Homeಚಳವಳಿಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

ಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

- Advertisement -
- Advertisement -

ಗೆಳೆಯರಾದ ಕೇಸರಿ ಹರವೂ ಅವರು ದೆಹಲಿಯ ಚಾರಿತ್ರಿಕ ಮಹತ್ವದ ರೈತಹೋರಾಟದ ಬಗ್ಗೆ ಮಾಡಿರುವ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರವನ್ನು ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕಾಗಿ ಈ ಟಿಪ್ಪಣಿ.

ಈ ಚಿತ್ರವನ್ನು ಒಂದು ಪದ್ಯ ಓದುವ ತನ್ಮಯತೆಯಲ್ಲಿ ನೋಡಿದೆ. ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ರೂಪಕವನ್ನು ಕನ್ನಡ ದಲಿತ ಕಾವ್ಯ ಸೃಷ್ಟಿಸಿದೆಯಷ್ಟೆ. ಭಾರತದ ಬೇರೆಬೇರೆ ಹೋರಾಟದ ಧಾರೆಗಳು ಸೇರಿ ರೂಪುಗೊಂಡ ದೆಹಲಿ ರೈತ ಹೋರಾಟವು, ಈ ರೂಪಕದ ಆನ್ವಯಿಕತೆ ಅನಿಸಿತು. ಈ ಹೋರಾಟದಲ್ಲಿ ಭಾರತದ ಸಿಖ್ಖರ ಧಾರೆಯೇ ಪ್ರಧಾನವಾದುದು. ಚಿತ್ರದಲ್ಲಿ ಸಿಖ್ಖರ ಪೇಟಗಳ ಮತ್ತು ಬೇರೆಬೇರೆ ಸಂಘಟನೆಗಳ ಬಳಕೆಯಾದ ಬಾವುಟಗಳ ವರ್ಣವೈವಿಧ್ಯವು ಎದ್ದು ತೋರುತ್ತದೆ. ಈ ಹಲವು ಬಣ್ಣಗಳಿಗೆ ತಕ್ಕಂತೆ ಹೋರಾಟದಲ್ಲಿ ಹಲವು ಧರ್ಮದ ಜನರು ಇರುವುದನ್ನು ಚಿತ್ರ ಕಾಣಿಸುತ್ತದೆ. ಇದು ಭಾರತದ ಭಾಷಿಕ ಸಾಂಸ್ಕೃತಿಕ ಧಾರ್ಮಿಕ ಬಹುತ್ವವನ್ನು ಮಾತ್ರವಲ್ಲದೆ, ನಾಡಿನ ಹೋರಾಟಗಳಲ್ಲಿ ಇರಬೇಕಾದ ಪಾಲುದಾರಿಕೆಯ ಬಹುತ್ವವನ್ನೂ ಧ್ವನಿಸುತ್ತದೆ.

