Homeಕರ್ನಾಟಕಸಿಬಿಐಗೆ ನೀಡಿದ್ದ 'ಸಾಮಾನ್ಯ ಒಪ್ಪಿಗೆ' ಹಿಂಪಡೆದ ಕರ್ನಾಟಕ : ಇದೇ ರೀತಿಯ ನಿರ್ಧಾರ ಕೈಗೊಂಡ ಇತರ...

ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ ಹಿಂಪಡೆದ ಕರ್ನಾಟಕ : ಇದೇ ರೀತಿಯ ನಿರ್ಧಾರ ಕೈಗೊಂಡ ಇತರ ರಾಜ್ಯಗಳು ಯಾವುವು?

- Advertisement -
- Advertisement -

ಕೇಂದ್ರ ತನಿಖಾ ದಳ (ಸಿಬಿಐ) ಗೆ ಪ್ರಕರಣಗಳ ತನಿಖೆ ನಡೆಸಲು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು ಗುರುವಾರ (ಸೆ.26) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಪಾದಿತ ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನ ಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತಕ್ಕೆ ಆದೇಶಿಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕರ್ನಾಟಕ ಈ ಹಿಂದೆಯೂ ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ವಾಪಸ್ ಪಡೆದಿದೆ ಮತ್ತು ಪುನಃಸ್ಥಾಪಿಸಿದೆ. ಸರ್ಕಾರಗಳನ್ನು ಅಧರಿಸಿ ಈ ಪ್ರಕ್ರಿಯೆ ನಡೆದಿದೆ.

1998ರಲ್ಲಿ, ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರ ಜನತಾ ದಳ ಸರ್ಕಾರವು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು. 1999ರಲ್ಲಿ ಅಧಿಕಾರ ವಹಿಸಿಕೊಂಡ ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ಪುನಃಸ್ಥಾಪಿಸಿರಲಿಲ್ಲ. ಎಐಸಿಸಿಯ ಹಾಲಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಆಗ ರಾಜ್ಯದ ಗೃಹ ಸಚಿವರಾಗಿದ್ದರು.

ವಾಪಸ್‌ ಪಡೆದಿದ್ದ ಒಪ್ಪಿಗೆಯನ್ನು ಸುಮಾರು 8 ವರ್ಷಗಳ ಕಾಲ ಪುನಃಸ್ಥಾಪಿಸಿರಲಿಲ್ಲ. ಇದರಿಂದ ಸಿಬಿಐ ಕರ್ನಾಟಕದ ತನ್ನ ಕಚೇರಿಯನ್ನು ವಾಸ್ತವಿಕವಾಗಿ ಮುಚ್ಚಬೇಕಾಯಿತು ಎಂದು ಆಗ ಸಿಬಿಐನಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಸ್ತುತ ಕರ್ನಾಟಕ ಮಾತ್ರವಲ್ಲದೆ, ಪಂಜಾಬ್, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಮೇಘಾಲಯ ಮತ್ತು ತಮಿಳುನಾಡು ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ. ಇಷ್ಟು ರಾಜ್ಯಗಳ ಪೈಕಿ ಮೇಘಾಲಯ ಹೊರತುಪಡಿಸಿ, ಉಳಿದವುಗಳ ಆಡಳಿತ ಕೇಂದ್ರದಲ್ಲಿ ಪ್ರತಿಪಕ್ಷ ಬಣದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ಕೈಯ್ಯಲಿದೆ.

ರಾಜಸ್ಥಾನ, ಆಂಧ್ರ ಪ್ರದೇಶ, ಮಿಜೋರಾಂ ಮತ್ತು ಛತ್ತೀಸ್‌ಗಢಗಳು ಕೂಡ ಈ ಹಿಂದೆ ಒಪ್ಪಿಗೆಯನ್ನು ಹಿಂಪಡೆದಿದ್ದವು. ಆದರೆ, ಸರ್ಕಾರದ ಬದಲಾವಣೆಯ ನಂತರ ಅದನ್ನು ಮರುಸ್ಥಾಪಿಸಿವೆ.

