ಯುವತಿಯ ಕುಟುಂಬದ ಇಚ್ಛೆಗೆ ವಿರುದ್ದವಾಗಿ ಮದುವೆಯಾಗಿರುವ ಹುಡುಗನ ಕುಟಂಬದ ಇಬ್ಬರನ್ನು ಬಂಧಿಸಿದ್ದಕ್ಕೆ, ಉತ್ತರ ಪ್ರದೇಶದ ಪೊಲೀಸರ ವಿರುದ್ದ ದೆಹಲಿ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ‘ಇಂತವನ್ನೆಲ್ಲಾ ಯುಪಿಯಲ್ಲಿ ಇಟ್ಟುಕೊಳ್ಳಿ, ಇಲ್ಲಿ ಅಲ್ಲ’(ಯುಪಿ ಮೇ ಚಲ್ತಾ ಹೋಗಾ ಯಹಾ ನಹೀಂ) ಎಂದು ಹೈಕೋರ್ಟ್ ಯುಪಿ ಪೊಲೀಸರಿಗೆ ಗುರುವಾರ ಛೀಮಾರಿ ಹಾಕಿದೆ. ದಂಪತಿಗಳು ವಯಸ್ಕರಾಗಿದ್ದು, ಜುಲೈನಲ್ಲಿ ತಮ್ಮ ಸ್ವಂತ ಇಚ್ಛೆಯಿಂದ ವಿವಾಹವಾಗಿದ್ದರು. ಆದರೆ ಅವರಿಗೆ ಯುವತಿಯ ಕುಟುಂಬವು ಪದೇ ಪದೇ ಬೆದರಿಕೆ ಹಾಕುತ್ತಿತ್ತು.
“ಹುಡುಗಿ ಅಪ್ರಾಪ್ತರಾಗಿರಲಿ ಅಥವಾ ಪ್ರಾಪ್ತ ವಯಸ್ಕರಾಗಿಲಿ, ಯಾರೋ ನಿಮ್ಮ ಬಳಿ ಬಂದರೆಂದು ನೀವು ಹುಡುಗಿಯ ವಯಸ್ಸನ್ನು ದೃಢೀಕರಿಸದೆ ಜನರನ್ನು ಬಂಧಿಸುತ್ತೀರಾ?” ಎಂದು ನ್ಯಾಯಾಲಯ ಯುಪಿ ಪೊಲೀಸರನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಈ ಕೋಮು ಹಿಂಸಾಚಾರ ಯುಪಿಯದ್ದಲ್ಲ; ಅಲ್ಲಿ ದುರ್ಗಾ ಪೂಜೆಯ ಮೇಲೆ ಮುಸ್ಲಿಮರು ದಾಳಿ ನಡೆಸಿಲ್ಲ
ಈ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡದೆ ಯುಪಿಯ ಶಾಮ್ಲಿ ಪೊಲೀಸರು ಹುಡುಗನ ತಂದೆ ಮತ್ತು ಸಹೋದರನನ್ನು ಬಂಧಿಸಿ ದೆಹಲಿಯಿಂದ ಕರೆದೊಯ್ದಿದ್ದರು. ಬಂಧನವಾಗಿ ಒಂದು ತಿಂಗಳವರೆಗೆ ಅವರು ಎಲ್ಲಿದ್ದಾರೆ ಎಂದು ಅವರ ಕುಟುಂಬಿಕರಿಗೆ ಪೊಲೀಸರು ತಿಳಿಸಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
“ಹುಡುಗನ ತಂದೆ ಮತ್ತು ಸಹೋದರನನ್ನು ಯುಪಿ ಪೊಲೀಸರು ಬಂಧಿಸುವಂತಿಲ್ಲ. ಅಲ್ಲದೆ ದೆಹಲಿ ಪೊಲೀಸರಿಗೆ ತಿಳಿಸದೆ ದೆಹಲಿಯಿಂದ ಕರೆದೊಯ್ಯುವಂತಿಲ್ಲ” ಎಂದು ನ್ಯಾಯಾಲಯವು ಹೇಳಿದೆ.
ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 8 ರಂದು ಅವರನ್ನು ಬಂಧಿಸಲಾಯಿತು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನೂ ಓದಿ: ಯುಪಿ ಚುನಾವಣೆ: 30 ಲಕ್ಷ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ನೀಡಿದ ಬಿಜೆಪಿ
“ಯುವತಿಯು ಪ್ರಾಪ್ತ ವಯಸ್ಕರಾಗಿದ್ದು, ತನ್ನ ಸ್ವಂತ ಇಚ್ಛೆಯಿಂದ ತನ್ನ ಪೋಷಕರ ಮನೆಯನ್ನು ತೊರೆದು ಹುಡುಗನನ್ನು ವಿವಾಹವಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪೊಲೀಸರು ವಿಫಲರಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ದಂಪತಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ, ನ್ಯಾಯಾಲಯವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ದೆಹಲಿಯಿಂದ ವ್ಯಕ್ತಿಯ ಕುಟುಂಬ ಸದಸ್ಯರನ್ನು ಬಂಧಿಸಿದ್ದರೆ ಯುಪಿ ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಪ್ರಕರಣದ ದಾಖಲಾತಿಯೊಂದಿಗೆ ಅಕ್ಟೋಬರ್ 28 ರಂದು ಖುದ್ದು ಹಾಜರಾಗುವಂತೆ ಶಾಮ್ಲಿ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನ್ಯಾಯಾಲಯ ನೋಟಿಸ್ ನೀಡಿದೆ.
ಇದನ್ನೂ ಓದಿ: ಯುಪಿ ವಿಧಾನಸಭಾ ಚುನಾವಣೆ-2022: ‘ಪೂರ್ವಾಂಚಲ’ ಕಡೆಗೆ ಗಮನ ಹರಿಸಿದ BJP!