ಚಿತ್ರದಲ್ಲಿ ಒಂದೆಡೆ ಪ್ರಭುತ್ವದ ಪರವಾಗಿರುವ ಮಂತ್ರಿಗಳು ರೈತಕಾಯಿದೆ ಎಷ್ಟು ಉಪಯುಕ್ತವಾಗಿದೆ ಎಂದು ವಾದಿಸುವ ಹೇಳಿಕೆಗಳನ್ನು; ಮತ್ತೊಂದೆಡೆ ಈ ಕಾಯಿದೆಗಳು ಎಷ್ಟು ರೈತವಿರೋಧಿಯೂ ಕಾರ್ಪೊರೇಟ್ ಹಿತಾಸಕ್ತಿಯೂ ಆಗಿವೆಂಬ ರೈತರ ಮತ್ತು ಚಿಂತಕರ ಅಭಿಪ್ರಾಯಗಳನ್ನು (ಕೆಲವು ಸಂದರ್ಶನಗಳು ದೀರ್ಘವಾಗಿವೆ), ಉದ್ದಕ್ಕೂ ಮುಖಾಮುಖಿಯಾಗಿ ಮಂಡಿಸುವ ವಿನ್ಯಾಸವಿದೆ. ಆರೋಪ-ಪ್ರತ್ಯಾರೋಪದ ವಿನ್ಯಾಸದಲ್ಲಿರುವ ಈ ಪಕ್ಷ-ಪ್ರತಿಪಕ್ಷ ಮಂಡನೆಗಳ ನಡುವೆ ಚಿತ್ರ ನಿರ್ಲಿಪ್ತವಾಗಿ ನಿಂತಿದೆ ಅನಿಸುತ್ತದೆ. ಆದರೆ ಅದು ಸುಳ್ಳು ಮತ್ತು ಸತ್ಯಗಳನ್ನು ಮುಖಾಮುಖಿ ಮಾಡಿಸುತ್ತಿರುವುದು ಪ್ರೇಕ್ಷಕರಿಗೆ ಮನವರಿಕೆ ಆಗುತ್ತದೆ. ಪ್ರಭುತ್ವವು ತನ್ನ ಕ್ರೌರ್ಯ ಮತ್ತು ಸಂಚುಗಾರಿಕೆ ಅಡಗಿಸಲು ಎಂತಹ ಸೌಮ್ಯದ ಸ್ನೇಹದ ಸುರಕ್ಷೆಯ ಭಾಷೆಯನ್ನು ಬಳಸುತ್ತದೆ ಎಂಬ ಸಂಗತಿಯಂತೂ ಭಾಷೆಯ ರಾಜಕಾರಣಕ್ಕೆ ಒಳ್ಳೆಯ ನಿದರ್ಶನವಾಗಿದೆ. ಈ ಕಾರಣಕ್ಕೆ ಇದೊಂದು ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಸಾಕ್ಷ್ಯಚಿತ್ರ.

ಚಿತ್ರವು ದುಡಿವ ವರ್ಗದ ರಾಜಕೀಯ ಪ್ರಜ್ಞೆ ಮತ್ತು ಬುದ್ಧಿಜೀವಿಗಳ ಚಾರಿತ್ರಿಕ ಹೊಣೆಗಾರಿಕೆ
ಕುರಿತು ಹೊಸ ವ್ಯಾಖ್ಯಾನ ಮಂಡಿಸುವ ಕ್ರಮದಲ್ಲೂ ವಿಶೇಷತೆಯಿದೆ. ಇಲ್ಲಿ ರೈತರು, ತಮ್ಮ ವಾಸ್ತವಿಕ ಅನುಭವದ ನೆಲೆಯಿಂದ ಕೃಷಿಕಾಯಿದೆಗಳ ಬಗ್ಗೆ ಸರಳವಾಗಿ ಸಹಜವಾಗಿ ಆಡುವ ಮಾತುಗಳು, ಅವರ ಆಳವಾದ ರಾಜಕೀಯ ತಿಳಿವಳಿಕೆಯನ್ನು ಸೂಚಿಸುತ್ತವೆ; ಅದೇ ಕಾಲಕ್ಕೆ ರೈತರ ಪರವಾಗಿ ಕೆಲಸ ಮಾಡುವ ವಿಶ್ವವಿದ್ಯಾಲಯಗಳ ಚಿಂತಕರು, ತಮ್ಮ ಅಕೆಡೆಮಿಕ್ ತಿಳಿವಳಿಕೆಯನ್ನು ಬೀದಿ ಆಂದೋಲನಗಳಿಗೆ ಹಾಯಿಸುವುದು, ಬುದ್ಧಿಜೀವಿಗಳ ಚಟುವಟಿಕೆಯ ಮರುಹುಟ್ಟನ್ನು ಸೂಚಿಸುತ್ತವೆ. ಈ ಅರ್ಥದಲ್ಲಿ ಎರಡೂ ವರ್ಗಗಳ ಅರ್ಥಪೂರ್ಣ ರೂಪಾಂತರದ ಸಾಕ್ಷ್ಯವಾಗಿದೆ.

