ಕಾರ್ಪೊರೇಟ್ ಧಣಿಗಳ ವ್ಯಾಪಾರವನ್ನು ಸುಲಲಿತಗೊಳಿಸುವ ಉದ್ದೇಶಕ್ಕೆ ಅತಿ ಅಗತ್ಯ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ಸರ್ಕಾರದ ಕಾರ್ಮಿಕ ಕಾನೂನು ಸುಧಾರಣೆಗಳು ಅಕ್ಷರಶಃ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಧೋರಣೆಗಳಾಗಿವೆ. ಕಾರ್ಮಿಕರಿಗೆ ಕಾನೂನು ಬದ್ದವಾಗಿ ಇರುವ ಹಕ್ಕುಗಳನ್ನು ಹಾಗೂ ರಕ್ಷಣೆಗಳನ್ನು ದಮನ ಮಾಡುವುದೇ ಈ ಕಾರ್ಮಿಕ ಕಾನೂನು ಸುಧಾರಣೆಗಳ ಹೂರಣ ಎಂಬುದು ಗಮನಾರ್ಹ.
ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೇಂದ್ರ ಸಂಪುಟ ಸಭೆಯು ಮಾನವ ಘನತೆಗೆ ವಿರುದ್ದವಾದ ಅಮಾನವೀಯ ಧೋರಣೆಗೆ ಅನುಮತಿ ಕೊಟ್ಟಿದೆ. ಸ್ವತಃ ಕೇಂದ್ರ ಕಾರ್ಮಿಕ ಸಚಿವರು, ಇತರೆ ಸಚಿವರ ಜೊತೆ ದಿನಾಂಕ 10-07-19 ರಂದು ಪತ್ರಿಕಾಗೋಷ್ಠಿ ನಡೆಸಿ ‘ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮಸೂದೆ 2019 ‘ಅನ್ನು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯು ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. ಈ ಮಸೂದೆಯು ಹಾಲಿ ಅಸ್ತಿತ್ವದಲ್ಲಿರುವ 13 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ರೂಪಿಸಿರುವ ಸಂಹಿತೆಯಾಗಿದೆ. ಈ ಮಸೂದೆಯಲ್ಲಿ ಮಾಲೀಕರಿಗೆ ಅನುಕೂಲಕರವಾಗಿರುವ ಹಿಂದಿನ ಕಾಯಿದೆಯ ಅಂಶಗಳೆಲ್ಲವನ್ನೂ ಉಳಿಸಿಕೊಂಡು ಕಾರ್ಮಿಕರ ಹಕ್ಕು ಹಾಗೂ ರಕ್ಷಣೆಗಾಗಿ ಇದ್ದ ನಿಯಮ, ಉಪ ನಿಯಮಗಳೆಲ್ಲವನ್ನೂ ದುರ್ಬಲಗೊಳಿಸಲಾಗಿದೆ ಅಥವಾ ತಿರುಚಿ ಹಾಳು ಮಾಡಲಾಗಿದೆ.

ಆರೋಗ್ಯ ಹಾಗೂ ಸುರಕ್ಷತೆಯಂತಹ ವಿಷಯದಲ್ಲೂ ಸಹ ಕಾರ್ಮಿಕರಾಗಲಿ ಅಥವಾ ಅವರ ಸಂಘಟನೆಗಳಾಗಲಿ ಸಮರ್ಪಕ ಜಾರಿಗಾಗಿ ಒತ್ತಾಯಿಸಲು ಸಾಧ್ಯವಾಗದಂತೆ, ಮತ್ತು ಕೆಲಸದ ಸ್ಥಳದಲ್ಲಿ ಸಾಮಾನ್ಯವಾಗಿ ಉಂಟಾಗುವ ಮೂಲಭೂತ ಆರೋಗ್ಯ ಹಾಗೂ ಸುರಕ್ಷತೆಗೆ ಸಂಬಂಧಿಸಿ ಕಾನೂನು ಉಲ್ಲಂಘನೆಗಾಗಿ ಮಾಲೀಕರನ್ನು ಹೊಣೆ ಮಾಡಲು ಕೂಡ ಆಗದಂತೆ ಈ ಸಂಹಿತೆಯನ್ನು ರೂಪಿಸಲಾಗಿದೆ. ಇದರಿಂದಾಗಿ ಮತ್ತಷ್ಟು ಅಂಗವೈಕಲ್ಯತೆ, ಗಾಯಾಳುಗಳ ಸಂಖ್ಯೆಯಲ್ಲಿ ಹೆಚ್ಚಳ, ಪ್ರಾಣಹಾನಿ ಹೆಚ್ಚಾಗಲು ಈ ಮಸೂದೆ ಕಾರಣವಾಗಲಿದೆ.