ಮೋದಿ ಸರ್ಕಾರ ಬಂದ ಬಳಿಕ ಹೆಚ್ಚು

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ರಾಜ್ಯಗಳು ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿವೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ವಿರೋಧ ಪಕ್ಷಗಳ ನಾಯಕರನ್ನು ಹೆಣೆಯುತ್ತಿದೆ ಎಂಬ ಆರೋಪವನ್ನು ಇದು ಪುಷ್ಠೀಕರಿಸುತ್ತದೆ.

ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ವಾಪಸ್ ಪಡೆಯುವುದು ಹೊಸದೇನಲ್ಲ. ಸಿಬಿಐನ ಇತಿಹಾಸದಲ್ಲಿ ಅನೇಕ ಬಾರಿ ಸಿಕ್ಕಿಂ, ನಾಗಾಲ್ಯಾಂಡ್, ಛತ್ತೀಸ್‌ಗಢ ಮತ್ತು ಕರ್ನಾಟಕ ಈ ನಿರ್ಧಾರಗಳನ್ನು ಕೈಗೊಂಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗಿಂತ ಸಿಬಿಐ ಭಿನ್ನವಾಗಿದೆ. ಎನ್‌ಐಎ ಕಾಯ್ದೆ-2008ರಡಿ ನಿಯಂತ್ರಿಸಲ್ಪಡುವ ಎನ್‌ಐಎ, ಭಾರತದಾದ್ಯಂತ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದರೆ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‌ಪಿಇ) ಕಾಯ್ದೆ-1946 ರಿಂದ ನಿಯಂತ್ರಿಸಲ್ಪಡುವ ಸಿಬಿಐ, ದೆಹಲಿ ಹೊರತು ಇತರ ಯಾವುದೇ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಗೂ ಮುನ್ನ, ಆ ರಾಜ್ಯ ಸರ್ಕಾರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಆದೇಶ ಮಾಡಿದರೆ, ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ತನಿಖೆ ಕೈಗೊಳ್ಳಬಹುದು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಮೊದಲ ಬಾರಿಗೆ 2015ರಲ್ಲಿ ಮಿಝೋರಾಂ ರಾಜ್ಯ ಸರ್ಕಾರ ಸಿಬಿಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆದಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಲಾಲ್ ಥನ್ಹಾವ್ಲಾ ಮುಖ್ಯಮಂತ್ರಿಯಾಗಿದ್ದರು.

2018ರಲ್ಲಿ,ಮಿಝೋರಾಂನಲ್ಲಿ ಎನ್‌ಡಿಎ ಒಕ್ಕೂಟದ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಅಧಿಕಾರಕ್ಕೆ ಬಂತು. ಝೋರಂತಂಗಾ ಮುಖ್ಯಮಂತ್ರಿಯಾಗಿದ್ದರು. ಆದರೂ, ಸಿಬಿಗೆ ಒಪ್ಪಿಗೆ ಮರು ಸ್ಥಾಪಿಸಿರಲಿಲ್ಲ. ಬಳಿಕ ಬಂದ ಲಾಲ್ದುಹೋಮ ಸರ್ಕಾರದ ಅಡಿಯಲ್ಲಿ 2023ರ ಡಿಸೆಂಬರ್‌ನಲ್ಲಿ ಮರುಸ್ಥಾಪಿಸಲಾಯಿತು.

ನವೆಂಬರ್ 2018ರಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು 1989ರಲ್ಲಿ ಎಡರಂಗ ಸರ್ಕಾರವು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು. ಆಗ ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದ ನಿರ್ಧಾರವನ್ನು ಮಮತಾ ಸರ್ಕಾರ ಅನುಸರಿಸಿತ್ತು.

“ಚಂದ್ರಬಾಬು ನಾಯ್ಡು ಮಾಡಿರುವುದು ಸಂಪೂರ್ಣವಾಗಿ ಸರಿ ಇದೆ. ಬಿಜೆಪಿ ತನ್ನ ಸ್ವಂತ ರಾಜಕೀಯ ಹಿತಾಸಕ್ತಿ ಮತ್ತು ಸೇಡು ತೀರಿಸಿಕೊಳ್ಳಲು ಸಿಬಿಐ ಮತ್ತು ಇತರ ಏಜೆನ್ಸಿಗಳನ್ನು ಬಳಸುತ್ತಿದೆ” ಎಂದು ಮಮತಾ ಬ್ಯಾನರ್ಜಿ ಆ ಸಮಯದಲ್ಲಿ ಹೇಳಿದ್ದರು.