ಚಿತ್ರದಲ್ಲಿ ಒಂದೆಡೆ ಕೃಷಿಕಾಯಿದೆಗಳ ಬಗ್ಗೆ, ಸರ್ಕಾರದ ನೀತಿಗಳ ಬಗ್ಗೆ, ಸೈದ್ಧಾಂತಿಕವಾದ ಗಂಭೀರವಾದ ಟಿಪ್ಪಣಿಗಳನ್ನು ಮಾಡುವ ರೈತರ, ಚಿಂತಕರು, ಹೋರಾಟಗಾರರ ಮಾತುಕತೆ ಬರುತ್ತದೆ. ಇದಾದಕೂಡಲೇ ಹೋರಾಟದ ಕಣದಲ್ಲಿ ರಸ್ತೆಯ ಮೇಲೆ, ರೈತರು ರೊಟ್ಟಿಬೇಯಿಸುವ, ತರಕಾರಿ ಬಿಡಿಸುವ, ಜಳಕಮಾಡುವ, ಚಿತ್ರಗಳು ಬರುತ್ತವೆ. ಇವುಗಳನ್ನು ಚಿತ್ರವು ಒಂದರ ಬಳಿಕ ಮತ್ತೊಂದನ್ನು ಜೋಡಿಸುತ್ತ ಹೋಗುತ್ತದೆ. ಈ ಮೂಲಕ, ಚಳವಳಿಯು ದೈನಿಕ ಚಟುವಟಿಕೆಯಾಗುವ, ಜನರ ದೈನಿಕಗಳು ಹೋರಾಟದ ಭಾಗವಾಗುವ ಪ್ರಕ್ರಿಯೆಯನ್ನು ಹಿಡಿದಿಡುತ್ತದೆ. ಇದು ದೈನಿಕವನ್ನು ಘನತೀಕರಿಸುವ ವಿಧಾನವಾಗಿದೆ.

ಭಾರತದಲ್ಲಿ ಸಿಖ್ಖರ ಬಗ್ಗೆ ಅವರು ದಡ್ಡರು, ಖಾಲಿಸ್ತಾನವಾದಿಗಳು, ಅತಿಧಾರ್ಮಿಕರು ಎಂದೆಲ್ಲ ಗ್ರಹಿಕೆಗಳಿವೆ. ಆದರೆ ಈ ಚಿತ್ರ ಅವರ ಬಗೆಗಿನ ಪರಿಕಲ್ಪನೆಯನ್ನೇ ಬದಲಿಸಿಬಿಡುತ್ತದೆ. ಅವರ ಶ್ರಮಜೀವಿ ವ್ಯಕ್ತಿತ್ವ, ದೇಶಪ್ರೇಮ, ಹೋರಾಟದ ಕೆಚ್ಚು, ಸರಳತೆ, ಅನ್ಯಾಯಕ್ಕೆ ಒಳಗಾದ ಸಂಕಟಗಳನ್ನು ಚಿತ್ರವು ಕಾಣಿಸುತ್ತದೆ. ಇಲ್ಲಿರುವ ಸಾಂಘಿಕ ಹೋರಾಟದ ಹಿಂದೆ, ಇಡೀ ಸಿಖ್ ಧರ್ಮದ ಕೂಡುದುಡಿಮೆ, ಕೂಡುಭೋಜನ, ಲಂಗರ್ ಸಂಸ್ಕೃತಿ, ಜಾತ್ಯತೀತತೆಗಳು ಕಾಣುಟ್ಟವೆ. ದೆಹಲಿಯ ಸುಲ್ತಾನರ ವಿರುದ್ಧ ಸೆಣಸಾಡುತ್ತಲೇ ರೂಪುಗೊಂಡ ಧರ್ಮವಿದು. ಈ ಅರ್ಥದಲ್ಲಿ ಚಿತ್ರವು ಸಿಖ್ ಧರ್ಮದ ಒಳಗೇ ಇರುವ ಹೋರಾಟದ ಪರಂಪರೆಯನ್ನು ಭಿತ್ತಿಯನ್ನಾಗಿ ತಂದುಕೊಂಡಿದೆ.

ಈ ಚಿತ್ರದಲ್ಲಿ ಎರಡು ಕೊರತೆಗಳು ಕಂಡವು. 1. ನಾವು ಇಲ್ಲಿ ಚಳವಳಿಯಲ್ಲಿದ್ದೇವೆ. ನಮ್ಮ ಹೊಲಮನೆಯ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಅನೇಕ ರೈತರು ಹೇಳುತ್ತಾರೆ. ಆ ಮಹಿಳೆಯರು ತಮ್ಮ ಊರುಗಳಲ್ಲಿ ತೊಡಗಿರುವ ಕಾಯಕದ ಚಿತ್ರಗಳು ಇಲ್ಲದಿರುವುದು. ಹೋರಾಟಗಳಲ್ಲಿ ತೆರೆಮರೆಯಲ್ಲಿ ಉಳಿದುಬಿಡುವ ಈ ಅದೃಶ್ಯ ಸೈನಿಕರನ್ನು ಚರಿತ್ರೆಯು ಸಾಮಾನ್ಯವಾಗಿ ಗಮನಿಸದೆ ಹೋಗುವುದರಿಂದ, ಹೋರಾಟಗಳು ಗಂಡುಪ್ರಧಾನ ಕ್ರಿಯೆಗಳಾಗಿ ದಾಖಲಾಗಿಬಿಡುವ ಅಪಾಯವಿದೆ. 2. ಹೋರಾಟದಲ್ಲಿ ಭಾಷಣ ಚರ್ಚೆ ಘೋಷಣೆಗಳಷ್ಟೇ ಪ್ರಧಾನವಾದವು ಹಾಡುಗಳು. ಅದರಲ್ಲೂ ಸಿಖ್ಖರದು ಗುರುಬಾಣಿಗಳನ್ನು ಹಾಡುವ ಧರ್ಮ. ಪಂಜಾಬಿ ಹಾಡುಗಾರರು ಈ ಹೋರಾಟದಲ್ಲಿ ಭಾಗವಹಿಸಿರುವರು. ಅಂತಹ ಹಾಡುಗಳನ್ನು ಚಿತ್ರವು ಅಳವಡಿಸಿಕೊಂಡಿಲ್ಲದಿರುವುದು.

ಚಳುವಳಿ ಮುಗಿದಿಲ್ಲ, ಇನ್ನೂ ತೀವ್ರಗೊಳ್ಳುತ್ತದೆ - ರೈತ ಮುಖಂಡರುಈ ಚಿತ್ರವು ದೃಶ್ಯ ಮತ್ತು ಮಾತು ಪ್ರಧಾನವಾಗಿದೆ. ಇವುಗಳ ಸಂದಣಿಯ ಚಿತ್ರದಲ್ಲಿ, ಮಾತಿಲ್ಲದ, ಹಿನ್ನೆಲೆ ಸಂಗೀತವಿಲ್ಲದ ಗಾಢ ಮೌನ ಆವರಿಸಿಕೊಳ್ಳುವ, ಕೇವಲ ರೈತರ ಮುಖಗಳನ್ನೇ ಕಾಣಿಸುವ ಎರಡು ಸನ್ನಿವೇಶಗಳಿವೆ. ಮೊದಲನೆಯದು-ಗಣರಾಜ್ಯದಂದು ಟ್ರ್ಯಾಕ್ಟರ್ ಪೆರೇಡ್ ಮಾಡುವ ಕಾರ್ಯಕ್ರಮವು, ಪ್ರಭುತ್ವದ ಫಿತೂರಿಯಿಂದ ಗೊಂದಲದಲ್ಲಿ ಮುಗಿದುಹೋದ ಬಳಿಕ, ಚಿಂತೆಯಲ್ಲಿ ಮುಳುಗಿದ ರೈತರನ್ನು ಕಾಣಿಸುವ ಸನ್ನಿವೇಶ. ಎರಡನೆಯದು- ಚಿತ್ರದ ಕೊನೆಯಲ್ಲಿ ಸರ್ಕಾರವು ಚಳವಳಿಯನ್ನು ಮುರಿಯಲು ತಾತ್ಕಾಲಿಕವಾಗಿ ಕಾನೂನನ್ನು ಹಿಂತೆಗೆದುಕೊಳ್ಳುವ ಹುನ್ನಾರ ಮಾಡಿದಾಗ ರೈತರು ಚಿಂತನೆಯಲ್ಲಿ ಮುಳುಗಿದ ಸನ್ನಿವೇಶ. ಈ ಎರಡೂ ಸನ್ನಿವೇಶಗಳು ಮಾತಿನಲ್ಲಿ ಹೇಳಲಾಗದ ದಿಟಗಳನ್ನು ಮೌನದ ಮೂಲಕ ಹೇಳಿಸುತ್ತ ಬಹಳ ಪರಿಣಾಮಕಾರಿಯಾಗಿವೆ.

