್ತಿಸಿ, ಪೋಷಿಸುವುದಕ್ಕಿಂತ ದೊಡ್ಡ ಗೆಳೆತನವನ್ನು ನಾ ಕಾಣೆ.

PC : Avadhi Mag

ಇಂತು, ಕನ್ನಡದ ಬರಹಗಾರರಾಗಿ, ಸಹ ಚಳವಳಿಗಾರರಾಗಿ, ರಾಜಶೇಖರರ ಬದುಕು-ಬರಹಗಳನ್ನು, ನಾನಾದರೂ, (ಗೆಳೆತನದ ಸಮೀಪ ನೋಟದ ಅನುಕೂಲದೊಂದಿಗೆ) ಕನ್ನಡದ ಸಹ ಓದುಗರಂತೇ ಓದಬಯಸುತ್ತೇನೆ. ರಾಜಶೇಖರರನ್ನು ಹಲವು ಸಾರಿ ‘ಮಾರ್ಕ್ಸ್‌ವಾದಿ ವಿಮರ್ಶಕ/ಚಿಂತಕ’ ಎಂದು ಗುರುತಿಸಲಾಗುತ್ತದೆ – ಇದು ಖಂಡಿತ ಸರಿಯಾದುದಲ್ಲ (ಕನ್ನಡದ ಸಾಹಿತ್ಯ-ಸಂಸ್ಕೃತಿ-ಸಾಮಾಜಿಕ ವಿಮರ್ಶೆ/ಚಿಂತನೆಗಳಲ್ಲಿ ‘ಮಾರ್ಕ್ಸ್‌ವಾದಿ ಧಾರೆ’ ಎಂಬಂಥದ್ದು ಒಂದು ಇದೆಯೋ? ಎಂದು ಚರ್ಚಿಸಲಿಕ್ಕೆ ಇಲ್ಲಿ ಅವಕಾಶವಿಲ್ಲ). ರಾಜಶೇಖರ, ಶಿವರಾಮ ಕಾರಂತರಂತೆ (ಮತ್ತೂ ಅವರಿಂದ ಪ್ರಭಾವಿತರಾದ), ಒಬ್ಬ ‘ಲಿಬರಲ್’- ತನ್ನ ಬದುಕಿನಿಂದ ಕಂಡುಕೊಂಡ ದೇಶ ಅನುಭವ, ತನ್ನ ಕೋಶಗಳ ಓದಿನಿಂದ ಪಡೆದ ವಿಚಾರಗಳ ಕಂಣ್ಣೋಟದಲ್ಲಿ, ತನ್ನ ಕಾಲದ ಸುತ್ತಮುತ್ತಲಿನ ವಿದ್ಯಮಾನಗಳನ್ನು, ತನಗೆ ಖಚಿತವೆಂದು ಪ್ರಮಾಣಿಸಿಕೊಂಡು ವ್ಯಾಖ್ಯಾನಿಸುವ/ ಟೀಕಿಸುವ ವೈಚಾರಿಕ ಬಗೆ ಇದು; ತಾವು ಮೆಚ್ಚುವ ಬರಹಗಾರರಾದ ಲಂಕೇಶ್ ಮತ್ತು ಗಿರೀಶ್ ಕಾರ್ನಾಡರಂತೆ, ತನ್ನ ‘ಲಿಬರಲ್’ ವಿಚಾರಗಳನ್ನು ಅಧಿಕಾರಸ್ಥರನ್ನು ಎದುರಿಸುವ ಹಾಗು ಅಧಿಕಾರಹೀನರಿಗೆ ಬೆಂಬಲವಾಗಿ ನಿಲ್ಲುವಂತೆ ತೊಡಗಿಸಲು ಉತ್ಸಾಹಿಯಾಗಿರುವ ‘ಸೋಷಿಯಲ್ ಲಿಬರಲ್’; ಇವರಿಬ್ಬರಿಗಿಂತ ಹತ್ತು ಹೆಜ್ಜೆ ಮುಂದೆ ಹೋಗಿ, ತನ್ನಂತೆ ಅಧಿಕಾರಸ್ತರನ್ನು ವಿರೋಧಿಸುವ-ಅಧಿಕಾರಹೀನರಿಗೆ ಬೆಂಬಲವಾಗಿ ಹೋರಾಡುವ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವ ‘ಸೋಷಿಯಲ್ ಲಿಬರಲ್ ಯಾಕ್ಟಿವಿಸ್ಟ್’.

ಪದೇ ಪದೇ ‘ಲಿಬರಲ್’ ಎಂದು ವಿವರಿಸುತ್ತಿರುವುದಕ್ಕೆ ಕಾರಣ, ಲಿಬರಲ್ ವ್ಯಕ್ತಿ ಎಷ್ಟೇ ಸಮಾಜಮುಖಿ ಆಗಿದ್ದರೂ, ಎಷ್ಟೇ ಚಳವಳಿಗಳ ಸಖರಾಗಿದ್ದರೂ ಸಂಸ್ಥೆ/ಸಂಘಟನೆಗಳು ಕಟ್ಟಿಕೊಟ್ಟ ಸಾಮಾಜಿಕ ಕಂಣ್ಣೋಟಗಳಿಗೆ ಬುದ್ಧಿ ಕೊಡದೇ, ತನ್ನ ವೈಯಕ್ತಿಕ ವಿಚಾರ ಪ್ರಮಾಣಗಳಲ್ಲಿ ಗಟ್ಟಿ ನಂಬಿಕೆಯುಳ್ಳವರು-ರಾಜಶೇಖರ ಅಂಥಾ ವೈಚಾರಿಕರು. ಇಂಥಾ ವೈಚಾರಿಕರಲ್ಲಿ ವ್ಯಕ್ತಿನಿಷ್ಠತೆ ಮತ್ತು ಸ್ವಂತದ ಅಹಂ ಒಂದು ತೂಕ ಜಾಸ್ತಿಯೇ ಇರುತ್ತದೆ; ಆದರೆ, ರಾಜಶೇಖರರ ಬದುಕಿನ ಬವಣೆ ಹಾಗು ಚಳವಳಿಯ ಸಖ್ಯತೆಯ ಕಾರಣವಾಗಿ- ‘ಸಮಾಜದಲ್ಲಿ ಬದುಕುವ ಪ್ರತಿ ಜೀವಿಯೂ ಸಮಾಜ ಜೀವಿ; ಸಮಾಜದ ಕಾಲ-ದೇಶಗಳ ಶಕ್ತಿ, ಮಿತಿಗಳೆರಡೂ ಸಮಾಜ ಜೀವಿಗಳ ನಡೆ-ನುಡಿಗಳ ಶಕ್ತಿ-ಮಿತಿಗಳಾಗಿ ಪ್ರಕಟವಾಗಿ ಸಮಾಜ ದರ್ಶನ ಪಡೆಯಬಹುದೇ ಹೊರತು ವ್ಯಕ್ತಿ ವಿಶಿಷ್ಠ ವಿಚಾರಗಳಿಂದಲ್ಲ’ ಎಂಬ- ಮಾರ್ಕ್ಸ್‌ನ ಮಹತ್ವದ ತತ್ವಶಾಸ್ತ್ರ ಕಂಣ್ಣೋಟವು ರಾಜಶೇಖರರ ಬರಹ-ಆಚರಣೆಗಳಲ್ಲಿ ಹಾಸುಹೊಕ್ಕಾಗಿ ಹೋಗಿದೆ.