2019ರಲ್ಲಿ ಆಂಧ್ರದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಬಂದ ಬಳಿಕ, ಸಮ್ಮತಿಯನ್ನು ಮರುಸ್ಥಾಪಿಸಲಾಗಿತ್ತು. ಅದು ಪ್ರಸ್ತುತ ನಾಯ್ಡು ಆಡಳಿತದಲ್ಲೂ ಮುಂದುವರೆದಿದೆ, ಅವರ ಪಕ್ಷ ಈಗ ಎನ್‌ಡಿಎಯ ಭಾಗವಾಗಿದೆ.

ಛತ್ತೀಸ್‌ ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾಂಗ್ರೆಸ್ ಸರ್ಕಾರವು ಜನವರಿ 2019ರಲ್ಲಿ ಸಮ್ಮತಿಯನ್ನು ಹಿಂತೆಗೆದುಕೊಂಡಿತ್ತು. ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಕೇರಳ ಮತ್ತು ಜಾರ್ಖಂಡ್ 2020ರಲ್ಲಿ ಇದನ್ನು ಅನುಸರಿಸಿತ್ತು. 2022ರಲ್ಲಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನೇತೃತ್ವದ ತೆಲಂಗಾಣ ಸರ್ಕಾರ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನಗೊಂಡು ಏಕನಾಥ್ ಶಿಂಧೆ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಹಾರಾಷ್ಟ್ರದಲ್ಲಿ 2022ರಲ್ಲಿ ಸಿಬಿಐಗೆ ಒಪ್ಪಿಗೆಯನ್ನು ಮರುಸ್ಥಾಪಿಸಲಾಗಿತ್ತು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಛತ್ತೀಸ್‌ಗಢದಲ್ಲಿ ಡಿಸೆಂಬರ್ 2023ರಲ್ಲಿ ಸಮ್ಮತಿಯನ್ನು ಮರುಸ್ಥಾಪಿಸಲಾಗಿದೆ. ಡಿಸೆಂಬರ್ 2023ರಲ್ಲಿ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜಸ್ಥಾನ ಕೂಡ ಈ ವರ್ಷದ ಜನವರಿಯಲ್ಲಿ ಸಮ್ಮತಿಯನ್ನು ಮರುಸ್ಥಾಪಿಸಿದೆ.

ಒಪ್ಪಿಗೆ ಹಿಂಪಡೆಯುವ ಸಮಯದಲ್ಲಿ, ಪ್ರತಿಪಕ್ಷಗಳನ್ನು ಅನ್ಯಾಯವಾಗಿ ಗುರಿಯಾಗಿಸಲು ಕೇಂದ್ರ ಸರ್ಕಾರವು ಸಿಬಿಐ ಅನ್ನು ಬಳಸುತ್ತಿದೆ ಎಂದು ಎಲ್ಲಾ ರಾಜ್ಯಗಳು ಆರೋಪಿಸಿದ್ದವು.

ಭ್ರಷ್ಟಾಚಾರ ತಡೆ ಕಾಯ್ದೆ-1988ಕ್ಕೆ 2018ರಲ್ಲಿ ತಿದ್ದುಪಡಿಗಳನ್ನು ತಂದ ಬಳಿಕ, ಸಿಬಿಐ ಮೇಲೆ ಆಡಳಿತಾತ್ಮಕವಾಗಿ ಮಾತ್ರವಲ್ಲದೆ, ಕಾನೂನಾತ್ಮಕವಾಗಿಯೂ ಕೇಂದ್ರ ಅಧಿಕಾರ ಚಲಾಯಿಸುತ್ತಿದೆ.

