ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ ಕೊಂದು ಹಾಕಿರುವ ಆರೋಪದಲ್ಲಿ ಜೈಲಲ್ಲಿ ಇದ್ದಾರೆ. ಇದೀಗ ಸಚಿವ ಅಜಯ್ ಮಿಶ್ರಾ ಅವರು ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮಗನ ಬಗ್ಗೆ ಕೇಳಿದ ಪ್ರಶ್ನೆಗೆ ಪತ್ರಕರ್ತರೊಬ್ಬ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಮಾಧ್ಯಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಹೊಸ ಆರೋಪಗಳನ್ನು ಸೇರಿಸುವಂತೆ ಶಿಫಾರಸು ಮಾಡಿದ್ದ ತನಿಖಾ ವರದಿಯ ಬಗ್ಗೆ ಪತ್ರಕರ್ತರೊಬ್ಬರು ಕೇಳಿದಾಗ “ಈ ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ. ನಿಮಗೆ ಹುಚ್ಚು ಹಿಡಿದಿದೆಯೇ?” ಎಂದು ಕೂಗಿಕೊಂಡು ಹೇಳಿದ್ದಾರೆ.
ಇದನ್ನೂ ಓದಿ:ಲಖಿಂಪುರ್ ಖೇರಿ ಹತ್ಯಾಕಾಂಡ: ಆರೋಪಿ ಆಶೀಶ್ ಮಿಶ್ರಾ ಸೇರಿ ಮೂವರಿಗೆ ಜಾಮೀನು ನಿರಾಕರಣೆ
ಪ್ರಧಾನಮಂತ್ರಿ ನರೇಂದ್ರ ಮೋದಿಯ ಸರ್ಕಾರದಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿರುವ ಅಜಯ್ ಮಿಶ್ರಾ, ವರದಿಗಾರನಿಗೆ ಗುದ್ದಿ ಅವರಿಂದ ಮೈಕ್ ಕಸಿದುಕೊಂಡು, ‘ಮೈಕ್ ಬಂದ್ ಮಾಡಿ’ ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ ಅವರು ಅವಾಚ್ಯ ಶಬ್ದಗಳನ್ನು ಬಳಸಿ, ವರದಿಗಾರರನ್ನು ‘ಕಳ್ಳರು’ ಎಂದು ಸಂಬೋಧಿಸಿದ್ದಾರೆ.
ಬುಧವಾರ ಲಖಿಂಪುರ್ ಖೇರಿಯಲ್ಲಿ ಆಕ್ಸಿಜನ್ ಸ್ಥಾವರವನ್ನು ಉದ್ಘಾಟಿಸಿದ ನಂತರ ತಮ್ಮ ಮಗನನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆಯು “ಯೋಜಿತ ಪಿತೂರಿ” ಎಂದು ವಿಶೇಷ ತನಿಖಾ ತಂಡದ ವರದಿಯ ನಂತರ ಅಜಯ್ ಮಿಶ್ರಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂಬ ಬೇಡಿಕೆಗಳು ಹೆಚ್ಚಾಗಿವೆ.
ತನಿಖಾ ತಂಡವು, “ಕೊಲೆ ಮಾಡುವ ಉದ್ದೇಶದಿಂದಲೇ ಆಶಿಶ್ ಮಿಶ್ರಾ ವಾಹನ ಚಲಾಯಿಸುತ್ತಿದ್ದ. ಘಟನೆಯು ಆಕಸ್ಮಿಕ ಅಲ್ಲ, ಉದ್ದೇಶಪೂರ್ವಕ” ಎಂದು ಹೇಳಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT