Homeಚಳವಳಿಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

ಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

- Advertisement -
- Advertisement -

ಗೆಳೆಯರಾದ ಕೇಸರಿ ಹರವೂ ಅವರು ದೆಹಲಿಯ ಚಾರಿತ್ರಿಕ ಮಹತ್ವದ ರೈತಹೋರಾಟದ ಬಗ್ಗೆ ಮಾಡಿರುವ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರವನ್ನು ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕಾಗಿ ಈ ಟಿಪ್ಪಣಿ.

ಈ ಚಿತ್ರವನ್ನು ಒಂದು ಪದ್ಯ ಓದುವ ತನ್ಮಯತೆಯಲ್ಲಿ ನೋಡಿದೆ. ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ರೂಪಕವನ್ನು ಕನ್ನಡ ದಲಿತ ಕಾವ್ಯ ಸೃಷ್ಟಿಸಿದೆಯಷ್ಟೆ. ಭಾರತದ ಬೇರೆಬೇರೆ ಹೋರಾಟದ ಧಾರೆಗಳು ಸೇರಿ ರೂಪುಗೊಂಡ ದೆಹಲಿ ರೈತ ಹೋರಾಟವು, ಈ ರೂಪಕದ ಆನ್ವಯಿಕತೆ ಅನಿಸಿತು. ಈ ಹೋರಾಟದಲ್ಲಿ ಭಾರತದ ಸಿಖ್ಖರ ಧಾರೆಯೇ ಪ್ರಧಾನವಾದುದು. ಚಿತ್ರದಲ್ಲಿ ಸಿಖ್ಖರ ಪೇಟಗಳ ಮತ್ತು ಬೇರೆಬೇರೆ ಸಂಘಟನೆಗಳ ಬಳಕೆಯಾದ ಬಾವುಟಗಳ ವರ್ಣವೈವಿಧ್ಯವು ಎದ್ದು ತೋರುತ್ತದೆ. ಈ ಹಲವು ಬಣ್ಣಗಳಿಗೆ ತಕ್ಕಂತೆ ಹೋರಾಟದಲ್ಲಿ ಹಲವು ಧರ್ಮದ ಜನರು ಇರುವುದನ್ನು ಚಿತ್ರ ಕಾಣಿಸುತ್ತದೆ. ಇದು ಭಾರತದ ಭಾಷಿಕ ಸಾಂಸ್ಕೃತಿಕ ಧಾರ್ಮಿಕ ಬಹುತ್ವವನ್ನು ಮಾತ್ರವಲ್ಲದೆ, ನಾಡಿನ ಹೋರಾಟಗಳಲ್ಲಿ ಇರಬೇಕಾದ ಪಾಲುದಾರಿಕೆಯ ಬಹುತ್ವವನ್ನೂ ಧ್ವನಿಸುತ್ತದೆ.