ಯಾವುದೇ ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸುವ ಮೊದಲು ಕೇಂದ್ರದ ಅನುಮತಿಯನ್ನು ಪಡೆಯುವುದನ್ನು ಸಿಬಿಐಗೆ ಕಡ್ಡಾಯಗೊಳಿಸುವ ಕಾಯ್ದೆಯ ಸೆಕ್ಷನ್ 17ಎ ಗೆ 2018ರಲ್ಲಿ ಸಂಸತ್ತಿನಲ್ಲಿ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆ. ಈ ಹಿಂದೆ, ಜಂಟಿ ಕಾರ್ಯದರ್ಶಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಪ್ರಕರಣದಲ್ಲಿ ಮಾತ್ರ ಅಂತಹ ಅನುಮತಿ ಅಗತ್ಯವಿದೆ ಎಂದು ಕೇಂದ್ರ ಆದೇಶಿಸಿತ್ತು. ಸರ್ಕಾರದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದ ನಂತರ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗಿದೆ.

ಕೃಪೆ : ಇಂಡಿಯನ್ ಎಕ್ಸ್‌ಪ್ರೆಸ್

ಇದನ್ನೂ ಓದಿ : ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆಯಲು ಸಂಪುಟ ಸಭೆಯಲ್ಲಿ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ’: ‘ದಿ ಕೇರಳ ಸ್ಟೋರಿ 2’ ಸಿನಿಮಾ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಬಂಧನ

ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ (ಫೆ. 24) ಮುಂಜಾನೆ ಸುಮಾರು 4:30ಕ್ಕೆ ಬಂಧಿಸಿದ್ದಾರೆ. ಕಳೆದ ವಾರ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ...

ಭೂ ವಿವಾದದಲ್ಲಿ ಸಹೋದರರ ಹತ್ಯೆ; ಒಂದೇ ಕುಟುಂಬದ 13 ಮಂದಿಗೆ ಜೀವಾವಧಿ ಶಿಕ್ಷೆ

ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 10 ವರ್ಷಗಳ ಹಿಂದೆ ಇಬ್ಬರು ಸಹೋದರರನ್ನು ಹತ್ಯೆಗೈದ ಪ್ರಕರಣದಲ್ಲಿ ಒಂದೇ ಕುಟುಂಬದ 13 ಮಂದಿಗೆ ಉತ್ತರ ಪ್ರದೇಶದ ಸಹರಾನ್‌ಪುರದ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು...

ಉತ್ತರ ಪ್ರದೇಶ: ಬಜರಂಗದಳ ದೂರಿನ ಮೇರೆಗೆ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಕೇರಳ ಮೂಲದ ಪಾದ್ರಿಯ ಬಂಧನ

ಬಜರಂಗದಳ ಸದಸ್ಯರು ನೀಡಿದ ದೂರಿನ ಮೇರೆಗೆ ಧಾರ್ಮಿಕ ಮತಾಂತರದ ಆರೋಪದ ಮೇಲೆ ಕೇರಳದ ಪಾದ್ರಿಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ತಿರುವನಂತಪುರಂ ಮೂಲದ ಪಾದ್ರಿ ಜೋಸ್ ಥಾಮಸ್,...

‘ನಾಚಿಕೆಗೇಡು ಅಂದ್ರೇನು ನಾನು ಹೇಳ್ತೇನೆ’: ಅಮೆರಿಕ ವ್ಯಾಪಾರ ಒಪ್ಪಂದ, ಎಪ್‌ಸ್ಟೀನ್ ಫೈಲ್ಸ್ ಉಲ್ಲೇಖಿಸಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶರ್ಟ್‌ ಬಿಚ್ಚಿ ಪ್ರತಿಭಟಿಸಿದ್ದನ್ನು 'ಗಲೀಜು, ನಾಚಿಕೆಗೇಡು'ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ಪ್ರಧಾನಿ...

ಜಾರ್ಖಂಡ್ | ಏರ್ ಆಂಬ್ಯುಲೆನ್ಸ್ ಪತನ : ರೋಗಿ, ವೈದ್ಯ ಸೇರಿ 7 ಮಂದಿ ಸಾವು

ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಸೋಮವಾರ (ಫೆ.24) ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ರೆಡ್‌ಬರ್ಡ್‌ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಣೆ...

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...