ಒಬ್ಬ ‘ಸೋಷಿಯಲ್ ಲಿಬರಲ್’ ಆಗಿ ಅವರು ತನ್ನ ಸುತ್ತಲಿನ ವಿದ್ಯಮಾನಗಳನ್ನು, ತನಗೆ ದಕ್ಕಿದ ಅರಿವಿನ
ಶಕ್ತಿ-ಮಿತಿಗಳಲ್ಲಿ ಗ್ರಹಿಸಿ, ಖಚಿತ ನುಡಿಗಳಲ್ಲಿ ವಿವರಿಸುವರು; ಅದಕ್ಕೆ ತನ್ನ ಸಾಮಾಜಿಕ ಸ್ಥಿತಿಗತಿಯ ಅರಿವಿನ ಮಿತಿ ಇದ್ದರೆ ಇರಲಿ, ಹೇಳುವುದನ್ನು ಈಗಲೇ ಹೇಳಿ ವಾಸ್ತವಕ್ಕೆ ಮುಖಾಮುಖಿಯಾಗುವ ಜರೂರಿದೆ; ತಪ್ಪಾಗಿದ್ದರೆ ಅದು ಬಹಿರಂಗದಲ್ಲೇ ಇರುವುದರಿಂದ ತಿದ್ದಿ ಎಂಬ ವಾಗ್ವಾದಕ್ಕೆ ಆಹ್ವಾನವಿದೆ. ತನ್ನ ವೈಚಾರಿಕತೆಯನ್ನು ತಾನೇ ಹಾಗೆ ಗ್ರಹಿಸಿ ಬರೆಯುವ ಕಾರಣಕ್ಕೆ, ರಾಜಶೇಖರ ತನ್ನ ಬರಹ ಪ್ರಕಟವಾಗಿ ಸಾರ್ವಜನಿಕವಾದ ನಂತರ ಬರಹದ ಆಯುಷ್ಯವು ಮುಗಿದುಹೋಯಿತು ಎಂದೇ ತಿಳಿದಿದ್ದಾರೆ. ಇವತ್ತಿಗೂ ಅವರು, ತಮ್ಮ ಹಿಂದಿನ ಬರಹಗಳ ಬಗ್ಗೆ ಹೊಗಳಿದರೂ-ಟೀಕಿಸಿದರೂ ಯಾವ ಆಸಕ್ತಿಯನ್ನೂ ತೋರುವುದಿಲ್ಲ. ಅವುಗಳಲ್ಲಿ ಇಂದಿಗೂ ಚರ್ಚಾರ್ಹವಿರುವ ಸಂಗತಿಗಳನ್ನು ಎತ್ತಿ ತೋರಿದರೆ, ಇಂದಿನ ವಾಸ್ತವದ ಅರಿವಿನಲ್ಲಿ ಮರುವ್ಯಾಖ್ಯಾನ ಮಾಡುವುದು ಮಾತ್ರ ಅವರಿಗೆ ಆಸಕ್ತಿಯ ಸಂಗತಿ.

ರಾಜಶೇಖರರ ಸಂಸಾರದ ಸ್ಥಿತಿಯ ಕಾರಣವಾಗಿ ಕಷ್ಟದಲ್ಲಿ ಪದವಿ ಶಿಕ್ಷಣ ಮುಗಿಸಿ, ದೊಡ್ಡ ಸಂಸಾರದ ಭಾರ ಹೊರಲು ಮಾಸ್ತರಿಕೆ, ಜೀವ ವಿಮಾ ನಿಗಮದಲ್ಲಿ ಗುಮಾಸ್ತೆಯಾಗಿ ದುಡಿದವರು. ಅವರಿಗೆ ಬರುವ ಸಂಬಳದಲ್ಲಿ ಪುಸ್ತಕಗಳನ್ನು ಕೊಂಡು ಓದುವ ಸವಲತ್ತು ಇರಲಿಲ್ಲ. ಉಡುಪಿಯ ಎಂ.ಜಿ.ಎಂ. ಕಾಲೇಜು, ಗೋವಿಂದ ಪೈ ಸಂಶೋಧನಾ ಕೇಂದ್ರದ ಗ್ರಂಥಾಲಯಗಳು ಹಾಗು ಉಡುಪಿಯ ಸಾರ್ವಜನಿಕ ಗ್ರಂಥಾಲಯಗಳು ಮಾತ್ರವೇ ಅವರ ಕೈಗೆಟುಕುವ ಕೋಶ ಭಂಡಾರಗಳಾಗಿದ್ದವು. ಉಡುಪಿಯೆಂಬ ಊರೇ ಬದುಕಿನ ಮಿತಿಯಾದ ಸ್ಥಿತಿಯಲ್ಲಿ ರಾಜಶೇಖರ ಓದಿ ಸಂಪಾದಿಸಿದ ಜ್ಞಾನವು ಹಲವರಿಗೆ ವಿಶೇಷವೆನಿಸಿದ್ದರೆ ಅದು ಸರಿಯೇ. ಆದರೆ, ಅವರು ಮಾತ್ರ ತಮ್ಮನ್ನು ತಾವು ‘ಕಂಡ ಕಂಡ ಕಾಗದಗಳನ್ನು ಮೇಯುವ ಕತ್ತೆ’ ಎಂದು ಸ್ವವ್ಯಂಗ್ಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇಂಥ ವ್ಯಕ್ತಿಗೆ ಕನ್ನಡದ ಖ್ಯಾತ ಮಕ್ಕಳ ಪದ್ಯ ‘ತಿರುಕನ ಕನಸು’ ಬಹಳ ಪ್ರಿಯ; ಸಮಾಜದ ಪ್ರತಿ ಜೀವಿಗೂ ಒಂದು ‘ತಿರುಕನ ಕನಸು’ ಇರುತ್ತದೆ ಎನ್ನುವುದು ಅವರ ಗಟ್ಟಿ ನಂಬಿಕೆ.