ಚಿತ್ರದಲ್ಲಿ ಒಂದೆಡೆ ಪ್ರಭುತ್ವದ ಪರವಾಗಿರುವ ಮಂತ್ರಿಗಳು ರೈತಕಾಯಿದೆ ಎಷ್ಟು ಉಪಯುಕ್ತವಾಗಿದೆ ಎಂದು ವಾದಿಸುವ ಹೇಳಿಕೆಗಳನ್ನು; ಮತ್ತೊಂದೆಡೆ ಈ ಕಾಯಿದೆಗಳು ಎಷ್ಟು ರೈತವಿರೋಧಿಯೂ ಕಾರ್ಪೊರೇಟ್ ಹಿತಾಸಕ್ತಿಯೂ ಆಗಿವೆಂಬ ರೈತರ ಮತ್ತು ಚಿಂತಕರ ಅಭಿಪ್ರಾಯಗಳನ್ನು (ಕೆಲವು ಸಂದರ್ಶನಗಳು ದೀರ್ಘವಾಗಿವೆ), ಉದ್ದಕ್ಕೂ ಮುಖಾಮುಖಿಯಾಗಿ ಮಂಡಿಸುವ ವಿನ್ಯಾಸವಿದೆ. ಆರೋಪ-ಪ್ರತ್ಯಾರೋಪದ ವಿನ್ಯಾಸದಲ್ಲಿರುವ ಈ ಪಕ್ಷ-ಪ್ರತಿಪಕ್ಷ ಮಂಡನೆಗಳ ನಡುವೆ ಚಿತ್ರ ನಿರ್ಲಿಪ್ತವಾಗಿ ನಿಂತಿದೆ ಅನಿಸುತ್ತದೆ. ಆದರೆ ಅದು ಸುಳ್ಳು ಮತ್ತು ಸತ್ಯಗಳನ್ನು ಮುಖಾಮುಖಿ ಮಾಡಿಸುತ್ತಿರುವುದು ಪ್ರೇಕ್ಷಕರಿಗೆ ಮನವರಿಕೆ ಆಗುತ್ತದೆ. ಪ್ರಭುತ್ವವು ತನ್ನ ಕ್ರೌರ್ಯ ಮತ್ತು ಸಂಚುಗಾರಿಕೆ ಅಡಗಿಸಲು ಎಂತಹ ಸೌಮ್ಯದ ಸ್ನೇಹದ ಸುರಕ್ಷೆಯ ಭಾಷೆಯನ್ನು ಬಳಸುತ್ತದೆ ಎಂಬ ಸಂಗತಿಯಂತೂ ಭಾಷೆಯ ರಾಜಕಾರಣಕ್ಕೆ ಒಳ್ಳೆಯ ನಿದರ್ಶನವಾಗಿದೆ. ಈ ಕಾರಣಕ್ಕೆ ಇದೊಂದು ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಸಾಕ್ಷ್ಯಚಿತ್ರ.

ಚಿತ್ರವು ದುಡಿವ ವರ್ಗದ ರಾಜಕೀಯ ಪ್ರಜ್ಞೆ ಮತ್ತು ಬುದ್ಧಿಜೀವಿಗಳ ಚಾರಿತ್ರಿಕ ಹೊಣೆಗಾರಿಕೆ
ಕುರಿತು ಹೊಸ ವ್ಯಾಖ್ಯಾನ ಮಂಡಿಸುವ ಕ್ರಮದಲ್ಲೂ ವಿಶೇಷತೆಯಿದೆ. ಇಲ್ಲಿ ರೈತರು, ತಮ್ಮ ವಾಸ್ತವಿಕ ಅನುಭವದ ನೆಲೆಯಿಂದ ಕೃಷಿಕಾಯಿದೆಗಳ ಬಗ್ಗೆ ಸರಳವಾಗಿ ಸಹಜವಾಗಿ ಆಡುವ ಮಾತುಗಳು, ಅವರ ಆಳವಾದ ರಾಜಕೀಯ ತಿಳಿವಳಿಕೆಯನ್ನು ಸೂಚಿಸುತ್ತವೆ; ಅದೇ ಕಾಲಕ್ಕೆ ರೈತರ ಪರವಾಗಿ ಕೆಲಸ ಮಾಡುವ ವಿಶ್ವವಿದ್ಯಾಲಯಗಳ ಚಿಂತಕರು, ತಮ್ಮ ಅಕೆಡೆಮಿಕ್ ತಿಳಿವಳಿಕೆಯನ್ನು ಬೀದಿ ಆಂದೋಲನಗಳಿಗೆ ಹಾಯಿಸುವುದು, ಬುದ್ಧಿಜೀವಿಗಳ ಚಟುವಟಿಕೆಯ ಮರುಹುಟ್ಟನ್ನು ಸೂಚಿಸುತ್ತವೆ. ಈ ಅರ್ಥದಲ್ಲಿ ಎರಡೂ ವರ್ಗಗಳ ಅರ್ಥಪೂರ್ಣ ರೂಪಾಂತರದ ಸಾಕ್ಷ್ಯವಾಗಿದೆ.

ಚಿತ್ರದಲ್ಲಿ ಒಂದೆಡೆ ಕೃಷಿಕಾಯಿದೆಗಳ ಬಗ್ಗೆ, ಸರ್ಕಾರದ ನೀತಿಗಳ ಬಗ್ಗೆ, ಸೈದ್ಧಾಂತಿಕವಾದ ಗಂಭೀರವಾದ ಟಿಪ್ಪಣಿಗಳನ್ನು ಮಾಡುವ ರೈತರ, ಚಿಂತಕರು, ಹೋರಾಟಗಾರರ ಮಾತುಕತೆ ಬರುತ್ತದೆ. ಇದಾದಕೂಡಲೇ ಹೋರಾಟದ ಕಣದಲ್ಲಿ ರಸ್ತೆಯ ಮೇಲೆ, ರೈತರು ರೊಟ್ಟಿಬೇಯಿಸುವ, ತರಕಾರಿ ಬಿಡಿಸುವ, ಜಳಕಮಾಡುವ, ಚಿತ್ರಗಳು ಬರುತ್ತವೆ. ಇವುಗಳನ್ನು ಚಿತ್ರವು ಒಂದರ ಬಳಿಕ ಮತ್ತೊಂದನ್ನು ಜೋಡಿಸುತ್ತ ಹೋಗುತ್ತದೆ. ಈ ಮೂಲಕ, ಚಳವಳಿಯು ದೈನಿಕ ಚಟುವಟಿಕೆಯಾಗುವ, ಜನರ ದೈನಿಕಗಳು ಹೋರಾಟದ ಭಾಗವಾಗುವ ಪ್ರಕ್ರಿಯೆಯನ್ನು ಹಿಡಿದಿಡುತ್ತದೆ. ಇದು ದೈನಿಕವನ್ನು ಘನತೀಕರಿಸುವ ವಿಧಾನವಾಗಿದೆ.

ಭಾರತದಲ್ಲಿ ಸಿಖ್ಖರ ಬಗ್ಗೆ ಅವರು ದಡ್ಡರು, ಖಾಲಿಸ್ತಾನವಾದಿಗಳು, ಅತಿಧಾರ್ಮಿಕರು ಎಂದೆಲ್ಲ ಗ್ರಹಿಕೆಗಳಿವೆ. ಆದರೆ ಈ ಚಿತ್ರ ಅವರ ಬಗೆಗಿನ ಪರಿಕಲ್ಪನೆಯನ್ನೇ ಬದಲಿಸಿಬಿಡುತ್ತದೆ. ಅವರ ಶ್ರಮಜೀವಿ ವ್ಯಕ್ತಿತ್ವ, ದೇಶಪ್ರೇಮ, ಹೋರಾಟದ ಕೆಚ್ಚು, ಸರಳತೆ, ಅನ್ಯಾಯಕ್ಕೆ ಒಳಗಾದ ಸಂಕಟಗಳನ್ನು ಚಿತ್ರವು ಕಾಣಿಸುತ್ತದೆ. ಇಲ್ಲಿರುವ ಸಾಂಘಿಕ ಹೋರಾಟದ ಹಿಂದೆ, ಇಡೀ ಸಿಖ್ ಧರ್ಮದ ಕೂಡುದುಡಿಮೆ, ಕೂಡುಭೋಜನ, ಲಂಗರ್ ಸಂಸ್ಕೃತಿ, ಜಾತ್ಯತೀತತೆಗಳು ಕಾಣುಟ್ಟವೆ. ದೆಹಲಿಯ ಸುಲ್ತಾನರ ವಿರುದ್ಧ ಸೆಣಸಾಡುತ್ತಲೇ ರೂಪುಗೊಂಡ ಧರ್ಮವಿದು. ಈ ಅರ್ಥದಲ್ಲಿ ಚಿತ್ರವು ಸಿಖ್ ಧರ್ಮದ ಒಳಗೇ ಇರುವ ಹೋರಾಟದ ಪರಂಪರೆಯನ್ನು ಭಿತ್ತಿಯನ್ನಾಗಿ ತಂದುಕೊಂಡಿದೆ.

ಈ ಚಿತ್ರದಲ್ಲಿ ಎರಡು ಕೊರತೆಗಳು ಕಂಡವು. 1. ನಾವು ಇಲ್ಲಿ ಚಳವಳಿಯಲ್ಲಿದ್ದೇವೆ. ನಮ್ಮ ಹೊಲಮನೆಯ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಅನೇಕ ರೈತರು ಹೇಳುತ್ತಾರೆ. ಆ ಮಹಿಳೆಯರು ತಮ್ಮ ಊರುಗಳಲ್ಲಿ ತೊಡಗಿರುವ ಕಾಯಕದ ಚಿತ್ರಗಳು ಇಲ್ಲದಿರುವುದು. ಹೋರಾಟಗಳಲ್ಲಿ ತೆರೆಮರೆಯಲ್ಲಿ ಉಳಿದುಬಿಡುವ ಈ ಅದೃಶ್ಯ ಸೈನಿಕರನ್ನು ಚರಿತ್ರೆಯು ಸಾಮಾನ್ಯವಾಗಿ ಗಮನಿಸದೆ ಹೋಗುವುದರಿಂದ, ಹೋರಾಟಗಳು ಗಂಡುಪ್ರಧಾನ ಕ್ರಿಯೆಗಳಾಗಿ ದಾಖಲಾಗಿಬಿಡುವ ಅಪಾಯವಿದೆ. 2. ಹೋರಾಟದಲ್ಲಿ ಭಾಷಣ ಚರ್ಚೆ ಘೋಷಣೆಗಳಷ್ಟೇ ಪ್ರಧಾನವಾದವು ಹಾಡುಗಳು. ಅದರಲ್ಲೂ ಸಿಖ್ಖರದು ಗುರುಬಾಣಿಗಳನ್ನು ಹಾಡುವ ಧರ್ಮ. ಪಂಜಾಬಿ ಹಾಡುಗಾರರು ಈ ಹೋರಾಟದಲ್ಲಿ ಭಾಗವಹಿಸಿರುವರು. ಅಂತಹ ಹಾಡುಗಳನ್ನು ಚಿತ್ರವು ಅಳವಡಿಸಿಕೊಂಡಿಲ್ಲದಿರುವುದು.

ಚಳುವಳಿ ಮುಗಿದಿಲ್ಲ, ಇನ್ನೂ ತೀವ್ರಗೊಳ್ಳುತ್ತದೆ - ರೈತ ಮುಖಂಡರುಈ ಚಿತ್ರವು ದೃಶ್ಯ ಮತ್ತು ಮಾತು ಪ್ರಧಾನವಾಗಿದೆ. ಇವುಗಳ ಸಂದಣಿಯ ಚಿತ್ರದಲ್ಲಿ, ಮಾತಿಲ್ಲದ, ಹಿನ್ನೆಲೆ ಸಂಗೀತವಿಲ್ಲದ ಗಾಢ ಮೌನ ಆವರಿಸಿಕೊಳ್ಳುವ, ಕೇವಲ ರೈತರ ಮುಖಗಳನ್ನೇ ಕಾಣಿಸುವ ಎರಡು ಸನ್ನಿವೇಶಗಳಿವೆ. ಮೊದಲನೆಯದು-ಗಣರಾಜ್ಯದಂದು ಟ್ರ್ಯಾಕ್ಟರ್ ಪೆರೇಡ್ ಮಾಡುವ ಕಾರ್ಯಕ್ರಮವು, ಪ್ರಭುತ್ವದ ಫಿತೂರಿಯಿಂದ ಗೊಂದಲದಲ್ಲಿ ಮುಗಿದುಹೋದ ಬಳಿಕ, ಚಿಂತೆಯಲ್ಲಿ ಮುಳುಗಿದ ರೈತರನ್ನು ಕಾಣಿಸುವ ಸನ್ನಿವೇಶ. ಎರಡನೆಯದು- ಚಿತ್ರದ ಕೊನೆಯಲ್ಲಿ ಸರ್ಕಾರವು ಚಳವಳಿಯನ್ನು ಮುರಿಯಲು ತಾತ್ಕಾಲಿಕವಾಗಿ ಕಾನೂನನ್ನು ಹಿಂತೆಗೆದುಕೊಳ್ಳುವ ಹುನ್ನಾರ ಮಾಡಿದಾಗ ರೈತರು ಚಿಂತನೆಯಲ್ಲಿ ಮುಳುಗಿದ ಸನ್ನಿವೇಶ. ಈ ಎರಡೂ ಸನ್ನಿವೇಶಗಳು ಮಾತಿನಲ್ಲಿ ಹೇಳಲಾಗದ ದಿಟಗಳನ್ನು ಮೌನದ ಮೂಲಕ ಹೇಳಿಸುತ್ತ ಬಹಳ ಪರಿಣಾಮಕಾರಿಯಾಗಿವೆ.

