ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಹೆಚ್ಆರ್ಸಿ) ಅಧ್ಯಕ್ಷರ ನೇಮಕ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಹೆಚ್ಆರ್ಸಿ) ಅಧ್ಯಕ್ಷರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಡಿ.23) ನೇಮಿಸಿದ್ದಾರೆ.
ನ್ಯಾ. ರಾಮಸುಬ್ರಮಣಿಯನ್ ಅವರ ನೇಮಕ ಪೂರ್ವ ನಿರ್ಧರಿತ, ಇವರ ಆಯ್ಕೆ ಪ್ರಕ್ರಿಯೆ ವೇಳೆ
ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ನಿರ್ಧಾರ ಕೈಗೊಳ್ಳುವ ಸ್ಥಾಪಿತ ಸಂಪ್ರದಾಯವನ್ನು ನಿರ್ಲಕ್ಷಿಸಲಾಗಿದೆ ಎಂದು ಇಬ್ಬರು ನಾಯಕರು ಆರೋಪಿಸಿದ್ದಾರೆ.
ಎನ್ಹೆಚ್ಆರ್ಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಡಿಸೆಂಬರ್ 18ರಂದು ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಸರ್ಕಾರ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರ ಹೆಸರನ್ನು ಪ್ರಸ್ತಾಪಿಸಿತ್ತು. ಆದರೆ, ರಾಹುಲ್ ಗಾಂಧಿ ಮತ್ತು ಖರ್ಗೆ ಅವರು, ಅಗತ್ಯವಿರುವ ಅರ್ಹತೆ ಮತ್ತು ಒಳಗೊಳ್ಳುವಿಕೆಯ ಅಗತ್ಯವನ್ನು ಪರಿಗಣಿಸಿ, ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ನ್ಯಾಯಮೂರ್ತಿ ಕುಟ್ಟಿಯಿಲ್ ಮ್ಯಾಥ್ಯೂ ಜೋಸೆಫ್ ಅವರ ಹೆಸರನ್ನು ಪ್ರಸ್ತಾಪಿಸಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಲ್ಪಸಂಖ್ಯಾತ ಪಾರ್ಸಿ ಸಮುದಾಯದ ಒಬ್ಬ ವಿಶಿಷ್ಟ ನ್ಯಾಯಶಾಸ್ತ್ರಜ್ಞ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ತಮ್ಮ ಬೌದ್ಧಿಕ ಆಳ ಮತ್ತು ಸಾಂವಿಧಾನಿಕ ಮೌಲ್ಯಗಳಲ್ಲಿ ಹೊಂದಿರುವ ಅಚಲವಾದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಅವರನ್ನು ಎನ್ಹೆಚ್ಆರ್ಸಿ ಅಧ್ಯಕ್ಷರಾಗಿ ನೇಮಿಸುವುದು ಭಾರತದ ಬಹುತ್ವವನ್ನು ಎತ್ತಿ ಹಿಡಿಯಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
ಅದೇ ರೀತಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯಕ್ಕೆ ಸೇರಿದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರಾದ ಜಸ್ಟಿಸ್ ಕುಟ್ಟಿಯಿಲ್ ಮ್ಯಾಥ್ಯೂ ಜೋಸೆಫ್ ಅವರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ತಳ ಸಮುದಾಯಗಳ ರಕ್ಷಣೆಗೆ ಒತ್ತು ನೀಡುವ ತೀರ್ಪುಗಳನ್ನು ನೀಡಿದವರು. ಅವರು ಈ ಮಹತ್ವದ ಸ್ಥಾನಕ್ಕೆ ಆದರ್ಶ ಅಭ್ಯರ್ಥಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಎನ್ಹೆಚ್ಎಸ್ಆರ್ಸಿಯ ಇತರ ಸದಸ್ಯ ಸ್ಥಾನಗಳಿಗೆ ನ್ಯಾಯಮೂರ್ತಿ ಎಸ್. ಮುರಳೀಧರ್ ಮತ್ತು ನ್ಯಾಯಮೂರ್ತಿ ಅಕಿಲ್ ಅಬ್ದುಲ್ ಹಮೀದ್ ಖುರೇಷಿ ಅವರ ಹೆಸರನ್ನು ಕಾಂಗ್ರೆಸ್ ನಾಯಕರು ಶಿಫಾರಸು ಮಾಡಿದ್ದರು. ಈ ಇಬ್ಬರೂ ಕೂಡ ಮಾನವ ಹಕ್ಕುಗಳನ್ನು ಎತ್ತಿಹಿಡಿದ ಹಿನ್ನೆಲೆಯನ್ನು ಹೊಂದಿದ್ದಾರೆ.
“ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಸಾಮಾಜಿಕ ನ್ಯಾಯದ ಪರ ತೀರ್ಪುಗಳನ್ನು ನೀಡಿದ ಖ್ಯಾತಿ ಹೊಂದಿದ್ದಾರೆ. ಕಸ್ಟಡಿ ಹಿಂಸಾಚಾರಗಳಂತ ಶೋಷಣೆಯನ್ನು ವಿರೋಧಿಸಿ, ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಗೆ ಅವರು ಕೊಡುಗೆ ನೀಡಿದ್ದಾರೆ”.
“ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಅಕಿಲ್ ಅಬ್ದುಲ್ ಹಮೀದ್ ಖುರೇಷಿ ಅವರು ಸಾಂವಿಧಾನಿಕ ತತ್ವಗಳನ್ನು ನಿರಂತರವಾಗಿ ಸಮರ್ಥಿಸಿಕೊಂಡವರು. ಅವರು ಸೇವಾವಧಿಯಲ್ಲಿ ತನ್ನ ಕೆಲಸದ ಮೇಲೆ ಬದ್ದತೆ ಹೊಂದಿದ್ದರು. ಅವರನ್ನು ಎನ್ಹೆಚ್ಆರ್ಸಿಗೆ ಸೇರ್ಪಡೆಗೊಳಿಸಿದರೆ, ಎನ್ಹೆಚ್ಆರ್ಸಿಯ ಪರಿಣಾಮಕಾರಿತ್ವ, ವೈವಿಧ್ಯತೆ ಮತ್ತು ಅದರ ಬದ್ಧತೆಗೆ ಕೊಡುಗೆ ನೀಡಲಿದ್ದಾರೆ” ಎಂದು ಭಿನ್ನಾಭಿಪ್ರಾಯಪಟ್ಟಿದ್ದರು. ಆದರೆ, ಸಭೆಯಲ್ಲಿ ಇವುಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಹೊಸದಾಗಿ ನೇಮಕಗೊಂಡಿರುವ ಎನ್ಹೆಚ್ಆರ್ಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ನಿರ್ಧಾರದ ಸ್ಥಾಪಿತ ಸಂಪ್ರದಾಯವನ್ನು ನಿರ್ಲಕ್ಷಿಸಲಾಗಿದೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ. ಸಮಿತಿಯ ಸಭೆಯಲ್ಲಿ ಎತ್ತಿದ ಕೆಲವೊಂದು ಗಂಭೀರ ವಿಷಯಗಳನ್ನು ಬದಿಗೊತ್ತಿ, ಕೇವಲ ಸಂಖ್ಯಾತ್ಮಕ ಬಹುಮತದ ಆಧಾರದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಭಿನ್ನಬಿಪ್ರಾಯದ ಪತ್ರ ಬರೆದಿದ್ದಾರೆ.
ಎನ್ಹೆಚ್ಆರ್ಸಿಯು ಎಲ್ಲಾ ನಾಗರಿಕರ, ವಿಶೇಷವಾಗಿ ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ತಳಮಟ್ಟದ ವರ್ಗಗಳ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸುವ ಕಾರ್ಯವನ್ನು ಹೊಂದಿರುವ ಪ್ರಮುಖ ಶಾಸನಬದ್ಧ ಸಂಸ್ಥೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಎನ್ಹೆಚ್ಆರ್ಸಿಯ ಪ್ರಮುಖರು ರಾಷ್ಟ್ರದ ಪ್ರಾದೇಶಿಕ, ಜಾತಿ, ಸಮುದಾಯ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಎತ್ತಿ ಹಿಡಿಯಬೇಕಿದೆ. ಈ ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ. ಎಲ್ಲರನ್ನೂ ಒಳಗೊಳ್ಳುವ ವೈವಿದ್ಯಮಯ ತೀರ್ಮಾನಗಳು ಇಲ್ಲಿ ಪ್ರಾಥಮಿಕ ಮಾನದಂಡವಾಗಬೇಕು. ಅಲ್ಲದೆ, ಕೇವಲ ಸಾಂಖ್ಯಿಕ ಬಹುಮತವಲ್ಲ ಎಂದು ಇಬ್ಬರು ನಾಯಕರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ : ಎನ್ಹೆಚ್ಆರ್ಸಿ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ನೇಮಕ