ಚಿತ್ರದ ಕೊನೆ ಸಾಂಕೇತಿಕವಾಗಿದೆ. ಅದು ರೈತಾಪಿ ಧ್ವಜವನ್ನು ಹಿಡಿದು ಮಗುವೊಂದು ಆಡುವುದು. ಇದು ಹೋರಾಟದ ರಿಲೇಕೋಲನನ್ನು ಹೊಸತಲೆಮಾರಿಗೆ ಹಾಯುತ್ತಿರುವ ಈ ರೂಪಕವು ವಾಚ್ಯವಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಬಿಳಿಯ ಗಡ್ಡಮೀಸೆಯ ರೈತರೇ ತುಂಬಿರುವ ಚಿತ್ರದಲ್ಲಿ, ಈ ಹೊಸತಲೆಮಾರಿನ ಮಗುವಿನ ಚಿತ್ರವು, ದೊಡ್ಡಮರದ ಬುಡದಲ್ಲಿ ಒಡಮೂಡಿದ ಚಿಗುರಿನ ಕುಡಿಯಂತಿದೆ.

ನಾನು ಕೇಸರಿಯವರು ಮಾಡಿರುವ ಅಘನಾಶಿನಿ ಕುರಿತ ಚಿತ್ರವನ್ನು ನೋಡಿರುವೆ. ಅದೊಂದು ಎಚ್ಚರಿಕೆಯಿಂದ ಕಟ್ಟಿದ ಕಾವ್ಯ. ಅದಕ್ಕೆ ಹೋಲಿಸಿದರೆ ರಣರಂಗದಲ್ಲಿ ನಿಂತು ಮಾಡಿದ ಈ ಚಿತ್ರವು ಕೊಂಚ ಚದುರಿಕೊಂಡಿದೆ. ಇಂತಹ ಚಿತ್ರಗಳು ನಮ್ಮ ಕಾಲದಲ್ಲಿ ಹುಟ್ಟಿಸಬಹುದಾದ ರಾಜಕೀಯ ಪ್ರತಿಸ್ಪಂದನೆಯ ದೃಷ್ಟಿಯಿಂದ ಮುಖ್ಯವಾದವು. ಮಾತ್ರವಲ್ಲ, ಮುಂದಿನ ತಲೆಮಾರಿಗೆ ಚರಿತ್ರೆಯಲ್ಲಿ ಇಂತಹದೊಂದು ಚಳುವಳಿ ನಡೆದಿತ್ತು ಎಂದು ಒದಗುವ ಆಕರವಾಗುವುದು. ಕನ್ನಡದ ಒಳ್ಳೆಯ ಮನಸ್ಸೊಂದು ಈ ಚಿತ್ರ ಮಾಡಿದೆಯೆಂಬುದು ಅಭಿಮಾನ ಹುಟ್ಟಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ದಿಟ್ಟ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...