ಚಿತ್ರದ ಕೊನೆ ಸಾಂಕೇತಿಕವಾಗಿದೆ. ಅದು ರೈತಾಪಿ ಧ್ವಜವನ್ನು ಹಿಡಿದು ಮಗುವೊಂದು ಆಡುವುದು. ಇದು ಹೋರಾಟದ ರಿಲೇಕೋಲನನ್ನು ಹೊಸತಲೆಮಾರಿಗೆ ಹಾಯುತ್ತಿರುವ ಈ ರೂಪಕವು ವಾಚ್ಯವಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಬಿಳಿಯ ಗಡ್ಡಮೀಸೆಯ ರೈತರೇ ತುಂಬಿರುವ ಚಿತ್ರದಲ್ಲಿ, ಈ ಹೊಸತಲೆಮಾರಿನ ಮಗುವಿನ ಚಿತ್ರವು, ದೊಡ್ಡಮರದ ಬುಡದಲ್ಲಿ ಒಡಮೂಡಿದ ಚಿಗುರಿನ ಕುಡಿಯಂತಿದೆ.

ನಾನು ಕೇಸರಿಯವರು ಮಾಡಿರುವ ಅಘನಾಶಿನಿ ಕುರಿತ ಚಿತ್ರವನ್ನು ನೋಡಿರುವೆ. ಅದೊಂದು ಎಚ್ಚರಿಕೆಯಿಂದ ಕಟ್ಟಿದ ಕಾವ್ಯ. ಅದಕ್ಕೆ ಹೋಲಿಸಿದರೆ ರಣರಂಗದಲ್ಲಿ ನಿಂತು ಮಾಡಿದ ಈ ಚಿತ್ರವು ಕೊಂಚ ಚದುರಿಕೊಂಡಿದೆ. ಇಂತಹ ಚಿತ್ರಗಳು ನಮ್ಮ ಕಾಲದಲ್ಲಿ ಹುಟ್ಟಿಸಬಹುದಾದ ರಾಜಕೀಯ ಪ್ರತಿಸ್ಪಂದನೆಯ ದೃಷ್ಟಿಯಿಂದ ಮುಖ್ಯವಾದವು. ಮಾತ್ರವಲ್ಲ, ಮುಂದಿನ ತಲೆಮಾರಿಗೆ ಚರಿತ್ರೆಯಲ್ಲಿ ಇಂತಹದೊಂದು ಚಳುವಳಿ ನಡೆದಿತ್ತು ಎಂದು ಒದಗುವ ಆಕರವಾಗುವುದು. ಕನ್ನಡದ ಒಳ್ಳೆಯ ಮನಸ್ಸೊಂದು ಈ ಚಿತ್ರ ಮಾಡಿದೆಯೆಂಬುದು ಅಭಿಮಾನ ಹುಟ್ಟಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ದಿಟ್ಟ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....