ಈ ಮಸೂದೆಯನ್ನು ರೂಪಿಸುವ ಸಂದರ್ಭದಲ್ಲಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದರೂ ಕಡೆಗಣಿಸಿ, ಬಂಡವಾಳಶಾಹಿ -ಕಾರ್ಪೊರೇಟ್ ವಲಯವನ್ನು ತೃಪ್ತಿಪಡಿಸಲು ಹಾಗೂ ಚುನಾವಣೆಯಲ್ಲಿ ಮಾಡಿದ ಸಹಾಯಕ್ಕಾಗಿ ಋಣ ಸಂದಾಯ ಮಾಡಲು ಅತ್ಯುತ್ಸಾಹದಿಂದ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಸಿಐಟಿಯು ಅಪಾದಿಸಿದೆ.
ಕೇಂದ್ರ ಕಾರ್ಮಿಕ ಸಚಿವರು ಮತ್ತೊಂದು ವಿಷಯ ಪ್ರಸ್ತಾಪಿಸಿ ‘ವೇತನ ಸಂಹಿತೆ ಮಸೂದೆ 2019 ‘ಅನ್ನು ಸಹ ಅನುಮೋದಿಸಿರುವುದಾಗಿ ತಿಳಿಸಿದ್ದಾರೆ. ಇದರ ಪ್ರಕಾರ ರಾಷ್ಟ್ರೀಯ ಕನಿಷ್ಠ ವೇತನ ದಿನಕ್ಕೆ ರೂ 178 (ತಿಂಗಳಿಗೆ 4628) ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ವೇತನವನ್ನು ರಾಜ್ಯ ಸರ್ಕಾರಗಳು ನಿಗದಿಪಡಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಇದೊಂದು ಅತ್ಯಂತ ಹಾಸ್ಯಾಸ್ಪದ ಹಾಗೂ ನಾಚಿಕೇಗೇಡಿನ ವಿಷಯವಾಗಿದೆ. ಈ ಸಂಹಿತೆಯು ಕನಿಷ್ಟ ಕೂಲಿಯ ಜಾರಿಗೆ ಬೇಕಾದ ಶಾಸನಬದ್ಧ ವ್ಯವಸ್ಥೆಯನ್ನು ಸಹ ಹೊಂದಿರುವುದಿಲ್ಲ.
ಈಗಾಗಲೇ ದೇಶದ 31 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ ವೇತನವು ದಿನಕ್ಕೆ ರೂ 178 ಕ್ಕಿಂತ ಹೆಚ್ಚಿದೆ. ಕೇಂದ್ರ ಸರ್ಕಾರದ ಈ ಕನಿಷ್ಠ ವೇತನದ ಪ್ರಕಟಣೆಗಳು ಸರ್ಕಾರಗಳನ್ನು ಹಾಗೂ ಮಾಲೀಕರನ್ನು ಕನಿಷ್ಟ ವೇತನ ಕಡಿತ ಮಾಡಲು ಪ್ರಚೋದಿಸುವಂತಿದೆ. ನಗಣ್ಯಮಟ್ಟದ ಕನಿಷ್ಠ ವೇತನ ಕಾಯ್ದೆಯು, ಕನಿಷ್ಠ ವೇತನವನ್ನು ಕಡಿಮೆ ಮಾಡಿ ಕಾರ್ಮಿಕರನ್ನು ಲೂಟಿ ಮಾಡಲು ಬಂಡವಾಳಶಾಹಿಗಳಿಗೆ ಅವಕಾಶ ಮಾಡಿಕೊಡಲಿದೆ.
15 ನೇ ಭಾರತೀಯ ಕಾರ್ಮಿಕ ಸಮ್ಮೇಳನವು ಹಾಗೂ 1992 ರಲ್ಲಿ ಭಾರತ ಸರ್ವೋಚ್ಚ ನ್ಯಾಯಾಲಯವು ರಪ್ಟಾಕೋಸ್ ಬ್ರೆಟ್ ಪ್ರಕರಣದಲ್ಲಿ ಕನಿಷ್ಠ ವೇತನವನ್ನು ನಿಗದಿಗೊಳಿಸಲು ರೂಪಿಸಿದ್ದ ಸೂತ್ರ (2700 ಕ್ಯಾಲೂರಿ ಆಹಾರ) ವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಇದೇ ಸೂತ್ರವನ್ನು 44 ನೇ ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಸರ್ವಾನುಮತದಿಂದ ಅಂಗೀಕಾರ ಆಗಿದ್ದಲ್ಲದೇ, 45 ಹಾಗೂ 46ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಸಹ ಸರ್ವಾನುಮತದಿಂದ ಪುನರುಚ್ಚರಿಸಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಭಾಗಿಧಾರನಾಗಿ ಭಾಗವಹಿಸಿತ್ತು. ಮೇಲೆ ಹೇಳಲಾದ ಸೂತ್ರದ ಪ್ರಕಾರ 2014 ರ ಕನಿಷ್ಠ ವೇತನ 18 ಸಾವಿರ ರೂ (ದಿನಕ್ಕೆ ರೂ 692.3) ಎಂದು ನಿಗದಿಯಾಗಿತ್ತು. ಇದೇ ವೇತನವನ್ನೇ ಆರನೇ ವೇತನ ಆಯೋಗವು ಶಿಪಾರಸ್ಸು ಮಾಡಿತ್ತು. ಇದಾದ ನಂತರ 2018 ರಲ್ಲಿ ಇದೇ ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಕನಿಷ್ಠ ವೇತನವನ್ನು ನಿಗಧಿಗೊಳಿಸುವ ಕುರಿತು ಇರುವ ವಿಧಾನಗಳನ್ನು ನಿರ್ಧರಿಸಲು ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು.
ಈ ತಜ್ಞರ ಸಮಿತಿಯು ಭಾರತೀಯ ಕಾರ್ಮಿಕ ಸಮ್ಮೇಳನದ ಸರ್ವಾನುಮತದ ಶಿಫಾರಸುಗಳಾದ 2700 ಕ್ಯಾಲೊರಿ ಆಹಾರ ಸೂತ್ರವನ್ನು ಏಕಪಕ್ಷೀಯವಾಗಿ ಬದಲಿಸಿ 2400 ಕ್ಯಾಲೊರಿಗೆ ಇಳಿಸಿತು. ಅಲ್ಲದೆ ಕನಿಷ್ಠ ವೇತನದ ಲೆಕ್ಕಾಚಾರಕ್ಕೆ ಅಗತ್ಯವಾದ ವಸ್ತುಗಳ ದರಗಳನ್ನು 2012ರ ಮಾರುಕಟ್ಟೆಯ ದರದಂತೆ ಪರಿಗಣಿಸಿತು.
ಈ ತಜ್ಞರ ಸಮಿತಿಯು ಕನಿಷ್ಠವೇತನವನ್ನು ದಿನಕ್ಕೆ 375 ರೂನಿಂದ 447 ರೂಪಾಯಿಗಳಿಗೆ (ಮಾಸಿಕ ರೂ.9750 ರಿಂದ 11,622) ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸು ಕಾರ್ಪೊರೇಟ್ ಬಂಡವಾಳದಾರರ ಕಂಪನಿಗಳ ಕೆಂಗಣ್ಣಿಗೆ ಗುರಿಯಾಯಿತು.
ಬಲಿಷ್ಠ ಪ್ರಧಾನಿ ಸದೃಢ ಸರ್ಕಾರ ಎಂದು ಹೇಳುವ ಕೇಂದ್ರದ ಬಿಜೆಪಿ ಸರ್ಕಾರವು ನಾಚಿಕೆ ಇಲ್ಲದಂತೆ ತನ್ನದೇ ತಜ್ಞರ ಸಮಿತಿಯ ಶಿಫಾರಸುಗಳನ್ನು ಬದಿಗೆ ಸರಿಸಿ, ದಿನವೊಂದಕ್ಕೆ 178 ರೂಪಾಯಿ ನಗಣ್ಯ ಮಟ್ಟದ ಕನಿಷ್ಟ ವೇತನವನ್ನು ಘೋಷಿಸಿದೆ . ಇದು ಎಲ್ಲರನ್ನೂ ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದು ಜಪ ಮಾಡುತ್ತಿರುವ ಬಿಜೆಪಿ ಸರ್ಕಾರದ ನಿಜ ಮುಖವಾಗಿದೆ.



“ಈ ತಜ್ಞರ ಸಮಿತಿಯು ಕನಿಷ್ಠವೇತನವನ್ನು ದಿನಕ್ಕೆ 375 ರೂನಿಂದ 447 ರೂಪಾಯಿಗಳಿಗೆ (ಮಾಸಿಕ ರೂ.9750 ರಿಂದ 11,622) ಶಿಫಾರಸು ಮಾಡಿತ್ತು” ಎಂದು ತಿಳಿಸಿರುತ್ತೀರಿ.
ಆ ತಜ್ಞರ ಸಮಿತಿಯ ವರದಿಯನ್ನು ಪ್ರಕಟಿಸಿ ಎಂದು ವಿನಂತಿ.
ಪ್ರಧಾನಿ ಮೋದಿಯವರು ಒಂದು ದಿನ ಅಣಬೆ ತಿನ್ನುವುದಕ್ಕೆ ಖರ್ಚು ಮಾಡುವ ದುಡ್ಡು 38000 (ಮೂವತ್ತೆಂಟು ಸಾವಿರ ). ಇಂತವರಿಗೆ ಕಾರ್ಮಿಕರ ಕಷ್ಟ ಎಲ್ಲಿ ಅರ್ಥ ಆಗುತ್ತೆ ?