ತಿರುವನಂತಪುರದ ಹೊರವಲಯ ನೆಯ್ಯಟ್ಟಿಂಕರ ಬಳಿ ಬುಧವಾರ (ಮಾ.12) ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರ ಗುಂಪೊಂದು ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿಗೆ ಮುತ್ತಿಗೆ ಹಾಕಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವುದಲ್ಲದೆ, ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು ಎಂದು ದಿ ಹಿಂದೂ ವರದಿ ಮಾಡಿದೆ.
ಶಿವಗಿರಿ ಮಠದ ಆಹ್ವಾನದ ಮೇರೆಗೆ ಕೇರಳಕ್ಕೆ ಭೇಟಿ ನೀಡಿದ್ದ ತುಷಾರ್ ಗಾಂಧಿ, ಮಠಕ್ಕೆ ಮಹಾತ್ಮ ಗಾಂಧಿ ಭೇಟಿ ನೀಡಿ 100 ವರ್ಷ ತುಂಬಿದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಆರೆಸ್ಸೆಸ್ ಮತ್ತು ಸಂಘಪರಿವಾರ ದೇಶದ ಆತ್ಮಕ್ಕೆ ಕ್ಯಾನ್ಸರ್ ಇದ್ದಂತೆ, ನಾವು ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ. ಇದು ಸಂಘಪರಿವಾರದವರನ್ನು ಕೆರಳಿಸಿದೆ ಎಂದು ವರದಿ ಹೇಳಿದೆ.
ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ, ನೆಯ್ಯಟ್ಟಿಂಕರದಲ್ಲಿ ದಿವಂಗತ ಗಾಂಧಿವಾದಿ ಪಿ. ಗೋಪಿನಾಥನ್ ನಾಯರ್ ಅವರ ಪೂರ್ವಜರ ಮನೆಯಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ತುಷಾರ್ ಗಾಂಧಿ ತೆರಳಿದ್ದರು. ಈ ಕಾರ್ಯಕ್ರಮ ಮುಗಿಸಿ ಅವರು ವಾಹನ ಹತ್ತಲು ಮುಂದಾಗುತ್ತಿದ್ದಂತೆ ಆರ್ಎಸ್ಎಸ್ ಕಾರ್ಯಕರ್ತರು ಅವರಿಗೆ ಮುತ್ತಿಗೆ ಹಾಕಿದ್ದಾರೆ. ಶಿವಗಿರಿ ಮಠದಲ್ಲಿ ಆರ್ಎಸ್ಎಸ್ ವಿರುದ್ದ ಮಾಡಿದ ಭಾಷಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಪೊಲೀಸರು ಇರಲಿಲ್ಲ
ಆರ್ಎಸ್ಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದಾಗ ತುಷಾರ್ ಗಾಂಧಿಯವರು ವಾಹನದಿಂದ ಕೆಳಗಿಳಿದು ಅವರನ್ನು ಎದುರಿಸಿದರು. ಆರ್ಎಸ್ಎಸ್ ಕಾರ್ಯಕರ್ತರಿಗೆ ಪ್ರತಿಯಾಗಿ “ಆರ್ಎಸ್ಎಸ್ ಮುರ್ದಾಬಾದ್, ಗಾಂಧೀಜಿ ಝಿಂದಾಬಾದ್” ಎಂದು ಕೂಗಿದರು. ಸ್ಥಳದಲ್ಲಿ ಯಾವುದೇ ಗಮನಾರ್ಹ ಪೊಲೀಸ್ ಉಪಸ್ಥಿತಿ ಇರಲಿಲ್ಲ. ಗಾಂಧಿಯವರು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿ ಅಲ್ಲಿಂದ ಹೊರಟರು. ನೆಯ್ಯತ್ತಿಂಕರ ಪೊಲೀಸರನ್ನು ಸಂಪರ್ಕಿಸಿದಾಗ, ಘಟನೆಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ತಿಳಿಸಿದೆ.
ಶಿವಗಿರಿ ಮಠದವರನ್ನು ಸಂಪರ್ಕಿಸಿದಾಗ, ಗುರುವಾರ ಈ ಬೆಳವಣಿಗೆಗೆ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಆರ್ಎಸ್ಎಸ್ನ ಕೃತ್ಯವನ್ನು ಖಂಡಿಸಿದ್ದಾರೆ. ಮಹಾತ್ಮಾ ಗಾಂಧಿಯವರು ನಾರಾಯಣ ಗುರುಗಳೊಂದಿಗೆ ಮಠದಲ್ಲಿ ನಡೆಸಿದ ಐತಿಹಾಸಿಕ ಭೇಟಿಯ 100 ನೇ ವಾರ್ಷಿಕೋತ್ಸವವನ್ನು ಆಚರಿಸಲು ತುಷಾರ್ ಗಾಂಧಿ ಕೇರಳಕ್ಕೆ ಆಗಮಿಸಿದ್ದರು. ಆರ್ಎಸ್ಎಸ್ ಕೇರಳ ನಾಚಿಕೆಪಡುವಂತೆ ಮಾಡಿದೆ. ಪ್ರತಿಭಟನೆಯ ಮೂಲಕ ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದೆ” ಎಂದು ಹೇಳಿದ್ದಾರೆ.
ಸಿಪಿಐ ಹೇಳಿದ್ದೇನು?
ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಆರ್ಎಸ್ಎಸ್ನ ತಿರಸ್ಕಾರ ಮತ್ತು ಊಳಿಗಮಾನ್ಯ ವಸಾಹತುಶಾಹಿ ವ್ಯವಸ್ಥೆಗೆ ಸಂಘಟನೆಯ ಬೆಂಬಲವು ತುಷಾರ್ ಗಾಂಧಿ ವಿರುದ್ಧದ ಅವರ ನಡೆಯಿಂದ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಹೇಳಿದ್ದಾರೆ.
“ಆರ್ಎಸ್ಎಸ್ ಸ್ವಾತಂತ್ರ್ಯ ಚಳವಳಿಯ ದ್ರೋಹಿ. ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಪ್ರಜಾಪ್ರಭುತ್ವದ ಪ್ರಗತಿಯಲ್ಲಿ ಅದರದ್ದು ಯಾವುದೇ ಪಾತ್ರವಿಲ್ಲ. ಗಾಂಧಿಯವರ ಹಂತಕ ಗೋಡ್ಸೆ ಮತ್ತು ಸಾವರ್ಕರ್ ಸೇರಿದಂತೆ ಅವರ ನಾಯಕರನ್ನು ಆರ್ಎಸ್ಎಸ್ ಸಿಂಹಾಸನವೇರಿಸಿದೆ. ಕೇರಳವು ಈ ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಒಂದಾಗಿ ನಿಲ್ಲಬೇಕು” ಎಂದಿದ್ದಾರೆ.