ಅಂತೆಯೇ ಅವರು ತಮ್ಮ ‘ತಿರುಕನ ಕನಸು’ ಎಂದು ಹೇಳಿಕೊಳ್ಳುವ ಸಂಗತಿ ಕುತೂಹಲಕರವಾದ್ದು: ‘ಬ್ರಿಟನ್ನಿನ ತತ್ವಜ್ಞಾನಿ ವೈಟ್ಹೆಡ್ ಸಂಸಾರಸ್ಥ; ಪ್ರತಿ ದಿನವೂ ಅವನು ವಿಶ್ವವಿದ್ಯಾಲಯದಿಂದ ಮನೆಗೆ ವಾಪಾಸು ಬರುವಾಗ ತರಬೇಕಾದ ಮನೆವಾಳ್ತೆಯ ಸಾಮಾನುಗಳ ಪಟ್ಟಿಯನ್ನು ಅವನ ಕೋಟಿನ ಕಿಸೆಯಲ್ಲಿಟ್ಟು ಮರೆಯದೇ ತರುವಂತೆ ಅವನ ಹೆಂಡತಿ ಜೋರಲ್ಲಿ ಹೇಳುತ್ತಿದ್ದಳು; ಅವನು ಮಾತ್ರ ಪ್ರತಿ ದಿನವೂ ಬರಿಗೈಯಲ್ಲೇ ಬರುವನು; ವಾರಕ್ಕೊಮ್ಮೆ ಅವನ ಕೋಟನ್ನು ಲಾಂಡ್ರಿಗೆ ಕೊಡುವಾಗ, ಕೋಟಲ್ಲಿ ಅವಳು ತುರುಕಿದ ಸಾಮಾನುಗಳ ಪಟ್ಟಿಯ ರಾಶಿಯನ್ನು ಬಯ್ಯುತ್ತಾ ಖಾಲಿ ಮಾಡುವುದು ಅವನ ಹೆಂಡತಿಗೆ ವಾಡಿಕೆಯಾಗಿ ಹೋಗಿತ್ತು. ಅಂಥಾ ಪಂಡಿತನ ಬದುಕು ನನ್ನಂಥ ತಿರುಕನ ಕನಸು’. ಸದಾ ತನ್ನ ಪಾಡಿಗೆ ತಾನು ಒಂಟಿಯಾಗಿರಲು ಬಯಸುವ ಅವರ ಜೊತೆ ಒಂದಷ್ಟು ದೂರ ನಡೆಯುವಾಗ ಇಂಥಾ ಹತ್ತಾರು ಅಹಂಕಾರ ವಿಸರ್ಜನೆಯ ಕಥನಗಳನ್ನು ಕೇಳಿರುವುದಷ್ಟೇ ಗೆಳೆತನ ಭಾಗ್ಯ. ‘ರಾಜಶೇಖರ್, ಸಂಜೆ ನಿಮ್ಮತ್ರ ಬರ್ತೇನೆ…’ ಅಂದ್ರೆ, ಅದಕ್ಕೆ ಅವರ ಕಟು ಹಾಸ್ಯದ ಉತ್ತರ- ‘ಏನೋ ಸ್ಕೆಚ್ ಹಾಕ್ಕೊಂಡು ಬರ್ತೀದ್ದೀರಾ ನಂಗೊತ್ತು! ನನ್ನಂಥ ಕಲರ್ಲೆಸ್, ಎಮೋಷನ್‌ಲೆಸ್ ಮನುಷ್ಯನ ಕಂಡ್ರೆ ನಿಮಗೆಷ್ಟು ಪ್ರೀತಿ ಇದೆ ಅಂತ ನಂಗೊತ್ತಿಲ್ಲ್ವಾ!’.

ಕೆ.ಫಣಿರಾಜ್

ಕೆ.ಫಣಿರಾಜ್
ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟವಿಸ್ಟ್ ಆಗಿ ಕೆಲಸ ಮಾಡುತ್ತಾ, ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗ್ಯಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ ಅವರು ಮುನಿಸು ತೋರಬಹುದು.


ಇದನ್ನೂ ಓದಿ: ರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ ‘ಸೂತಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...